Advertisement

Udayavani: ”ನಮ್ಮ ಪರಿಸರ ನಮ್ಮ ಭವಿಷ್ಯ” ಮೆಚ್ಚುಗೆ ಗಳಿಸಿದ ಲೇಖನಗಳು

12:19 AM Sep 22, 2023 | Team Udayavani |

ವನಮಹೋತ್ಸವ ಸಪ್ತಾಹದ ಹಿನ್ನೆಲೆಯಲ್ಲಿ “ಉದಯವಾಣಿ’ಯು “ನಮ್ಮ ಪರಿಸರ, ನಮ್ಮ ಭವಿಷ್ಯ’ ವಿಷಯದ ಕುರಿತಂತೆ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಲೇಖನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ‌ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ಪರಿಸರ ಸಂರಕ್ಷಣೆಗೆ ಸಾಮೂಹಿಕ ಪ್ರಯತ್ನ, ಸಹಯೋಗ ಅಗತ್ಯ(ಸ್ನೇಹಾ ನಾಯಕ್‌ ಪಾಂಗಾಳ್‌, 8ನೇ ತರಗತಿ, ಮಿಲಾಗ್ರಿಸ್‌ ಅಂಗ್ಲ ಮಾಧ್ಯಮ ಹೈಸ್ಕೂಲ್‌ ಕಲ್ಯಾಣಪುರ) 
ಪರಿಸರವೇ ನಮ್ಮ ಅಸ್ತಿತ್ವದ ಅಡಿಪಾಯ. ಇದು ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ವಾಸಿಸುವ ಭೂಮಿ ಮತ್ತು ಭೂಮಿಯ ಮೇಲಿನ ಎಲ್ಲ ಜೀವಿಗಳನ್ನು ಬೆಂಬಲಿಸುವ ಪರಿಸರ ವ್ಯವಸ್ಥೆಗಳ ಸಂಕೀರ್ಣಗಳನ್ನು ಒಳಗೊಳ್ಳುತ್ತದೆ. ಈ ಗ್ರಹದ ಮೇಲ್ವಿಚಾರಕರಾಗಿ ನಮ್ಮ ಕಾರ್ಯಗಳು ಪರಿಸರದ ಮೇಲೆ ಬೀರುವ ಆಳವಾದ ಪ್ರಭಾವವನ್ನು ಗುರುತಿಸುವುದು ಮತ್ತು ಅಭಿವೃದ್ಧಿ ಹೊಂದುತ್ತಿರುವ ಭವಿಷ್ಯಕ್ಕಾಗಿ ಶ್ರಮಿಸುವುದು ನಮ್ಮ ಜವಾಬ್ದಾರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಪರಿಸರವು ಅದರ ಸಮಗ್ರತೆ ಮತ್ತು ನಮ್ಮ ಭವಿಷ್ಯವನ್ನು ಬೆದರಿಸುವ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆ, ಅರಣ್ಯ ನಾಶ, ಮಾಲಿನ್ಯ, ಜೀವವೈವಿಧ್ಯದ ನಷ್ಟ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸವಕಳಿಯು ನಾವು ಪರಿಹರಿಸಬೇಕಾದ ಕೆಲವು ತುರ್ತು ಸಮಸ್ಯೆಗಳು. ನಮ್ಮ ಭವಿಷ್ಯ ಭದ್ರವಾಗಿರಲು ನಾವು ಪರಿಸರ ಸಂರಕ್ಷಣಗೆ ಆದ್ಯತೆ ನೀಡಬೇಕು. ಅದರಲ್ಲಿ ಮುಖ್ಯವಾಗಿ ಮಾಲಿನ್ಯಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು, ಅಳಿವಿನಂಚಿನಲ್ಲಿ ಇರುವ ಜೀವಿಗಳನ್ನು ರಕ್ಷಿಸುವುದು, ಗಿಡ-ಮರಗಳನ್ನು ಬೆಳೆಸಿ ನಮ್ಮ ವಾತಾವರಣವನ್ನು ಶುದ್ಧಗೊಳಿಸಬೇಕು.

