Advertisement

ಅಮ್ಮನ ಹತ್ತಿರ ಪಾಕೇಟ್ ಮನಿ ಕೇಳುವವರಿಂದ ನಿರುದ್ಯೋಗಭತ್ಯೆ ಗ್ಯಾರಂಟಿ: ತೇಜಸ್ವಿ ಸೂರ್ಯ

06:57 PM Mar 21, 2023 | Team Udayavani |

ಗಂಗಾವತಿ: ನಿತ್ಯವೂ ಅಮ್ಮ ಹತ್ತಿರ ಖರ್ಚಿಗಾಗಿ ಪಾಕೇಟ್ ಮನಿ ಕೇಳುವ ರಾಹುಲ್ ಗಾಂಧಿ ಕರ್ನಾಟಕದ ನಿರುದ್ಯೋಗಿ ಯುವಕರಿಗೆ ನಿರುದ್ಯೋಗಿ ಭತ್ಯೆ ನೀಡುವ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದು ಹಾಸ್ಯಾಸ್ಪದವಾಗಿದೆ. ಯುವಕರಿಗೆ ಎಂದಿಗೂ ಕಾಂಗ್ರೆಸ್ ಸ್ವಾವಲಂಭಿ ಬದುಕು ಕೊಡುವ ಯೋಜನೆ ರೂಪಿಸಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ಅವರು ನಗರ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ತೇಜಸ್ವೀ ಸೂರ್ಯ,  ರಾಹುಲ್ ಗಾಂಧಿ ಒಂದು ದಿನವೂ ಕೆಲಸ ಮಾಡಿ ಸಂಬಳ ಪಡೆದಿಲ್ಲ. ಅವರು ತಮ್ಮ ಖರ್ಚಿಗಾಗಿ ಪ್ರತಿ ನಿತ್ಯ ಅಮ್ಮನ ಹತ್ತಿರ ಪಾಕೇಟ್ ಹಣ ಪಡೆದು ಕಾಲ ಕಳೆಯುತ್ತಿದ್ದಾರೆ. ಅವರಿಗೆ ಸ್ವಾವಲಂಭಿ ಬದುಕು ಗೊತ್ತಿಲ್ಲ. ಎಲ್ಲರೂ ಅವರಂತೆ ಇನ್ನೊಬ್ಬರಿಂದ ಪರಾವಲಂಭಿಯಾಗಿ ಹಣ ಪಡೆಯುವಂತೆ ಪ್ರೇರೆಪಿಸುವ ಸಲುವಾಗಿಯೇ ಕರ್ನಾಟಕದ ನಿರುದ್ಯೋಗಿ ಯುವಕರಿಗೆ 3 ಸಾವಿರ ಮತ್ತು 15 ನೂರು ನಿರುದ್ಯೋಗಿ ಭತ್ಯೆ ನೀಡುವ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ನಮ್ಮ ಯುವಕರು ವಯಸ್ಸಿಗೆ ಬಂದ ನಂತರ ತಮ್ಮ ಹಾಗೂ ಕುಟುಂಬದ ಖರ್ಚಿಗಾಗಿ ಸ್ವಾವಲಂಭಿಯಾಗಿ ದುಡಿದು ಹಣ ಗಳಿಸುವ ಮನೋಭಾವದವರಾಗಿದ್ದಾರೆ.

