Advertisement

ಒಂದೇ ಮಳೆಗೆ ಉಡುಪಿ-ಮಣಿಪಾಲ ಹೆದ್ದಾರಿಯಲ್ಲಿ ಅವಾಂತರ

09:05 AM Jun 14, 2019 | sudhir |

ಉಡುಪಿ: ಚತುಷ್ಪಥ ಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ಎಯ ಉಡುಪಿ-ಮಣಿಪಾಲ ರಸ್ತೆ ಸೋಮವಾರ ತಡರಾತ್ರಿ ಸುರಿದ ಮೊದಲ ಮಳೆಗೆ ಅಪಾಯಕಾರಿಯಾಗಿ ಪರಿಣಮಿಸಿತು.

Advertisement

ಕಾಮಗಾರಿ ಹಿನ್ನೆಲೆಯಲ್ಲಿ ಮಳೆ ಸಂಬಂಧಿ ತೊಂದರೆ ಹಾಗೂ ಕೆಲವೆಡೆ ಒಟ್ಟು ಕಾಮಗಾರಿಯ ಕುರಿತು ಸಾರ್ವಜನಿಕರ ಅಸಮಾಧಾನ, ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ಉಡುಪಿ ಶಾಸಕ ಕೆ.ರಘುಪತಿ ಭಟ್‌ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

ರಸ್ತೆಗೆ ಕೆಸರು
ಸಿಂಡಿಕೇಟ್‌ ಸರ್ಕಲ್‌-ಲಕ್ಷ್ಮೀಂದ್ರನಗರ ಭಾಗದ ಚರಂಡಿ ನೀರು, ಮಳೆನೀರು ಹಾಗೂ ಕಾಮಗಾರಿಗಾಗಿ ಅಗೆದ ಮಣ್ಣು ಐನಾಕ್ಸ್‌ ಚಿತ್ರಮಂದಿರ ಎದುರಿನ ರಸ್ತೆ ಆವರಿಸಿದ ಪರಿಣಾಮ ವಾಹನ ಚಾಲಕರು ತೊಂದರೆಗೀಡಾದರು. “ನಿನ್ನೆ ರಾತ್ರಿ ಎರಡು ಬೈಕ್‌ಗಳು ಸ್ಕಿಡ್‌ ಆಗಿ ಬಿದ್ದಿವೆ’ ಎಂದು ಸ್ಥಳೀಯರು ತಿಳಿಸಿದರು. ಈ ಸ್ಥಳವನ್ನು ಕೂಡ ಶಾಸಕರು ಖುದ್ದಾಗಿ ವೀಕ್ಷಿಸಿದರು.

ಜಾಗ ಪೂರ್ಣ ಬಳಕೆಗೆ ಸೂಚನೆ
ವಿ.ಪಿ.ನಗರ ಮತ್ತು ಲಕ್ಷ್ಮೀಂದ್ರನಗರದ ಕೆಲವೆಡೆ ಹೆದ್ದಾರಿಗಾಗಿ ಮೀಸಲಿಟ್ಟ ಸರಕಾರಿ ಜಾಗವನ್ನು ಪೂರ್ಣವಾಗಿ ಬಳಸಿಲ್ಲ. ಇದರಿಂದಾಗಿ ಬಸ್‌ ಅಥವಾ ಇತರ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆಯಾಗಲಿದೆ. ಈ ಜಾಗವನ್ನು ಪೂರ್ಣವಾಗಿ ಬಳಕೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು “ಲಭ್ಯ ಸರಕಾರಿ ಜಾಗವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಈಗ ಕೆಲವೆಡೆ ಗುರುತು ಹಾಕಿದ ಜಾಗಕ್ಕಿಂತ ಒಳಭಾಗದಲ್ಲಿ ನಿರ್ಮಿಸಿರುವ ಚರಂಡಿ/ ಫ‌ುಟ್‌ಪಾತ್‌ನಲ್ಲಿ ಫ‌ುಟ್‌ಪಾತ್‌ನ್ನು ಮಾತ್ರ ಉಳಿಸಿ ಚರಂಡಿಯನ್ನು ರಸ್ತೆಗಾಗಿ ಮೀಸಲಿಟ್ಟ ಜಾಗದ ಅಂಚಿನಲ್ಲಿ ಪ್ರತ್ಯೇಕವಾಗಿ ರಚಿಸಬೇಕು. ಬಸ್‌ ಬೇ, ಬಸ್‌ ನಿಲ್ದಾಣಗಳಿಗೆ ರಸ್ತೆ ಅಂಚಿನ ಸ್ಥಳವನ್ನು ಬಳಕೆ ಮಾಡಬೇಕು. ಈಗ ನಿಗದಿ ಮಾಡಿರುವ 100 ಅಡಿ ಅಗಲ ಕೂಡ ಮುಂದಿನ 5 ವರ್ಷಗಳ ಅನಂತರ ಸಾಕಾಗದು. ಹಿಂದೆ ಕಲ್ಸಂಕ- ಕಡಿಯಾಳಿ ಭಾಗದಲ್ಲಿ 80 ಅಡಿ ಅಗಲಗೊಳಿಸುವಾಗಲೇ ಕೆಲವರು “ಇಷ್ಟು ಅಗತ್ಯವಿಲ್ಲ. 50 ಅಡಿ ಸಾಕು’ ಎಂದಿದ್ದರು. ಆದರೆ ಈಗ ಅಲ್ಲಿ 80 ಅಡಿ ಕೂಡ ಸಾಕಾಗುತ್ತಿಲ್ಲ ಎಂದು ಹೇಳಿದರು.

