Advertisement

ಜಗದ್ವಂದ್ಯ ಭಾರತ ನಿರ್ಮಾಣ ಅಂತ್ಯೋದಯದ ಕಲ್ಪನೆ: ನಳಿನ್‌ ಕುಮಾರ್‌

08:43 PM May 10, 2022 | Team Udayavani |

ಉಡುಪಿ: ಜಗದ್ವಂದ್ಯ ಭಾರತ ನಿರ್ಮಾಣವೇ ಅಂತ್ಯೋದಯದ ಕಲ್ಪನೆಯಾಗಿದೆ. ತುಳುನಾಡಿನ ಮೂಲ ಚಿಂತನೆ, ಪರಂಪರೆಯನ್ನು ಉಳಿಸಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಉದ್ಯಮಶೀಲರನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಉಡುಪಿ ನಗರ ಬಿಜೆಪಿ ಹಾಗೂ ಗ್ರಾಮಾಂತರ ಮಂಡಲಗಳ ಜಂಟಿ ಆಶ್ರಯದಲ್ಲಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಡುಪಿ ವಿಧಾನಸಭಾ ಕ್ಷೇತ್ರ ಮಟ್ಟದ ಸಮಾವೇಶ “ಅಂತ್ಯೋದಯದತ್ತ ಒಂದು ಹೆಜ್ಜೆ’ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಸಿ, ಎಸ್‌ಟಿ ಸಮುದಾಯದವರು ಮನೆ ನಿರ್ಮಿಸಲು ಇರುವ ಕನ್ವರ್ಷನ್‌ ಸಮಸ್ಯೆಯನ್ನು ನಿವಾರಿಸಲು ಯತ್ನಿಸಲಾಗುವುದು. ಐಟಿಡಿಪಿ ಮೂಲಕ ಕೊರಗ ಸಮುದಾಯಕ್ಕೆ ಮನೆ ನಿರ್ಮಾಣದ ಬಗ್ಗೆ, ಕುಡುಬಿ ಸಮುದಾಯದ ಹೋಳಿ ಹಬ್ಬಕ್ಕೆ ಒಂದು ದಿನ ರಜೆ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ಗೆ ಮೂರು ಶಾಪ!
ಕಾಂಗ್ರೆಸ್‌ ಪಕ್ಷಕ್ಕೆ ಡಾ| ಬಿ.ಆರ್‌.ಅಂಬೇಡ್ಕರ್‌, ಮಹಾತ್ಮಾಗಾಂಧಿ ಹಾಗೂ ಗೋವಿನ ಶಾಪವಿದೆ. ಕಾಂಗ್ರೆಸ್‌ ಪಕ್ಷದವರು ಅಂಬೇಡ್ಕರ್‌ ಭಾವಚಿತ್ರವನ್ನು ಬಳಸುವುದಿಲ್ಲ. ಅವರ ಮರಣದ ಸಂದರ್ಭದಲ್ಲಿದ್ದ ಕಾಂಗ್ರೆಸ್‌ ಸರಕಾರ ಅವರ ಶವಸಂಸ್ಕಾರಕ್ಕೂ ಅವಕಾಶ ನೀಡದೆ ನಿರಂತರ ಅವಮಾನ ಮಾಡಿತ್ತು. ರಾಮರಾಜ್ಯದ ಪರಿಕಲ್ಪನೆ ಕಂಡ ಗಾಂಧೀಜಿಯವರ ಕನಸು ನನಸಾಗಿಸಲು ಕಾಂಗ್ರೆಸ್‌ನಿಂದ ಸಾಧ್ಯವಾಗಿಲ್ಲ. ಆದರ್ಶ ಗ್ರಾಮಗಳ ಮೂಲಕ ಅದನ್ನು ಈಗ ಪ್ರಧಾನಿ ಮೋದಿಯವರು ಸಾಕಾರಗೊಳಿಸುತ್ತಿದ್ದಾರೆ. ಕಾಂಗ್ರೆಸ್‌ನ ಮೊದಲ ಚಿಹ್ನೆ ದನ-ಕರುವಿನದ್ದಾಗಿತ್ತು. ಆದರೆ ಅವರಿಂದ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಆ ಕೆಲಸವನ್ನು ಬಿಜೆಪಿ ಮಾಡಬೇಕಾಯಿತು ಎಂದರು.