ಅಭಿವೃದ್ಧಿಯನ್ನು ಸಾಧಿಸುವುದು ಪರಿಸರ ಸಂರಕ್ಷಣೆಯೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಸಮತೋಲನಗೊಳಿಸುವ ಕೀಲಿಯಾಗಿದೆ. ಸಮರ್ಥನೀಯ ಅಭ್ಯಾಸಗಳು, ಜವಾಬ್ದಾರಿಯುತ ಸಂಪನ್ಮೂಲ ನಿರ್ವಹಣೆಯನ್ನು ಉತ್ತೇಜಿಸುತ್ತದೆ, ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡುತ್ತದೆ. ಸಮಾಜದ ಎಲ್ಲ ಅಂಶಗಳಲ್ಲಿ ಸ್ಥಿರತೆಯನ್ನು ಸಂಯೋಜಿಸುವ ಮೂಲಕ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಯೋಗಕ್ಷೇಮದೊಂದಿಗೆ ಆರ್ಥಿಕ ಸಮೃದ್ಧಿಯನ್ನು ಸಮನ್ವಯಗೊಳಿಸುವ ಭವಿಷ್ಯವನ್ನು ನಾವು ರೂಪಿಸಿಕೊಳ್ಳಬಹುದು. ಪರಿಸರ ಸವಾಲುಗಳನ್ನು ಎದುರಿಸಲು ಸಾಮೂಹಿಕ ಕ್ರಿಯೆ ಮತ್ತು ಸಹಯೋಗದ ಅಗತ್ಯವಿದೆ. ಪರಿಣಾಮಕಾರಿ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಗತಗೊಳಿಸಲು ಸರಕಾರಗಳು, ಸಂಸ್ಥೆಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಒಟ್ಟಾಗಿ ಕೆಲಸ ಮಾಡಬೇಕು.
ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಸಂಪನ್ಮೂಲಗಳ ಸಂರಕ್ಷಣೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಪರಿಸರದ ಭವಿಷ್ಯ ರೂಪಿಸುವಲ್ಲಿ ತನ್ನ ಕೊಡುಗೆಯನ್ನು ನೀಡಬೇಕು. ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರಿಗೆ ಶಿಕ್ಷಣ ನೀಡುವುದು ಅರ್ಥಪೂರ್ಣ ಬದಲಾವಣೆಯನ್ನು ತರಲು ನಿರ್ಣಾಯಕವಾಗಿದೆ.

ನಮ್ಮ ಪರಿಸರ ನಮ್ಮ ಭವಿಷ್ಯದ ಕೀಲಿಕೈಯನ್ನು ಹೊಂದಿದೆ. ನಾವು ಅದನ್ನು ಅತ್ಯಂತ ಕಾಳಜಿ ಮತ್ತು ಗೌರವದಿಂದ ಕಾಪಾಡಬೇಕಿದೆ. ಆ ಮೂಲಕ ನಾವು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಖಾತರಿಗೊಳಿಸಬಹುದು.

Advertisement

ಪರಿಸರದ ಉಳಿವಿಗಾಗಿ ಎಲ್ಲರೂ ಕೈಜೋಡಿಸೋಣ(ಕೀರ್ತನ್‌ ಕುಮಾರ್‌ ಶೆಟ್ಟಿ, 10ನೇ ತರಗತಿ
ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಹಿರಿಯಡಕ.)

ಪರಿಸರವನ್ನು ಪ್ರಕೃತಿ ಮಾತೆ ಎಂದು ಕರೆಯುತ್ತೇವೆ. ಮಾನವನು ತನಗೆ ಬೇಕಾದ ಎಲ್ಲವನ್ನು ಪರಿಸರದಿಂದಲೇ ಪಡೆಯುತ್ತಾನೆ. ಆದರೆ ಮಹಾಸ್ವಾರ್ಥಿಯಾದ ಮಾನವನಿಂದ ಇಂದು ಪರಿಸರ ಸಂಪೂರ್ಣ ಮಲಿನವಾಗಿದೆ. ಈ ಮೂಲಕ ನಾವು ನಮ್ಮ ಅಸ್ತಿತ್ವಕ್ಕೇ ಕುತ್ತು ತಂದುಕೊಳ್ಳುತ್ತಿದ್ದೇವೆ. ಅಷ್ಟು ಮಾತ್ರವಲ್ಲದೆ ಭೂಮಿಯ ಮೇಲಣ ಪ್ರತಿಯೊಂದೂ ಜೀವಜಂತುವಿನ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದ್ದೇವೆ. ಇನ್ನಾದರೂ ನಮ್ಮೆಲ್ಲರಲ್ಲಿ ಪರಿಸರ ಕಾಳಜಿ ಮೂಡಿ ನಮ್ಮ ಕೈಲಾದಷ್ಟು ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಿದೆ. ಇದಕ್ಕಾಗಿ ನಾವು ಬಲುದೊಡ್ಡ ಸಾಹಸವನ್ನೇನು ಮಾಡಬೇಕಿಲ್ಲ ವಾಗಿದ್ದು ನಮ್ಮ ದಿನಚರಿಯಲ್ಲಿ ಕೆಲವೊಂದು ಪರಿಸರಸ್ನೇಹಿ ಕ್ರಮಗಳನ್ನು ಪಾಲಿಸಿದರೆ ಸಾಕು.

