Advertisement

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

12:49 AM Sep 24, 2024 | Team Udayavani |

ಉಡುಪಿ: ಸರ್ವೀಸ್‌ ರಸ್ತೆಯ ಕಥೆ ಇನ್ನೂ ತಮಾಷೆ. ವಾಸ್ತವವಾಗಿ ದ್ವಿಮುಖ ವಾಹನ ಸಂಚಾರಕ್ಕೆ ಬೇಕಾದಷ್ಟು ಸ್ಥಳಾವಕಾಶ ಇಲ್ಲಿಲ್ಲ, ಅದರೆ ಅವಕಾಶವಿದೆ. ಇದರೊಂದಿಗೆ ಈ ರಸ್ತೆಯೂ ಸಂಪೂರ್ಣ ಹಾಳಾಗಿದೆ. ಇಲ್ಲಿ ಸಂಚರಿಸುವ ವಾಹನಗಳ ಸವಾರರೂ ಗುಂಡಿ ಎಲ್ಲಿಲ್ಲ ಎಂದು ಹುಡುಕಿಕೊಂಡೇ ವಾಹನ ಚಲಾಯಿಸಬೇಕು. ಕುಂದಾಪುರದಿಂದ ಬರುವವರು ಈ ರಸ್ತೆಯನ್ನು ಪ್ರವೇಶಿ ಸುವಲ್ಲಿ “ಘನ ವಾಹನಗಳಿಗೆ ಪ್ರವೇಶವಿಲ್ಲ’ ಎಂಬ ಫಲಕ ಹಾಕಲಾಗಿತ್ತು. ಈಗ ಮಾಯ.

Advertisement

ಈ ರಸ್ತೆಯ ಸುಮಾರು 100 ಮೀಟರ್‌ ವರೆಗೆ (ಕುಂದಾಪುರದಿಂದ ಉಡುಪಿ ಕಡೆಗೆ ಹೋಗುವ ಸರ್ವೀಸ್‌ ರಸ್ತೆ) ಎರಡು ವಾಹನಗಳಿಗೆ ಒಟ್ಟಿಗೆ ಹೋಗುವಷ್ಟು ಅವಕಾ ಶವಿದೆ. ಬಳಿಕ ರಿಟೈನಿಂಗ್‌ ವಾಲ್‌ನ ಮೇಲ್ಭಾಗದ ಕಾಮಗಾರಿ ನಡೆಯುತ್ತಿರುವಲ್ಲಿ ಬ್ಯಾರಿಕೇಡ್‌ ಇಟ್ಟಿರುವ ಕಾರಣ, ಒಂದು ವಾಹನಕ್ಕೆ ಹೋಗುವಷ್ಟೇ ಜಾಗವಿದೆ. ಕೆಲವರು ಉಡುಪಿ ಕಡೆಯಿಂದಲೂ ಬರುವ ವರು ಇದೇ ರಸ್ತೆಯಲ್ಲಿ ಬಂದು ಈ ಕಿರಿದಾದ ಜಾಗದಲ್ಲಿ ಸಿಲುಕಿಕೊಳ್ಳುತ್ತಾರೆ. ಇತ್ತಕಡೆಯಿಂದ ಎರಡೆರಡು ವಾಹನಗಳು ಬಂದು ದಾರಿಗೆ ಅಡ್ಡವಾಗಿ ನಿಲ್ಲುತ್ತವೆ. ಯಾರೊಬ್ಬರೂ ಹಿಂದೆ ಸರಿಯರು.

