Advertisement

ಉಡುಪಿ: ರಾಷ್ಟ್ರೀಯ ಲೋಕ ಅದಾಲತ್‌; ಒಂದೇ ದಿನ 34,320 ಪ್ರಕರಣ ಇತ್ಯರ್ಥ

11:59 PM Nov 12, 2022 | Team Udayavani |

ಉಡುಪಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಶನಿವಾರ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ ಒಂದೇ ದಿನ ಒಟ್ಟು 34,320 ಪ್ರಕರಣಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಿ 12,34,77,966 ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.

Advertisement

ಇದರಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ -29, ಚೆಕ್‌ ಅಮಾನ್ಯ ಪ್ರಕರಣ-268, ಬ್ಯಾಂಕ್‌ / ಹಣ ವಸೂಲಾತಿ -21, ಎಂವಿಸಿ ಪ್ರಕರಣ-86, ಕಾರ್ಮಿಕ ನಷ್ಟ ಪರಿಹಾರ -1, ಎಂಎಂಆರ್‌ಡಿ ಆಕr… ಪ್ರಕರಣ-15, ವೈವಾಹಿಕ-1, ಸಿವಿಲ್‌ -174, ಇತರೇ ಕ್ರಿಮಿನಲ್‌ ಪ್ರಕರಣ-2,538 ಹಾಗೂ ವ್ಯಾಜ್ಯ ಪೂರ್ವ ದಾವೆ-31,187 ಪ್ರಕರಣಗಳು ಸೇರಿವೆ.

4ನೇ ಹೆಚ್ಚುವರಿ ಹಿರಿಯ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮುಂದಿದ್ದ ಡಿಕ್ಲರೇಶನ್‌ ಮತ್ತು ಡಿಕ್ಲರೇಶನ್‌ – ಪಾರ್ಟಿಶನ್‌ ಎರಡೂ ದಾವೆಗಳ ಕುರಿತು ಟೀನಾ ಪಿಂಟೋ ತನ್ನ ತಾಯಿ ಮತ್ತು ಸಹೋದರ ಮತ್ತು ಸಹೋದರಿ ಭೌತಿಕವಾಗಿ ಹಾಜರಾಗಿ ರಾಜಿ ಪತ್ರ ಸಲ್ಲಿಸಿ ದಾವೆಯನ್ನು ರಾಜಿ ಮಾಡಿಕೊಂಡರು. ದುಬೈನಲ್ಲಿರುವ ಸಹೋದರಿ ವರ್ಚುವಲ್‌ ಮೋಡ್‌ನ‌ಲ್ಲಿ ಹಾಜರಾಗಿ ರಾಜಿ ಮಾಡಿಕೊಂಡಿರುವುದಾಗಿ ತಿಳಿಸಿದರು.ಹಾಗಾಗಿ ಒಂದೇ ಕುಟುಂಬದ ಎರಡು ದಾವೆಗಳು ಸುಖಾಂತ್ಯ ಕಂಡವು.

ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಉಡುಪಿ, ಕುಂದಾಪುರ, ಕಾರ್ಕಳ ವಕೀಲರ ಸಂಘ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್‌, ಕಕ್ಷಿಗಾರರು ಹಾಗೂ ಇತರ ಸರಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್‌ ಅದಾಲತನ್ನು ಯಶಸ್ವಿಗೊಳಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.

13 ವರ್ಷಗಳ ಅನಂತರ ಒಂದಾದ ದಂಪತಿ
ಕಳೆದ 13 ವರ್ಷಗಳಿಂದ ಪರಸ್ಪರ ಬೇರ್ಪಟ್ಟ ದಂಪತಿ ಲೋಕ ಅದಾಲತ್‌ನಲ್ಲಿ ಒಂದಾದ ಘಟನೆ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು.

Advertisement

ಬ್ರಹ್ಮಾವರದ ಹರೀಶ್‌ (ಹೆಸರು ಬದಲಾಯಿಸಲಾಗಿದೆ.) ಮಂಗಳೂರಿನ ರೂಪೇಶ್ವರಿಯನ್ನು (ಹೆಸರು ಬದಲಾಯಿಸಲಾಗಿದೆ) ಮಂಗಳೂರಿನಲ್ಲಿ ಮದುವೆಯಾಗಿ ಅನಂತರ ಬ್ರಹ್ಮಾವರದಲ್ಲಿ ನೆಲೆಸಿದ್ದರು. ಹರೀಶ್‌ ವಿದೇಶದಲ್ಲಿ ಉದ್ಯೋಗದಲ್ಲಿದ್ದು 2 ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದರು. ದಂಪತಿಗಳಿಗೆ 18 ವರ್ಷದ ಮಗಳು ಇದ್ದು ಪ್ರಸ್ತುತ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಗಂಡ ತನ್ನನ್ನು ಮತ್ತು ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮತ್ತು ಮಗಳ ಮೇಲೆ ಪ್ರೀತಿ ತೋರಿಸುತ್ತಿಲ್ಲವೆಂದು 13 ವರ್ಷಗಳಿಂದ ರೂಪೇಶ್ವರಿ ಮಗಳೊಂದಿಗೆ ಪ್ರತ್ಯೇಕವಾಗಿ ಉಡುಪಿಗೆ ಬಂದು ವಾಸ ಮಾಡಿಕೊಂಡಿದ್ದರು. ಈ ಬಗ್ಗೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಹಲವಾರು ಬಾರಿ ರಾಜೀ ಪ್ರಯತ್ನ ನಡೆದರೂ ಫ‌ಲಕಾರಿಯಾಗಲಿಲ್ಲ.

