Advertisement

ಹೊಸ ಸಂವತ್ಸರದ ಆದಿ ಮರಳಿ ಬಂದಿದೆ ಯುಗಾದಿ

03:18 PM Mar 21, 2023 | Team Udayavani |

ಎಲ್ಲರ ಬದುಕಿನಲ್ಲೂ ಕಷ್ಟ, ಸುಖ ಎಂಬುದು ಬಂದೇ ಬರುತ್ತದೆ. ಅವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮದಾಗಿರಬೇಕಷ್ಟೆ ಎಂಬುದನ್ನೇ ಹಬ್ಬಗಳು ಸಾರುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳ ಹಿಂದೆಯೂ ಒಂದೊಂದು ವಿಶೇಷತೆಗಳಿರುತ್ತವೆ. ಅದರಲ್ಲೂ ಯುಗಾದಿ ಹೇಳುವ ಬದುಕಿನ ಪಾಠವನ್ನು ಎಲ್ಲರೂ ನೆನಪಿಸಿಕೊಳ್ಳಲೇಬೇಕು. ಪ್ರಕೃತಿ ಮತ್ತು ಮಾನವನ ಸಂಬಂಧ ಎಷ್ಟು ಗಾಢವಾಗಿದೆ ಎನ್ನುವುದನ್ನು ಇದು ಹೇಳುವುದರ ಜತೆಜತೆಗೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಗುತ್ತಾ ಸ್ವೀಕರಿಸಿದರೆ ಕಾಲ ಕಳೆದಂತೆ ಎಲ್ಲ ಸಮಸ್ಯೆಗಳೂ ದೂರವಾಗಿ ಬದುಕಿಗೆ ಹೊಸ ಬೆಳಕು ತೋರುತ್ತದೆ ಎನ್ನುವ ಸಂದೇಶವನ್ನೂ ಸಾರುತ್ತದೆ.

Advertisement

—————–

ವರುಷ ವರುಷಗಳೇ ಉರುಳಿತ್ತಿವೆ

ಹೊಸತನವ ಹೊತ್ತು

ಹೊಸ ವರುಷ ಮತ್ತೆ ಮತ್ತೆ ಮರಳುತ್ತಿವೆ

Advertisement

ಎಲ್ಲರ ಬದುಕಿಗೂ ಬೆಳಕಾಗಿ ಬರಲಿ

ಹೊಸ ವರುಷ, ಹೊಸ ಸಂವತ್ಸರ

ವಿಶ್ವದ ಕಾಂತಿಯಾಗಿ ಶಾಂತಿ ತರಲಿ

ಶೋಭಕೃತ್‌ ಶುಭ ಸಂವತ್ಸರ

ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. ಹೀಗೆ ಆರುವತ್ತು ಸಂವತ್ಸರಗಳಿವೆ. ಇವುಗಳಿಗೆ ಅತ್ಯಂತ ಸುಂದರವಾದ ಹೆಸರುಗಳನ್ನು ನಮ್ಮ ಹಿರಿಯರು ಇಟ್ಟಿದ್ದಾರೆ. ಶೋಭಕೃತ್‌ ವಿಶ್ವದ ಕಾಂತಿಯಾಗಿ ವಿಶ್ವ ಶಾಂತಿ ತರಲಿ ಎನ್ನುವ ಭರವಸೆಯಲ್ಲಿ ಯುಗಾದಿಯ ವೈಭವದ ಸ್ವಾಗತಕ್ಕೆ  ಸಿದ್ಧತೆಗಳನ್ನು ನಡೆಸುವ ಮುನ್ನ ಇದರ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕಿದೆ.