ಈಗಾಲೇ ಅಧಿಕಾರದಲ್ಲಿರುವ ರಾಜಸ್ಥಾನ, ಛತ್ತೀಸಗಡ ರಾಜ್ಯಗಳಲ್ಲಿ ಯಾಕೆ ನಿರುದ್ಯೋಗಿ ಭತ್ಯೆ ನೀಡುತ್ತಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡುತ್ತಿದೆ. ಇದನ್ನು ಕನ್ನಡಿಗರು ನಂಬಬಾರದು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ಯೋಜನೆಗಳ ಅನುಷ್ಠಾನ ಬೇಗ ಆಗುತ್ತದೆ. ಆಯುಷ್ಮಾನ್ ಭಾರತ, ಕುಡಿಯುವ ನೀರಿನ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳು ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಸಾಧ್ಯವಾಗಿದೆ. 2024 ಲೋಕಸಭಾ ಚುನಾವಣೆಯಲ್ಲಿ ಮೋದಿ ಅಭೂತಪೂರ್ವ ಬೆಂಬಲದೊಂದಿಗೆ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಸರಕಾರವನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ತರಬೇಕಿದ್ದು ಯುವ ಮೋರ್ಚಾ ಅದ್ಭುತ ಕೆಲಸ ಮಾಡಿ ಜನರ ಮನಸ್ಸನ್ನು ಗೆಲ್ಲಬೇಕು ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ಎಂಎಲ್ಸಿ ಚಲುವಾದಿ ನಾರಾಯಣ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು ಇದರಿಂದ ವಿಪಕ್ಷಗಳು ವಿಚಲಿತವಾಗಿವೆ.ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಬಿಜೆಪಿ ದೇಶದ ಸುಭದ್ರತೆಯಿಂದ ಇರಬೇಕೆಂದು ಎಲ್ಲರ ಬೆಂಬಲ ಕೋರುತ್ತಿವೆ. ಕಾಂಗ್ರೆಸ್ ಸ್ವಾರ್ಥಕ್ಕಾಗಿ ಸಾಮಾಜಿಕ ಭದ್ರೆತೆ ಇಲ್ಲದ ಅಕ್ಕಿ,ಜೋಳ,ರಾಗಿ ಹಣ ಆಮೀಷ ಒಡ್ಡುತ್ತಿದೆ. ಜೆಡಿಎಸ್ ಸಾಯುವ,ಹೃದಯ ಬೇನೆ ನೆಪದಲ್ಲಿ ಮತ ಕೇಳುತ್ತಿದೆ. ಆಶೀರ್ವಾದ ಮಾಡದಿದ್ದರೆ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುವ ಮಾತನಾಡುತ್ತಿದ್ದಾರೆ.

ಇವರಿಗೆಲ್ಲಾ ದೇಶದ ಹಿತಕ್ಕಿಂತ ಕುಟುಂಬಗಳ ಹಿತ ಮುಖ್ಯವಾಗಿದೆ. ದೇಶ ಬೇಕಾ ಅಥವಾ ಆಮೀಷಗಳು ಬೇಕಾ ಜನರು ತೀರ್ಮಾನ ಮಾಡಬೇಕಿದೆ. ಪಾಕಿಸ್ತಾನ,ಶ್ರೀ ಲಂಕಾ ದೇಶಗಳು ದುರ್ಬಲವಾಗಿವೆ.ಊಟವೂ ಸಿಗುತ್ತಿಲ್ಲ.ಆಡಳಿತ ಸುಭದ್ರವಾಗಿಲ್ಲ. ಮೋದಿಯಂತಹ ಪ್ರಧಾನಮಂತ್ರಿ ಬೇಕು.ಅಮೇರಿಕಾ ಸೇರಿ ಇತರೆ ದೇಶಗಳ ಮುಖಂಡರು ಮೋದಿಯನ್ನು ನಿತ್ಯವೂ ನೆನಪು ಮಾಡಿಕೊಳ್ಳುತ್ತಾರೆ. ಕೊರೊನಾ ಸಂದರ್ಭದಲ್ಲಿ ಸ್ವಂತ ಔಷಧಿ ಕಂಡು ಹಿಡಿದು ನಮ್ಮ ದೇಶದ ಜನರಿಗೆ ಕೊಟ್ಟು ನಂತರ ಅನ್ಯ ದೇಶಗಳಿಗೆ ಕಳಿಸಿ ವಿಶ್ವವೇ ಒಂದು ಕುಟುಂಬ ಎಂಬ ಸಂದೇಶವನ್ನು ಜಗತ್ತಿಗೆ ಪ್ರಧಾನಿ ಮೋದಿ ಕೊಟ್ಟಿದ್ದಾರೆ ಎಂದು ತೇಜಸ್ವೀ ಸೂರ್ಯ ಹೇಳಿದ್ದಾರೆ.

