Advertisement

ದಾರಿ ತಪ್ಪಿಸುತ್ತಿರುವ ದೃಶ್ಯ ಲೋಕ

12:30 AM Aug 02, 2018 | |

ಸಿನೆಮಾ, ಟಿ.ವಿ. ಮಾಧ್ಯಮಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕೆನ್ನುವುದು ನಿಜ. ಆದರೆ ಅದಕ್ಕಿಂತಲೂ ಅವಕ್ಕೆ ಬಹುಮುಖ್ಯವಾಗಿ ಸಮಾಜದ ಹಿತ ಮುಖ್ಯವಾಗಬೇಕಲ್ಲವೇ? ಹಣಗಳಿಕೆಯ ಹಪಾಹಪಿಯಲ್ಲಿ ನೈತಿಕತೆಯ ಗೆರೆಯನ್ನು ದಾಟಿ ಮುಂದೋಡುವುದು ಎಷ್ಟು ಸರಿ? 

Advertisement

ಈಗೀಗ ಟೆಲಿವಿಷನ್‌ ಮತ್ತು ಸಿನೆಮಾ ಮಾಧ್ಯಮಗಳು ತಮ್ಮ ಮೂಲ ಉದ್ದೇಶವನ್ನೇ ಮರೆತು ಕೇವಲ ವಾಣಿಜ್ಯೋದ್ದೇಶ ಕ್ಕಾಗಿಯೇ ಅಸ್ತಿತ್ವದಲ್ಲಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬಹು ಭಾಷೆಗಳ ನೆಲೆವೀಡಾಗಿರುವ ಭಾರತದಂಥ ದೇಶದ ವಿಶಾಲ ಪರಿಸರದಲ್ಲಿ ಒಂದೊಂದು ಭಾಷೆಗೂ ಪ್ರತ್ಯೇಕ ವಾಹಿನಿಗಳು(ಸುದ್ದಿ-ಸೀರಿಯಲ್‌) ಮತ್ತು ಸಿನೆಮಾ ಉದ್ಯಮಗಳಿವೆ. ಈ ಬೆಳವಣಿಗೆ ಸಹಜವೂ ಹೌದು. ಆದರೆ ಹೀಗೆ ಹುಟ್ಟಿಕೊಂಡ ಉದ್ಯಮವು ಅನಾರೋಗ್ಯಕರ ಸ್ಪರ್ಧೆಗೆ ಬಿದ್ದು ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸುತ್ತಲೇ ಮುಂದೆ ಸಾಗಿದೆ. ಅಂತರ್ಜಾಲದ ವೇಗದ ಬೆಳವಣಿಗೆಯ ಹೊರತಾಗಿಯೂ  ದೇಶದಲ್ಲಿ ಈಗಲೂ ಬೇರುಮಟ್ಟದಲ್ಲಿ ಸಿನಿಮಾ ಮತ್ತು ಕಿರುತೆರೆ ಅತ್ಯಂತ ಯಶಸ್ವಿ ಮನೋರಂಜನಾ ಮಾಧ್ಯಮಗಳಲ್ಲೊಂದಾಗಿವೆ. ಇತರೆ ಸಂಪರ್ಕ ಮಾಧ್ಯಮಗಳಾದ ದಿನಪತ್ರಿಕೆ, ಆಕಾಶವಾಣಿಗಳಿಗಿಂತ ಹೆಚ್ಚು ಪ್ರಭಾವಶಾಲಿಗಳಿವು.  