ಪ್ರಕೃತಿಗೂ ಮಾನವನಿಗೂ ಗಾಢವಾದ ಸಂಬಂಧವಿದೆ. ಆದರೆ ಆಧುನಿಕತೆ, ನಗರೀಕರಣ, ಕೈಗಾರೀಕರಣ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಯೋಜನೆಗಳ ಭರದಲ್ಲಿ ಪರಿಸರದ ಮೇಲೆ ನಾವು ನಿರಂತರವಾಗಿ ದಾಳಿ ನಡೆಸುತ್ತಲೇ ಬಂದಿದ್ದೇವೆ. ಇದರ ಪರಿಣಾಮವಾಗಿ ಮಾಲಿನ್ಯ ಹೆಚ್ಚಾಗುತ್ತಿದೆ ಮತ್ತು ಪರಿಸರ ನಾಶವಾಗುತ್ತಿದೆ. ಸಹಜವಾಗಿಯೇ ಹವಾಮಾನ ವೈಪರೀತ್ಯಗಳೂ ಸಂಭವಿಸುತ್ತಿವೆ.

ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬನೂ ತೊಡಗಿಕೊಳ್ಳಬೇಕಿದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಎಲ್ಲ ಕಾರ್ಯಗಳಿಗೂ ಸಾಧ್ಯವಾದಷ್ಟು ಕಡಿವಾಣ ಹಾಕ ಬೇಕಿದೆ. ಈ ಪರಿಸರ ಸಕಲ ಜೀವರಾಶಿಗಳಿಗೆ ಸೇರಿದ್ದಾಗಿದೆ ಎಂಬುದನ್ನು ನಾವು ಮೊದಲು ಅರ್ಥೈಸಿಕೊಂಡು, ನಿಸರ್ಗದೊಂದಿಗೆ ಸಹಬಾಳ್ವೆ ನಡೆಸಿದಾಗ ಪರಿಸರದ ಉಳಿವು ಸಾಧ್ಯ.

ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕು. ಪರಿಸರ ಸಂರಕ್ಷಣೆಯ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಯೋಜನೆಗಳನ್ನು ಹಮ್ಮಿ ಕೊಳ್ಳಬೇಕು. ಕೃಷಿಗೆ ರಾಸಾಯನಿಕ ಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರ ಬಳಸಬೇಕು. ಸಾಲುಮರದ ತಿಮ್ಮಕ್ಕ ಅವರನ್ನು ಮಾದರಿಯಾಗಿಸಿಕೊಂಡು ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸುವುದರಿಂದ ನಮ್ಮ ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ. ಜಲಮಾಲಿನ್ಯ, ವಾಯುಮಾಲಿನ್ಯ, ಮಣ್ಣು ಮಾಲಿನ್ಯಗೊಳ್ಳು ವಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ನೀರನ್ನು ಪೋಲು ಮಾಡದೆ ಮಿತವಾಗಿ ಬಳಸುವುದನ್ನು ರೂಢಿ ಮಾಡಿಕೊಳ್ಳಬೇಕು. ಮಕ್ಕಳಿಗೆ ಎಳವೆಯಲ್ಲಿಯೇ ಪರಿಸರ ಸಂರಕ್ಷಣೆಯ ಬಗೆಗೆ ಅರಿವು ಮೂಡಿಸಿದಲ್ಲಿ ಭವಿಷ್ಯ ಹಸುರಾದ ಪರಿಸರದೊಂದಿಗೆ ಕೂಡಿರುತ್ತದೆ.
“ಗಿಡ ನಕ್ಕರೆ ಜನ ನಗುವುದು, ಗಿಡ ಅಳಿದರೆ ಜಗ ಅಳಿಯುವುದು’ ಎಂಬ ಮಾತನ್ನು ಸದಾ ನೆನಪಿನಲ್ಲಿರಿಸಿಕೊಂಡು ಪರಿಸರದ ರಕ್ಷಣೆಗಾಗಿ ಪ್ರತಿನಿತ್ಯ ನಮ್ಮ ಕೈಲಾದಷ್ಟು ಪ್ರಯತ್ನ ಪಡೋಣ. ಅದಕ್ಕಾಗಿ ನಾವೆಲ್ಲರೂ ಸಾಲು ಮರದ ತಿಮ್ಮಕ್ಕರನ್ನು ಮಾದರಿಯಾಗಿ ಇಟ್ಟುಕೊಂಡು ಪರಿಸರ ಸಂರಕ್ಷಣೆಗೆ ಕೈ ಜೋಡಿಸೋಣ. “ಪರಿಸರವನ್ನು ಉಳಿಸಿ ಒಳ್ಳೆಯ ಭವಿಷ್ಯವನ್ನು ರೂಪಿಸೋಣ.