ಯುಗಾದಿ ಪದದ ಅರ್ಥ ಯುಗದ ಆರಂಭದ ದಿನ. ಸತ್ಯ, ತ್ರೇತಾ, ದ್ವಾಪರ ಯುಗಗಳ ಅನಂತರ ಕಲಿಯುಗ ಆರಂಭವಾದ ದಿನ. ಕ್ರಿ.ಪು. 5123ರಲ್ಲಿ ಕಲಿಯುಗದ ಜನನವಾಗಿದ್ದು, ಈ ದಿನದ ಆಚರಣೆಯೇ ಯುಗಾದಿ ಹಬ್ಬ. ಇನ್ನು ಕೆಲವು ಅಭಿಪ್ರಾಯದಂತೆ ಬ್ರಹ್ಮ ಈ ದಿನ ವಿಶ್ವ ಸೃಷ್ಟಿಸಿದ್ದು, ಶ್ರೀ ರಾಮಚಂದ್ರನು ಮರಳಿ ಅಯೋಧ್ಯೆಗೆ ಬಂದು ಸಿಂಹಾಸನ ಸ್ವೀಕರಿಸಿ ಪಟ್ಟಾಭಿಷೇಕ ಆಗಿದ್ದು… ಹೀಗೆ ಅನೇಕ ಪ್ರಾಮುಖ್ಯತೆಯನ್ನು ಈ ಹಬ್ಬಕ್ಕೆ ನೀಡಲಾಗಿದೆ. ಇದು ದೇಶದಾದ್ಯಾಂತ ಬೇರೆ ಬೇರೆ ಹೆಸರಿನಿಂದ ಆಚರಿಸಲ್ಪಡುತ್ತದೆ. ದಕ್ಷಿಣ ಭಾರತದಲ್ಲಿ ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಇದಕ್ಕೆ ಗುಡಿಪಡ್ವಾ ಎಂದು ಕರೆಯಲಾಗುತ್ತದೆ.

ಹಬ್ಬಗಳು ಏಕೆ?:

ಹಬ್ಬ ಎಂದರೆ ದೇವರನ್ನು ಕರೆದು ಆತಿಥ್ಯ ಮಾಡಿ ಅವನ ಕೃಪೆಗೆ ಪಾತ್ರರಾಗುವುದು ಎನ್ನುವುದು ಭಾರತೀಯ ಸಂಸ್ಕೃತಿ. ಭಾರತೀಯರಿಗೆ ನಿತ್ಯೋತ್ಸವ ನಿತ್ಯ ಮಂಗಳ ಎನ್ನುತ್ತಾರೆ. ಯಾಕೆಂದರೆ ನಮಗೆ ಪ್ರತಿನಿತ್ಯವೂ ಹಬ್ಬ. ಇದರ ಗೂಢಾರ್ಥ ದೈವ ಕೃಪೆ ಬೇಡುವುದು ನಾಮ ಸ್ಮರಣೆ ಮಾಡುವುದು. ಇದು ಮೋಕ್ಷ ಮಾರ್ಗಕ್ಕೆ ಹೆದ್ದಾರಿಯೂ ಹೌದು.

ಬರುವ ನೂತನ ಸಂವತ್ಸರವನ್ನು ಸ್ವಾಗತಿಸುವುದೇ ಯುಗಾದಿಯ ಸಂಕೇತ. ಮಾರ್ಚ್‌ ಅಥವಾ ಎಪ್ರಿಲ್‌ ತಿಂಗಳಿನಲ್ಲಿ ವಸಂತ ಋತುವಿನ ಆರಂಭದೊಡನೆ ಈ ಹಬ್ಬ ಬರುತ್ತದೆ. ಹೊಸ ಪಂಚಾಂಗ, ಹೊಸ ವರ್ಷದ ಆರಂಭ. ಅಂತೆಯೇ  ಪ್ರಕೃತಿಯಲ್ಲಿ ಕೂಡ ಲವಲವಿಕೆ, ಗಿಡ ಮರಗಳು ಚಿಗುರುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಚಳಿ ಮಾಯವಾಗಿ ಹಿತಕರ ವಾತಾವರಣ ಅಡಿಯಿಟ್ಟು ಆಹ್ಲಾದವನ್ನುಂಟು ಮಾಡುತ್ತದೆ. ಒಟ್ಟಿನಲ್ಲಿ ಈ ಹಬ್ಬ ಹೊಸ ಪಂಚಾಂಗ, ಹೊಸ ಪ್ರಕೃತಿ, ಹೊಸ ಆನಂದದ ಮಿಶ್ರಣ. ಇದನ್ನು ಸವಿಯುವುದೇ ಹಬ್ಬದ ವಿಶೇಷ.

