Advertisement

ಕಡಲಿಗಿಳಿಯುವ ನಾಡದೋಣಿಗಳಿಗೆ ಇನ್ನೆರಡು ತಿಂಗಳು ಸುಗ್ಗಿ!

02:59 PM Jun 02, 2023 | Team Udayavani |

ಮಹಾನಗರ: ಮುಂಗಾರು ಆಗಮನಕ್ಕೆ ಕಾಲ ಕೂಡಿಬರುತ್ತಿದ್ದಂತೆ ಯಾಂತ್ರೀಕೃತ ಮೀನುಗಾರಿಕೆಯ ಋತು ಪೂರ್ಣಗೊಳಿಸಿದ ಮೀನುಗಾರರು ದಡ ಸೇರಿದ್ದಾರೆ. ಇನ್ನೆರಡು ತಿಂಗಳು ನಾಡದೋಣಿಯ ಕಾರುಬಾರು!

Advertisement

ಬಹು ಸವಾಲಿನ ಮಧ್ಯೆ ಮೀನುಗಾರಿಕೆ ಪೂರ್ಣಗೊಳಿಸಿ ದಡಕ್ಕೆ ಬಂದ ಮೀನುಗಾರರಿಗೆ 2 ತಿಂಗಳು ರಜೆ. ಈ ವೇಳೆ ಮೀನುಗಾರರು ಬೋಟ್‌ ರಿಪೇರಿ, ಬಲೆ ನೇಯುವುದು ಮತ್ತಿತರ ಕರ್ತವ್ಯದಲ್ಲಿ ತೊಡಗಿಕೊಳ್ಳುತ್ತಾರೆ.

ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಸಂದರ್ಭ ನಾಡದೋಣಿಗಳು ಮೀನು ಬೇಟೆಗೆ ಇಳಿಯುತ್ತವೆ. ದೋಣಿ-ಬಲೆಯೊಂದಿಗೆ ಕಡಲಿಗೆ ಇಳಿಯುವ ಇವರು 10 ಅಶ್ವಶಕ್ತಿಯ ಎಂಜಿನ್‌ ಅಳವಡಿಸಿದ ದೋಣಿಗಳಲ್ಲಿ ಸಮುದ್ರದ ಬದಿ, ನದಿಗಳಲ್ಲಿ ಜೂ. 1ರಿಂದ ಮೀನುಗಾರಿಕೆ ನಡೆಸಲು ಅವಕಾಶವಿದೆ.

ಸಾಮಾನ್ಯವಾಗಿ ಜೂನ್‌ ಮೊದಲನೇ ದಿನವೇ ನಾಡದೋಣಿಗಳು ಕಡಲಿಗಿಳಿ ಯುತ್ತವೆ. ಆದರೆ ಈ ಬಾರಿ ಕಡಲಿನಲ್ಲಿ “ತೂಫಾನ್‌’ ಇಲ್ಲದ ಕಾರಣದಿಂದ ಸಂಚಾರ ತಡವಾಗಿದೆ. ಆದರೂ ಬೆರಳೆಣಿಕೆ ನಾಡದೋಣಿಗಳು ಮಂಗಳೂರಿನ ಹಳೆಬಂದರಿನ ಮೂಲಕ/ಬೀಚ್‌ ಸಮೀಪದಿಂದ ಮೀನು ಗಾರಿಕೆಗೆ ತೆರಳುತ್ತಾರೆ. ಕಡಲು ಪ್ರಕ್ಷುಬ್ಧವಾದ ಬಳಿಕ ಎನ್‌ಎಂಪಿಎ (ನವಮಂಗಳೂರು ಬಂದರು)ವ್ಯಾಪ್ತಿಗೆ ಬಂದು ನಿಗದಿತ ಪಾಸ್‌ ಪಡೆದು ಅಲ್ಲಿಂದಲೇ ಮೀನುಗಾರಿಕೆ ನಡೆಸಬೇಕಾಗುತ್ತದೆ.

