Advertisement

ಉಡುಪಿ; ಜ. 15 ಮತ್ತು 16; ನವೀಕೃತ ಶ್ರೀ ಭಗವಾನ್‌ ನಿತ್ಯಾನಂದ ಸ್ವಾಮಿ ಮಂದಿರ ಲೋಕಾರ್ಪಣೆ

12:02 PM Jan 09, 2023 | Team Udayavani |

ಶ್ರೀ ಭಗವಾನ್‌ ನಿತ್ಯಾನಂದ ಸ್ವಾಮಿಯವರು 1960ರ ಆ. 8ರಂದು ಗಣೇಶಪುರಿಯಲ್ಲಿ ಸಮಾಧಿಯಾದರು. ಇದಕ್ಕೆ 1 ವರ್ಷದ ಹಿಂದೆ ಉಡುಪಿ ಮೂಲದ ಮುಂಬಯಿ ನಿವಾಸಿ ಶ್ರೀ ನಿತ್ಯಾನಂದ ಸ್ವಾಮಿಯವರ ಪರಮ ಭಕ್ತೆ ಸಾದ್ವಿ ಸೀತಮ್ಮ ಶೆಟ್ಟಿಯವರು ಮುಂಬಯಿ ಗಣೇಶಪುರಿಯಲ್ಲಿರುವ ಶ್ರೀ ನಿತ್ಯಾನಂದ ಸ್ವಾಮಿಯವರನ್ನು ಸಂಧಿಸುತ್ತಾ ಪೂಜೆ ಸಲ್ಲಿಸುತ್ತಿದ್ದರು. ಸೀತಮ್ಮ ಶೆಟ್ಟಿಯವರಿಗೆ ಉಡುಪಿಯಲ್ಲಿಯೂ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಸ್ಥಾಪಿಸಬೇಕೆನ್ನುವ ಸಂಕಲ್ಪ ಜಾಗೃತಗೊಂಡಿತು. ಅವರು ಸ್ವಾಮಿಯವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ “ಮುಂದೆ ನೋಡೋಣ, ಈಗ ಬೇಡ’ ಎಂದರು. ಈ ಮಾತನ್ನು ಕೇಳಿ ಸ್ವಲ್ಪಮಟ್ಟಿನ ಬೇಸರಗೊಂಡರೂ ಪ್ರಯತ್ನ ಮುಂದುವರಿಸಿದರು. ಸೀತಮ್ಮನವರು, ಆ ಅನುಪಮ ಸಮಯಕ್ಕಾಗಿ ಕಾಯುತ್ತಲೇ ಇದ್ದರು. ಹೇಗಾದರೂ ಮಾಡಿ ಉಡುಪಿಯಲ್ಲಿ ಮಂದಿರವನ್ನು ಸ್ಥಾಪಿಸಲೇಬೇಕೆನ್ನುವ ಮಹದಾಸೆ ಹೊತ್ತು ಸ್ವಾಮಿಯವರ ಬೆಳ್ಳಿಯ ಪಾದುಕೆ ಮಾಡಿಸಿಕೊಂಡು ಶ್ರೀ ನಿತ್ಯಾನಂದ ಸ್ವಾಮಿಯವರ ಬಳಿಗೆ ಹೋದಾಗ “ಪಾದುಕೆಗಳಲ್ಲಿ ಅವರ ಪಾದಗಳನ್ನಿಟ್ಟು, ಆಶೀರ್ವದಿಸಿ, ನೀನು ಹೊರಟ ಕಾರ್ಯ ಸಾಂಗವಾಗಿ ನೆರವೇರಲಿದೆ ಎಂದು ತಿಳಿಸಿ, “ಉಡುಪಿಯಲ್ಲಿ ನನ್ನ ಒಂಭತ್ತನೇ ಮಂದಿರ ಮಠವಾಗಿ ಸ್ಥಾಪಿಸು’ ಎಂದು ಆಶೀರ್ವದಿಸಿದರು.

