Advertisement

Ugadi special; ಕುಸುಮಾಕರನನ್ನು ಸ್ವಾಗತಿಸಿ

04:24 PM Mar 21, 2023 | Team Udayavani |

ಮಾಗಿಯ ಚಳಿ ಕರಗಿ ಬಿಸಿಲು ಬಿರುಸಾಗುವ ಹೊತ್ತು. ತಾಪವು ಬಿಗಿಯಾಗಿ, ಮರಗಳು ಚಿಗುರಿ, ಹೂವುಗಳು ಮಂಜರಿಯಾಗಿ ಮಕರಂದವನ್ನು ಸೂಸುತ್ತಾ, ಸೆಖೆಯೇ ತಂಪೆನಿಸುವ ತಂಗಾಳಿಯು ಸೂಸುವ ಬೇಸಗೆಯೂ ಆಹ್ಲಾದವೇ. ಎಷ್ಟಾದರೂ ವಸಂತ ಬರುವ ಕಾಲವಿದು.

Advertisement

ವಸಂತಕ್ಕೆ ನೀರು, ಮರ, ಗಾಳಿ, ಬೆಳದಿಂಗಳು ಎಲ್ಲವೂ ಆಪ್ಯಾಯಮಾನವೇ. ಹೀಗಾಗಿ ವಸಂತ ಋತುಗಳ ರಾಜ. ಋತೂನಾಮ್‌ ಕುಸುಮಾಕರಃ ಎಂದು ಗೀತಾಚಾರ್ಯನೂ ಹೇಳಿರುವುದು ವಸಂತನಿಗೆ ಹೆಗ್ಗಳಿಕೆಯೇ. ಶಿಶಿರ ಕಳೆದು, ಗ್ರೀಷ್ಮದ ಮೊದಲು ನಿಸರ್ಗದ ನವೋದಯದಕ್ಕೆ ಯುಗಾದಿಯ ಪರ್ವ. ಭೂಮಿಯ ಉತ್ತರಾರ್ಧ ಗೋಳದಲ್ಲಿ ಮಾರ್ಚ್‌ನಿಂದ ಮೇ ವರೆಗಿನ ಕಾಲದಲ್ಲಿ ಪ್ರಕೃತಿಯು ಬದಲಾವಣೆಗೆ ತೆರೆದುಕೊಂಡು ಹಸುರನ್ನು ಧರಿಸುವುದು. ಯುಗಾದಿಯು ವಸಂತದ ಮೊದಲ ದಿನ.

“ಮಾಂದಳಿರ ತೋರಣ ಹೂಮಿಡಿ ಗುಡಿಗಟ್ಟಿ/ ಮಧುಮಾಸ ಹೊರಟಿತ್ತು ನಿಬ್ಬಣಕೆ’ ಎಂಬ ವರ ಕವಿ ವಾಣಿಯ ನುಡಿಯಂತೆ ಮಾವಿನ ತೋರಣ ಸಂವತ್ಸರದ ಹೊಸಹಬ್ಬಕ್ಕೆ ಸ್ವಾಗತಿಸಲು ಬೇಕಲ್ಲವೇ. ಯುಗಾದಿಯ ದಿನ ಮಿಂದು, ಇಷ್ಟ ದೇವರನ್ನು ಪೂಜಿಸಿ, ಸರ್ವಾರಿಷ್ಟವನ್ನು ನೀಗಿಸು ಎಂದು ಬೇವಿನ ದಳವನ್ನು ಸೇವಿಸುವುದು ಆಚರಣೆ. ವಿಶೇಷ ಭಕ್ಷ್ಯಗಳು ದೇವರಿಗೆ ನೈವೇದ್ಯವಾಗಿ ಊಟದ ಹಬ್ಬವಾಗಿ ಯುಗಾದಿ ಬದಲಾಗುತ್ತದೆ. ವರ್ಷಾರಂಭದಲ್ಲಿ ಇಡೀ ವರ್ಷದ ಝಲಕನ್ನು ಪಂಚಾಂಗ ಶ್ರವಣ ಮೂಲಕ ಕೇಳುವುದು ವಾಡಿಕೆ.

