Advertisement

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

08:49 PM Jan 22, 2022 | Team Udayavani |

ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸಕ್ಕೆ ಭದ್ರತೆಗೆ ನಿಯೋಜನೆಗೊಂಡು ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳು ಆಟೋ ಚಾಲಕನಿಂದ ಲಂಚ ಪಡೆದು ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಮತ್ತೂಂದೆಡೆ ಗಾಂಜಾ ಪ್ರಕರಣದ ಪ್ರಮುಖ ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Advertisement

ಕೋರಮಂಗಲ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್‌ ಮತ್ತು ಸಂತೋಷ್‌ ಬಂಧಿತರು. ಆರೋಪಿತ ಕಾನ್‌ಸ್ಟೇಬಲ್‌ಗಳು ಕೆಲ ದಿನಗಳ ಹಿಂದೆ ಗಾಂಜಾ ತುಂಬಿದ್ದ ಸಿಗರೇಟ್‌ ಸೇವಿಸುತ್ತಿದ್ದ ಆಟೋ ಚಾಲಕನ ಇಲಿಯಾಸ್‌ನನ್ನು ಬೆದರಿಸಿ ಒಂದು ಲಕ್ಷ ರೂ.ಗೆ ಬೇಡಿಕೆಯಿಟ್ಟು 5 ಸಾವಿರ ರೂ. ಲಂಚ ಪಡೆದ್ದರು. ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಿಸಿಬಿಗೆ ವರ್ಗಾವಣೆಯಾದ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಸದ್ಯ ಅಮಾನತುಗೊಂಡಿರುವ ಸಂತೋಷ್‌ ಹಾಗೂ ಶಿವಕುಮಾರ್‌ ಈ ಮೊದಲು ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ 2021 ಅ.25ರಂದು ಆಡುಗೋಡಿ ನಿವಾಸಿ ಆಟೋ ಚಾಲಕ ಇಲಿಯಾಸ್‌ ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಸ್ನೇಹಿತ ಸೈಯದ್‌ ಜತೆ ಗಾಂಜಾ ಸೇವನೆ ಮಾಡುತ್ತಿದ್ದ. ಆ ವೇಳೆ ಕರ್ತವ್ಯನಿರತ ಶಿವಕುಮಾರ್‌ ಮತ್ತು ಸಂತೋಷ್‌ ದಾಳಿ ನಡೆಸಿ ಇಬ್ಬರನ್ನು ಹಿಡಿದು, ಗಾಂಜಾ ತುಂಬಿದ್ದ ಸಿಗರೇಟ್‌ ವಶಕ್ಕೆ ಪಡೆದಿದ್ದರು. ಅಷ್ಟೇ ಅಲ್ಲದೇ, ಒಂದು ಲಕ್ಷ ರೂ. ಕೊಟ್ಟರೆ ಪ್ರಕರಣ ದಾಖಲಿಸುವುದಿಲ್ಲ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಹೆದರಿದ ಇಲಿಯಾಸ್‌ ಐದು ಸಾವಿರ ರೂ. ಕೊಟ್ಟು ಪರಾರಿಯಾಗಿದ್ದ.

ಇದನ್ನೂ ಓದಿ : ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

ಆದರೆ, ಇದೀಗ ಇಬ್ಬರು ಕಾನ್‌ಸ್ಟೇಬಲ್‌ಗಳ ವಿರುದ್ಧ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸ್ನೇಹಿತರ ಸಹಾಯ ಪಡೆದು ದೂರು ನೀಡುತ್ತಿದ್ದೇನೆ. ಈ ಮೊದಲು ದೂರು ನೀಡಬೇಕಿತ್ತು. ಆದರೆ, ಕಾನ್‌ಸ್ಟೇಬಲ್‌ಗಳು ಇಲ್ಲದಿರುವ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಾರೆ ಎಂಬ ಭಯದಲ್ಲಿ ದೂರು ನೀಡಿರಲಿಲ್ಲ. ಇದೀಗ ಅವರೇ ಡ್ರಗ್ಸ್‌ ಪ್ರಕರಣದ ಆರೋಪಿಗಳಾಗಿರುವುದರಿಂದ ದೂರು ನೀಡಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸರು ಹೇಳಿದರು.

Advertisement

ಇಬ್ಬರು ಪೆಡ್ಲರ್‌ಗಳು ವಶಕ್ಕೆ

ಮತ್ತೂಂದೆಡೆ ಡ್ರಗ್ಸ್‌ ಪ್ರರಕಣದ ಪ್ರಮುಖ ಆರೋಪಿಗಳಾದ ಅಖೀಲ್‌ ರಾಜ್‌ ಮತ್ತು ಅಮ್ಜದ್‌ ಖಾನ್‌ನನ್ನು ಸಿಸಿಬಿ ಪೊಲೀಸರು ಮತ್ತೂಮ್ಮೆ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಎಷ್ಟು ದಿನಗಳಿಂದ ಕಾನ್‌ಸ್ಟೇಬಲ್‌ಗಳ ಜತೆ ವ್ಯವಹಾರ ನಡೆಸುತ್ತಿದ್ದಿರಾ? ಗಾಂಜಾ ದಂಧೆಯ ರೂವಾರಿಗಳು ಯಾರು? ಇನ್ನು ಯಾರೆಲ್ಲ ಸಂಪರ್ಕದಲ್ಲಿದ್ದಾರೆ? ಎಂಬೆಲ್ಲ ವಿಚಾರಣೆ ನಡೆಯುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇನ್ಸ್‌ಪೆಕ್ಟರ್‌ಗೆ ಗಾಂಜಾ ಪ್ರಕರಣ ಮೊದಲೇ ತಿಳಿದಿತ್ತಾ?

ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿ ಅಮಾನತುಗೊಂಡಿರುವ ಕಾನ್‌ಸ್ಟೇಬಲ್‌ಗಳು ಗಾಂಜಾ ದಂಧೆಕೋರರ ಜತೆ ಭಾಗಿಯಾಗಿರುವ ಬಗ್ಗೆ ಕೋರಮಂಗಲ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ಗೆ ಈ ಮೊದಲೇ ತಿಳಿದಿತ್ತು ಎನ್ನಲಾಗಿದೆ. ಇಬ್ಬರು ಪೊಲೀಸ್‌ ಇಲಾಖೆಯಲ್ಲಿರುವುದರಿಂದ ಪ್ರಕರಣ ದಾಖಲಿಸದೇ ನೇರವಾಗಿ ಆರೋಪಿಗಳನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದರು ಎನ್ನಲಾಗಿದೆ. ಆದರೆ, ಸಿಸಿಬಿ ಪೊಲೀಸರು ಇಲಾಖೆಗೆ ಕಪ್ಪು ಚುಕ್ಕೆ ಬರುತ್ತದೆ ಎಂದು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಯಾವುದೇ ಕ್ರಮಕೈಗೊಳ್ಳದೆ ಕಳುಹಿಸಿದ್ದರು ಎಂದು ಹೇಳಲಾಗಿದೆ. ನಂತರ ಕೋರಮಂಗಲ ಠಾಣೆಗೆ ವರ್ಗಾವಣೆಗೊಂಡು ದಂಧೆಕೋರರ ಜತೆ ವ್ಯವಹಾರ ಮುಂದುವರಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next