ಯುಗಾದಿ ಆಚರಣೆ ಹೇಗೆ? :

ಯುಗಾದಿ ಬರುವಿಕೆಯು ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಪ್ರಕೃತಿ ಕೂಡ ನೂತನ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ. ಮುಂಬರುವ ಹೊಸ ಸಂವತ್ಸರ ಎಲ್ಲರಿಗೂ ಶುಭ ತರಲಿ ಎನ್ನುವ ಉದ್ದೇಶದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಕಾಲಾಯ ತಸೆ¾„ ನಮಃ  ಹಳೆಯ ಕಾಲ ಅಥವಾ ಸಂವತ್ಸರದ ಹನ್ನೆರಡು ತಿಂಗಳು ಕಳೆದು ಹೊಸ ಕಾಲ ಆರಂಭ. ಅದಕ್ಕೆ ಹಳೆಯ ಕಾಲವನ್ನು ಸಂತೋಷದಿಂದ ಬೀಳ್ಕೊಟ್ಟು ಹೊಸ ಕಾಲಕ್ಕೆ ನಮಿಸಿ ಸ್ವಾಗತಕೋರಬೇಕು.

ಸಂವತ್ಸರದ ಪ್ರಥಮ ಮಾಸ ಚೈತ್ರ, ಪ್ರಥಮ ದಿನ ಪಾಡ್ಯ. ಪವಿತ್ರವಾದ ಈ ದಿನವನ್ನು ಸಂಭ್ರಮದಿಂದ ಆಧ್ಯಾತ್ಮಿಕ ನಿಟ್ಟಿನಲ್ಲಿ ಸ್ವಾಗತಿಸಬೇಕು. ಹಬ್ಬ ಎಂದರೆ ಆನಂದ. ಸರಳ ಮತ್ತು ಭೋಗ ಜೀವನವೂ ಬದುಕಿನಲ್ಲಿ ಇರಬೇಕು.  ಎರಡಕ್ಕೂ ಸಮಾನ ಪ್ರಾಮುಖ್ಯ ನೀಡಿದರೆ ಅದೇ ಆತ್ಮತೃಪ್ತಿಯನ್ನೊದಗಿಸುತ್ತದೆ ಎನ್ನುವುದನ್ನು ಸಾರುತ್ತದೆ.

ಹಬ್ಬದ ತಯಾರಿ ಎಲ್ಲರ ಮನೆಗಳಲ್ಲಿ ಬಹಳ ದಿನಗಳ ಮುಂಚೆಯೇ ಆರಂಭವಾಗುತ್ತದೆ. ಮನೆಗೆ ಸುಣ್ಣ ಬಣ್ಣ ಬಳಿದು, ಅಲಂಕರಿಸುವುದು ವಿಶೇಷ. ಹಾಗೆಯೇ ನಮ್ಮ ಹೊರ ವಾತಾವರಣದಲ್ಲಿ ಕೂಡ ಸಂಭ್ರಮ ಕಾಣುತ್ತೇವೆ. ಯುಗಾದಿ ಸೇಲ್‌ ಸೀರೆ, ಬಟ್ಟೆ , ಚಿನ್ನ , ಬೆಳ್ಳಿ ಅಂಗಡಿಗಳಲ್ಲಿ ಜನಜಂಗುಳಿ, ಪುಸ್ತಕದ ಅಂಗಡಿಗಳ ಪಂಚಾಂಗಗಳ ಪ್ರದರ್ಶನ, ದಿನಸಿ ಅಂಗಡಿಗಳು, ಹೂವಿನ ಅಂಗಡಿಗಳು ಭಾಗವಹಿಸುತ್ತಾ ಇದ್ದರೆ ಊರಿಗೆ ಊರೇ ಕಂಗೊಳಿಸುತ್ತದೆ. ಹೊಸ ವಾತಾವರಣ ಶುದ್ಧಿಯಾದಾಗ ಅಂತರಂಗವೂ ಶುದ್ಧಿಯಾಗುತ್ತದೆ. ಹೊಸ ಬಟ್ಟೆಗಳನ್ನು ತೊಡುವುದು ಹಳೆಯ ಬಟ್ಟೆಗಳನ್ನು ತೊರೆಯುವ ಸಂಕೇತ ನಮ್ಮಲ್ಲಿರುವ ನಿರ್ಗುಣ ತೊಲಗಿಸಿ ಸಗುಣ ಮನದಲ್ಲಿ ತುಂಬಿ ಧಾರ್ಮಿಕ ಜೀವನ ನಡೆಸಿರಿ ಎನ್ನುವುದೇ ಆಗಿರುತ್ತದೆ .

