Advertisement

ರಾ.ಹೆ. ಪಕ್ಕದ 35 ಅನಧಿಕೃತ ಅಂಗಡಿ ತೆರವು

11:05 PM Nov 24, 2022 | Team Udayavani |

ಬೆಳ್ತಂಗಡಿ: ಇತ್ತೀಚೆಗಷ್ಟೇ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ 73 ಸ್ಪರ್‌ ರಸ್ತೆಯಾಗಿ ಮೇಲ್ದರ್ಜೆಗೇರಿದ್ದ ಉಜಿರೆಯಿಂದ ಧರ್ಮಸ್ಥಳ ಮೂಲಕ ಸಾಗುವ ಪೆರಿಯಶಾಂತಿ ರಸ್ತೆ ಅಂಚಿನಲ್ಲಿದ್ದ 35ಕ್ಕೂ ಅಧಿಕ ಅನಧಿಕೃತ ಅಂಗಡಿಗಳನ್ನು ದ.ಕ. ಜಿಲ್ಲಾಧಿಕಾರಿ ಡಾ| ರವಿಕುಮಾರ್‌ ಸೂಚನೆಯಂತೆ ಗುರುವಾರ ಜೆಸಿಬಿ ಮೂಲಕ ಸಂಪೂರ್ಣ ತೆರವುಗೊಳಿಸಲಾಯಿತು.

Advertisement

ಲೋಕೋಪಯೋಗಿ ಇಲಾಖೆ, ಕಂದಾಯ, ಪೊಲೀಸ್‌ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು. ಹೆದ್ದಾರಿ ಅಂಚಿನಲ್ಲೇ ಗ್ರಾ.ಪಂ.ಗಳ ಅನುಮತಿಯಿಲ್ಲದೆ ಅನಧಿಕೃತ ಅಂಗಡಿ ಸ್ಥಾಪಿಸಿ ವ್ಯವಹಾರ ನಡೆಸುತ್ತಿದ್ದರು. ನಿಯಮಾನುಸಾರ ರಸ್ತೆ ಫುಟ್‌ಪಾತ್‌ ಸ್ಥಳದಲ್ಲಿ ಯಾವುದೇ ಅಂಗಡಿ ನಿರ್ಮಿಸುವಂತಿಲ್ಲ. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಅಂಗಡಿ ನಿರ್ಮಿಸಿದರೆ ಕಠಿನ ಕಾನೂನು ಕ್ರಮಕ್ಕೆ ಅವಕಾಶವಿದೆ. ಆದರೂ ನಿಯಮ ಮೀರಿ ಅಂಗಡಿ ಹಾಕಲಾಗಿತ್ತು. ಈ ವಿಚಾರ ತಾ.ಪಂ. ಸಭೆಗಳಲ್ಲೂ ಹಲವು ಬಾರಿ ಪ್ರಸ್ತಾವ ಆಗಿತ್ತು.

ಪ್ರವಾಸಿಗರು ರಸ್ತೆಯಲ್ಲಿ ವಾಹನ ನಿಲ್ಲಿಸಿ ಅಂಗಡಿಗೆ ಹೋಗುವುದರಿಂದ ಇತರ ವಾಹನಗಳ ಸವಾರರಿಗೆ ತೊಂದರೆ ಆಗುತ್ತಿದ್ದ ಬಗ್ಗೆ ಹಲವು ದೂರುಗಳು ಬಂದಿದ್ದವು. ಅನೇಕ ಬಾರಿ ಪ್ರವಾಸಿಗರ ವಾಹನದಿಂದ ಕಳವು ನಡೆದ ದೂರುಗಳು ಕೇಳಿ ಬರುತ್ತಿದ್ದವು. ನ. 23ರಂದು ಸಂಜೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಬೊಲೆರೋ ವಾಹನ ರಸ್ತೆಯ ಅಂಚಿನಲ್ಲಿ ನಿಲ್ಲಿಸಿ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಬಸ್‌ ಢಿಕ್ಕಿಯಾಗಿ ಮಂಡ್ಯ ಮೂಲದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಕುರಿತು ಉದಯವಾಣಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಅನಧಿಕೃತ ಅಂಗಡಿ ತೆರವುಗೊಳಿಸುವುದಾಗಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next