Advertisement

ತುಂಗಭದ್ರಾ ಸಮಾನಾಂತರ ಡ್ಯಾಂ ಪ್ರಹಸನ; ಪ್ರಸ್ತಾವ‌-ಪ್ರಚಾರದಲ್ಲೇ ಸೊರಗುತ್ತಿದೆ ಯೋಜನೆ

12:34 AM Mar 09, 2023 | Team Udayavani |

ಹುಬ್ಬಳ್ಳಿ: ತುಂಗಭದ್ರಾ ಜಲಾಶಯದಲ್ಲಿ ಹೂಳು ಪ್ರಮಾಣ ಹೆಚ್ಚುತ್ತಿದ್ದು, ನೀರು ಸಂಗ್ರಹ ಕುಸಿಯು ತ್ತಿದೆ. ಕೃಷಿ, ಕುಡಿಯುವ ನೀರು, ಉದ್ಯಮಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿತ ಹಾಗೂ ನೀರಿನ ಬೇಡಿಕೆ ಸರಿದೂ ಗಿಸುವ ನಿಟ್ಟಿನಲ್ಲಿ ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆ ಕಳೆದೆರಡು ಚುನಾವಣೆ ಗಳಿಂದ ಪ್ರಸ್ತಾವ, ಪ್ರಚಾರ ಪಡೆಯುತ್ತಿದೆಯಾ ದರೂ ಇಂದಿಗೂ ಆ ನಿಟ್ಟಿನಲ್ಲಿ ವಿಶ್ವಾಸ ಮೂಡಿಸಬ ಹುದಾದ ಯಾವ ಯತ್ನಗಳಾಗಿಲ್ಲ. ಸಾಲದು ಎನ್ನುವಂತೆ ಆಂಧ್ರ-ತೆಲಂಗಾಣ ಇದಕ್ಕೆ ವಿರೋಧಕ್ಕೆ ಮುಂದಾಗಿವೆ.

Advertisement

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ವಿವಿಧ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು ಏಳು ದಶಕಗಳೇ ಕಳೆದಿವೆ. ಜಲಾಶಯದಲ್ಲಿ ಹೂಳು ಹೆಚ್ಚುತ್ತಿದ್ದು, ನಿಗದಿತ ಪ್ರಮಾಣದ ನೀರು ಸಂಗ್ರಹವಿಲ್ಲದೆ ಪ್ರತಿವರ್ಷ ಬೇಸಗೆ ವೇಳೆ ನೀರಿನ ತೀವ್ರ ಕೊರತೆ ಎದುರಿಸುವಂತಾಗಿದ್ದು, ಎರಡನೇ ಬೆಳೆಗೆ ನೀರಿಗಾಗಿ ಪ್ರತೀ ವರ್ಷವೂ ರೈತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ.

ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಕೃಷಿಕರ ಪಾಲಿಗೆ ತುಂಗಭದ್ರಾ ಜಲಾಶಯ ಮಹತ್ವದ ಕೊಡುಗೆ ಯಾಗಿದೆ. ಜಲಾಶಯದ ಎಡ-ಬಲದಂಡೆ, ವಿಜಯನಗರ ಇನ್ನಿತರ ಕಾಲುವೆಗಳ ಮೂಲಕ ಈ ಜಿಲ್ಲೆಗಳ ಲಕ್ಷಾಂತರ ಎಕ್ರೆ ಭೂಮಿ ನೀರಾವರಿ ಕಂಡಿದ್ದು, ಕೊಪ್ಪಳ-ರಾಯಚೂರು ಜಿಲ್ಲೆಯ ಕೆಲ ವು ತಾಲೂಕುಗಳೂ ಭತ್ತದ ಕಣಜ ಎಂಬ ಖ್ಯಾತಿಗೊಳಗಾಗಿವೆ. ಹಲವು ಉದ್ಯಮಗಳು ಬೆಳೆದು ನಿಂತಿವೆ.

