Advertisement

ಅವ್ಯವಸ್ಥೆಯ ಆಗರ ಉಡುಪಿಯ ತರಕಾರಿ ಮಾರುಕಟ್ಟೆ

06:00 AM Jun 15, 2018 | |

ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಬಳಿಯ ಸುಮಾರು 40 ವರ್ಷ ಹಳೆಯ ವಿಶ್ವೇಶ್ವರಯ್ಯ ತರಕಾರಿ/ಹಣ್ಣುಹಂಪಲು ಮಾರುಕಟ್ಟೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ವ್ಯಾಪಾರ, ಖರೀದಿ ನಡೆಸುವುದೇ ಕಷ್ಟವಾಗಿದೆ.  

Advertisement

ಮೂಲ ಸೌಕರ್ಯ ಕೊರತೆ
ಪ್ರತಿನಿತ್ಯ ನೂರಾರು ಮಂದಿ ತರಕಾರಿ/ಹಣ್ಣುಹಂಪಲುಗಳ ಖರೀದಿಗೆ ಬರುವ ಈ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಶೌಚಾಲಯ ವ್ಯವಸ್ಥೆ, ವಿದ್ಯುತ್‌ ಸಂಪರ್ಕ ಇಲ್ಲ. ಮಳೆಗಾಲದಲ್ಲಿ ಮಾರುಕಟ್ಟೆ ಒಳಗಡೆ ನಿಲ್ಲಲು ಮಾಡಿನ ವ್ಯವಸ್ಥೆಯಿಲ್ಲ. ಇಲ್ಲಿನ ಪಾರ್ಕಿಂಗ್‌ ಸ್ಥಳ ಕಲ್ಲು ಹಾಕಿದ್ದರಿಂದ ಏರುಪೇರಾಗಿದ್ದು, ನಾಗರಿಕರಿಗೆ ನಡೆದಾಡಲೂ ಕಷ್ಟಕರವಾಗಿದೆ. ಖರೀದಿಗೆ ಬಂದ ಅದೆಷ್ಟೋ ಹಿರಿಯ ನಾಗರಿಕರು ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳೂ ನಡೆದಿವೆ. 

ಮಾರುಕಟ್ಟೆಯಲ್ಲಿ ಬೇಸಗೆಯಲ್ಲಿ ಧೂಳೆ ದ್ದರೆ, ಮಳೆಗಾಲದಲ್ಲಿ ಕೆಸರುಮಯವಾಗು ತ್ತದೆ. ಹೊಂಡಗಳಲ್ಲಿ ನೀರು ನಿಂತು ಸಮಸ್ಯೆ ಬಿಗಡಾಯಿಸುತ್ತದೆ. ಮಾರುಕಟ್ಟೆ ಬಳಿ ಕೆಎಸ್‌ಆರ್‌ಟಿಸಿ ನಿಲ್ದಾಣ ಇರುವುದರಿಂದ ಇದು ಜನನಿಬಿಡ ಪ್ರದೇಶವಾಗಿದೆ. ಇಲ್ಲಿ ವಾಹನಗಳು ಕೆಲವೊಮ್ಮೆ ಅಡ್ಡಾದಿಡ್ಡಿ ಯಾಗಿ ಸಂಚರಿಸುವುದರಿಂದ ಮಾರುಕಟ್ಟೆ ಪ್ರವೇಶಿ ಸಲೇ ಜನ ಹರಸಾಹಸ ಪಡಬೇಕಾಗಿದೆ. 
  
ವ್ಯಾಪಾರಸ್ಥರ ಗೋಳು 
ಇಲ್ಲಿ 30 ವ್ಯಾಪಾರಸ್ಥರು 27 ವರ್ಷ ಗಳಿಂದ ಅಧಿಕೃತವಾಗಿ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ವಿವಿಧೆಡೆ ಸಂತೆ ವ್ಯಾಪಾರ ನಡೆಸುವವರೂ ಗ್ರಾಹಕರಿಗೆ ಮೀಸಲಿಟ್ಟ ಜಾಗದಲ್ಲಿ ಬೆಳಗ್ಗೆ ಸುಮಾರು 5ರಿಂದ 11ರ ವರೆಗೆ ಹೋಲ್‌ಸೇಲ್‌, ಚಿಲ್ಲರೆ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಖಾಯಂ ವ್ಯಾಪಾರಸ್ಥರಿಗೆ ರವಿವಾರ, ಬುಧವಾರ ಹೊರತುಪಡಿಸಿ ವಾರದ ಉಳಿದ ದಿನಗಳಲ್ಲಿ ವ್ಯಾಪಾರವಿಲ್ಲದೇ ನಷ್ಟವಾಗುತ್ತಿದೆ ಎಂದು ಇಲ್ಲಿನ ವ್ಯಾಪಾರಸ್ಥರು ದೂರುತ್ತಿದ್ದಾರೆ.

