Advertisement

ಅಭಿವೃದ್ಧಿ ವಂಚಿತ ಉತ್ತರ ಕರ್ನಾಟಕ: ಡಾ|ಪ್ರಭಾಕರ ಕೋರೆ ವಿಷಾದ

04:57 PM Nov 02, 2022 | Team Udayavani |

ಚಿಕ್ಕೋಡಿ: ಕರ್ನಾಟಕ ಏಕೀಕರಣದ ಕನಸು ಮೊದಲು ಕಂಡವರು ಉತ್ತರ ಕರ್ನಾಟಕದವರು. ಪೇಶ್ವೆ ಕಾಲದಲ್ಲಿ ಕನ್ನಡ ದುಸ್ಥಿತಿಯಲ್ಲಿದ್ದಾಗ ಚಳವಳಿ ಆರಂಭಗೊಂಡಿತ್ತು. ಕರ್ನಾಟಕವೂ ಒಂದಾಯಿತು. ಆದರೆ, ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಕೆ.ಎಲ್‌.ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ವಿಷಾದ ವ್ಯಕ್ತಪಡಿಸಿದರು.

Advertisement

ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಡಾ|ಅನಿಲ ಕಮತಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕನ್ನಡೋತ್ಸವ-35 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೇಶ್ವೆ ಕಾಲದಲ್ಲಿ ಧಾರವಾಡ, ಹುಬ್ಬಳ್ಳಿ, ಹರಿಹರತನಕ ಮರಾಠಿ ಶಾಲೆಗಳಿದ್ದವು. ಕನ್ನಡ ದುಸ್ಥಿತಿಯಲ್ಲಿತ್ತು. ಕನ್ನಡ ಮುಳುಗುವ ಸನ್ನಿವೇಶದಲ್ಲಿ ಕರ್ನಾಟಕ ಏಕೀಕರಣದ ಕನಸು ಕಂಡವರು ಉತ್ತರ ಕರ್ನಾಟಕದವರು. ಮೈಸೂರು ಪ್ರಾಂತ್ಯದವರು ಮೈಸೂರು ಮಹಾರಾಜರ ಆಸರೆಯಲ್ಲಿದ್ದರು.

ಉತ್ತರ ಕರ್ನಾಟಕದಲ್ಲಿಯೇ ಕರ್ನಾಟಕ ಏಕೀಕರಣದ ಕಹಳೆ ಮೊಳಗಿಸಲಾಗಿತ್ತು. ಹಲವು ಹೋರಾಟಗಳ ಫಲವಾಗಿ ಕರ್ನಾಟಕ ಒಂದಾಯಿತು. ಆದರೆ, ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ ಪ್ರದೇಶಗಳು ಇನ್ನೂ ಅಭಿವೃದ್ಧಿಯಿಂದ ವಂಚಿತವಾಗಿವೆ. ಅನ್ಯಾಯ ನಿವಾರಣೆಗೆ ಹಲವು ಆಯೋಗಗಳು ರಚನೆಯಾದರೂ ಪ್ರಯೋಜನವಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಚಿತ್ರನಟ ಎನ್‌.ರಾಮಕೃಷ್ಣ ಮಾತನಾಡಿ, ಶಿಕ್ಷಣ, ಆರೊಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೂಲಕ ಪ್ರಭಾಕರ ಕೋರೆ ಅವರು ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ಡಾ| ಅನಿಲ ಕಮತಿ ಅವರು ಗಡಿ ಭಾಗದಲ್ಲಿ ಕನ್ನಡ ಬೆಳವಣಿಗೆಗೆ ಸಲ್ಲಿಸಿರುವ ಸೇವೆ ಅನುಕರಣೀಯ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಉತ್ತರ ಕರ್ನಾಟಕದ ಕೂಗು ಸರ್ಕಾರಗಳಿಗೆ ಕೇಳುತ್ತಿಲ್ಲ. ಬೆಂಗಳೂರು ಕೇಂದ್ರಿತ ಆಡಳಿತದಿಂದಾಗಿ ಜಾರಿಗೊಳ್ಳುವ ಯೊಜನೆಗಳ ಮೊದಲ ಪಾಲು ಅಲ್ಲಿನ ಶಾಸಕರಿಗೆ ದೊರಕುತ್ತದೆ. ನಮಗೆ ಕಡೆ ಪಾಲು. ಹೀಗಾಗಿ ಉತ್ತರ ಕರ್ನಾಟಕ ಹಿಂದುಳಿದಿದೆ. 70ರ ದಶಕದಲ್ಲೇ ದಕ್ಷಿಣ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ, ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಬಚಾವತ್‌ ತೀರ್ಪಿನನ್ವಯ ನೀರಿನ ಸದ್ಬಳಕೆ ಆಗುತ್ತಿಲ್ಲ. ಇದಕ್ಕೇ ಇಲ್ಲಿನವರ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದರು.

Advertisement

ನಿಡಸೋಶಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಳಗದ ಖಜಾಂಚಿ ವಿಜಯ ದಾನವಾಡೆ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಶೃತಿ ಹೆಗ್ಗೆ ವಿರಚಿತ ಬಣ್ಣದ ಗರಿ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಜನ್ಮದಿನದ ಅಮೃತ ಮಹೋತ್ಸವ ಪ್ರಯುಕ್ತ ಡಾ| ಪ್ರಭಾಕರ ಕೋರೆ ಅವರನ್ನು ಬಳಗದ ಪರವಾಗಿ ಸತ್ಕರಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತೇಶ ಬನವಣೆ, ಸಂಚಾಲಕರಾದ ಮಲ್ಲಪ್ಪ ಮೈಶಾಳೆ, ಅಣ್ಣಾಸಾಹೇಬ ಪಾಟೀಲ, ಚೇತನ ಪಾಟೀಲ ಹಾಗೂ ನಿಖೀಲ್‌ ಕಮತಿ, ಮಹೇಶ ಬಾಕಳೆ, ಮಲ್ಲಿಕಾರ್ಜುನ ದಡ್ಡಿಕರ, ಜಯಶ್ರೀ ನಾಗರಳ್ಳಿ, ರವಿ ಹಂಪಣ್ಣವರ, ಕಲ್ಯಾಣಜೀ ಕಮತೆ, ಕೆ.ಎನ್‌. ಕುಂಬಾರ, ಸದಾನಂದ ಹಿರೇಮಠ, ಶಿವಗೌಡ ಬಾವಚೆ ಮೊದಲಾ ದವರು ಉಪಸ್ಥಿತರಿದ್ದರು. ಡಾ.ಸುಬ್ರಾವ ಎಂಟೆತ್ತಿನವರ ಸ್ವಾಗತಿಸಿದರು. ಎಸ್‌.ಆರ್‌.ದಳವಾಯಿ ಮತ್ತು ಆರ್‌.ಎಸ್‌.ಉಮರಾಣಿ ನಿರೂಪಿಸಿದರು. ಎಂ.ವಿ.ಮಾಳಗೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next