Advertisement

ಪರೀಕ್ಷೆ ಭಯ ಬಿಟ್ಟರೆ ಯುದ್ಧ ಅರ್ಧ ಗೆದ್ದಂತೆ: ಸಿಎ ಪ್ರಥಮ ರ್‍ಯಾಂಕ್‌ ಸಾಧಕಿ ರುಥ್‌

12:12 AM Sep 15, 2021 | Team Udayavani |

ಮಂಗಳೂರು: ಅಖಿಲ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟೆನ್ಸಿ (ಸಿಎ) ಪರೀಕ್ಷೆ ಕಠಿನ ಎಂದು ಚಿಂತೆ ಮಾಡಲೇಬಾರದು. ಬದ ಲಾಗಿ ಕಠಿನ ಪರಿಶ್ರಮಪಟ್ಟರೆ ಯಶಸ್ಸು ಗಳಿಸಲು ಸಾಧ್ಯ. ಚಿಂತೆ, ಭಯವನ್ನು ತೊಡೆದು ಹಾಕಿದರೆ ಅರ್ಧ ಗೆಲುವು ಸಿಕ್ಕಿದಂತೆ…

Advertisement

– ಇದು ಸಿಎ (ಹಳೆ ಸಿಲೆಬಸ್‌) ಅಂತಿಮ ಪರೀಕ್ಷೆ ಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್‌ ಪಡೆ ದಿರುವ ಮಂಗಳೂರಿನ ರುಥ್‌ ಕ್ಲೇರ್‌ ಡಿ’ಸಿಲ್ವ ಅವರ ಸ್ಪಷ್ಟ ಅಭಿಪ್ರಾಯ. ರುಥ್‌ ಅವರ ಜತೆಗೆ “ಉದಯವಾಣಿ’ ಮಂಗಳವಾರ ನಡೆಸಿದ ವಿಶೇಷ ಸಂದರ್ಶನದ ಸಾರ ಇಲ್ಲಿದೆ.

ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್‌; ಹೇಗನಿಸುತ್ತಿದೆ?

ನಿಜಕ್ಕೂ ಇದೊಂದು ಮರೆಯಲಾಗದ ದಿನ. ನಿರೀಕ್ಷೆ ಇತ್ತಾದರೂ ದೇಶಕ್ಕೆ ನಾನು ಪ್ರಥಮ ಎಂಬ ಸುದ್ದಿ ತಿಳಿದು ಖುಷಿ ಇಮ್ಮಡಿಯಾಗಿದೆ. ಸರ್ವರ ಪ್ರೀತಿ ಹಾರೈಕೆಗೆ ತಲೆಬಾಗಿ ನಮಿಸುತ್ತೇನೆ.

ಸಿಎ ಅಭ್ಯಸಿಸುವ ಬಗ್ಗೆ ನೀವು ಯಾವಾಗ ನಿರ್ಧಾರ ಕೈಗೊಂಡಿರಿ?

Advertisement

ಈ ಬಗ್ಗೆ ಆರಂಭದಲ್ಲಿಯೇ ತೀರ್ಮಾನ ಮಾಡಿರಲಿಲ್ಲ. ಆರ್ಕಿಟೆಕ್ಟ್ ಆಗಬೇಕೆಂದಿದ್ದೆ. ಆದರೆ ಪಿಯುಸಿಯಲ್ಲಿ ಇದ್ದಾಗ ಸಿಎ ಅಥವಾ ಕಾನೂನು – ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದಿತು. ಆಗ ಸಿಎ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ತುಂಬ ಕಠಿನ ಇದೆ ಎಂಬ ಅಭಿಪ್ರಾಯ ನನ್ನಲ್ಲಿದ್ದುದರಿಂದ ಅದನ್ನು ಸವಾಲಾಗಿ ಸ್ವೀಕರಿಸುವ ತೀರ್ಮಾನ ಕೈಗೊಂಡಿದ್ದೆ.

ಈ ಹಿಂದೆ ಸಿಎ ಪರೀಕ್ಷೆ ಬರೆದಿದ್ದೀರಾ?