Advertisement

ಸಮಾವೇಶದಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಸಣದೀಪಕುಮಾರ, ಅಮರೇಶ, ಶಾಸಕರಾದ ಪರಣ್ಣ ಮುನವಳ್ಳಿ, ದಡೇಸೂಗೂರು ಬಸವರಾಜ, ನಪಾ ಅಧ್ಯಕ್ಷ ಎಸ್.ರಾಘವೇಂದ್ರಶೆಟ್ಟಿ, ಮಾಜಿ ಶಾಸಕ ಜಿ.ವೀರಪ್ಪ, ಬಿಜೆಪಿ ಮುಖಂಡರಾದ ಸಿಂಗನಾಳ ವಿರೂಪಾಕ್ಷಪ್ಪ, ಕೆಲೋಜಿ ಸಂತೋಷ, ನೆಕ್ಕಂಟಿ ಸೂರಿಬಾಬು, ಅಮರಜ್ಯೋತಿ ವೆಂಕಟೇಶ, ಎಚ್.ಗಿರೇಗೌಡ, ತಿಪ್ಪೇರುದ್ರಸ್ವಾಮಿ, ಮಳಗಿ ಚನ್ನಪ್ಪ, ಕೆ.ವೆಂಕಟೇಶ, ಅರಿಕೇರಿ ಶಿವಕುಮಾರ, ವಾಸುದೇವ ನವಲಿ, ವಂದನಾ ಸೇರಿ ಹಲವರಿದ್ದರು.

ನಗರದ ಆನೆಗೊಂದಿ ರಸ್ತೆಯಿಂದ ತಾಲೂಕು ಕ್ರೀಡಾಂಗಣದ ವರೆಗೆ ಬಿಜೆಪಿ ಯುವ ಘಟಕ ಬೈಕ್ ರ‍್ಯಾಲಿಯ ಮೂಲಕ ತೆರೆದ ಲಾರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಸೇರಿದಂತೆ ಶಾಸಕರು, ಪಕ್ಷದ ಮುಖಂಡರನ್ನು ಕರೆ ತರಲಾಯಿತು.

ʻಸಿದ್ದರಾಮಯ್ಯನವರು ಅವರೇ ಹೇಳುವಂತೆ ಹಿಂದೂ ಅಂತೆ ಹಿಂದುತ್ವ ಅಲ್ವಂತೆ.ಇವರಿಂದ ಧರ್ಮ ಉಳಿಯಲು ಸಾಧ್ಯವಿಲ್ಲ. ಇವರು ಅಧಿಕಾರಕ್ಕೆ ಬಂದರೆ ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ಧಿಗಾಗಿ ಮೀಸಲಿಟ್ಟ 120 ಕೋಟಿ ಅನ್ಯ ಕಾರ್ಯಕ್ಕೆ ಖರ್ಚಾಗುತ್ತದೆ. ನನಗೆ ಸಂಸದನಾಗಲು ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯಲು ದೇಶದ ಕುರಿತು ಮಾತನಾಡುವ ಶಕ್ತಿ ನೀಡಿದ್ದು ಗಂಗಾವತಿ-ಅಂಜನಾದ್ರಿ ಪ್ರದೇಶವಾಗಿದೆ. ಕಳೆದ 8 ವರ್ಷಗಳ ಹಿಂದೇ ಇಲ್ಲಿ ಹಿಂದೂ ಜಾಗರಣಾ ವೇದಿಕೆಯ ಮೂಲಕ ದೇಶ, ಧರ್ಮದ ಬಗ್ಗೆ ಮಾತನಾಡಿ ಈಗ ಜನರು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ.ಈ ಪವಿತ್ರ ಭೂಮಿಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಲೇ ಬೇಕು.ʼ
-ತೇಜಸ್ವೀ ಸೂರ್ಯ ಸಂಸದರು ಹಾಗೂ ರಾಷ್ಟ್ರೀಯ ಅಧ್ಯಕ್ಷರು ಬಿಜೆಪಿ ಯುವ ಮೋರ್ಚಾ

Advertisement

Udayavani is now on Telegram. Click here to join our channel and stay updated with the latest news.

Next