Advertisement

ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ , ಪ್ರತ್ಯೇಕ ಸಮಿತಿ

04:16 PM Aug 25, 2022 | Team Udayavani |

ಜಿಲ್ಲೆಯು ರಜತ ಮಹೋತ್ಸವ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್‌. ಅಂಗಾರ, ಜಿಲ್ಲಾಧಿಕಾರಿಯಾಗಿರುವ ಕೂರ್ಮಾರಾವ್‌ ಎಂ. ಅವರು ಮುಂದಿನ 25 ವರ್ಷದಲ್ಲಿ (ಜಿಲ್ಲೆಗೆ ಸುವರ್ಣ ಮಹೋತ್ಸವ ತುಂಬುವಾಗ) ಆಗಬೇಕಿರುವ ಅಭಿವೃದ್ಧಿ, ಹಮ್ಮಿಕೊಂಡಿರುವ ಯೋಜನೆ, ಯೋಚನೆಗಳ ಬಗ್ಗೆ ರಾಜು ಖಾರ್ವಿ ನಡೆಸಿದ ಕಿರು ಸಂದರ್ಶನ ಇಲ್ಲಿದೆ.

Advertisement

 ಜಿಲ್ಲೆಯ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ಏನಿದೆ?
-ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲ ಕ್ಷೇತ್ರದ ಅನುಭವಿಗಳು ಮತ್ತು ಹಿರಿಯರನ್ನು ಒಳಗೊಂಡ ಒಂದು ಸಮಿತಿ ರಚನೆ ಮಾಡಲಿದ್ದೇವೆ. ರಜತ ಮಹೋತ್ಸವ ಉದ್ಘಾಟನೆಯಾಗುತ್ತಿದ್ದಂತೆ ಜಿಲ್ಲೆ ಮುಂದಿನ 25 ವರ್ಷಗಳಲ್ಲಿ ಯಾವ ರೀತಿ ಅಭಿವೃದ್ಧಿ ಹೊಂದಬೇಕು, ದೀರ್ಘಾವಧಿಯ ಕ್ರಮಗಳು, ಅಲ್ಪಾವಧಿಯ ಕ್ರಮಗಳು ಹೀಗೆ ಎಲ್ಲದರ ಬಗ್ಗೆ ಸಮಗ್ರವಾಗಿ ಚಿಂತನೆ ನಡೆಸಲು ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಪ್ರತ್ಯೇಕ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿ ನೀಡುವ ಸಲಹೆ ಸೂಚನೆಯಂತೆ ಜಿಲ್ಲೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ.

 ಕರಾವಳಿ ಪ್ರವಾಸೋದ್ಯಮ ಆದ್ಯತೆ ಕಡಿಮೆಯಾಗುತ್ತಿದೆಯೇ?
ಉಡುಪಿ ಸಹಿತವಾಗಿ ಕರ್ನಾಟಕದ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತಿದ್ದೇವೆ. ಕೇರಳ, ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಿಆರ್‌ಝಡ್‌ ಮಿತಿ ಕಡಿಮೆ ಮಾಡುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದ್ದೇವೆ. ಸಿಆರ್‌ಝಡ್‌ ಮಿತಿ ಕಡಿಮೆ ಮಾಡಿಸುವ ಸಂಬಂಧ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಎಲ್ಲ ರೀತಿಯ ಸಹಕಾರ, ಆದ್ಯತೆ ನೀಡಲಾಗುತ್ತದೆ.

 ಪ್ರವಾಸೋದ್ಯಮ ಹೊರತು ಪಡಿಸಿ ಉಳಿದ ಕ್ಷೇತ್ರಕ್ಕೂ ಆದ್ಯತೆ ಸಿಗಲಿದೆಯೇ?
-ಜಿಲ್ಲೆಯ ಉಡುಪಿ ಕೃಷ್ಣಮಠ, ಅಷ್ಟಮಠಗಳು, ಕೊಲ್ಲೂರು ಸಹಿತವಾಗಿ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ, ಪ್ರಗತಿ, ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆ ಮಾಡಲು ಏನೇನು ಕ್ರಮಗಳನ್ನು ತೆಗೆದುಕೊಳ್ಳಬಹುದು ಮತ್ತು ಮೀನುಗಾರಿಕೆಯ ಅಭಿವೃದ್ಧಿ, ಸಾಂಸ್ಕೃತಿಕ ರಂಗಕ್ಕೆ ಆದ್ಯತೆ ಸಹಿತವಾಗಿ ಎಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.

 ಜಿಲ್ಲೆಯಾದ್ಯಂತ ಅಲ್ಲಲ್ಲಿ ರಸ್ತೆ ಹದಗೆಟ್ಟು, ಸವಾರಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಶಾಶ್ವತ ಪರಿಹಾರ ಇಲ್ಲವೇ?
ಉಡುಪಿ- ಮಣಿಪಾಲ ರಸ್ತೆಯಲ್ಲಿ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಸಮೀಪ ರಸ್ತೆ ಹಾಳಾಗಿರುವುದನ್ನು ಈಗಾಗಲೇ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದೇವೆ. ಮಳೆಯಿಂದಾಗಿ ಪುನಃ ಗುಂಡಿಯಾಗಿದ್ದರೆ, ಅದನ್ನು ಪರಿಶೀಲಿಸಿ, ಮುಂದಿನ ಕ್ರಮಕ್ಕೆ ಸೂಚನೆ ನೀಡಲಾಗುವುದು. ಜಿಲ್ಲಾದ್ಯಂತ ರಾಷ್ಟ್ರೀಯ ಹೆದ್ದಾರಿ ಸಹಿತ ಎಲ್ಲ ರಸ್ತೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.

