ಬೆಳಗಾವಿ: ನಿಮ್ಮಲ್ಲಿ ಏನೇ ಭಿನ್ನಮತ ಇದ್ದರೂ ಅದನ್ನು ಬದಿಗಿಡಿ. ಅಪಸ್ವರ, ಅಸಮಾಧಾನಗಳಿಗೆ ಅವಕಾಶ ಇಲ್ಲ. ಪಕ್ಷದ ನಿಯಮ ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಜತೆಗೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗು ವಂತಹ ಯಾವುದೇ ಹೇಳಿಕೆಗಳನ್ನು ನೀಡ ಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಯ ಮುಖಂಡರಿಗೆ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಯಲ್ಲಿ ನಗರದ ಖಾಸಗಿ ಹೊಟೇಲ್ನಲ್ಲಿ ಶನಿವಾರ ಜಿಲ್ಲೆಯ ಶಾಸಕರು, ಸಂಸದರು, ಮಾಜಿ ಶಾಸಕರು ಮತ್ತು ಸಂಸದರ ಜತೆ ಸುದೀರ್ಘ ಸಭೆ ನಡೆಸಿದ ಅವರು, ಈಗಿನ 13 ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜತೆಗೆ ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಠಿನ ಶ್ರಮ ವಹಿಸಬೇಕು. ಇದಕ್ಕೆ ನಿಮ್ಮೆಲ್ಲ ಅನುಭವಗಳನ್ನು ಧಾರೆ ಎರೆಯಬೇಕೆಂಬ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖಂಡರ ಈ ಸಭೆ ಗೌಪ್ಯ ವಾಗಿತ್ತು. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಮಾಜಿ ಜನಪ್ರತಿನಿಧಿಗಳನ್ನು ಬಿಟ್ಟರೆ ಬೇರೆಯವರಿಗೆ ಅವಕಾಶ ಇರಲಿಲ್ಲ. ಸುಮಾರು ಎರಡೂವರೆ ತಾಸುಗಳ ಕಾಲ ನಿರಂತರ ಸಭೆ ನಡೆ ಸಿದ ಶಾ ಜಿಲ್ಲೆಯ ಪ್ರಸಕ್ತ ರಾಜಕೀಯ ವಿದ್ಯಮಾನ, ಪಕ್ಷಗಳ ಬಲಾಬಲ, ಬಿಜೆಪಿ ಕಾರ್ಯಕರ್ತರ ಸಭೆಗಳು, ಪಕ್ಷದ ಕಾರ್ಯಕ್ರಮಗಳು, ಕಾಂಗ್ರೆಸ್ ಶಾಸಕರ ಶಕ್ತಿ ಮೊದಲಾದ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಬಗ್ಗೆ ಮಾಹಿತಿ ಪಡೆದು, ಈ ಬಾರಿ ಚುನಾವಣೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲೆಯ ಶಾಸಕರು ಹಾಗೂ ಮಾಜಿ ಶಾಸಕರಿಗೆ ಕಠಿನ ಗುರಿ ನೀಡಿದರು.
ಯಾವುದೇ ಕಾರಣಕ್ಕೂ ಈ ಚುನಾವಣೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಚುನಾವಣೆ ಟಿಕೆಟ್ ನನಗೆ ಖಚಿತ ಎಂದು ಹೇಳಿಕೊಂಡು ಓಡಾಡುವಂತಿಲ್ಲ. ಅಪಪ್ರಚಾರಕ್ಕೆ ಅವಕಾಶ ಮಾಡಿ ಕೊಡಬಾರದು. ಹೇಳಿಕೆಗಳನ್ನು ನೀಡುವಾಗ ಮಾತಿನ ಮೇಲೆ ನಿಗಾ ವಹಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Related Articles
ಬಣ ರಾಜಕೀಯ ಮತ್ತು ಗುಂಪುಗಾರಿಕೆಗೆ ಅವಕಾಶ ಇಲ್ಲ. ಚುನಾವಣೆ ಸಮಯದಲ್ಲಿ ಇದು ಮುಂದುವರಿದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಗಮನದಲ್ಲಿ ಇರಿಸಿಕೊಂಡು ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಹೋಗಬೇಕು. ನಮ್ಮ ನಿರೀಕ್ಷೆಗಳು, ಲೆಕ್ಕಾಚಾರ ತಪ್ಪದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.
ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಮಹದೇವಪ್ಪ ಯಾದವಾಡ, ಮಹೇಶ ಕುಮಟಳ್ಳಿ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಸಂಸದರಾದ ಮಂಗಲಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಇದ್ದರು.
ಬೃಹತ್ ರೋಡ್ ಶೋ
ತೆರೆದ ವಾಹನದಲ್ಲಿ ಅಮಿತ್ ಶಾ ಮತ್ತು ಇತರ ಪ್ರಮುಖ ನಾಯಕರು ರೋಡ್ ಶೋ ನಡೆಸಿದರು. ರೋಡ್ ಶೋ ಉದ್ದಕ್ಕೂ ಜನರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಮೋದಿ ಪರ ಘೋಷಣೆ ಮುಗಿಲುಮುಟ್ಟಿತ್ತು. ಇಡೀ ಮಾರ್ಗ ಕೇಸರಿಮಯವಾಗಿತ್ತು. ವಿಜಯ ಸಂಕಲ್ಪ ಅಭಿಯಾನದ ಭಾಗವಾಗಿ ಮನೆಯೊಂದರ ಗೋಡೆ ಮೇಲೆ ಬರೆದಿದ್ದ ಕಮಲ ಚಿಹ್ನೆಗೆ ಅಮಿತ್ ಶಾ ಕೇಸರಿ ಬಣ್ಣ ತುಂಬಿದರು.
ಲೂಟಿ ಪಕ್ಷಗಳನ್ನು ಮೂಲೆಗೆ ತಳ್ಳಿ
ಕಾಂಗ್ರೆಸ್ ಗಾಂಧಿ ಕುಟುಂಬಕ್ಕೆ ಸೀಮಿತವಾದರೆ ಜೆಡಿಎಸ್ ತಾತ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಪಕ್ಷವಾ ಗಿದ್ದು, ರಾಜ್ಯವನ್ನು ಕೊಳ್ಳೆ ಹೊಡೆದಿದ್ದಾರೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿಗೆ ಮತ ಹಾಕುವ ಮೂಲಕ ಪರಿವಾರಕ್ಕೆ ಸೀಮಿತವಾಗಿರುವ ಪಕ್ಷಗಳನ್ನು ಮೂಲೆಗೆ ತಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಶನಿವಾರ ಕುಂದಗೋಳದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದರು. ಇವು ಅಧಿಕಾರಕ್ಕೆ ಬಂದರೆ ಇಡೀ ರಾಜ್ಯದ ವ್ಯವಸ್ಥೆಯನ್ನು ಹಾಳು ಮಾಡುತ್ತವೆ. ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ನಿಂತಿರುವ ಪಕ್ಷವಾಗಿದೆ. ದೇಶ ಹಾಗೂ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬರಬೇಕು ಎಂದರು.