ಯು-ಟರ್ನ್ ಡಿಸಿ ಗಮನಕ್ಕೆ
ಲಕ್ಷ್ಮೀಂದ್ರನಗರ- ವಿ.ಪಿ.ನಗರದಲ್ಲಿ ರಸ್ತೆ ಸಮತಟ್ಟು ಇಲ್ಲದುದರಿಂದ ಅಲ್ಲಿ ಯು-ಟರ್ನ್ ನಿರ್ಮಾಣ ಸಾಧ್ಯವೇ ಎಂಬುದನ್ನು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ನನ್ನ ಪ್ರಯತ್ನ ನಡೆಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

Advertisement

ಮಳೆನೀರು ಹರಿಯುವ ಚರಂಡಿಗೆ ವಸತಿ ಸಂಕೀರ್ಣ, ಹೊಟೇಲ್‌ಗ‌ಳ ಕೊಳಚೆ ನೀರನ್ನು ಕೂಡ ಬಿಡುತ್ತಿರುವುದು, ಕಾಮಗಾರಿ ಸ್ಥಳದಲ್ಲಿ ಸೂಕ್ತ ಎಚ್ಚರಿಕೆ ಫ‌ಲಕ, ಮಾರ್ಗಸೂಚಿ ಫ‌ಲಕಗಳನ್ನು ಅಳವಡಿಸದಿರುವ ಬಗ್ಗೆಯೂ ಸ್ಥಳೀಯರು ದೂರಿದರು.

ವಾರದ ಗಡುವು
ತಾತ್ಕಾಲಿಕ ಚರಂಡಿ, ಒಳರಸ್ತೆಗಳ ಸಂಪರ್ಕ ಮೊದಲಾದ ಕೆಲಸಗಳು ಒಂದು ವಾರದೊಳಗೆ ಪೂರ್ಣಗೊಳ್ಳಬೇಕು. ನಾನು ಮುಂದಿನ ವಾರ ಮತ್ತೂಮ್ಮೆ ಇದೇ ರೀತಿ ಸ್ಥಳ ಭೇಟಿ ಮಾಡಿ ಪರಿಶೀಲಿಸುತ್ತೇನೆ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ನಗರಸಭಾ ಸದಸ್ಯರಾದ ಕಕ್ಕುಂಜೆ ಬಾಲಕೃಷ್ಣ ಶೆಟ್ಟಿ, ಭಾರತಿ ಪ್ರಶಾಂತ್‌, ಅಶೋಕ್‌, ನಾಗರಿಕ ಸಮಿತಿಯ ಅಧ್ಯಕ್ಷ ರವೀಂದ್ರ ಕಾಮತ್‌, ಡಾ| ಸುರೇಶ್‌ ಶೆಣೈ, ರತ್ನಾಕರ್‌ ಶೆಟ್ಟಿಗಾರ್‌ ಉಪಸ್ಥಿತರಿದ್ದರು.

ರಸ್ತೆ ಸಂಪರ್ಕ ಸ್ಥಳಕ್ಕೆ ಜಲ್ಲಿಪುಡಿ
ಒಳರಸ್ತೆಗಳು ಮುಖ್ಯರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ಇತ್ತೀಚೆಗೆ ಮಣ್ಣು ಹಾಕಲಾಗಿದೆ. ಆದರೆ ಆ ಮಣ್ಣು ಒಂದು ಮಳೆಗೆ ಕೊಚ್ಚಿ ಹೋಗಿದೆ. ಕೆಲವೆಡೆ ಕುಸಿತ ಉಂಟಾಗಿದೆ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.

ಮಣ್ಣನ್ನು ತೆಗೆದು ಅಲ್ಲಿ ತಾತ್ಕಾಲಿಕವಾಗಿ ಜಲ್ಲಿಪುಡಿ ಮಿಶ್ರಣವನ್ನು ಹಾಕಿ ಗಟ್ಟಿಗೊಳಿಸುವಂತೆ ಶಾಸಕರು ಹೆದ್ದಾರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ್‌ ಅವರಿಗೆ ಸೂಚಿಸಿದರು. ಚರಂಡಿ ಮೇಲೆ ನಿರ್ಮಾಣವಾಗಿರುವ ಫ‌ುಟ್‌ಪಾತ್‌ನ ಹಲವೆಡೆ ಇನ್ನೂ ಕೂಡ ಕಾಂಕ್ರೀಟ್‌ ಸ್ಲಾéಬ್‌ಗಳನ್ನು ಹಾಕದೆ ಬಿಟ್ಟಿರುವುದರಿಂದ ಪಾದಚಾರಿಗಳು ಚರಂಡಿಯೊಳಗೆ ಬೀಳುವ ಅಪಾಯವಿದೆ ಎಂದು ಸ್ಥಳೀಯರು ಶಾಸಕರ ಗಮನ ಸೆಳೆದರು. ಇದನ್ನು ಶೀಘ್ರ ಮುಚ್ಚಲು ಶಾಸಕರು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next