ಯಾರಾದರೂ ಟ್ಯಾಕ್ಸಿಯವರೋ, ಆಟೋದವರೋ ಇಳಿದು ಟ್ರಾಫಿಕ್‌ ನಿರ್ವಹಿಸಿದರೆ ಸರಿಯಾಗಲು ಕನಿಷ್ಠ ಅರ್ಧ ಗಂಟೆ ಬೇಕೇ ಬೇಕು. ಇಲ್ಲಿ ಯಾವ ಬೋರ್ಡ್‌ ಸಹ ಇಲ್ಲ, ಪೊಲೀಸರೂ ಇರುವುದಿಲ್ಲ. ಜನರೇ ನಿರ್ವಹಿಸಿ ಕೊಳ್ಳಬೇಕು. ಇಲ್ಲಿ ಏಕಮುಖ ವಾಹನ ಸಂಚಾರ ಅಥವಾ ಒಬ್ಬ ಟ್ರಾಫಿಕ್‌ ಪೊಲೀಸರ ನಿಯೋಜನೆಯಾದರೆ ಅನುಕೂಲ. ಜತೆಗೆ ಎರಡು ವಾಹನಗಳು ಬರಲು ಇರುವ ಸ್ಥಳದಲ್ಲಿ (ಕುಂದಾಪುರದಿಂದ ಉಡುಪಿಗೆ ಬರುವ ರಸ್ತೆ) ಮಧ್ಯೆ ಒಂದು ಬ್ಯಾರಿಕೇಡ್‌ ಹಾಕಿದರೂ ಸಮಸ್ಯೆ ಸ್ವಲ್ಪ ಬಗೆಹರಿಯಬಹುದು. ಇಲ್ಲದಿದ್ದರೆ ಈ ಎಲ್ಲೆಂದರಲ್ಲಿ ನುಗ್ಗುವ ಸಮಸ್ಯೆ, ಗುಂಡಿಗಳಲ್ಲಿ ಇಳಿಸುವ ಸಮಸ್ಯೆ ಹಾಗೂ ಟ್ರಾಫಿಕ್‌ ಜಾಮ್‌ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಳ್ಳುವ ತಮಾಷೆ ಸದ್ಯಕ್ಕೆ ಮುಗಿಯುವುದಿಲ್ಲ. ಇಂಥದ್ದೇ ಪರಿಸ್ಥಿತಿ ಕಲ್ಯಾಣಪುರದ ಕಡೆ ಹೋಗುವ ರಸ್ತೆಯಲ್ಲೂ ಸಹ.

ಸರ್ವೀಸ್‌ ರಸ್ತೆಯನ್ನು ಶೀಘ್ರ ಸಿದ್ಧಪಡಿಸಬೇಕು. ಅಲ್ಲಿಯವರಿಗೂ ಟ್ರಾಫಿಕ್‌ ನಿರ್ವಹಣೆ ಮಾಡಬೇಕು. ಇಲ್ಲವೇ ಈ ರಸ್ತೆಯಲ್ಲಿ ವಾಹನಗಳಿಗೆ ಅವಕಾಶ ನೀಡಬಾರದು ಎನ್ನುತ್ತಾರೆ ಸ್ಥಳೀಯರಾದ ಹೇಮರಾಜ್‌ ಆಮೀನ್‌.

ಸಂಸದರೂ ಇಲ್ಲಿಯವರೇ, ಶಾಸಕರೂ ಉಡುಪಿಯವರೇ
ಬಹಳ ತಮಾಷೆ ಎನಿಸುವ ಸಂಗತಿಯೆಂದರೆ ಈ ಹಿಂದೆ ಇಲ್ಲಿನ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದವರ ಕೇಂದ್ರ ಕಚೇರಿ ಬೆಂಗಳೂರೇ. ಏನಾದರೂ ಕಾರ್ಯಕ್ರಮಗಳಿದ್ದರೆ, ಸಭೆಗಳಿದ್ದರೆ ಉಡುಪಿ ಜಿಲ್ಲೆಗೆ ಆಗಮನ. ಹಾಗಾಗಿ ಇಲ್ಲಿನ ಸಂಸದರೇ ಕೇಂದ್ರ ಸಚಿವರಾದರೂ ಈ ಸಮಸ್ಯೆಗಳು ಬಗೆಹರಿಯಲಿಲ್ಲ. ಈಗ ಹಾಗಲ್ಲ. ಸಂಸದರು ಇಲ್ಲಿಯವರೇ. ಅಷ್ಟೇ ಏಕೆ? ಇವರೂ ಇದೇ ರಸ್ತೆಯಲ್ಲಿ ಸಾಗಬೇಕು. ಶಾಸಕರೂ ಇದೇ ಪ್ರದೇಶದವರೇ. ಜಿಲ್ಲಾಧಿಕಾರಿಯವರು ಇದೇ ಕರಾವಳಿಯವರೇ.ಆದರೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ ಎಂಬುದು ಸಾರ್ವಜನಿಕರ ದೂರು.

Advertisement

ಒಮ್ಮೆ ಸಂತೆಕಟ್ಟೆಯ ಹೆದ್ದಾರಿ ಹಾಗೂ ಅದರ ಸರ್ವೀಸ್‌ ರಸ್ತೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಜನದಟ್ಟಣೆ ಇರುವಾಗ ಅರ್ಧ ಗಂಟೆ ಪುರಸೊತ್ತು ಮಾಡಿಕೊಂಡು ಗಮನಿಸಿದರೆ ವಾಹನ ಸವಾರರ ಕಷ್ಟ ಅರಿವಿಗೆ ಬಂದೀತು. ಪ್ರತೀ ವಾಹನವೂ ಗಂಟೆಗೆ 10 ಕಿ.ಮೀ. ವೇಗದಲ್ಲಿ ಒಂದೇ ಗೇರ್‌ನಲ್ಲಿ ವಾಹನವನ್ನು ಚಲಾಯಿಸಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಸರಣಿ ಅಪಘಾತ. ಒಮ್ಮೆ ಕಣ್ಣಾರೆ ಕಾಣಿ.

