Advertisement

ಉದಯವಾಣಿ ರಿಯಾಲಿಟಿ ಚೆಕ್‌: ಪ್ರತಿದಿನ 5% ಹಾಜರಾತಿಯೂ ಇಲ್ಲ! ಆಫ್ಲೈನ್ ಕ್ಲಾಸ್‌ಗೆ ನಿರಾಸಕ್ತಿ

09:28 AM Nov 24, 2020 | keerthan |

ವಿವಿಧ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಉದಯವಾಣಿ ನಡೆಸಿದ “ರಿಯಾಲಿಟಿ ಚೆಕ್‌’ನಲ್ಲಿ ತಿಳಿದು ಬಂದ ಪ್ರಮುಖ ಅಂಶ ಎಂದರೆ, ಕೋವಿಡ್-19 ಭೀತಿ ವಿದ್ಯಾರ್ಥಿಗಳು, ಪೋಷಕರಲ್ಲಿ ಮನೆ ಮಾಡಿದೆ. ಬಹುತೇಕ ಕಾಲೇಜುಗಳಲ್ಲಿ ಕೋವಿಡ್-19 ಸಂಬಂಧಿತ ಸುರಕ್ಷಾ ಕ್ರಮ, ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದ್ದರೂ, ವಿದ್ಯಾರ್ಥಿಗಳು ತರಗತಿಗಳತ್ತ ಸುಳಿಯಲು ಮನಸ್ಸು ಮಾಡಿಲ್ಲ.

Advertisement

ಬೆಂಗಳೂರು: ಕೋವಿಡ್-19 ಹಾವಳಿಯಿಂದ ಕಂಗೆಟ್ಟಿದ್ದ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ಪ್ರಯತ್ನ ನಡೆಸಿದ ಸರ್ಕಾರ, ನ.17ರಿಂದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳನ್ನು ಸಾಕಷ್ಟು ಮುನ್ನೆಚ್ಚರಿಕೆ ನಡುವೆ ಆರಂಭಿಸಿತ್ತು. ಆದರೆ, ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಹೆಚ್ಚಳ ಆಗಿಲ್ಲ. ಇನ್ನೊಂದೆಡೆ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳತ್ತ ಒಲವು ಹೊಂದಿರುವುದು ಗೊತ್ತಾಗಿದೆ. ಆದರೆ, ಗ್ರಾಮೀಣ ಭಾಗಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಸಮಸ್ಯೆ, ಕೈಕೊಡುತ್ತಿರುವ ವಿದ್ಯುತ್‌ ಇಂತಹ ಸಮಸ್ಯೆಗಳು ವಿದ್ಯಾರ್ಥಿಗಳ ಕಲಿಕೆಗೆ ತಡೆಯಾಗಿರುವುದೂ ಕಂಡುಬಂದಿದೆ.

ರಾಜ್ಯದಲ್ಲಿ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ತರಗತಿಗಳನ್ನು ಆರಂಭಿಸಿದರೂ ವಿದ್ಯಾರ್ಥಿಗಳು ಕ್ಯಾಂಪಸ್‌ ಪ್ರವೇಶಿಸಲು ಹಿಂದೇಟು ಹಾಕುತ್ತಿದ್ದು, ಒಟ್ಟಾರೆ ಪ್ರತಿ ದಿನ ಶೇ.5ರಷ್ಟು ಹಾಜರಾತಿಯೂ ಇಲ್ಲವಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಬಹುತೇಕ ವಿವಿಗಳು, ಕ್ಲಸ್ಟರ್ ವಿಶ್ವ ವಿದ್ಯಾಲಯಗಳಲ್ಲಿ ಉಚಿತ ಕೋವಿಡ್ ಪರೀಕ್ಷೆ ನಡೆಸುತ್ತಿದ್ದರೂ ವಿದ್ಯಾರ್ಥಿಗಳು ಭಾಗವಹಿಸುತ್ತಿಲ್ಲ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ ಎಂದು ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ಮಾಹಿತಿ ನೀಡಿದರು.

ಶೇ.5 ದಾಟಿಲ್ಲ: ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ವಿಧಾನಸೌಧದಲ್ಲಿ ಮಾತನಾಡಿ, ಅಂತಿಮ ವರ್ಷದ ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕಾಲೇಜು, ಸ್ನಾತಕೋತ್ತರಕಾಲೇಜು ಆರಂಭಿಸಿ ವಾರ ಕಳೆದರೂ ವಿದ್ಯಾರ್ಥಿಗಳ ಹಾಜರಾತಿ ಶೇ.5ಕ್ಕಿಂತಲೂ ಕಡಿಮೆಯಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ:ಜನವರಿ ಬಳಿಕವೇ ಶಾಲೆ ? ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ನಿರ್ಧಾರ