ವೈಯಕ್ತಿಕ ಜವಾಬ್ದಾರಿಗಳನ್ನು ನಿರ್ವಹಿಸೋಣ(ಸಂಜನಾ ಆರ್‌. ಎಚ್‌.,ಪ್ರಥಮ ಪಿಯುಸಿ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ)
ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ನಾವು ಬದುಕಲು ಸಾಧ್ಯವಿಲ್ಲ. ಎರಡನೇ ಯದಾಗಿ ನಮ್ಮ ಗ್ರಹದ ಆರೋಗ್ಯಕ್ಕೆ ಪರಿಸರ ಜಾಗೃತಿ ಮುಖ್ಯವಾಗಿದೆ. ಹವಾಮಾನ ಬದಲಾವಣೆ, ಮಾಲಿನ್ಯ ಮತ್ತು ಜೀವವೈವಿಧ್ಯದ ನಷ್ಟದಂತಹ ಅನೇಕ ಪರಿಸರ ಸಮಸ್ಯೆಗಳನ್ನು ಭೂಮಿಯು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ನಿಸರ್ಗದ ಸಹಜ ಪ್ರಕ್ರಿಯೆಯಲ್ಲಿ ಮಾನವನ ಮಿತಿಮೀರಿದ ಹಸ್ತಕ್ಷೇಪವೇ ಕಾರಣ.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗೆ ಯೆಂದರೆ ಸ್ವತ್ಛ ಪರಿಸರ. ಮಾನವನಿಗೂ ಪ್ರಕೃತಿಗೂ ನಡುವೆ ಇರುವ ಅನೂಹ್ಯ ಸಂಬಂಧ ವನ್ನು ನಾವು ಹಾಗೆಯೇ ಉಳಿಸಿಕೊಳ್ಳಬೇಕಾಗಿದೆ. ಅಂದರೆ ತ್ಯಾಜ್ಯ ವಸ್ತುಗಳ ನಿರ್ವಹಣೆ, ಗಾಳಿ, ನೀರು, ಬೆಳಕನ್ನು ಶುದ್ಧವಾಗಿ ಇರಿಸಿಕೊಳ್ಳಬೇಕು.

“”ಋಣವ ತೀರಿಸಬೇಕು ಋಣವ ತೀರಿಸಬೇಕು |
ಋಣವ ತೀರಿಸುತ ಜಗದಾದಿ ತಣ್ತೀವನು
ಜನದಿ ಕಾಣುತ್ತಿದರೊಳ್‌ ಒಂದುಗೂಡಲು ಬೇಕು |
ಮನೆಯೊಳಗೆ ಮಠ ನಿನಗೆ ಮಂಕುತಿಮ್ಮ ||
ಎಂಬ ಮಾತಿನ ಸಾರಾಂಶವನ್ನು ನಾವು ಅರ್ಥ ಮಾಡಿಕೊಂಡು ಬದುಕಬೇಕು.