Advertisement

 ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಆರೈಕೆ ಕೇಂದ್ರ ತೆರೆಯುವ ಯೋಜನೆ ಇದೆಯೇ?
– ಮಾನಸಿಕ ಆರೋಗ್ಯ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರಕಾರದಿಂದಲೇ ಮಾನಸಿಕ ಆರೋಗ್ಯ ಆರೈಕೆ ಕೇಂದ್ರ ತೆರೆಯುವ ಸಂಬಂಧವೂ ಚಿಂತನೆ ನಡೆಸಲಿದ್ದೇವೆ.

**

 ಜಿಲ್ಲೆಯ ಅಭಿವೃದ್ಧಿಯ ಆದ್ಯತೆ ವಲಯ ಯಾವುವು?
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕ ವಾಗುವಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯ, ಮೀನುಗಾರಿಕೆ ಹೀಗೆ ಪ್ರಮುಖ ವಿಭಾಗಗಳ ಮುಖಂಡರ ಸಭೆಯನ್ನು ಈಗಾಗಲೇ ನಡೆಸಿದ್ದೇವೆ. ಕೈಗಾರಿಕೆಗಳಿಂದ ಹೂಡಿಕೆದಾರರ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ವಿವಿಧ ಇಲಾಖೆಯ ಅಧಿಕಾರಿಗಳು, ಸಚಿವರು, ಶಾಸಕರು ಸಹಿತವಾಗಿ ಜನ ಪ್ರತಿನಿಧಿಗಳನ್ನು ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಆಗಬೇಕಾದ ಸಮಗ್ರ ಅಭಿವೃದ್ಧಿಯ ನೀಲನಕ್ಷೆಯನ್ನು ಮುಂದಿನ ಐದು ತಿಂಗಳಲ್ಲಿ ಸಿದ್ಧಪಡಿಸಿಕೊಳ್ಳಲಿದ್ದೇವೆ.

 ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಸಹಕಾರ ಹೇಗೆ ಪಡೆಯಲಾಗುವುದು?
ಜಿಲ್ಲೆಯ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಸಹಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆ. ಶೈಕ್ಷಣಿಕ ಕಾರ್ಯಕ್ರಮ ಆಯೋಜನೆಯ ಸಂದರ್ಭದಲ್ಲಿ ಮಣಿಪಾಲದ ಮಾಹೆ ವಿ.ವಿ., ನಿಟ್ಟೆ ವಿಶ್ವವಿದ್ಯಾಲಯ ಸಹಿತವಾಗಿ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಪಡೆಯಲಾಗುತ್ತದೆ. ಈ ಮೂಲಕ ಅಲ್ಲಿನ ವಿದ್ಯಾರ್ಥಿಗಳನ್ನು ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ. ಹೀಗೆ ಕೈಗಾರಿಕೆಗಳು, ಆರೋಗ್ಯ ಸಂಬಂಧಿಸಿದ ಸಂಸ್ಥೆಗಳು, ಆಸ್ಪತ್ರೆಗಳು, ಧಾರ್ಮಿಕ ಕೇಂದ್ರಗಳು, ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಡೆಸಲಿದ್ದೇವೆ.

 ಜಿಲ್ಲೆ ಆಡಳಿತಾತ್ಮಕವಾಗಿ ಯಾವ ರೀತಿ ಬದಲಾಗಬೇಕು?
-ಜಿಲ್ಲೆಯ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗುತ್ತದೆ. ಹಾಗೆಯೇ ಜನಸಾಮಾನ್ಯರು ಸರಕಾರಿ ಕಚೇರಿಗೆ ಅಲೆದಾಡುವನ್ನು ತಪ್ಪಿಸಲು ಗ್ರಾಮ ಒನ್‌ ಕೇಂದ್ರಗಳನ್ನು ಬಲಪಡಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಿದ್ದೇವೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಆಡಳಿತಾತ್ಮಕ ಬದಲಾವಣೆ ತರಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ಸರಕಾರದ ಯೋಜನೆಗಳನ್ನು ಜನರು ಮನೆಯಲ್ಲೇ ಇದ್ದು ತಂತ್ರಜ್ಞಾನದ ಮೂಲಕ ಪಡೆಯುವಂತೆ ಮಾಡಲು ಹೆಚ್ಚಿನ ಗಮನ ಹರಿಸಲಾಗುವುದು.

 ಗ್ರಾಮೀಣ ಭಾಗದ ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಸಿಗಲಿದೆಯೇ?
-ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇರುವ ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ನೆಟ್‌ವರ್ಕ್‌ ಪ್ರೊವೈಡರ್‌ಗಳನ್ನು ಕರೆದು ಸಭೆಯನ್ನು ಮಾಡಿದ್ದೇವೆ. ಸರ್ವರ್‌ ಸಮಸ್ಯೆ ಹಾಗೂ ನೆಟ್‌ವರ್ಕ್‌ ಉನ್ನತೀಕರಣ ಈ ಎರಡು ಕಾರ್ಯವನ್ನು ಆದ್ಯತೆಯ ಮೇರೆಗೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಮೊಬೈಲ್‌ ನೆಟ್‌ವರ್ಕ್‌ ಸರಿಯಾಗಿ ಇಲ್ಲದೇ ಆಗುತ್ತಿರುವ ಸಮಸ್ಯೆಯು ಗಮನಕ್ಕೆ ಬಂದಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳು ಆಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next