Advertisement

ಮಂದಿರ ಮಠ ಸ್ಥಾಪನೆಗೆ ಅಸ್ತು
ಇದರಿಂದ ಅತ್ಯಂತ ಸಂತೋಷದಿಂದ ಪುಳಕಿತರಾದ ಸಾದ್ವಿ ಸೀತಮ್ಮನವರು ತನ್ನ ಹುಟ್ಟೂರಾದ ಉಡುಪಿಗೆ ಬಂದು ಇಲ್ಲಿಯೇ ನೆಲಸಿದರು. ಅನಂತರ ಮಂದಿರ ಮಠ ನಿರ್ಮಾಣದ ಕನಸನ್ನು ನನಸು ಮಾಡಲು ಹಾತೊರೆಯುತ್ತಿದ್ದರು. ನಿತ್ಯಾನಂದ ಸ್ವಾಮಿಗಳ ಪರಮಾಶೀರ್ವಾದಿಂದ ಉಡುಪಿಯ ಹೃದಯ ಭಾಗವಾದ ಅಲಂಕಾರ್‌ ಟಾಕೀಸ್‌ ಬಳಿಯಲ್ಲಿ 24 ಸೆಂಟ್ಸ್‌ ಜಾಗವನ್ನು ಖರೀದಿಸಿ ಜಿನಾನಂದ ಸ್ವಾಮೀಜಿಯವರ ಮೂಲಕ ಮಂದಿರ ಮಠವನ್ನು ನಿರ್ಮಿಸಿದರು.

ಮಠ ಮಂದಿರದಲ್ಲಿ ಪ್ರತಿದಿನ ಪೂಜೆ, ಪುನಸ್ಕಾರ, ನಿತ್ಯ ಭಜನೆ, ಸಂಕೀರ್ತನೆ, ಅನ್ನದಾನ, ಬಾಲ ಭೋಜನ, ಶಿವರಾತ್ರಿ, ನವಮಿ, ಅಷ್ಟಮಿ ಇತ್ಯಾದಿಗಳನ್ನು ನಡೆಸುತ್ತಾ ಸ್ವಾಮಿಯನ್ನೇ ನೆನೆಯುತ್ತಾ ಕಾಲ ಕಳೆದರು. ಆಗ ಸ್ವಾಮಿಯ ಪರಮ ಭಕ್ತರಾದ ಉಡುಪಿಯ ಬೋಳ ಪೂಜಾರಿ, ದುಗ್ಗಣ್ಣ ಶೆಟ್ಟಿ, ವಾಸುದೇವ ಮಾಸ್ಟರ್‌, ಲೋಕಯ್ಯ ಮಡಿವಾಳ, ಪದ್ಮನಾಭ ನಾಯಕ್‌ ಮೊದಲಾದವರು ಸೇರಿದಂತೆ ಹಲವಾರು ಭಕ್ತರು ನಿರಂತರ ಭಜನೆಯಲ್ಲಿ ತೊಡಗಿಸಿಕೊಂಡಿದ್ದರು. ಹೀಗೆ ಮಠ ಮಂದಿರವು ಅತ್ಯಂತ ವಿಜೃಂಭಣೆಯಿಂದ ಬೆಳಗುತ್ತಾ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅನಂತರ ಸೀತಮ್ಮನವರು ತಮ್ಮ ಕಾಲದಲ್ಲಿಯೇ ಕೇರಳದ ಕಾಂಞಂಗಾಡಿನಲ್ಲಿರುವ ನಿತ್ಯಾನಂದ ಸ್ವಾಮಿಗಳ ಮೂಲಮಠಕ್ಕೆ ಶ್ರೀ ಜನಾನಂದ ಸ್ವಾಮಿಯವರ ಮೂಲಕ ಉಡುಪಿಯ ಮಂದಿರ ಮಠವನ್ನು ದಾನವಾಗಿ ನೀಡಿದರು. ಶ್ರೀ ಜನಾನಂದ ಸ್ವಾಮಿಯವರ ಸಂಪೂರ್ಣ ಕೃಪಾಶೀರ್ವಾದದಿಂದ ಉಡುಪಿಯ ಮಂದಿರ ಮಠವು ಎಂದಿನಂತೆ ನಡೆಯುತ್ತಾ ಭಕ್ತರನ್ನು ಆಕರ್ಷಿಸುತ್ತಿತ್ತು.