ಸರಕಾರಿ ಯೋಜನೆಗಳು
ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜದಲ್ಲಿರುವ ಸವಲತ್ತುಗಳು ಎಲ್ಲರಿಗೂ ಸಿಗುವಂತಾಗಲು ಸಿಗುವಂತಾಗಬೇಕು. ರಾಜ್ಯ ಸರಕಾರ 28 ಸಾವಿರ ಕೋ.ರೂ.ಗಳಷ್ಟು ಪರಿಶಿಷ್ಟ ಸಮುದಾಯದವರಿಗೆ ಮೀಸಲಿಟ್ಟಿದೆ. ನಿವೇಶನ ಇಲ್ಲದ ಮನೆಗಳಿಗೆ ನಿವೇಶನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆಯ 826 ವಸತಿ ಶಿಕ್ಷಣ ಶಾಲೆಗಳಲ್ಲಿ ಶೇ.60ರಿಂದ 70ರಷ್ಟು ಮಂದಿ ಪರಿಶಿಷ್ಟ ಸಮುದಾಯದವರೇ ಇದ್ದಾರೆ ಎಂದರು.

Advertisement

ಬಿಜೆಪಿ ಸರಕಾರದಿಂದ ಯೋಜನೆ
ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷ ಕಳೆದರೂ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ವರ್ಗದವರಿಗೆ ಆದಾಯವೂ ಇಲ್ಲ; ಆಧಾರವೂ ಇಲ್ಲ ಎಂಬಂತಾಗಿದೆ. ಕಾಂಗ್ರೆಸ್‌ ಪಕ್ಷ ಅವರನ್ನು ಮೇಲೆ ಬರಲು ಬಿಡಲಿಲ್ಲ. ಕಷ್ಟಪಟ್ಟು ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಬಿಜೆಪಿ ಸರಕಾರ ಇವರಿಗೆ ಹಲವಾರು ಯೋಜನೆಗಳನ್ನು ಕಲ್ಪಿಸಿದೆ ಎಂದರು.

ಕಾರ್ಮಿಕ ನೀತಿ-ಅಂಬೇಡ್ಕರ್‌
ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸರ್ವರಿಗೂ ನಾಯಕರಾಗಿದ್ದರು. ಕಾರ್ಮಿಕ ನೀತಿಯನ್ನು ಮೊದಲು ಜಾರಿಗೆ ತಂದಿದ್ದೇ ಅಂಬೇಡ್ಕರ್‌. ಮಹಿಳೆಯರು,ಕಾರ್ಮಿಕರು, ದಲಿತರ ಪರವಾಗಿ ಅವರು ನಿಂತಿದ್ದರು. ದೇಶದಲ್ಲಿ ದಲಿತರ ಉದ್ಧಾರ ಮತ್ತಷ್ಟು ವೇಗದಲ್ಲಿ ನಡೆಯಬೇಕು. ಸೌಲಭ್ಯಗಳು ಅವರ ಮನೆಬಾಗಿಲಿಗೆ ತಲುಪುವಂತಾಗಬೇಕು ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಮಾಹಿತಿ ಕೈಪಿಡಿ ಬಿಡುಗಡೆ
ಸಮಾವೇಶದಲ್ಲಿ ಪ.ಜಾ. ಮತ್ತು ಪ.ಪಂ.ಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಎಲ್ಲ ಇಲಾಖೆಗಳಿಂದ ದೊರಕುವ ಸೌಲಭ್ಯತೆಗಳ ಸಮಗ್ರ ಮಾಹಿತಿ ಕೈಪಿಡಿ “ಅಂತ್ಯೋದಯದ ಮಜಲುಗಳು-ಅರಿತು ನಡೆ ಅಭಿವೃದ್ಧಿಯ ಕಡೆ’ಯನ್ನು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಮುದಾಯದ ಗುರಿಕಾರರನ್ನು ಅವರು ಇರುವ ಸ್ಥಳಕ್ಕೆ ಹೋಗಿ ಸಮ್ಮಾನಿಸಲಾಯಿತು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ರಘುಪತಿ ಭಟ್‌ ಪ್ರಸ್ತಾವನೆಗೈದರು. ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್ , ಸ್ಥಾಯಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ರಾಜ್ಯ ಎಸ್‌ಸಿ ಮೊರ್ಚಾದ ಪ್ರ.ಕಾರ್ಯದರ್ಶಿ ದಿನಕರ ಬಾಬು, ಎಸ್‌ಟಿ ಮೊರ್ಚಾದ ಕಾರ್ಯದರ್ಶಿ ಉಮೇಶ್‌ ನಾಯ್ಕ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ನಿತ್ಯಾನಂದ ನಾಯ್ಕ್, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಬಳಂಜ, ನಗರಸಭೆ ಸದಸ್ಯರಾದ ಸುಭೇದಾ, ಭಾರತೀ ಪ್ರಶಾಂತ್‌ ಮತ್ತಿತರರು ಉಪಸ್ಥಿತರಿದ್ದರು. ನಗರಸಭೆ ಸದಸ್ಯ ಗಿರೀಶ್‌ ಅಂಚನ್‌ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಗಳು: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next