ಮಾವಿನ ತೋರಣ ಬಾಗಿಲನ್ನು ಅಲಂಕರಿಸಿದರೆ, ರಂಗೋಲಿ ಮನೆಯ ಮುಂದೆ ಕಂಗೊಳಿಸುತ್ತದೆ. ದೇವರ ಗುಡಿ ದೀಪಗಳಿಂದ ಬೆಳಗಿ ಪಂಚಾಂಗ ಶ್ರವಣಕ್ಕೆ ತಯಾರಿ ನಡೆಯುತ್ತದೆ. ಮನೆಯಲ್ಲಿ ಹೋಳಿಗೆ, ಪಾಯಸ ಮೊದಲಾದ ಖಾದ್ಯ ಪದಾರ್ಥಗಳನ್ನು ತಯಾರಿಸಿ ದೇವರಿಗೆ ಅರ್ಪಿಸಿ ಸವಿಯುವುದರ ಅರ್ಥ ವರ್ಷ ಪೂರ್ತಿ ಆನಂದದ ಹೊಳೆ ಹರಿಯಲಿ ಎಂಬುದೇ ಆಗಿದೆ.

ಮತ್ತೂಂದು ಮುಖ್ಯ ಸಂಗತಿ ಸ್ಥಿತ ಪ್ರಜ್ಞ ಕೃಷ್ಣ ಬೋಧಿಸಿದ ನೀತಿಯನ್ನು ಪಾಲಿಸುವುದು. ಏನೇ ಕಷ್ಟಗಳು ಬರಲಿ, ಏನೇ ಸುಖ ಬರಲಿ ಸಮವಾಗಿ ಸ್ವೀಕರಿಸು ಮಾನವ. ಭಗವದ್ಗೀತೆಯಲ್ಲಿ ಮಾನವ ಜನಾಂಗಕ್ಕೆ ಕೃಷ್ಣ ನ ಸಂದೇಶ. ಕಷ್ಟದಲ್ಲಿ ಕುಗ್ಗದೆ, ಸುಖದಲ್ಲಿ ಹಿಗ್ಗದೇ ಸಮತೋಲನ ಜೀವನ ನಡೆಸಬೇಕು ಎನ್ನುವುದು ಇದರ ಅರ್ಥ.

ಇದೇ ಕಾರಣ ಯುಗಾದಿಯ ದಿನದಂದು ಬೇವು, ಬೆಲ್ಲ ಮಿಶ್ರಣದ ನೈವೇದ್ಯ ಭಂಜಿಸುವುದು. ಬೇವು ಕಹಿ, ಬೆಲ್ಲ ಸಿಹಿ ಇದು ಒಂದು ನಾಣ್ಯದ ಎರಡು ಮುಖಗಳು. ಎಲ್ಲರ ಬಾಳಿನಲ್ಲಿ  ಇದನ್ನು ಭಕ್ಷಿಸುವಾಗ ಈ ಕೆಳಕಂಡ ಮಂತ್ರ ಪಠನೆ ಮುಖ್ಯವಾದ ಅಂಗ.

ಶತಾಯು ವಜ್ರ ದೇಹಾಯಾ ಸರ್ವ ಸಂಪತ್‌ ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬ ಕಂಬಳ ಭಕ್ಷಣಂ ||

ಓ ಭಗವಂತ ನೂರು ವರುಷ ಆಯಸ್ಸು, ಆರೋಗ್ಯವಾದ ದೇಹ, ಸುಖ ಸಂಪತ್ತು, ಕಷ್ಟಗಳ ನಿವಾರಣೆ ನಮಗೆ ಕರುಣಿಸು. ಈ ದಿನ ದೇವಸ್ಥಾನಗಳಿಗೆ ಹೋಗುವುದು ವಾಡಿಕೆ. ದೇವರಿಗೆ ಅರ್ಚನೆ ಸಲ್ಲಿಸಿ ಹೊಸ ವರುಷಕ್ಕೆ ನಾಂದಿಯಾಗಲಿ ಎನ್ನುವ ನಂಬಿಕೆ.

– ಜಯ ಮೂರ್ತಿ, ಇಟಲಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next