Advertisement

ಸಾಧ್ವಿ ಸೀತಮ್ಮ ಶೆಟ್ಟಿ

ಮಂದಿರ ಮಠ ನಿರ್ಮಾಣಕ್ಕೆ ದೂರವಾಣಿ ಕರೆ ನಾಂದಿಯಾಯಿತು
ಅಜೀರ್ಣಾವಸ್ಥೆಗೆ ತಲುಪಿದ ಮಠ ಮಂದಿರವನ್ನು ಕಳೆದ ಕಳೆದ 20 ವರ್ಷಗಳಿಂದ ಜೀರ್ಣೋದ್ಧಾರ ಮಾಡಬೇಕೆಂದು ನಿರ್ಣಯಿಸಿ ಭಕ್ತರು ಹಲವು ಬಾರಿ ಸಮಿತಿಗಳನ್ನು ರಚಿಸಿದರೂ ಕಾಲ ಕೂಡಿ ಬರಲೇ ಇಲ್ಲ. ಆದರೆ 2021ರ ಡಿ. 24ರಂದು ಮಂದಿರ ಮಠದ ಜೀರ್ಣೋದ್ಧಾರ ನಡೆಸುವ ಬಗ್ಗೆ ಬೆಂಗಳೂರಿನಲ್ಲಿ ಕೋಡೆ ಕುಟುಂಬದ ರಾಮಚಂದ್ರ ಕೋಡೆಯವರ ನೇತೃತ್ವದಲ್ಲಿ ಕಾಂಞಂಗಾಡಿನ ನಿತ್ಯಾನಂದ ಟ್ರಸ್ಟ್‌ನ ಸಭೆ ನಡೆಯುತ್ತಿರುವಾಗ, ಶ್ರೀ ಸಾಯಿಬಾಬಾ ಮತ್ತು ಶ್ರೀ ನಿತ್ಯಾನಂದ ಸ್ವಾಮಿಗಳ ಭಕ್ತರಾದ ಕೊಡವೂರು ಶ್ರೀ ಸಾಯಿಬಾಬಾ ಮಂದಿರದ ಮುಖ್ಯಸ್ಥರಾದ ಕೊಡವೂರು ದಿವಾಕರ ಶೆಟ್ಟಿಯವರಿಗೆ ಶ್ರೀ ನಿತ್ಯಾನಂದ ಸ್ವಾಮಿಗಳ ಪರಮ ಭಕ್ತರೊಬ್ಬರು ದೂರವಾಣಿ ಕರೆ ಮಾಡಿ “ನನಗೆ ಗಣೇಶಪುರಿಯ ವಜ್ರೇಶ್ವರಿ ನಿತ್ಯಾನಂದ ಸ್ವಾಮಿಗಳ ಮೂಲಮಠದ ದರ್ಶನ ಪಡೆಯಬೇಕು. ದಿವಾಕರ ಶೆಟ್ಟಿಯವರು ಗಣೇಶಪುರಿಯ ಗಣಪತಿಯವರನ್ನು ಸಂಧಿಸಿ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ವಿನಂತಿಸಿದರು. ಗಣಪತಿಯವರು ಆಶ್ರಮ, ಗುರುವನ, ವಿದ್ಯಾಸಂಸ್ಥೆಯ ಸಂದರ್ಶನ ಮಾಡಿಸಿದ್ದರು. ಸಂದರ್ಶನ ಪಡೆದ ಮಹಾನ್‌ ಭಕ್ತರೇ ಮುಂಬಯಿಯ ಉದ್ಯಮಿ ಕೆ.ಕೆ. ಆವರ್ಶೇಕರ್‌.

