Advertisement

ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಗೆ ಆಹ್ವಾನ

02:55 AM Aug 23, 2018 | Karthik A |

ಮಣಿಪಾಲ: ಈ ವರ್ಷದಿಂದ ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುತ್ತಿದೆ. ಕಳೆದ ವರ್ಷ ಪ್ರಾಯೋಗಿಕವಾಗಿ ಪುತ್ತೂರಿನಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆ ವಿಶೇಷವಾಗಿದ್ದು, ಓದಿನ ಜತೆಗೇ ಕೆಲವು ಸಮಯವನ್ನು ವಿನಿಯೋಗಿಸುವ ಮೂಲಕ ಉಚಿತವಾಗಿ ಉದಯವಾಣಿಯೊಂದಿಗೆ ಪತ್ರಿಕೋದ್ಯಮದ ಪ್ರಾಯೋಗಿಕ ಅನುಭವವನ್ನು ಪಡೆಯಬಹುದಾಗಿದೆ. ಬಿಎ ಹಾಗೂ ಎಂಎ ಓದುತ್ತಿರುವವರು ಈ ಯೋಜನೆಗೆ ಅರ್ಹರು. ಪ್ರಸ್ತುತ ಯಾವುದಾದರೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಈ ಯೋಜನೆಯಡಿ ವಿವಿಧ ಭಾಗಗಳಿಂದ ನಿಗದಿತ ಸಂಖ್ಯೆಯ ಆಸಕ್ತರನ್ನು ಆಯ್ದುಕೊಳ್ಳಲಾಗುವುದು.

Advertisement

ತರಬೇತಿ ವಿವರ
ಆಯ್ದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್‌ ನೀಡುವುದಲ್ಲದೆ, ನಾಲ್ಕು ತಿಂಗಳಿಗೊಮ್ಮೆ ಕಾರ್ಯಾಗಾರ ನಡೆಸಲಾಗುವುದು. ವಾರದಲ್ಲಿ ಅವರು ಇರುವ ಸುತ್ತಲಿನ ಪ್ರದೇಶದಲ್ಲೇ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಮಾಡಲು ಅವಕಾಶ ನೀಡಲಾಗುವುದು. ಆ ಮೂಲಕ ಅವರಿಗೆ ವರದಿಗಾರಿಕೆಯಲ್ಲದೆ, ವರ್ಷದಲ್ಲಿ ಒಂದು-ಎರಡು ಬಾರಿ ಸುದ್ದಿಮನೆಯಲ್ಲೂ (ಡೆಸ್ಕ್) ಕೆಲಸ ಮಾಡಲು ಅವಕಾಶ ಕಲ್ಪಿಸಲಾಗುವುದು. ತರಬೇತಿ ಮುಗಿದ ಮೇಲೆ ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆಯ ಪ್ರಮಾಣಪತ್ರ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದವರಿಗೆ ಅವಕಾಶವಿದ್ದಲ್ಲಿ ‘ಉದಯವಾಣಿ’ಯಲ್ಲೇ ಪರಿಗಣಿಸಲಾಗುವುದು. 

ಆಯ್ಕೆ ಹೇಗೆ?
ಈ ಸಂಬಂಧ ಸೆಪ್ಟಂಬರ್‌ 19ರಂದು ಕಿರು ಪರೀಕ್ಷೆ ನಡೆಯಲಿದೆ. ಸುಳ್ಯ ಮತ್ತು ಪುತ್ತೂರು ಭಾಗದವರಿಗೆ ಪುತ್ತೂರಿನಲ್ಲಿ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಗ್ರಾಮಾಂತರ ಹಾಗೂ ಮಂಗಳೂರಿನವರಿಗೆ ಮಂಗಳೂರಿನಲ್ಲಿ; ಉಡುಪಿ, ಕಾರ್ಕಳದವರಿಗೆ ಉಡುಪಿಯಲ್ಲಿ ಹಾಗೂ ಕುಂದಾಪುರದವರಿಗೆ ಕುಂದಾಪುರದಲ್ಲಿ ಪರೀಕ್ಷೆ ನಡೆಯಲಿದೆ. ಬೆಳ್ತಂಗಡಿ ಮತ್ತು ಬಂಟ್ವಾಳದವರು ಪುತ್ತೂರಿನಲ್ಲೂ ಪರೀಕ್ಷೆ ಬರೆಯಲು ಅವಕಾಶವಿದೆ.

ಆಸಕ್ತರು ತಮ್ಮ ಹೆಸರು, ಊರು, ಓದುತ್ತಿರುವ ಕೋರ್ಸ್‌-ವರ್ಷ, ಕಾಲೇಜಿನ ಹೆಸರು, ಸಂಪರ್ಕ ಸಂಖ್ಯೆ ಹಾಗೂ ಇ-ಮೇಲ್‌ ಐಡಿ ಈ ವಾಟ್ಸ್‌ಆಪ್‌ ನಂಬರ್‌ಗೆ 99641 69554ಗೆ ಅಥವಾ ಇಮೇಲ್‌ usjp@udayavani.com ಗೆ ಸೆ. 5ರೊಳಗೆ ಕಳುಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next