ಇಲ್ಲಿ ಸಂವತ್ಸರದ ಫ‌ಲ, ರಾಜ ಫ‌ಲ, ಮಂತ್ರಿ ಫ‌ಲ, ಸೈನ್ಯ, ಸಸ್ಯ, ಅರ್ಘಾಧಿಪತಿ, ಮೇಘಾಧಿಪತಿ, ಧಾನ್ಯಾಧಿಪತಿಗಳ ಫ‌ಲವನ್ನು ಸುಭಿಕ್ಷತೆಯ ಮೂಲಕ ತಿಳಿದುಕೊಳ್ಳುತ್ತಾರೆ.

ಆರಿದ್ರಾ ನಕ್ಷತ್ರಕ್ಕೆ ರವಿಯ ಪ್ರವೇಶ ಹೇಗೆ ಆಗುವುದು ಎಂಬುದು ಮಳೆಯ ವಿತರಣೆಯನ್ನು ಹೇಳಿದರೆ, ಮೇಘ ಫ‌ಲ ಮಳೆಯ ಸುರಿಸುವ ಮೋಡದ ಬಗೆಗೆ ತಿಳಿಸುವುದು. ಗುರುವಿನ ಸಂಚಾರ, ಸಂವತ್ಸರ ಫ‌ಲಸಾರಗಳೆಲ್ಲವೂ ಈ ಪಂಚಾಂಗ ಶ್ರವಣದಲ್ಲಿ ಉಕ್ತವಾಗಿರುತ್ತವೆ. ರೋಗೋಪದ್ರವ, ಮಳೆಯ ವಿಫ‌ುಲತೆ, ಸಸ್ಯ ಸಮೃದ್ಧಿ, ಕಾರ್ಯಸಾಧನೆ ಇತ್ಯಾದಿ ವಿಷಯಗಳ ಸರಳ ಅರ್ಥೈಸುವಿಕೆಯೂ ಇಲ್ಲಿರುತ್ತದೆ. ಅಲ್ಲಿಗೆ ಮುಂದಿನ ಸಂವತ್ಸರದ ಪಕ್ಷಿನೋಟವೆಂಬುದು ಪಂಚಾಗ ಶ್ರವಣದಿಂದ ಲಭಿಸಿರುತ್ತದೆ.

Advertisement

ರೈತರು ಬಿಡುವಿಂದ ಬಿರುಸಾಗುವ ಕೃಷಿ ಕಾರ್ಯಗಳಿಗೆ ಇಳಿಯುವುದು ಯುಗಾದಿಯ ಅನಂತರವೇ. ಯುಗಾದಿಯು ರೈತಾಪಿ ವರ್ಗದ ಪ್ರಮುಖ ಮತ್ತು ಮೊದಲ ಹಬ್ಬ. ರೈತಾಪಿಗಳು ರಾಸುಗಳನ್ನು ತೊಳೆದು ಅಲಂಕರಿಸುವರು. ಕರ್ನಾಟಕದ ಉದ್ದಗಲಕ್ಕೂ ಭೂಮಿಪೂಜೆಯನ್ನು ಅನಂತರ ಗೋಪೂಜೆಯನ್ನೂ ನೆರವೇರಿಸಿ, ಎತ್ತುಗಳಿಗೆ ನೇಗಿಲು ಕಟ್ಟಿ ನಾಲ್ಕಾರು ಸುತ್ತು ಉಳಲಾಗುತ್ತದೆ.  ಕೃಷಿಯ ಆರಂಭ ಎನ್ನುವ ಅರ್ಥದಲ್ಲಿ ಹೊಸ ಬ್ಯಾಸೆ ಎಂಬ ಪದಬಳಕೆಯೂ ಅರೆಮಲೆನಾಡಿನ ರೈತಾಪಿ ಜನರಲ್ಲಿ ಜನಜನಿತ.

