Advertisement

ತುಂಬೆ ತಲುಪಿದ ಎಎಂಆರ್‌ ನೀರು

02:25 AM Mar 20, 2017 | Team Udayavani |

ಬಂಟ್ವಾಳ: ಮಂಗಳೂರಿಗೆ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಶಂಭೂರು ಎಎಂಆರ್‌ ಡ್ಯಾಂನಿಂದ ರವಿವಾರ ನೀರು ಬಿಡಲಾಗಿದ್ದು, ಸಂಜೆಯ ವೇಳೆ ಅದು ತುಂಬೆ ಡ್ಯಾಂ ತಲುಪಿದೆ. ಇದರಿಂದಾಗಿ ತುಂಬೆಯ ನೀರಿನ ಮಟ್ಟ ಏರಿದೆ. ಮಾ. 19ರಂದು ಬೆಳಗ್ಗೆ ಸೈರನ್‌ ಮೊಳಗಿಸಿದ ಬಳಿಕ 11 ಗಂಟೆ ಸುಮಾರಿಗೆ ಎಎಂಆರ್‌ ಡ್ಯಾಂನಿಂದ ನೀರನ್ನು ಹೊರಹರಿಯಬಿಡಲಾಯಿತು. ಸಂಜೆ 6 ಗಂಟೆ ಸುಮಾರಿಗೆ ತುಂಬೆಯಲ್ಲಿ ನೀರಿನ ಮಟ್ಟ 4 ಮೀಟರ್‌ 22 ಸೆಂ.ಮೀ. (14.06 ಅಡಿ)ಗೆ ಏರಿಕೆಯಾಗಿದೆ. ತುಂಬೆ ನೀರಿನ ಮಟ್ಟ 5 ಮೀಟರ್‌ ತಲುಪುವವರೆಗೆ ನೀರು ಬಿಡುವಂತೆ ಎಎಂಆರ್‌ ಡ್ಯಾಂನವರಿಗೆ ಸೂಚಿಸಲಾಗಿದೆ. ತಡರಾತ್ರಿ ವೇಳೆ ನೀರು ಈ ಮಟ್ಟ ತಲುಪುವ ನಿರೀಕ್ಷೆ ಹೊಂದಲಾಗಿದೆ.

Advertisement

ಶನಿವಾರ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 13.33 ಅಡಿಗಳಿಗೆ ಇಳಿಕೆಯಾಗಿತ್ತು. ಇದರಿಂದ ಮಂಗಳೂರಿಗೆ ಸಮರ್ಪಕ ನೀರು ಪೂರೈಕೆಯ ಆತಂಕ ಎದುರಾಗಿತ್ತು. ಪಾಲಿಕೆಯ ಮನವಿಯಂತೆ ಜಿಲ್ಲಾಧಿಕಾರಿಯವರು ನೀರು ಬಿಡುವಂತೆ ಎಎಂಆರ್‌ ಡ್ಯಾಂನವರಿಗೆ ಸೂಚಿಸಿದ್ದರು. ಅದರಂತೆ ರವಿವಾರ ಬೆಳಗ್ಗಿನಿಂದ ನೀರು ಬಿಡಲಾಗಿದೆ.

ಎಎಂಆರ್‌ ನೀರಿನ ಮಟ್ಟ ಇಳಿಕೆ
ಜಿಲ್ಲಾಡಳಿತದ ಸೂಚನೆಯಂತೆ ನೀರು ಬಿಟ್ಟಿರುವುದರಿಂದ ಶಂಭೂರು ಎಎಂಆರ್‌ ಡ್ಯಾಂನ ನೀರಿನ ಮಟ್ಟ ಇಳಿಕೆಯಾಗಿದೆ. ರವಿವಾರ ಬೆಳಗ್ಗೆ 21.35 ಅಡಿಗಳಷ್ಟಿದ್ದ ನೀರು ಸಂಜೆ 7 ಗಂಟೆಯ ವೇಳೆಗೆ 20.40 ಅಡಿಗೆ ಇಳಿಕೆಯಾಗಿದೆ. ತುಂಬೆ ನೀರಿನ ಮಟ್ಟ 5 ಮೀಟರ್‌ಗೆ ಏರಿಕೆಯಾದಾಗ ಎಎಂಆರ್‌ನ ಮಟ್ಟ 19 ಅಡಿಗೆ ತಲುಪುವ ಸಾಧ್ಯತೆ ಇದೆ. ಎಎಂಆರ್‌ ಡ್ಯಾಂನಿಂದ ಸೆಝ್ ಮತ್ತು ಎಂಆರ್‌ಪಿಎಲ್‌ ಸಂಸ್ಥೆ ನೀರೆತ್ತುತ್ತಿದ್ದು, ಅದನ್ನು ಕೂಡ ಕಡಿಮೆಗೊಳಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. 

ಖಾಲಿಯಾದ ದಿಶಾ ಡ್ಯಾಂ: ಕಡಬದ ದಿಶಾ ಡ್ಯಾಂನಲ್ಲಿ ಸಂಗ್ರಹಿಸಿಟ್ಟಿದ್ದ ನೀರನ್ನು ಈಗಾಗಲೇ ಕೆಳಕ್ಕೆ ಬಿಡಲಾಗಿದೆ. ಅದು ಉಪ್ಪಿನಂಗಡಿ ತಲುಪಿ ಅನಂತರ ಎಎಂಆರ್‌ ಡ್ಯಾಂ ಸೇರಲಿದೆ. ಅಲ್ಲಿಂದ ಅಗತ್ಯಕ್ಕನುಗುಣವಾಗಿ ತುಂಬೆ ಡ್ಯಾಂಗೆ ಬಿಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next