ಪರಿಸರ ಇಂದು ತನ್ನ ಮೂಲ ಸ್ವಾಭಾವಿಕ ನೈಜ ಸ್ಥಿತಿಯನ್ನು ಉಳಿಸಿಕೊಂಡಿಲ್ಲ. ಆಧುನಿಕತೆಯಿಂದಾಗಿ ಕೆಡುತ್ತಿದೆ. ಅಭಿವೃದ್ಧಿ ರಾಷ್ಟ್ರಗಳ ಸಂಸ್ಕೃತಿಯನ್ನು ನಾವು ವಿವೇಚನೆ ಇಲ್ಲದೆ ಆಮದು ಮಾಡಿಕೊಳ್ಳುತ್ತಿರುವುದರಿಂದಲೇ ಇಂದು ಪರಿಸರ ಅಧೋಗತಿಯ ಸ್ಥಿತಿಗೆ ತಲುಪುವಂತಾಗಿದೆ. ಇದರ ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆಗೆ ಸರಕಾರದ ಜತೆಗೆ ಸಾರ್ವಜನಿಕರು ಕೈ ಜೋಡಿಸಬೇಕಿದೆ.
ಹೀಗೆ ಪ್ರತಿಯೊಬ್ಬರು ವೈಯಕ್ತಿಕ ಜವಾಬ್ದಾರಿಗಳನ್ನು ಕೂಡ ನಿರ್ವಹಿಸಬೇಕಿದೆ. ಅರಣ್ಯ ಸಂರಕ್ಷಣೆ, ಸೌರಶಕ್ತಿ ಬಳಕೆ, ಮಳೆ ನೀರು ಕೊಯ್ಲು ಅಳವಡಿಕೆ, ಹಸುರು ಮನೆ ನಿರ್ಮಾಣದಂಥ ಫ‌ಲಪ್ರದಾಯಕ ಯೋಜನೆಗಳನ್ನು ವೈಯಕ್ತಿಕ ಜಾರಿಗೊಳಿಸಬೇಕಿದೆ.

ಭೂಮಿಯು ನಮ್ಮ ಮನೆಯಂತಿದೆ. ಅದನ್ನು ಸ್ವತ್ಛವಾಗಿ ಮತ್ತು ಹಸುರಾಗಿಡಲು ನಾವು ಪ್ರಯತ್ನಗಳನ್ನು ಮಾಡೋಣ. ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಿದರೆ ನಮ್ಮ ನಾಡು ಮತ್ತು ಜಗತ್ತನ್ನು ಉಳಿಸಬಹುದು. ಪರಿಸರವು ನಮ್ಮ ನಿಮ್ಮೆಲ್ಲರ ಆಸ್ತಿ. ನಾವು ವಾಸಿಸುವ ಸ್ಥಳ ಎಂದರು ತಪ್ಪಾಗಲಾರದು. ವಾಸ್ತವವಾಗಿ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮಾನವ ಮತ್ತು ಪರಿಸರದ ನಡುವೆ ಸಮರಸದಿಂದ ಕೂಡಿದ ಸಂಬಂಧ ಕಲ್ಪಿಸಬೇಕಿದೆ.
ನಮ್ಮ ಜೀವನಕ್ಕೆ ಬೇಕಾದ ಮೂಲ ಸೌಲಭ್ಯಗಳಲ್ಲಿ ಪರಿಸರ ಕೂಡ ಒಂದು. ಪರಿಸರವನ್ನು ಸಂರಕ್ಷಣೆ ಕುರಿತಂತೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.

ನೈಸರ್ಗಿಕ ಸೌಂದರ್ಯದ ಮೂಲ ಪರಿಸರ (ನಿನಾದ್‌ ದೇವಾಡಿಗ, ಸರಕಾರಿ ಪದವಿಪುರ್ವ ಕಾಲೇಜು, ತೆಕ್ಕಟ್ಟೆ)
ಶಾಂತಿಯುತ ಮತ್ತು ಆರೋಗ್ಯಕರ ಜೀವನ ನಡೆಸಲು ಸ್ವತ್ಛ ಪರಿಸರ ಅತೀ ಅಗತ್ಯ. ಪರಿಸರದಲ್ಲಿ ಸಸ್ಯಗಳು, ಗಾಳಿ, ನೀರು, ಪ್ರಾಣಿಗಳು, ಮನುಷ್ಯರು ಮತ್ತು ಇತರ ಜೀವಿಗಳು ಅಸ್ತಿತ್ವದಲ್ಲಿವೆ. ವಾತಾವರಣದ ಪ್ರಕ್ರಿಯೆ, ಜಿಯೋಮಾರ್ಫಿಕ್‌ ಪ್ರಕ್ರಿಯೆ, ಜಲವಿಜ್ಞಾನ ಪ್ರಕ್ರಿಯೆ ಇವು ಪರಿಸರದ ಮೇಲೆ ಪರಿಣಾಮ ಬೀರುವ ಅಂಶಗಳು.
ಈ ಭೂಮಿಯಲ್ಲಿ ವಾಸಿಸುವ ಎಲ್ಲ ಜೀವಿ ಗಳು ಪರಿಸರದ ಅಡಿಯಲ್ಲಿ ಬರುತ್ತವೆ. ಪರಿಸರವು ಗಾಳಿ, ನೀರು, ಸೂರ್ಯನ ಬೆಳಕು, ಸಸ್ಯಗಳು, ಪ್ರಾಣಿಗಳು ಇತ್ಯಾದಿಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಭೂಮಿಯನ್ನು ವಿಶ್ವದಲ್ಲಿ ಜೀವವನ್ನು ಬೆಂಬಲಿಸುವ ಏಕೈಕ ಗ್ರಹವೆಂದು ಪರಿಗಣಿಸಲಾಗಿದೆ.