ಇತ್ತೀಚೆಗೆ ಹರೀಶ್‌ ವಿದೇಶದಿಂದ ಊರಿಗೆ ಬಂದಾಗ ರೂಪೇಶ್ವರಿ ಮತ್ತು ಮಗಳು ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ತನಗೂ ಮತ್ತು ತನ್ನ ಮಗಳಿಗೆ ಜೀವನಾಂಶ ನೀಡಬೇಕೆಂದು ನ್ಯಾಯವಾದಿ ಎಚ್‌. ಆನಂದ ಮಡಿವಾಳರ ಮುಖೇನ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನೋಟಿಸ್‌ ಹರೀಶರಿಗೆ ಜಾರಿಯಾದ ಅನಂತರ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದರು. ಅರ್ಜಿದಾರರ ನ್ಯಾಯವಾದಿ ಇದೊಂದು ಚಿಕ್ಕ ವಿಷಯಕ್ಕೆ ಸಂಸಾರ ಬೇರ್ಪಟ್ಟಿದೆ ಎನ್ನುವ ಅಂಶವನ್ನು ಮನಗೊಂಡು ಸಂಧಾನ ಕೇಂದ್ರಕ್ಕೆ ರಾಜೀ ಇತ್ಯರ್ಥಕ್ಕಾಗಿ ಕಳುಹಿಸಬೇಕೆಂದು ಅರ್ಜಿದಾರರ ಪರ ನ್ಯಾಯಾಲಯದಲ್ಲಿ ಕೋರಿಕೊಂಡರು. ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ರಾಜೀ ಸಂಧಾನ ಕೇಂದ್ರಕ್ಕೆ ಕಳುಹಿಸಿತ್ತು.

ನ್ಯಾಯವಾದಿ ರೊನಾಲ್ಡ್‌ ಪ್ರವೀಣ್‌ ಕುಮಾರ್‌ ಪ್ರಕರಣಕ್ಕೆ ಸಂಧಾನಕಾರರಾಗಿ ನೇಮಕಗೊಂಡು ಉಭಯರನ್ನು ಅವರವರ ನ್ಯಾಯವಾದಿಗಳು ಮತ್ತು ಕುಟುಂಬದ ಹಿರಿಯರನ್ನು ಕರೆಸಿ 4 ಬಾರಿ ಚರ್ಚಿಸಿ ಬೇರ್ಪಟ್ಟ ಕುಟುಂಬವನ್ನು ಒಂದಾಗಿಸಲು ಪ್ರಯತ್ನಿಸಿದರು. ನ್ಯಾಯಾಧೀಶರು ದಂಪತಿಯನ್ನು ಕರೆಸಿ ಈ ಪ್ರಾಯದಲ್ಲಿ ಬೇರೆ ಬೇರೆ ಇರುವುದು ಸಮಂಜಸವಲ್ಲ ಮತ್ತು ಮಗಳ ಭವಿಷ್ಯದ ಬಗ್ಗೆ ಉಭಯರಿಗೂ ತಿಳಿಹೇಳಿದರು. ನ್ಯಾಯಾಧೀಶರು, ಮಧ್ಯಸ್ಥಿಕೆದಾರರ, ನ್ಯಾಯವಾದಿಗಳ ಸಮಯೋಚಿತ ಹಿತನುಡಿಗಳು ಕ್ಷುಲ್ಲಕ ಕಾರಣಕ್ಕೆ ಬೇರ್ಪಟ್ಟ ದಂಪತಿಗೆ ಮನದಟ್ಟಾಯಿತು. ಅಂತಿಮವಾಗಿ ದಂಪತಿಗಳ ಮನ ಪರಿ ವರ್ತನೆಗೊಂಡು ತನ್ನ ಮಗಳೊಂದಿಗೆ ಸುಂದರ ಸಾಂಸಾರಿಕ ಜೀವನ ನಡೆಸಲು ಒಪ್ಪಿದರು.

ದ.ಕ.: 22,262 ಪ್ರಕರಣ ಇತ್ಯರ್ಥ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 22,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಒಟ್ಟು 31,791 ರಾಜಿಯಾಗಬಲ್ಲ ಪ್ರಕರಣಗಳನ್ನು ತೆಗೆದುಕೊಂಡು ಮಾತುಕತೆ ನಡೆಸಲಾಗಿದ್ದು ಆ ಪೈಕಿ 22,262 ಪ್ರಕರಣಗಳಲ್ಲಿ ಒಟ್ಟು 17,39,46,414 ರೂ. ವಿಲೇ ಮಾಡಲಾಯಿತು. ಇದರಲ್ಲಿ ಚೆಕ್‌ ಅಮಾನ್ಯ, ಸಿವಿಲ್‌, ಬ್ಯಾಂಕ್‌ ಹಣ ವಸೂಲಾತಿ ಮುಂತಾದ ಪ್ರಕರಣಗಳು ಸೇರಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next