ಮುಂದೊಂದು ವಾಹನ, ಹಿಂದೊಂದು ವಾಹನವಿ ರುತ್ತದೆ. ನಮ್ಮ ಗಮನವೆಲ್ಲ ರಸ್ತೆಯ ಗುಂಡಿಯ ಮೇಲೆ, ಗುಂಡಿಗೆ ಇಳಿಯುವ ಚಕ್ರದ ಮೇಲೆ, ಸ್ವಲ್ಪ ಗಮನ ಬೇರೆಡೆಗೆ ಹರಿದರೂ ಅಥವಾ ಆಕ್ಸಲೇಟರ್‌ ಮೇಲೆ ಪಾದ ಒತ್ತಿದರೂ ಅಥವಾ ಬ್ರೇಕ್‌ ಮೇಲೆ ಕಾಲಿಟ್ಟರೂ ಅಪಘಾತ ಖಚಿತ. ಯಾಕೆಂದರೆ ಬ್ರೇಕ್‌ ಇಟ್ಟರೆ ಹಿಂದಿನ ವಾಹನ ಬಂದು ಗುದ್ದುತ್ತದೆ, ಆಕ್ಸಲೇಟರ್‌ವೆುàಲೆ ಕಾಲಿಟ್ಟರೆ ಮುಂದಿನ ವಾಹನಕ್ಕೆ ನಾವು ಗುದ್ದುತ್ತೇವೆ ಎನ್ನುತ್ತಾರೆ ವಾಹನ ಸವಾರರೊಬ್ಬರು.

ಸುಮಾರು 1 ಅಥವಾ 1.5 ಕಿ.ಮೀ ದೂರ ಸಾಗಲು ಕನಿಷ್ಠ 25 ನಿಮಿಷ (ಜನದಟ್ಟಣೆ ಸಮ ಯ) ಬೇಕೇಬೇಕು. ತಲೆ ಕೆಟ್ಟು ಹೈರಾಣಾಗುತ್ತದೆ. ರಸ್ತೆಯಲ್ಲಿ ಒಂದೋ, ಎರಡೋ ಗುಂಡಿ ಅಥವಾ ಹತ್ತು ಗುಂಡಿ ಇದ್ದರೂ ಹೇಗೋ ಅವುಗಳನ್ನು ತಪ್ಪಿಸಿಕೊಂಡು ಹೋಗಬಹುದು.

ರಸ್ತೆಯುದ್ದಕ್ಕೂ ಗುಂಡಿಯಾದರೆ ವಾಹನ ಚಲಾವಣೆ ಕಷ್ಟ. ಅದರಲ್ಲೂ ಪ್ರತಿಗುಂಡಿಗಳೂ ಆಳುದ್ದಕ್ಕೆ ಇವೆ. ವಾಹನದ ಚಕ್ರ ಇಳಿದು ಮೇಲೆ ಏಳಲು ಬಹಳ ತ್ರಾಸ ಪಡಬೇಕು. ಅದರಲ್ಲೂ ಸಣ್ಣ ವಾಹನಗಳಂತೂ ನಾಲ್ಕು ಬಾರಿ ಓಡಿದರೆ ಸರ್ವೀಸ್‌ಗೆ ಹೋಗಬೇಕಾದ ಸ್ಥಿತಿ. ಯಾರಿಗೆ ಹೇಳುವುದೋ ಗೊತ್ತಿಲ್ಲ ಎಂದು ಅಸಹಾಯಕರಾಗಿ ಕೈ ಚೆಲ್ಲುತ್ತಾರೆ ವಾರಕ್ಕೆ ಎರಡರಿಂದ ಮೂರು ಬಾರಿ ಉತ್ತರ ಕನ್ನಡ ಜಿಲ್ಲೆಯಿಂದ ಬಾಡಿಗೆ ಹಿಡಿದು ಬರುವ ಕಾರಿನ ವಾಹನ ಚಾಲಕರೊಬ್ಬರು.

-ರಾಜು ಖಾರ್ವಿ, ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next