ಸಮುದ್ರದಲ್ಲಿ ಸುಮಾರು 20 ಕಿ.ಮೀ.ನ ಒಳಗಡೆಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತದೆ. ಆದರೆ ಸಮುದ್ರ ಪ್ರಕ್ಷುಬ್ಧವಾಗಿರುವ ಸಮಯದಲ್ಲಿ 10 ಕಿ.ಮೀ.ನ ಒಳಗಡೆಯೇ ಮೀನುಗಾರಿಕೆ ನಡೆಯುತ್ತದೆ. ಒಂದು ಹಂತದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡರೆ ಉತ್ತಮ ಮೀನುಗಾರಿಕೆ ನಡೆಸಬಹುದು. ಆದರೆ ಸಾಮಾನ್ಯಕ್ಕಿಂತ ಜಾಸ್ತಿಯಾಗಿ ಸಮುದ್ರ ಅಬ್ಬರಿಸಿದರೆ ನಾಡದೋಣಿಗಳ ಸಂಚಾರಕ್ಕೆ ಅಪಾಯ ಉಂಟಾಗುತ್ತದೆ. ಹೀಗಾಗಿ ನಾಡದೋಣಿ ಮೀನುಗಾರರಿಗೆ ಮಾನ್ಸೂನ್‌ ಅಗ್ನಿಪರೀಕ್ಷೆಯ ಸಮಯ.

Advertisement

ಅಂದಾಜಿನ ಪ್ರಕಾರ ದ.ಕ. ಜಿಲ್ಲೆಯಲ್ಲಿ ಸುಮಾರು 70 ಜೋಡಿ ನಾಡದೋಣಿಗಳಿವೆ. ಒಂದೊಂದು ಜೋಡಿಯಲ್ಲಿ ಸರಿಸುಮಾರು 4ರಿಂದ 5 ದೋಣಿಗಳಿರುತ್ತವೆ. ಒಂದು ಜೋಡಿಯಲ್ಲಿ ಸುಮಾರು 50ರಿಂದ 60 ಮೀನುಗಾರರಿರುತ್ತಾರೆ. ಒಂದೊಂದು ಜೋಡಿ 6ರಿಂದ 8 ಲಕ್ಷ ರೂ.ವರೆಗೆ ಸರಾಸರಿ ಮೀನುಗಾರಿಕೆ ನಡೆಸಿದ್ದೂ ಇದೆ.

ದಡಕ್ಕೆ ಬಂದ ಬೋಟ್‌ಗೆ ಜಾಗವಿಲ್ಲ!
ಮೀನುಗಾರಿಕೆಗೆ ತೆರಳಿ ವಾಪಸಾದ ಬೋಟ್‌ಗಳಿಗೆ ಮಂಗಳೂರಿನ ದಕ್ಕೆಯಲ್ಲಿ ನಿಲುಗಡೆಗೆ ಜಾಗವಿಲ್ಲದ ದೂರು ಈ ಬಾರಿಯೂ ಕೇಳಿಬಂದಿದೆ. ಇಲ್ಲಿ ಮೋಟರೀಕೃತ ನಾಡದೋಣಿ, ಯಾಂತ್ರೀಕೃತ ದೋಣಿ ಸೇರಿದಂತೆ ಸುಮಾರು 2000ಕ್ಕೂ ಅಧಿಕ ಇವೆ. ಈಗ ಇರುವ ಮಂಗಳೂರು ದಕ್ಕೆ 600 ಮೀಟರ್‌ ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ ಕ್ರಮಪ್ರಕಾರವಾಗಿ ಹೆಚ್ಚಾ ಕಡಿಮೆ 350 ಬೋಟುಗಳಿಗೆ ನಿಲ್ಲಲು ಮಾತ್ರ ಅವಕಾಶ. ಉಳಿದಂತೆ ಎಲ್ಲ ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಒಂದೊಂದು ಬೋಟುಗಳನ್ನು ತಾಗಿಸಿ ಇಟ್ಟಿರುವ ಪರಿಣಾಮ ಬೋಟ್‌ಗಳಿಗೆ ಹಾನಿಯಾಗುತ್ತಿವೆ. ಲಕ್ಷಾಂತರ ರೂ. ನಷ್ಟವಾಗುತ್ತಿವೆ.

61 ದಿನಗಳ ನಿಷೇಧ ಆರಂಭ
ಯಾವುದೇ ಬಲೆಗಳನ್ನು ಅಥವಾ ಸಾಧನಗಳನ್ನು ಉಪಯೋಗಿಸಿ ಎಲ್ಲ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಮೋಟಾರೀಕೃತ ದೋಣಿ, ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂ. 1ರಿಂದ ಜುಲೈ 31ರ ವರೆಗೆ ಸೇರಿ ಒಟ್ಟು 61 ದಿನಗಳು ನಿಷೇಧಿಸಲಾಗಿದೆ. ಆದರೆ ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟಾರೀಕೃತ ಎಂಜಿನ್‌ ಹಾಗೂ ಸಾಂಪ್ರದಾಯಿಕ ಮತ್ತು ನಾಡದೋಣಿಗಳಲ್ಲಿ ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
– ಹರೀಶ್‌ ಕುಮಾರ್‌, ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ ದ.ಕ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next