ಆದರೆ ಇವುಗಳು ತಮ್ಮ ಮೂಲ ಉದ್ದೇಶವನ್ನು ಮರೆತು ಯಾವಾಗ ಹಣ ಮಾಡುವ ಪೈಪೋಟಿಗೆ ಬಿದ್ದವೋ ಆಗಲೇ ಅಪಾಯ ಆರಂಭವಾಗಿದ್ದು. ಇಂದು ಟೆಲಿವಿಷನ್‌, ಸಿನೆಮಾ, ನ್ಯೂಸ್‌ ಚಾನೆಲ್‌ಗ‌ಳ ಹಾವಳಿ ಎಷ್ಟಾಗಿಬಿಟ್ಟಿದೆಯೆಂದರೆ ಜನರನ್ನು ಸೆಳೆಯುವುದಕ್ಕಾಗಿ ಇವು ನೈತಿಕತೆಯ ಗೆರೆಯನ್ನು ದಾಟಿ ತುಂಬಾ ದೂರ ಮುನ್ನಡೆದುಬಿಟ್ಟಿವೆ. ಎಲ್ಲಾ ಕಾಲಕ್ಕೂ ಮನುಷ್ಯನ ನಡವಳಿಕೆಯನ್ನು ನಿರ್ಧರಿಸು ವುದರ‌ಲ್ಲಿ ಕಾಮದ ಪಾತ್ರ ಬಹು ದೊಡ್ಡದು ಎನ್ನುತ್ತಾನೆ ಖ್ಯಾತ ಮನಃಶಾಸ್ತ್ರಜ್ಞ ಸಿಗೆ¾ಂಡ್‌ ಫ್ರಾಯ್ಡ. ಆತನ ಪ್ರಕಾರ ಮಗು ವೊಂದರಲ್ಲಿ ಲೈಂಗಿಕ ತಿಳಿವಳಿಕೆ 5 ವರ್ಷದಿಂದ 13 ವರ್ಷದವರೆಗೆ ರೂಪುಗೊಳ್ಳುತ್ತಾ ಸಾಗುತ್ತದೆ. ಇದು ಮೊದಲು ಮೊಗ್ಗಿನಂತಿದ್ದು ಹರೆಯಕ್ಕೆ ಕಾಲಿಡುತ್ತಿದ್ದಂತೆ ಅರಳಿ ಹೂವಾಗಿ ಬಿಡುತ್ತದೆ. ಆಗ ಈ ಮುಕ್ತ ಮನಸ್ಸುಗಳ ಮೇಲೆ ಲೈಂಗಿಕ ಅಕರ್ಷಣೆ ಸಹಜವಾಗಿ ಮೂಡುತ್ತದೆ. ವಸ್ತುಸ್ಥಿತಿ ಹೀಗಿರು  ವಾಗ… ಆ ಮನಸ್ಸುಗಳನ್ನು ಅಡ್ಡದಾರಿಗೆಳೆಯುವುದಕ್ಕೇನೋ ಎಂಬಂತೆ ತಯಾರಾಗಿ ನಿಂತಿರುತ್ತವೆ ಈ ದೃಶ್ಯ ಮಾಧ್ಯಮಗಳು. ಇಂದು ಸಿನೆಮಾ, ಸೀರಿಯಲ್‌ ಅಥವಾ ಸುದ್ದಿ ವಾಹಿನಿಗಳೂ ಕೂಡ ಅಶ್ಲೀಲ ದೃಶ್ಯಾವಳಿಗಳನ್ನು ಬಿತ್ತರಿಸುತ್ತಾ ಹರೆಯದ ಮನಸ್ಸುಗಳನ್ನು ಚಂಚಲಗೊಳಿಸುತ್ತಿವೆ. ಇಂಥದ್ದನ್ನೆಲ್ಲ ನೋಡಿ ದಾಗ ಯುವ ಮನಸ್ಸು ನಿಯಂತ್ರಣಕ್ಕೆ ಬರಲಾಗದೇ ಅವಾಂತ ರಗಳಿಗೆ ಕಾರಣವಾಗಬಹುದು. 

ಅಮೆರಿಕದ ಸಮಾಜಶಾಸ್ತ್ರಜ್ಞ ಎಲಿಯಟ್‌, ಮಾನವ ತನ್ನ ವಿಶ್ರಾಂತ ಸಮಯದಲ್ಲಿ ದೇಹಕ್ಕೆ ಮನಸ್ಸಿಗೆ ಕೊಡುವ ಒಂದು ನೂತನ-ವಿಶೇಷ ಅನುಭವವೇ ಮನೋರಂಜನೆ ಎಂದಿದ್ದರು. ಆದರೆ ಇದೀಗ ಇದು ವಿಷಮಯ ಅನುಭವವಾಗಿ ಬದಲಾ ಗುತ್ತಿದೆ. ಲೈಂಗಿಕತೆ, ಕೊಲೆ, ಹಿಂಸೆಯಂಥ ಘಟನೆಗಳನ್ನು ವೈಭವೀಕರಿಸಿ ಯುವಮನಸ್ಸುಗಳ ಮೇಲೆ ದೃಶ್ಯ ಪ್ರಪಂಚ ಅತಿ ಕೆಟ್ಟ ಪರಿಣಾಮ ಬೀರುತ್ತಿದೆ. 