ಗಣೇಶಪುರಿಯ ಸಮಾಧಿ ಮಂದಿರದ ಮಾದರಿ
ದರ್ಶನ ಪಡೆದ ಕೆ.ಕೆ. ಆವರ್ಶೇಕರ್‌ ಅವರು ಮರುದಿನ ಅಲ್ಲಿಂದ ನೇರವಾಗಿ ಉಡುಪಿಗೆ ಬಂದು ದಿವಾಕರ ಶೆಟ್ಟಿಯವರನ್ನು ಭೇಟಿ ಮಾಡಿದರು. ಅವರನ್ನು ಶ್ರೀಕೃಷ್ಣ, ಮುಖ್ಯಪ್ರಾಣರ ದೇವರ ದರ್ಶನ ಮಾಡಿಸಿ ಮಧ್ಯಾಹ್ನದ ಅನ್ನಪ್ರಸಾದಕ್ಕೆ ಕೊಡವೂರು ಶ್ರೀ ಸಾಯಿಬಾಬಾ ಮಂದಿರಕ್ಕೆ ಆಹ್ವಾನಿಸಿದರು. ಅವರು ವಾಪಾಸು ತೆರಳುವಾಗ ದಿವಾಕರ ಶೆಟ್ಟಿಯವರು ಅವರನ್ನು ಉಡುಪಿಯ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠಕ್ಕೆ ಕರೆದುಕೊಂಡು ಬಂದು ಸ್ವಾಮಿಯ ದರ್ಶನ ಮಾಡಿಸಿ ಈ ಮಂದಿರ ಮಠವನ್ನು ಜೀರ್ಣೋದ್ಧಾರ ಮಾಡಬೇಕೆಂದು ಬಯಸಿದ್ದೇವೆ. ಆದರೆ ಇನ್ನೂ ಕಾಲ ಕೂಡಿ ಬಂದಿಲ್ಲ ಎಂದಾಗ ಆವರ್ಶೇಕರ್‌ ಅವರು “ಮಂದಿರವನ್ನು ಹೇಗೆ ನಿರ್ಮಿಸುತ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ ದಿವಾಕರ ಶೆಟ್ಟಿಯವರು “ಗಣೇಶಪುರಿಯ ಸಮಾಧಿ ಮಂದಿರದ ಮಾದರಿ’ಯಲ್ಲಿ ನಿರ್ಮಿಸಬೇಕೆನ್ನುವ ಸಂಕಲ್ಪವಿದೆ ಎಂದರು. ಆಗ ಆವರ್ಶೇಕರ್‌ ಅವರು ತನ್ನ ಮನದಿಂಗಿತವನ್ನು ಹೊರಹಾಕಿದರು.

