Advertisement

ತೆಕ್ಕಟ್ಟೆ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಗದೀಶ್‌ ದಿಢೀರ್‌ ಭೇಟಿ

05:45 PM Jul 27, 2021 | Team Udayavani |

ತೆಕ್ಕಟ್ಟೆ : ಇಲ್ಲಿನ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಜು. 27ರಂದು ದಿಢೀರ್‌ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಜಿಲ್ಲಾಧಿಕಾರಿಯ ಬಳಿ ಅಳಲು ತೋಡಿಕೊಂಡ ವಯೋವೃದ್ಧೆ : 
ಜಿಲ್ಲಾಧಿಕಾರಿ ಅವರು ಗ್ರಾಮಕರಣಿಕರ ಕಚೇರಿಯಲ್ಲಿ ಕಡತವನ್ನು ಪರಿಶೀಲಿಸಿ, ಅನಂತರ ತೆಕ್ಕಟ್ಟೆ ಗ್ರಾ.ಪಂ.ಕಚೇರಿಗೆ ಆಗಮಿಸಿದ ಸಾರ್ವಜನಿಕರ ಬಳಿ ಗ್ರಾಮ ಮಟ್ಟದ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಆಶ್ರಯ ಯೋಜನೆಗಾಗಿ ಅರ್ಜಿ ಸಲ್ಲಿಸಲು ಬಂದಿದ್ದ ಆಲುಗುಡ್ಡೆ ನಿವಾಸಿ ಬಾಬಿ (60) ಎಂಬ ಬಡ ವಯೋವೃದ್ಧೆಯೋರ್ವರು ಇದ್ದ ಹಳೆಯ ಮನೆ ಸೋರುತ್ತಿದ್ದು ಅದನ್ನು ಕೆಡವಲಾಗಿದೆ. ಆದರೆ ಪ್ರಸ್ತುತ ಸರಕಾರ ಈಗ ಮನೆ ನಿರ್ಮಾಣದ ಅರ್ಜಿ ಸ್ವೀಕಾರವನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಆಶ್ರಯಿಸಲು ಸೂರು ಇಲ್ಲ. ಮಳೆಯಿಂದ ರಕ್ಷಣೆಗಾಗಿ ಬೇರೆಯವರ ಮನೆಯನ್ನು ಆಶ್ರಯಿಸಿದ್ದೇನೆ ಎಂದು ತನ್ನ ಅಳಲು ತೋಡಿಕೊಂಡರು.

ಇಂತಹ ಸಮಸ್ಯೆಗಳಿಗೆ ಮಾನವೀಯ ನೆಲೆಯ ಮೇಲೆ ತತ್‌ಕ್ಷಣವೇ ಸ್ಪಂದಿಸುವಂತೆ ಗ್ರಾಮ ಲೆಕ್ಕಾಧಿಕಾರಿ ದೀಪಿಕಾ ಶೆಟ್ಟಿ ಅವರ ಬಳಿ ಜಿಲ್ಲಾಧಿಕಾರಿ ಆದೇಶಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ವಿಜಯ ಭಂಡಾರಿ ಅವರು ತೆಕ್ಕಟ್ಟೆ ರಾ.ಹೆ.66ರ ಪ್ರಮುಖ ಸರ್ಕಲ್‌ನಲ್ಲಿ ಹೈಮಾಸ್ಟ್‌ ಬೆಳಕಿಲ್ಲದ ಪರಿಣಾಮ ಸಂಭವನೀಯ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಈ ಬಗ್ಗೆ ತುರ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿಕೊಂಡರು.

ಇದನ್ನೂ ಓದಿ :ಬಿಜೆಪಿ ಹೈಕಮಾಂಡ್ ಪಾಲಿಗೆ ರಾಜ್ಯದ ಜನರೇನು ಪ್ರಯೋಗ ಪಶುಗಳೆ? : ದಿನೇಶ್ ಗುಂಡೂರಾವ್ ಟ್ವೀಟ್

Advertisement

ಈ ಸಂದರ್ಭದಲ್ಲಿ ಬೈಂದೂರು ತಾಲೂಕಿನ ಉಪ ತಹಶೀಲ್ದಾರ್‌ ನರಸಿಂಹ ಕಾಮತ್‌, ಗ್ರಾಮಲೆಕ್ಕಾಧಿಕಾರಿ ದೀಪಿಕಾ ಶೆಟ್ಟಿ, ಪಿಡಿಒ ಸುನಿಲ್‌, ಗ್ರಾ.ಪಂ. ಸದಸ್ಯ ವಿಜಯ ಭಂಡಾರಿ. ಕಾರ್ಯದರ್ಶಿ ಚಂದ್ರ , ಗ್ರಾಮ ಸಹಾಯಕ ಚಂದ್ರ ದೇವಾಡಿಗ ಹಾಗೂ ಗ್ರಾ.ಪಂ. ಸಿಬಂದಿ ಉಪಸ್ಥಿತರಿದ್ದರು.

ಗ್ರಾಮ ಮಟ್ಟದ ಅಧಿಕಾರಿಗಳ ಕಾರ್ಯವೈಖರಿಗಳನ್ನು ಪರಿಶೀಲಿಸುವ ನಿಟ್ಟಿನಿಂದ ಗ್ರಾಮಗಳಿಗೆ ತೆರಳಿ ದಫ್ತಾ ತಪಾಸಣೆ ಮಾಡುತ್ತಿದ್ದೇನೆ. ಅಲ್ಲದೆ ಸಾರ್ವಜನಿಕರಿಗೆ ಅಧಿಕಾರಿಗಳ ಸ್ಪಂದನೆ ಹಾಗೂ ಯಾವುದಾದರೂ ಲೋಪದೋಷಗಳಿವೆ ಎನ್ನುವುದನ್ನು ಕೂಲಂಕಷವಾಗಿ ಪರೀಕ್ಷಿಸಲಾಗುವುದು. ತೆಕ್ಕಟ್ಟೆ ಗ್ರಾಮ ಕರಣಿಕರ ಕಚೇರಿಯ ದಾಖಲಾತಿಗಳು ಅತ್ಯಂತ ಪಾರದರ್ಶಕವಾಗಿದೆ ಹಾಗೂ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.
– ಜಿ.ಜಗದೀಶ್‌ ಜಿಲ್ಲಾಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next