ದಕ್ಷಿಣ ಕರ್ನಾಟಕದ ಹಲ ಭಾಗಗಳಲ್ಲಿ ಯುಗಾದಿಯ ಉತ್ತರಾರ್ಧ ಕ್ರೀಡೆಗೆ ಸೀಮಿತ. ಚಿಣ್ಣರು-ಬಾಲಕರು ಮೈಮುರಿಯುವ ಆಟಗಳಲ್ಲಿ ತೊಡಗಿಕೊಂಡರೆ, ಪಕ್ವವಾದವರು ಪಗಡೆಯಲ್ಲೂ ನಿರತರಾಗಿ ಬಿಡುತ್ತಾರೆ. ಖಾರ, ಹೊಸತೊಡಕು ಮರುದಿನದ ವೈಭವಕ್ಕೆ. ಉತ್ತರ ಕರ್ನಾಟಕದಲ್ಲಿ ಯುಗಾದಿ ಗರಿಗೆದರಿದ ಚಟುವಟಿಕೆಗಳ ಹಬ್ಬ. ಮಾವು, ಗೋಧಿ-ಕುಸುಬೆಯ ತೆನೆಯಿಂದ ತೊನೆದ ತೋರಣ ಮನೆಗಳಲ್ಲಿ ಸ್ವಾಗತಕ್ಕೆ ಸಿದ್ಧವಾಗಿರುತ್ತವೆ. ಭೂಮಿಪೂಜೆಯೂ ವಿಶಿಷ್ಟ. ಕೈಯಿಂದ ಹೊಸೆದ ಶ್ಯಾವಿಗೆಯ ಸಿಹಿ ಅತ್ಯಗತ್ಯ. ಯುಗಾದಿಯಂದು ಜನ ಕೆಂಬೂತ ಅಥವಾ ರತ್ನ ಪಕ್ಷಿ, ಭಾರದ್ವಾಜ ಪಕ್ಷಿಯನ್ನು ನೋಡಿದರೆ ವರುಷವೆಲ್ಲಾ ಆನಂದದಾಯಕವಾಗಿರುತ್ತದೆ ಎಂಬುದು ನಂಬಿಕೆ. ಗೋಡೆಯ ಮೇಲೆ ಚಂದ್ರನ ಚಿತ್ರ ಬರೆದು, ಬೆಳದಿಂಗಳಿನಲ್ಲಿ ಮನೆಯ ಚಿಣ್ಣರು ಊಟಮಾಡುವ ಪದ್ಧತಿಯೂ ಕಾಣಸಿಗುತ್ತದೆ. ಒಟ್ಟಿನಲ್ಲಿ, ಯುಗಾದಿಯ ಆರಂಭವನ್ನು ಸಾಂಗವಾಗಿ ಮಾಡಿಬಿಟ್ಟರೆ ವರ್ಷವಿಡೀ ನೆಮ್ಮದಿಯಾಗಿರಬಹುದೆಂಬ ಸಮಾಧಾನ.

“ಚೈತ್ರ ಹೊರಟನೆ ಜೈತ್ರ ಯಾತ್ರೆಗಿನ್ನೊಂದು ಸಲ!’ ಎಂಬುದು ಗೋಪಾಲಕೃಷ್ಣ ಅಡಿಗರ ಕವನದ ಸಾಲು. ಯುಗಾದಿ ಭರವಸೆಗಳ ಪ್ರತೀಕ. ಹಾಗಿದ್ದಾಗ ಕೆಎಸ್‌ಎನ್‌ ಹೇಳುವಂತೆ “ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು’ – ಎಂಬ ಅನಾದಿಯಿಂದ ಸವೆಯಿಸಿರುವ ಜೀವನ ಪಥಕ್ಕೆ ಹೆಜ್ಜೆಗೊಂದು ಯುಗಾದಿಯನ್ನು ಕಾಣಿರಿ ಎಂಬ ಆಶಾಭಾವ. ಹೊಂಗೆ ಹೂವ ತೊಂಗಲಿಂದ ಚೈತ್ರ ಹೊರಟು ವರುಷವಿಡೀ ಹರುಷ ಪಸರಿಸುವ ಯಾತ್ರೆಗೆ ಅಣಿಯಾಗೋಣ. ಯುಗಾದಿಯು ಪರಂಪರೆಯ ಕೊಂಡಿಯಾಗಿ ಅಖೀಲ ಚೇತನರಲ್ಲಿ ಹೀಗೆಯೇ ಮುಂದುವರೆಯಲಿ. ನವೋನ್ಮೆಷ ಶಾಲಿನಿಯಾಗಿರುವ ಪ್ರಕೃತಿಯ ಲೀಲೆಯಲ್ಲಿ ಕುಸುಮಾಕರನನ್ನು ಸ್ವಾಗತಿಸೋಣ

ವಿಶ್ವನಾಥ ಭಟ್‌, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next