ಶ್ರೀ ಭಗವಾನ್‌ ನಿತ್ಯಾನಂದರ ದರ್ಶನ
“ನಾನು ಚಿಕ್ಕ ವಯಸ್ಸಿನಲ್ಲಿರುವಾಗ ನಮ್ಮೂರಾದ ಗೋಕರ್ಣದ ಬ್ರಾಹ್ಮಣರೋರ್ವರಲ್ಲಿ ನನ್ನ ಮುಂದಿನ ಭವಿಷ್ಯದ ಬಗ್ಗೆ ವಿಚಾರಿಸಿದಾಗ, ಅವರು ನಾಳೆ ನಾನು ನಿನ್ನನ್ನು ಕ್ಷೇತ್ರವೊಂದಕ್ಕೆ ಕರೆದೊಯ್ಯುತ್ತೇನೆ. ನಿನಗೆ ಸೂಕ್ತ ಮಾರ್ಗದರ್ಶನ, ದಾರಿ ಸಿಗಲಿದೆ ಎಂದರು. ಬ್ರಾಹ್ಮಣರೊಂದಿಗೆ ಗಣೇಶಪುರಿಯ ನಿತ್ಯಾನಂದ ಸ್ವಾಮಿಯ ಆಶ್ರಮಕ್ಕೆ ಬಂದಾಗ ನನ್ನನ್ನು ಭಗವಾನ್‌ ನಿತ್ಯಾನಂದ ಸ್ವಾಮಿಗೆ ಬ್ರಾಹ್ಮಣರು ಪರಿಚಯಿಸಿದರು. ಸ್ವಾಮಿಯವರು ನನ್ನ ಮುಖ ನೋಡಿ ಎನನ್ನೂ ಹೇಳದೆ ತಮ್ಮ ಕಾಲಿನಿಂದ ವೃತ್ತಾಕಾರವೊಂದನ್ನು ನಿರ್ಮಿಸಿ ಕೋಣೆಯೊಳಗೆ ಹೊರಟು ಹೋದರು. ಆಶ್ಚರ್ಯಗೊಂಡ ನಾನು ಬ್ರಾಹ್ಮಣರಲ್ಲಿ ವಿಚಾರಿಸಿದಾಗ, ಅದಕ್ಕೆ ಬ್ರಾಹ್ಮಣರು “ಸ್ವಾಮಿಯವರು ನಿನ್ನ ಕುಂಡಲಿಯನ್ನು ಬದಲಾಯಿಸಿದ್ದಾರೆ’ ಎಂದರು. ಪುನಃ ಕೋಣೆಯೊಳಗಿಂದ ಬಂದ ಸ್ವಾಮೀಜಿಯವರು ನನಗೆ ಆಶೀರ್ವದಿಸಿದರು. ಅಂದಿನಿಂದ ಎಲ್ಲಿಯೂ ಹಿಂದೆ ತಿರುಗಿ ನೋಡದ ನಾನು ಜೀವನದಲ್ಲಿ ಯಶಸ್ಸನು ಸಾಧಿಸುತ್ತಲೇ ಬಂದಿದ್ದೇನೆ ಎಂದರು.

ದೈವೀ ಸಂಕಲ್ಪ
ದಿವಾಕರ ಶೆಟ್ಟಿಯವರು ತಮ್ಮ ಸಂಕಲ್ಪದ ಬಗ್ಗೆ ಮಾತನಾಡುತ್ತಿರುವಾಗಲೇ ಆವರ್ಶೇಕರ್‌ ಅವರು “ಈ ಮಠ ಮಂದಿರದ ಜೀರ್ಣೋದ್ಧಾರಗೊಳ್ಳುವ ಸಮಯ ಹತ್ತಿರ ಬಂದಿದೆ. ನನಗೆ ಈ ಮಂದಿರ ಮಠವನ್ನು ನನ್ನ ಸ್ವಂತ ಖರ್ಚಿನಿಂದಲೇ ಮಾಡಲು ಇಚ್ಛಿಸಿದ್ದೇನೆ’ ಎಂದಾಗ ದಿವಾಕರ ಶೆಟ್ಟಿಯವರಿಗೆ ಸ್ವಾಮಿಯೇ ಇವರನ್ನು ಕಳುಹಿಸಿರಬೇಕೆಂದು ನಿರ್ಧರಿಸಿ ಒಪ್ಪಿಗೆ ಸೂಚಿಸಿದರು. ಅನಂತರ ದಿವಾಕರ ಶೆಟ್ಟಿಯವರು “ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಜೀರ್ಣೋದ್ಧಾರ ಸಮಿತಿ’ ರಚಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಡಿಯಿಟ್ಟರು.