31-32 ಟಿಎಂಸಿ ಅಡಿಯಷ್ಟು ಹೂಳು: ತುಂಗಭದ್ರಾ ಜಲಾಶಯ ಬ್ರಿಟಿಷ್‌ ಕಾಲದಿಂದಲೇ ಪ್ರಸ್ತಾವಿತ ಯೋಜನೆಯಾಗಿದೆ. 1860ರಲ್ಲಿಯೇ ಜಲಾಶಯ ನಿರ್ಮಾಣದ ಚಿಂತನೆಯೊಂದು ಮೊಳಕೆಯೊಡೆದಿತ್ತು. 1944ರಲ್ಲಿ ಅಂದಿನ ಹೈದರಾಬಾದ್‌ ನಿಜಾಮ ಆಳ್ವಿಕೆ ಹಾಗೂ ಮದ್ರಾಸ್‌ ಪ್ರಸಿಡೆನ್ಸಿ ನಡುವೆ ಜಲಾಶಯ ನಿರ್ಮಾಣ ವಿಷಯವಾಗಿ ಒಡಂಬಡಿಕೆಯಾಗಿತ್ತು. 1945, ಫೆ.28ರಂದು ಹೊಸಪೇಟೆ ಬಳಿ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತಾದರೂ ದೇಶಕ್ಕೆ ಸ್ವಾತಂತ್ರÂ ಬಂದ ಅನಂತರ ಬದಲಾದ ಸ್ಥಿತಿಯಿಂದ 1949ರ ಅನಂತರದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿತು. ಅಲ್ಲದೆ 1953ರಲ್ಲಿ ಜಲಾಶಯ ಪೂರ್ಣಗೊಂಡಿತ್ತು. ಗರಿಷ್ಠ 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಾಣದಿಂದ ಸುಮಾರು 90 ಗ್ರಾಮಗಳು ಹಾಗೂ ಅಂದಾಜು 54,452 ಜನರ ಮೇಲೆ ಇದು ಪರಿಣಾಮ ಬೀರಿತ್ತು.

ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ಪ್ರಮಾಣ ಹೆಚ್ಚಳವಾಗತೊಡಗಿತ್ತು. ಹೂಳು ತಡೆಗೆ ಕೊಪ್ಪಳ ಜಿಲ್ಲೆಯಲ್ಲಿ ಹಿರೇಹಳ್ಳಕ್ಕೆ ಜಲಾಶಯ ನಿರ್ಮಿಸಿದರೂ ಪ್ರಯೋಜನವಾಗದಾಯಿತು. ಗಣಿಗಾರಿಕೆಯೂ ಹೂಳು ಹೆಚ್ಚಳಕ್ಕೆ ತನ್ನದೇ ಕೊಡುಗೆ ನೀಡಿದೆ. ಪ್ರಸ್ತುತ ತುಂಗಭದ್ರಾ ಜಲಾ ಶಯದಲ್ಲಿ ಸುಮಾರು 32 ಟಿಎಂಸಿ ಅಡಿಯಷ್ಟು ಹೂಳು ಸಂಗ್ರಹವಾಗಿದ್ದು, ನೀರು ಸಂಗ್ರಹ ಮಟ್ಟ 101 ಟಿಎಂಸಿ ಅಡಿಗಿಂತಲೂ ಕಡಿಮೆಯಾಗಿದೆ. ನೀರು ಹಂಚಿಕೆ ವಿಷಯವಾಗಿ ಮೂರು ರಾಜ್ಯಗಳ ನಡುವೆ ಆಗಾಗ ತಗಾದೆ ನಡೆಯುತ್ತಿದೆ.

Advertisement

ಸಮಾನಾಂತರ ಜಲಾಶಯ ಮಂತ್ರಪಠಣ: ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಕುಸಿತವಾಗುತ್ತಿದ್ದರಿಂದ ಆಂಧ್ರದ ಮುಖ್ಯಮಂತ್ರಿ ಯಾಗಿದ್ದ ಎನ್‌.ಟಿ.ರಾಮರಾವ್‌ 80ರ ದಶಕದಲ್ಲಿಯೇ ಫಡ್‌ಫ್ಲೋ ಕೆನಾಲ್‌ ಪ್ರಸ್ತಾವ ಮಾಡಿದ್ದರಾದರೂ ಅಂದಿನ ರಾಜ್ಯ ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ನೀರಿನ ಬೇಡಿಕೆ ಸರಿದೂಗಿಸಲು ಸಮಾನಾಂತರ ಜಲಾಶಯ ಚಿಂತನೆ ಮೊಳಕೆಯೊಡೆದಿತ್ತು. ಕಳೆದ ಒಂದೂವರೆ ದಶಕಗಳಿಂದಲೂ ಇದು ಸುದ್ದಿಯಲ್ಲಿದೆಯಾದರೂ ಇಂದಿಗೂ ಅದು ಸಾಕಾರ ರೂಪ ಪಡೆದುಕೊಂಡಿಲ್ಲ.

ಕೊಪ್ಪಳ ಜಿಲ್ಲೆ ನವಲಿ ಬಳಿ ಸುಮಾರು 18 ಸಾವಿರ ಎಕ್ರೆ ಪ್ರದೇಶದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಸುಮಾರು 32 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು, ನೀರು ಸಂಗ್ರಹ ಕೊರತೆ ಸರಿದೂಗಿಸಲು ಸುಮಾರು 35 ಟಿಎಂಸಿ ಅಡಿ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜಿಸಲಾಗಿದೆ. ವಿಸ್ತೃತ ಯೋಜನಾ ವರದಿಗೆ ಸಂಪುಟ ಒಪ್ಪಿಗೆ ನೀಡಿದೆಯಾದರೂ ನಿರೀಕ್ಷಿತ ಕಾರ್ಯ ಆಗುತ್ತಿಲ್ಲ. ಇದರ ನಡುವೆ ಆಂಧ್ರ-ತೆಲಂಗಾಣ ರಾಜ್ಯಗಳು ಸಮಾನಾಂತರ ಜಲಾಶಯಕ್ಕೆ ವಿರೋಧ ತೋರುತ್ತಿದ್ದು, ಪರ್ಯಾಯ ಕಾಲುವೆಗಳ ನಿರ್ಮಾಣಕ್ಕೆ ಆಗ್ರಹಿಸುತ್ತಿವೆ.