Advertisement

ಹಾಜರಾತಿ ಹೆಚ್ಚಳವಾಗಿಲ್ಲ

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಒಟ್ಟು116ಕಾಲೇಜುಗಳಲ್ಲಿ ನ.17ರಿಂದ ಅಂತಿಮ ಪದವಿ ಜತೆಗೆ ಸ್ನಾತಕೋತ್ತರ ತರಗತಿ ಪ್ರಾರಂಭವಾಗಿದ್ದರೂ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳವಾಗಿಲ್ಲ. ರಾಯಚೂರು ಜಿಲ್ಲೆಯಲ್ಲಿ ಪದವಿ ಕಾಲೇಜು ಶುರುವಾಗಿ ವಾರಕಳೆದರೂ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿ ಕೂಡ ತಲುಪಿಲ್ಲ. ಇದರಿಂದ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಕಾದು ಕೂರುವ ಸ್ಥಿತಿ ಎದುರಾಗಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಕೋವಿಡ್‌19 ವರದಿ ಕಡ್ಡಾಯ ಮಾಡಿರುವ ವಿಚಾರ ಗೊತ್ತಿದ್ದರೂ ಆರೋಗ್ಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಈವರೆಗೂ ವಿಶೇಷಕಾಳಜಿ ವಹಿಸಿಲ್ಲ ಎಂಬ ಆರೋಪವಿದೆ. ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ವಿವಿ ಸೇರಿದಂತೆ ಬಹುತೇಕ ಪದವಿ ಕಾಲೇಜಿನಲ್ಲಿ ವಾರದ ಬಳಿಕ ವಿದ್ಯಾರ್ಥಿಗಳ ಕಲರವಕ್ರಮೇಣ ಕಂಡು ಬರುತ್ತಿದೆ. ಕಾಲೇಜು ಆರಂಭಿಸಿದ ಮೊದಲ ದಿನ ಹತ್ತಾರು ವಿದ್ಯಾರ್ಥಿಗಳು ಮಾತ್ರ ಬಂದಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.

ತರಗತಿ ಆಸಕ್ತಿ ಕ್ಷೀಣ

ಮೈಸೂರಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಿ ಒಂದು ವಾರದ ನಂತರ ವಿದ್ಯಾರ್ಥಿಗಳುಕಾಲೇಜಿನತ್ತ ಮುಖ ಮಾಡಿದ್ದು, ಸೋಮವಾರ ಕಾಲೇಜು ಆವರಣ ಸ್ವಲ್ಪಮಟ್ಟಿಗೆ ಕಳೆಗಟ್ಟಿತ್ತು. ಮೈಸೂರು ವಿವಿ ಮಾನಸ ಗಂಗೋತ್ರಿ, ಮಹಾರಾಜ ಕಾಲೇಜು, ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾ® ‌ಕಾಲೇಜು, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮರಿಮಲ್ಲಪ್ಪಕಾಲೇಜು, ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳು, ಡಿ.ಬನುಮಯ್ಯ ಕಾಲೇಜುಗಳಲ್ಲಿ ಎಂದಿನಂತೆ ಆನ್‌ಲೈನ್‌ ತರಗತಿ ಜೊತೆಗೆ ಆಫ್ಲೈನ್‌ ತರಗತಿಗಳು ನಡೆದವು. ಚಾಮರಾಜನಗರ, ಚಿಕ್ಕಮಗಳೂರು, ಹಾವೇರಿ, ಕಲಬುರಗಿ, ವಿಜಯಪುರ, ಬಳ್ಳಾರಿ, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲೂ ವಿದ್ಯಾರ್ಥಿಗಳ ತರಗತಿ ಆಸಕ್ತಿ ಕ್ಷೀಣವಾಗಿದೆ.

ಇದನ್ನೂ ಓದಿ:ಸಂಕ್ರಾಂತಿ ಬಳಿಕ ಪ್ರೌಢಶಾಲೆ? ಶೈಕ್ಷಣಿಕ ವರ್ಷ ಆಗಸ್ಟ್‌ ವರೆಗೆ ವಿಸ್ತರಣೆ ಸಾಧ್ಯತೆ