ಪ್ರಾಮುಖ್ಯ

ಭೂಮಿಯಲ್ಲಿರುವ ಜೀವಿಗಳನ್ನು ಆರೋಗ್ಯವಾಗಿಡುವಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಾನವನ ಎಲ್ಲ ಅಗತ್ಯಗಳನ್ನು ಪೂರೈಸುತ್ತದೆ. ಪರಿಸರವು ನೈಸರ್ಗಿಕ ಸೌಂದರ್ಯದ ಮೂಲವಾಗಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆವಶ್ಯಕವಾಗಿದೆ.

ಪ್ರಯೋಜನಗಳು

ಪರಿಸರವು ನಮಗೆ ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ. ಮರಗಳು ಗಾಳಿಯನ್ನು ಶೋಧಿಸುತ್ತವೆ ಮತ್ತು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತವೆ. ಸಸ್ಯಗಳು ನೀರನ್ನು ಶುದ್ಧೀಕರಿಸುತ್ತವೆ, ಪ್ರವಾಹದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.
ಪರಿಸರ ಅವನತಿಗೆ ಕಾರಣ: ಮಾನವನ ಚಟುವಟಿಕೆಗಳಿಂದಾಗಿ ಮಾಲಿನ್ಯ, ದೋಷಯುಕ್ತ ಪರಿಸರ ನೀತಿಗಳು, ರಾಸಾಯನಿಕಗಳು, ಹಸುರುಮನೆ ಅನಿಲಗಳು, ಜಾಗತಿಕ ತಾಪಮಾನ ಏರಿಕೆ, ಓಝೊàನ್‌ ಸವಕಳಿ ಇತ್ಯಾದಿ ಸಮಸ್ಯೆಗಳು ಸೃಷ್ಟಿಯಾಗಿ ಪರಿಸರ ಹಾನಿಗೀಡಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯು ಭವಿಷ್ಯದಲ್ಲಿ ಇವು ಬರಿದಾಗಲಿದೆ.

ಪರಿಸರ ರಕ್ಷಣೆ

ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು. ಮಾಲಿನ್ಯ ನಿಯಂತ್ರಣಕ್ಕೆ ಜನರು ಕಠಿನ ಕಾನೂನುಗಳನ್ನು ಅನುಸರಿಸಬೇಕು. ಪ್ಲಾಸ್ಟಿಕ್‌ನಂತಹ ಪರಿಸರ ಮಾರಕ ವಸ್ತುಗಳ ಬದಲಾಗಿ ಮರುಬಳಕೆಯ ವಸ್ತುಗಳನ್ನು ಬಳಸಬೇಕು. ನೀರನ್ನು ಪೋಲು ಮಾಡುವುದನ್ನು ಕಡಿಮೆಗೊಳಿಸಬೇಕು, ಅರಣ್ಯನಾಶದ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನೀತಿ ನಮ್ಮದಾಗಬೇಕು, ಇಂಗಾಲದ ಡೈ ಆಕ್ಸೆ„ಡ್‌ ಮತ್ತು ಇತರ ಹಸುರುಮನೆ ಅನಿಲಗಳ ಹೊರಸೂಸುವಿಕೆಯನ್ನು ನಿಯಂತ್ರಣ, ಶಕ್ತಿಯ ಸಂರಕ್ಷಣೆ ಮತ್ತು ಪರಿಸರಕ್ಕೆ ಹಾನಿಯಾಗದ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಆದ್ಯತೆ ನೀಡಬೇಕು.

ಪರಿಸರ ಸಂರಕ್ಷಣೆಗೆ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಹಾಗಾಗಿ ಪರಿಸರ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮುಂದಿನ ಪೀಳಿಗೆಯು ಪ್ರಕೃತಿಯ ಕೊಡುಗೆಗಳನ್ನು ಆನಂದಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next