2019 ಮತ್ತು 2020ರಲ್ಲಿ ಸಿಎ ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದೆ. ಆದರೆ ಸಮಯ ಸಾಕಾಗದೆ ಕೈಗೂಡಿರಲಿಲ್ಲ. ಈ ಬಾರಿ ಮೂರನೇ ಪ್ರಯತ್ನವನ್ನು ಹೆಚ್ಚು ಪರಿಶ್ರಮ ಪಟ್ಟು ಮಾಡಿದೆ. ಅದು ಯಶಸ್ವಿಯಾಯಿತು.

ಈ ಬಾರಿ ನಿಮ್ಮ ತಯಾರಿ ಹೇಗಿತ್ತು?

ಈ ಬಾರಿ ಪರೀಕ್ಷೆಗೆ ಮುನ್ನ ನಾಲ್ಕು ತಿಂಗಳು ಕಠಿನ ಪರಿಶ್ರಮ ಪಟ್ಟಿದ್ದೇನೆ. ಪ್ರತೀ ದಿನ 8ರಿಂದ 10 ತಾಸು ಅಭ್ಯಾಸ ಮಾಡಿದ್ದೇನೆ. ಹಾಗೆಂದು ನಿದ್ದೆಗೆಟ್ಟಿದ್ದೇನೆ ಎಂದರ್ಥವಲ್ಲ; ನಿಯ ಮಿತವಾಗಿ ನಿದ್ರಿಸಿದ್ದೇನೆ. ಸಿಎ ಅಭ್ಯಾಸಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟರೆ ಇನ್ಯಾವುದಕ್ಕೂ ಸಮಯ ವಿನಿಯೋಗಿಸಿಲ್ಲ. ಮನೋಲ್ಲಾಸ ಕ್ಕಾಗಿ ಕೊಂಚ ಸಂಗೀತ ಆಲಿಸುತ್ತಿದ್ದೆ. ಅಭ್ಯಾಸಕ್ಕಾಗಿ ನನ್ನ ಜೀವನಶೈಲಿಯಲ್ಲಿ ಸಮತೋಲನ ತಂದುಕೊಂಡಿದ್ದೆ. ಅಪ್ಪ-ಅಮ್ಮ ಪ್ರೇರಣೆ ಬಲ ನೀಡಿದೆ.

ನಿರ್ದಿಷ್ಟ ಅಭ್ಯಾಸ ಹೇಗಿತ್ತು?

ಸಿಎ ಪರೀಕ್ಷೆಯನ್ನು ನಾನು ಸ್ವ ಅಧ್ಯಯನದ ಮೂಲಕವೇ ಎದು ರಿಸಿದ್ದೇನೆ. ಹೀಗಾಗಿ ನಾನು ವಿಷಯ ಗಳನ್ನು ಓದಿ, ಅಧ್ಯಯನ ಮಾಡಿ ಕೊಳ್ಳುತ್ತಿದ್ದೆ. ಒಂದೆರಡು ವಿಷಯ ಗಳಿಗೆ ಆನ್‌ಲೈನ್‌ ಕೋಚಿಂಗ್‌ ನೆರವು ಪಡೆದುಕೊಂಡಿದ್ದೇನೆ. ಸಣ್ಣ ಗೊಂದಲವಿದ್ದರೂ ಅದಕ್ಕೆ ಆ ಕ್ಷಣವೇ ಆನ್‌ಲೈನ್‌ ಮೂಲಕವೇ ಪರಿಹಾರ ಕಂಡುಕೊಳ್ಳುತ್ತಿದ್ದೆ. ಸಿಎ ಸಂಬಂಧಿ ಪುಸ್ತಕಗಳನ್ನು ರೆಫರ್‌ ಮಾಡುತ್ತಿದ್ದೆ.

ಸಿಎ ಪರೀಕ್ಷೆ ಕಠಿನ ಎಂಬ ಮಾತಿದೆ, ನೀವೇನನ್ನುತ್ತೀರಿ?