ನಗರಸಭೆ ಉಪಕ್ರಮ 
ಬಿಪಿಪಿ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನಗರಸಭೆ ಟೆಂಡರ್‌ ಕರೆದಿತ್ತು. ಆದರೆ ಸಿಂಗಲ್‌ ಟೆಂಡರ್‌ ಎನ್ನುವ ಕಾರಣಕ್ಕೆ ಸರಕಾರದ ಮಟ್ಟದಲ್ಲಿ ತಿರಸ್ಕೃತ ಗೊಂಡಿದೆ. ಪುನಃ ಟೆಂಡರ್‌ ಪ್ರಸ್ತಾವನೆ ಮಾಡುವಾಗ ಮಾರುಕಟ್ಟೆ ವ್ಯಾಪ್ತಿಯಲ್ಲಿರುವ ದೇವಸ್ಥಾನದವರು ದೇಗುಲಕ್ಕೆ ಸಂಬಂಧಪಟ್ಟ ಸ್ಥಳದ ಗಡಿ ಗುರುತು ಮಾಡುವಂತೆ ಸೂಚಿಸಿದ್ದರು. ಅದರಂತೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ನಿವೇಶನ ಮಂಜೂ ರಾತಿ ಪಡೆದು ಬೆಂಗಳೂರಿನ ಐಡೆಕ್‌ ಸಂಸ್ಥೆಗೆ ವಿನ್ಯಾಸಕ್ಕೆ ಕಳುಹಿಸಿಕೊಟ್ಟಿದೆ. ಐಡೆಕ್‌ ಸಂಸ್ಥೆ ಯಿಂದ ಸಾಧ್ಯತಾ ವರದಿ (ಫಿಸಿಬಿಲಿಟಿ ರಿಪೋರ್ಟ್‌) ಇನ್ನಷ್ಟೇ ಬರಬೇಕಿದೆ. 

ರಸ್ತೆ ದಾಟುವುದೂ ಕಷ್ಟ  
ಮಾರುಕಟ್ಟೆ- ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ರಸ್ತೆ ದಾಟುವುದೇ ಹರಸಾಹಸದ ಕೆಲಸ. ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಮುಖ್ಯರಸ್ತೆಯ ಸಮೀಪದಲ್ಲಿಯೇ ಟ್ಯಾಕ್ಸಿ ನಿಲ್ದಾಣ, ರಿಕ್ಷಾ ನಿಲ್ದಾಣ, ಬಸ್‌ನಿಲ್ದಾಣವಿದ್ದು ಯಾವ ಭಾಗದಿಂದ ವಾಹನಗಳು ಮುನ್ನುಗ್ಗುತ್ತವೆ ಎಂದು ತಿಳಿಯುವುದೇ ಇಲ್ಲ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು ಶಾಲಾ ಮಕ್ಕಳು ಆತಂಕದಿಂದಲೇ ಓಡಾಡಬೇಕಾಗಿದೆ.  

Advertisement

ನಮಗೊಂದು,ಅವರಿಗೊಂದು ನ್ಯಾಯ! 
ಸಂತೆ ವ್ಯಾಪಾರಿಗಳು ವ್ಯಾಪಾರ ನಡೆಸಿದ ಅನಂತರ ಉತ್ಪತ್ತಿಯಾದ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಇದನ್ನು ನಗರಸಭೆಯ ಪೌರಕಾರ್ಮಿಕರು 11 ಗಂಟೆಯ ಬಳಿಕ ಬಂದು ಉಚಿತವಾಗಿ ವಿಲೇವಾರಿ ಮಾಡುತ್ತಾರೆ. ಆದರೆ ಮಾರುಕಟ್ಟೆ ವ್ಯಾಪಾರಿಗಳಿಂದ ಉತ್ಪತ್ತಿಯಾದ ತಾಜ್ಯ ವಿಲೇವಾರಿಗೆ ನಗರಸಭೆಯ ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆ ವ್ಯಾಪಾರಸ್ಥರು ಹಣ ಪಾವತಿಸಿ ವಿಲೇವಾರಿಗೊಳಿಸಬೇಕಾಗಿದೆ. ಈ ಬಗ್ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.  
– ಅಬ್ದುಲ್‌ ರಹೀಂ,ಅಧ್ಯಕ್ಷರು, ಉಡುಪಿ 
ವಿಶ್ವೇಶ್ವರಯ್ಯ ಮಾರುಕಟ್ಟೆ ವ್ಯಾಪಾರಸ್ಥರ ಸಂಘ 

ಮಳೆಗಾಲದ ಬಳಿಕ ರಿಪೇರಿ
ಮಾರುಕಟ್ಟೆಯೊಳಗಿದ್ದ ಪಾರ್ಕಿಂಗ್‌ ಸ್ಥಳವು ಹೊಂಡಗಳಿಂದ ಕೂಡಿದ್ದರಿಂದ ತಕ್ಕಮಟ್ಟಿಗೆ ರಿಪೇರಿಗೆ ಮಾರ್ಚ್‌ನಲ್ಲಿ ನಿರ್ಧರಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಎದುರಾದ ನೆಲೆಯಲ್ಲಿ ಬಾಕಿ ಉಳಿದುಕೊಂಡಿದೆ. ಮಳೆಗಾಲ ಕಳೆದ ಮೇಲೆ ಅದನ್ನು ರಿಪೇರಿ ಮಾಡಿ ಅನುಕೂಲ ಕಲ್ಪಿಸಲಾಗುವುದು. 
– ಜಿ.ಸಿ. ಜನಾರ್ದನ್‌,
ಪೌರಾಯುಕ್ತರು,  ಉಡುಪಿ ನಗರಸಭೆ

– ಎಸ್‌.ಜಿ .ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next