ಆಫ್ಲೈನ್‌ಕ್ಲಾಸ್‌ಗೆ ನಿರಾಸಕ್ತಿ

ಧಾರವಾಡ ವಿವಿ ಹಾಗೂ ಪದವಿ ಕಾಲೇಜುಗಳು ಕಾರ್ಯಾರಂಭ ಮಾಡಿ ವಾರ ಕಳೆದರೂ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟೇ ಇದೆ. ಪೋಷಕರ ಒತ್ತಾಸೆಯೋ ಅಥವಾ ವಿದ್ಯಾರ್ಥಿಗಳ ನಿರಾಸಕ್ತಿಯೋ ಅನ್ನುವಂತೆ ಆನ್‌ಲೈನ್‌ ಕ್ಲಾಸ್‌ಗೆ ಒಗ್ಗಿಕೊಂಡಿರುವ ವಿದ್ಯಾರ್ಥಿಗಳು ಮಾತ್ರ ಆಫ್ಲೈನ್‌ ಕ್ಲಾಸ್‌ಗೆ ಹಾಜರಾಗಲು ಮನಸ್ಸು ಮಾಡುತ್ತಿಲ್ಲ. ಕವಿವಿ ಆವರಣ ಮತ್ತು ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಶೇ.20ಕ್ಕಿಂತಲೂ ಹೆಚ್ಚಿಗೆ ಆಗಿಲ್ಲ. ಇನ್ನು ಕರ್ನಾಟಕ ಕಾನೂನು ವಿವಿ ವ್ಯಾಪ್ತಿಯಲ್ಲೂ ವಿದ್ಯಾರ್ಥಿಗಳ ಪ್ರಮಾಣ ಶೇ.20 ರಷ್ಟು ಹೆಚ್ಚಳವಾಗಿಲ್ಲ. ಕೃಷಿ ವಿಶ್ವವಿದ್ಯಾಲಯದಲ್ಲಿ ಕೇವಲ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಪಿಎಚ್‌.ಡಿ. ಕೊನೆ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಪಾಲಕರಲ್ಲಿ ಇನ್ನೂ ಸೋಂಕಿನ ಭಯ

ಕೊಪ್ಪಳ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿನತ್ತ ಚಿತ್ತಹರಿಸಿ ಕ್ರಮೇಣ ಆಗಮಿಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳ ಪಾಲಕರಲ್ಲಿ ಇನ್ನೂ ಸೋಂಕಿನ ಭಯವಿದ್ದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಾಲೇಜಿಗೆಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮಂಡ್ಯ ದಲ್ಲಿ ಮೊದಲ ದಿನ705 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು. ಇದೀಗಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಸೋಮವಾರ 1830 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 29 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇನ್ನೂ ಆಯಾ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗೆ ವಿದ್ಯಾರ್ಥಿಗಳು ಒಳಗಾಗುತ್ತಿದ್ದಾರೆ. ಪಾಸಿಟಿವ್‌ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆ

ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಸರ್ಕಾರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು, ಸಿದ್ಧಗಂಗಾ ಪದವಿ ಕಾಲೇಜು, ಸಿದ್ಧಗಂಗಾ ಡಿಪ್ಲೋಮಾ ಕಾಲೇಜು ಸೇರಿದಂತೆ ನಗರದ ವಿವಿಧ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಕಾಲೇಜು ಗಳಲ್ಲಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟು ಪಾಲನೆಯೊಂದಿಗೆ ತರಗತಿಗಳನ್ನು ಆರಂಭಿಸಿವೆ. ರಾಮನಗರ ಜಿಲ್ಲೆಯಲ್ಲಿ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಪ್ರಗತಿ ಕಂಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳುಕೊರೊನಾ ಭೀತಿಯಿಂದ ತರಗತಿಗಳಿಗೆ ಹಾಜರಾಗಲು ಹಿಂದೆ ಮುಂದೆ ನೋಡುತ್ತಿದ್ದಾ

ಹಾಸನದಲ್ಲಿ ಆಶಾದಾಯಕ

ಹಾಸನದಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಆಶಾದಾಯಕವಾಗಿದೆ. ಆನ್‌ಲೈನ್‌, ಆಫ್ಲೈನ್‌ ತರಗತಿಗಳೆರಡಕ್ಕೂ ಅವಕಾಶ ನೀಡಲಾಗಿದೆ. ಆನ್‌ಲೈನ್‌ ಗೆ ಸಿಗುತ್ತಿರುವಷ್ಟು ಪ್ರತಿಕ್ರಿಯೆ ಆಫ್ಲೈನ್‌ಗೆ ಸಿಗುತ್ತಿಲ್ಲ. ಇನ್ನೂ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕೊರೊನಾ ಭಯಕಾಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿನತ್ತ ಮುಖ ಮಾಡುತ್ತಿಲ್ಲ. ಕೋಲಾರ ಜಿಲ್ಲೆಯಲ್ಲಿ ಸಾಮಾನ್ಯ ಸ್ಥಿತಿ ಮುಂದುವರಿದಿದ್ದು, ಈ ಪೈಕಿ ಕೋಲಾರದಿಂದ ಒಬ್ಬ, ಮುಳಬಾಗಿಲಿನ ಮೂವರು ವಿದ್ಯಾರ್ಥಿಗಳಿಗೆ ಪಾಸಿಟಿವ್‌ ಬಂದಿದೆಯೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next