ಕಠಿನ ಎಂದುಕೊಂಡರೆ ನಾವು ಸೋಲುತ್ತೇವೆ. ಚಿಂತೆ ಬಿಡ ಬೇಕು. ಕಠಿನ ಪರಿಶ್ರಮ ಪಟ್ಟರೆ ಸುಲಭ ವಾಗದ್ದು ಯಾವುದೂ ಇಲ್ಲ. ಪರೀಕ್ಷೆಗಿಂತ ಮುನ್ನ 4-5 ತಿಂಗಳು ನಿರಂತರ ಓದು, ಅಭ್ಯಾಸ ಅಗತ್ಯ. ನಮ್ಮಲ್ಲಿರುವ ಆತಂಕ, ಭಯವನ್ನು ತೊಡೆದು ಹಾಕಬೇಕು. ಅರ್ಧ ಗೆಲುವು ಅಷ್ಟರಿಂದಲೇ ಲಭಿಸುತ್ತದೆ.

ಆಫರ್‌ಗಳ ಸುರಿಮಳೆ; ಐಎಎಸ್‌ ಕನಸು! :

ಸಿಎ ಮೊದಲ ರ್‍ಯಾಂಕ್‌ ಪಡೆದಿರುವುದರಿಂದ ಈಗಾಗಲೇ ದೇಶದ ವಿವಿಧ ಪ್ರತಿಷ್ಠಿತ ಕಂಪೆನಿಗಳಿಂದ ನನಗೆ ಕರೆಗಳು ಬಂದಿವೆ, ಬರುತ್ತಲೇ ಇವೆ. ಆದರೆ ಇಲ್ಲಿಯವರೆಗೆ ಏನೂ ತೀರ್ಮಾನ ಮಾಡಿಲ್ಲ. ಸ್ವಲ್ಪ ದಿನ ಕಳೆದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇನೆ. ಐಎಎಸ್‌ ಪರೀಕ್ಷೆ ಬರೆಯಬೇಕು ಎಂಬ ಆಸೆ ಹಿಂದೆಯೂ ಇತ್ತು, ಈಗಲೂ ಇದೆ. ಹೀಗಾಗಿ ಸದ್ಯ ಯಾವುದೇ ತೀರ್ಮಾನ ಮಾಡಿಲ್ಲ ಎಂದಿದ್ದಾರೆ ರುಥ್‌ ಕ್ಲೇರ್‌ ಡಿ’ಸಿಲ್ವ.

ಸಿಎ ಮಾಡಿ ಭವಿಷ್ಯ ರೂಪಿಸಿಕೊಳ್ಳಿ :

ಈಗ ವಾಣಿಜ್ಯ ಕ್ಷೇತ್ರದಲ್ಲಿ ಬಹಳಷ್ಟು ಅವಕಾಶಗಳಿವೆ. ಬಿಕಾಂ ಮಾಡುವವರು ಸಿಎ ಬಗ್ಗೆ ಹೆಚ್ಚು ಆಸಕ್ತಿ ತೋರಿದರೆ ಭವಿಷ್ಯ ಉತ್ತಮವಾಗುತ್ತದೆ. ಈ ಬಗ್ಗೆ ಒಲವು ತೋರಿದರೆ ಭವಿಷ್ಯದ ದಾರಿ ಸಿಕ್ಕಿದಂತಾಗುತ್ತದೆ. ಉದ್ಯೋಗಾವಕಾಶಗಲೂ ಸಾಕಷ್ಟಿವೆ. ವಿಶೇಷ ಗೌರವವೂ ಇರುತ್ತದೆ. ಕರಾವಳಿ ಭಾಗದಲ್ಲಿ ಹಲವು ಮಂದಿ ಸಿಎ ಸಾಧಕರಿದ್ದಾರೆ ಎನ್ನುವುದು ರುಥ್‌ ಕ್ಲೇರ್‌ ಡಿ’ಸಿಲ್ವ ಅವರ ಪ್ರತಿಪಾದನೆ.

Advertisement

Udayavani is now on Telegram. Click here to join our channel and stay updated with the latest news.

Next