ಜೀರ್ಣೋದ್ಧಾರ ಕಾರ್ಯಾರಂಭ
2022ರ ಫೆ. 20ರಂದು ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿಯವರ ಮೂಲಕ ಶಂಕು ಸ್ಥಾಪನೆ ನೆರವೇರಿಸಲಾಯಿತು. ಜೀರ್ಣೋದ್ಧಾರ ಕಾರ್ಯ ಸಾಂಗವಾಗಿ ನೆರವೇರಲು ಪಿ. ಪುರುಷೋತ್ತಮ ಶೆಟ್ಟಿಯವರನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಸರ್ವ ಭಕ್ತರ ಸಹಕಾರದಿಂದ ಗಣೇಶಪುರಿಯ ಸಮಾಧಿ ಮಂದಿರದ ಮಾದರಿಯಂತೆ ಕೋಡೆ ಫ್ಯಾಮಿಲಿ ಟ್ರಸ್ಟ್‌ನ ರಾಮಚಂದ್ರ ಕೋಡೆ ಮತ್ತು ಉದ್ಯಮಿ ಕೆ.ಕೆ. ಆವರ್ಶೇಕರ್‌ ಅವರ ಪೂರ್ಣ ಸಹಕಾರದೊಂದಿಗೆ ಆರ್ಕಿಟೆಕ್ಟರ್‌ ನಾಗೇಶ್‌ ಹೆಗ್ಡೆಯವರ ವಿನ್ಯಾಸದೊಂದಿಗೆ ಕೇವಲ 11 ತಿಂಗಳಲ್ಲಿ ಮಂದಿರ ಮಠದ ನಿರ್ಮಾಣ ಕಾರ್ಯ ಸಮಾಪ್ತಿಯ ಹಂತಕ್ಕೆ ತಲುಪಿದೆ. 11 ತಿಂಗಳಿನಿಂದ ಸ್ವಾಮಿಯ ಬಿಂಬವನ್ನು ಸೀತಮ್ಮ ಶೆಟ್ಟಿಯವರ ಕುಟುಂಬದವರ ಮನೆಯ ಸ್ಥಳದಲ್ಲಿ ಬಾಲಾಲಯದಲ್ಲಿರಿಸಿ ಪ್ರತಿದಿನ ಭಜನೆ, ಸಂಕೀರ್ತನೆ, ಪೂಜೆ, ಪುರಸ್ಕಾರ ನಡೆಸಲಾಗುತ್ತಿದೆ.

ಶೋಭಾಯಾತ್ರೆ-ಬಿಂಬ ಪ್ರತಿಷ್ಠೆ
ಸ್ವಾಮಿಯ ಭಕ್ತರಾದ ಮಂಬಯಿಯ ಸುರೇಂದ್ರ ಕಲ್ಯಾಣಪುರ, ನವೀನ್‌ ಶೆಟ್ಟಿ ತೋನ್ಸೆಯವರ ನೇತೃತ್ವದಲ್ಲಿ ಗಣೇಶಪುರಿಯ ಸಮಾಧಿ ಮಂದಿರದಲ್ಲಿ ಇರಿಸಲಾಗಿದ್ದ ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹವನ್ನು ಕೊಡವೂರು ಶ್ರೀ ಸಾಯಿಬಾಬಾ ಮಂದಿರದಲ್ಲಿ ಇಟ್ಟು ಬೃಹತ್‌ ಶೋಭಾಯಾತ್ರೆಯ ಮೂಲಕ ಜ. 15ರಂದು ಮಂದಿರ ಮಠಕ್ಕೆ ತರಲಾಗುವುದು. ಅಂದು ಸಂಜೆ 4 ಗಂಟೆಗೆ ಮಣಿಪಾಲದ ಎಂಎಎಂಜಿ ಸಂಸ್ಥೆಯ ಅಧ್ಯಕ್ಷ ಡಾ| ರಂಜನ್‌ ಪೈಯವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ದೇಶದ ವಿವಿಧ ಭಾಗದ ಸ್ವಾಮೀಜಿಯವರ ಉಪಸ್ಥಿತರಿರುವರು.

ಜ. 16ರಂದು ನವೀಕೃತ ಮಂದಿರ ಲೋಕಾರ್ಪಣೆ, ನವೀಕೃತ ಗರ್ಭಗೃಹ ಸಮರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಅಂದು ಸಂಜೆ ನಡೆಯಲಿರುವ ಸಭೆಯಲ್ಲಿ ಎಂಎಂಎನ್‌ಎಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಮತ್ತು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಉದ್ಯಮಿ ಕೆ.ಕೆ. ಆವರ್ಶೇಕರ್‌ ಅವರನ್ನು ಗೌರವಿಸಲಿದ್ದಾರೆ ಎಂದು ಮಂದಿರ ಮಠದ ಮುಖ್ಯಸ್ಥ ಕೊಡವೂರು ದಿವಾಕರ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next