Advertisement

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

01:52 AM May 04, 2024 | Team Udayavani |

ಕಾಣಿಯೂರು: ಕುಡಿತದ ಚಟ ಹೊಂದಿದ್ದ ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಉಪ್ಪಡ್ಕದಲ್ಲಿ ಗುರುವಾರ ಸಂಜೆ ನಡೆದಿದೆ.

Advertisement

ಉಪ್ಪಡ್ಕ ನಿವಾಸಿ ಪೂವಪ್ಪ ನಾಯ್ಕ ಅವರ ಪತ್ನಿ ಚಂದ್ರಾವತಿ (38) ಮೃತಪಟ್ಟವರು. 16 ವರ್ಷದ ಹಿಂದೆ ಪೂವಪ್ಪ ನಾಯ್ಕ, ಚಂದ್ರಾವತಿ ಅವರನ್ನು ಮದುವೆಯಾಗಿದ್ದರು. ಅವರಿಗೆ ಪ್ರಖ್ಯಾತ್‌ (15) ಹಾಗೂ ನಿಶಾಂತ್‌ (7) ಎನ್ನುವ ಇಬ್ಬರು ಪುತ್ರರಿದ್ದಾರೆ.

ಪೂವಪ್ಪ ಮದುವೆಯಾದ ಕೆಲವು ವರ್ಷಗಳ ಬಳಿಕ ಮದ್ಯವ್ಯಸನಿಯಾಗಿ, ಸರಿಯಾಗಿ ಕೆಲಸಕ್ಕೆ ಹೋಗದೆ ಪತ್ನಿ ಚಂದ್ರಾವತಿಯನ್ನು ಕೂಲಿ ಕೆಲಸ ಮಾಡಲು ಬಿಡದೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಸಂಬಂಧಿಕರು ಇವರಿಗೆ ಹಲವು ಬಾರಿ ಬುದ್ಧಿವಾದ ಹೇಳಿದರೂ ಪ್ರಯೋಜನವಾಗಿರಲಿಲ್ಲ. ಮದ್ಯವರ್ಜನ ಶಿಬಿರ ಹಾಗೂ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರೂ, ಕೆಲವು ತಿಂಗಳ ಕಾಲ ಮದ್ಯ ಸೇವನೆ ಬಿಟ್ಟು ಮತ್ತೆ ಪ್ರಾರಂಭಿಸುತ್ತಿದ್ದರು. ಇದೇ ಕಾರಣದಿಂದ ಚಂದ್ರಾವತಿಯವರಿಗೆ ನಿರಂತರ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ಸಹೋದರನಿಗೆ ಸಂದೇಶ ರವಾನಿಸಿದ್ದರು
ಗುರುವಾರ ಸಂಜೆ ಚಂದ್ರಾವತಿ ಬೆಂಗಳೂರಿನಲ್ಲಿರುವ ತನ್ನ ಸಹೋದರ ಪ್ರಶಾಂತ್‌ ಅವರಿಗೆ ಮೊಬೈಲ್‌ ಸಂದೇಶ ರವಾನಿಸಿದ್ದು, ಪತಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂಸೆ ನೀಡುತ್ತಿದ್ದಾರೆ. ಅವರ ಜತೆ ಬದುಕಲು ನನಗೆ ಇಷ್ಟವಿಲ್ಲ, ನಾನು ಸಾಯುತ್ತೇನೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿಕೊಂಡಿದ್ದರು. ಚಂದ್ರಾವತಿಯವರ ಇನ್ನೋರ್ವ ಸಹೋದರ ಪ್ರವೀಣ್‌ ನೆಕ್ಕಿತಡ್ಕ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಅದಾಗಲೇ ಮನೆಯ ಪಕ್ಕದ ಗೇರು ಮರಕ್ಕೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಸಹೋದರ ನೀಡಿದ ದೂರಿನಂತೆ ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next