ಅಶ್ಲೀಲತೆ ಮತ್ತು ಹಿಂಸಾತ್ಮಕ ದೃಶ್ಯಗಳು ಕೇವಲ ಯಾವುದೇ ಒಂದು ಭಾಷೆಯ ಮಾಧ್ಯಮಗಳಿಗೆ ಸೀಮಿತವಾಗಿರದೆ ಇಡೀ ಭಾರತೀಯ ದೃಶ್ಯ ಮಾಧ್ಯಮವನ್ನು ಅವರಿಸಿದೆ. ಇಂದು ಯಾವುದಾದರೊಂದು ಒಳ್ಳೆಯ (ಅಶ್ಲೀಲರಹಿತ) ಚಲನಚಿತ್ರ ಬಂದಿದೆಯೆಂದರೆ ಅದು ನಮ್ಮ ಪುಣ್ಯ ಎಂಬಂತಹ ಸನ್ನಿವೇಶ ಸೃಷ್ಟಿಯಾಗಿದೆ. ಕೌಟುಂಬಿಕ ಕಥೆಯ ಹಿನ್ನೆಲೆಯನ್ನು ಹೊಂದಿರುವ ಕೆಲ ಚಿತ್ರಗಳಲ್ಲಿಯೂ ಬಾಕ್ಸಾಫೀಸ್‌ ದೃಷ್ಟಿಯನ್ನಿಟ್ಟುಕೊಂಡು ಮಸಾಲೆ ಸೇರಿಸಿ ಹಣ ಗಳಸಿಕೊಳ್ಳುವುದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಇದರಿಂದಾಗಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕೂತು ನೋಡುವಂತಹ ಚಿತ್ರಗಳೇ ಭವಿಷ್ಯದಲ್ಲಿ ನೋಡಲು ಸಾಧ್ಯವಿಲ್ಲವೇನೋ ಎಂಬ ಪ್ರಶ್ನೆ ಮೂಡುತ್ತಿದೆ.

Advertisement

ಸಿನೆಮಾಗಳ ವಿಷಯವನ್ನೇ ನೋಡಿ… ಬಹುತೇಕ ಚಿತ್ರಗಳಲ್ಲಿ ಅರೆನಗ್ನತೆ, ವ್ಯಭಿಚಾರ, ಅತ್ಯಾಚಾರ, ವಂಚನೆ ಮತ್ತು ಹತ್ಯೆ ಸನ್ನಿವೇಶಗಳನ್ನು ಆ ಕಥೆಗೆ ಪೂರಕವಿರಲಿ, ಇಲ್ಲದಿರಲಿ ಮಿತಿ ಮೀರಿ ಬಳಸಲಾಗುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಬೇಕಿದ್ದ ಲೈಂಗಿಕತೆ, ಚುಂಬನದಂಥ ಕಾರ್ಯಗಳು ಈಗ ಬಹಿರಂಗವಾಗಿಯೇ ಪರದೆಯ ಮೇಲೆ ಪ್ರದರ್ಶ ನವಾಗುತ್ತವೆ. ಹೆಣ್ಣನ್ನು ದೇವತೆ ಎಂದು ಪೂಜಿಸುವ ಭಾರತೀಯ ಸಂಸ್ಕೃತಿಯ ಸಮಾಜದಲ್ಲಿ ಇದೇ ಮಹಿಳೆಯನ್ನು ಎಲ್ಲಾ ಮಾಧ್ಯಮದಲ್ಲೂ ಅತ್ಯಂತ ಕೀಳಾಗಿ ಚಿತ್ರಿಸಲಾಗುತ್ತಿದೆ. ಇದರ ನೇರ ಪರಿಣಾಮವು ಸಮಾಜದಲ್ಲಿ ಈಗಾಗಲೇ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಅಪರಾಧ ಪ್ರಕರಣಗಳ ರೂಪದಲ್ಲಿ ಕಾಣಿಸುತ್ತಿದೆ.

ಇಂದು ಸಮಾಜದಲ್ಲಿ ಅನೀತಿಗಳ ಪ್ರಮಾಣ ಹೆಚ್ಚಳವಾಗಿದ್ದರೆ ಅದಕ್ಕೆ ಈ ಮಾಧ್ಯಮಗಳ ಕೊಡುಗೆಯೂ ಬಹಳಷ್ಟಿದೆ ಎನ್ನುವು ದನ್ನು ಅಲ್ಲಗಳೆಯಲಾಗದು. ಸಿನೆಮಾ, ಟಿ.ವಿ. ಮಾಧ್ಯಮಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರ ಬೇಕೆನ್ನುವುದು ನಿಜ. ಆದರೆ ಅದಕ್ಕಿಂತಲೂ ಅವಕ್ಕೆ ಬಹು ಮುಖ್ಯವಾಗಿ ಸಮಾಜದ ಹಿತ ಮುಖ್ಯವಾಗಬೇಕಲ್ಲವೇ?

ಮಂಜುನಾಥ ಉಲುವತ್ತಿ ಶೆಟ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next