ಸಮಾನಾಂತರ ಜಲಾಶಯ ನಿರ್ಮಾಣ ನಿಟ್ಟಿನಲ್ಲಿ ಆಂಧ್ರ-ತೆಲಂಗಾಣ ರಾಜ್ಯಗಳ ಮನವೊ ಲಿಕೆ, ಯೋಜನೆ ಅನುಷ್ಠಾನದ ಇಚ್ಛಾಶಕ್ತಿ-ಬದ್ಧತೆ ತೋರದ ಸರಕಾರಗಳು, ರಾಜಕೀಯ ಪಕ್ಷಗಳು ಚುನಾವಣೆ ಬಂದಾಗಲೊಮ್ಮೆ ತಮ್ಮ ಸರಕಾರ ಬಂದರೆ ಸಮಾನಾಂತರ ಜಲಾಶಯಕ್ಕೆ ಒತ್ತು ನೀಡುತ್ತೇವೆ ಎಂದು ಅಬ್ಬರಿಸುತ್ತವೆ. ಅಧಿಕಾರಕ್ಕೇ ರಿದ ಅನಂತರ ಮರೆತು ಮತ್ತೆ ಚುನಾವಣೆ ಬಂದಾಗ ತಾಲೀಮು ಶುರುವಿಟ್ಟುಕೊಳ್ಳುತ್ತಿವೆ. ಈ ವರ್ಷವೂ ಸಹ ತುಂಗಭದ್ರಾ ಎಡದಂಡೆ ನಾಲೆ ರೈತರು ಎರಡನೇ ಬೆಳೆಗೆ ಮಾರ್ಚ್‌ ಅಂತ್ಯದವರೆಗಾದರೂ ನೀರು ನೀಡಬೇಕೆಂದು ಹೋರಾಟಕ್ಕಿಳಿದಿದ್ದು, ಇದು ಪ್ರತೀ ವರ್ಷದ ಸಂಘರ್ಷ ಎನ್ನುವಂತಾಗಿದೆ. ಮತ್ತೆ ಚುನಾವಣೆ ಬಂದಿದ್ದು, ಸಮಾನಾಂತರ ಜಲಾಶಯ ಪುನಃ ಭಾಷಣ-ಪ್ರಚಾರಗಳಲ್ಲಿ ಪ್ರಜ್ವಲಿಸಲಿದೆ.

ನಿಲ್ಲದ ಹೂಳೆತ್ತುವ ಪ್ರಹಸನ
ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಹೂಳೆತ್ತುವ ನಿಟ್ಟಿನಲ್ಲಿ ಕೆಲವು ಯತ್ನಗಳು ನಡೆದವಾದರೂ ಯಾವ ಪ್ರಯೋಜನವೂ ಆಗಲಿಲ್ಲ. ಜಲಾಶಯದಲ್ಲಿನ ಸುಮಾರು 32 ಟಿಎಂಸಿ ಅಡಿಯಷ್ಟು ಹೂಳು ಎತ್ತುವುದು ಸುಲಭವಲ್ಲ. ಜಲಾಶಯದಿಂದ ತೆಗೆದ ಹೂಳು ಸಂಗ್ರಹಕ್ಕೆ ಸುಮಾರು 50-60 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಸುಮಾರು 15 ಅಡಿಯಷ್ಟು ಎತ್ತರ ಪ್ರದೇಶದಲ್ಲಿ ಹೂಳು ಸಂಗ್ರಹಿಸಬೇಕಾಗುತ್ತದೆ. ಇದಕ್ಕಾಗಿ 10-12 ಸಾವಿರ ಕೋಟಿ ರೂ.ಗಳ ವೆಚ್ಚವಾಗುತ್ತದೆ. ಹೂಳೆತ್ತುತ್ತೇವೆಂದು ಕೆಲವು ರಾಜಕಾರಣಿಗಳು ಅಲ್ಲಿಯೇ ಠಿಕಾಣಿ ಹೂಡುವ ಪ್ರಹಸನ ತೋರಿದ್ದರು. ಹೂಳೆ ತೆಗೆಯುತ್ತೇವೆಂದು ತೋರಿದ ಉತ್ಸಾಹವನ್ನು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ‌ಕಾರದಲ್ಲಿದ್ದುಕೊಂಡು ಒತ್ತಡ ತಂದಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತೇನೋ.

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next