Advertisement

ರಾಜ್ಯಾದ್ಯಂತ ಸಾರಿಗೆ ಸಂಬಂಧಿ ಕೆಲಸ ಸ್ಥಗಿತ : “ಫಿ-ಫೋ ವ್ಯವಸ್ಥೆ’ಗೆ ಬದಲಾವಣೆ ಕಾರಣ

12:25 AM Jun 10, 2022 | Team Udayavani |

ಮಂಗಳೂರು: ರಾಜ್ಯದಲ್ಲಿ ಸಾರಿಗೆ ಇಲಾಖೆಯು “ಫಸ್ಟ್‌ ಇನ್‌ ಫಸ್ಟ್‌ ಔಟ್‌’ (ಫಿ-ಫೋ) ಎಂಬ ಹೊಸ ವ್ಯವಸ್ಥೆ ಜಾರಿಗೊಳಿಸುವುದಕ್ಕಾಗಿ ಹಳೇ ಕಡತಗಳ ವಿಲೇವಾರಿಗೆ ಮುಂದಾಗಿದ್ದು, ಸುಮಾರು 10 ದಿನಗಳಿಂದ ಹೊಸದಾಗಿ ಯಾವುದೇ ಕಡತಗಳು ಸ್ವೀಕೃತವಾಗುತ್ತಿಲ್ಲ.

Advertisement

ಇದರಿಂದಾಗಿ ನೋಂದಣಿ, ಡಿಎಲ್‌, ಪರೀಕ್ಷೆ, ಫಿಟೆ°ಸ್‌ ಸರ್ಟಿಫಿಕೆಟ್‌ ಸಹಿತ ಬಹುತೇಕ ಎಲ್ಲ ಸಾರಿಗೆ ಸಂಬಂಧಿತ ಕೆಲಸಗಳಿಗೂ ಹಿನ್ನಡೆಯಾಗಿದೆ. ಜನರು ಸಾರಿಗೆ ಕಚೇರಿಗಳಲ್ಲಿ ಸಾಲು ನಿಲ್ಲುವ ಪರಿಸ್ಥಿತಿ ಉಂಟಾಗುತ್ತಿದೆ. ಆರ್‌ಟಿಒ ವೆಬ್‌ಸೈಟಿನಲ್ಲಿ “ವಾಹನ್‌ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ, ಅಡಚಣೆಗೆ ವಿಷಾದಿಸುತ್ತೇವೆ’ ಎಂಬ ಸೂಚನೆ ನೀಡಲಾಗಿದೆ.

ಹೊಸ ವ್ಯವಸ್ಥೆಯ ಉದ್ದೇಶ
ಬಾಕಿ ಕಡತಗಳು ಹೊರೆಯಾಗುತ್ತವೆ ಎಂಬ ಕಾರಣಕ್ಕೆ ಮೊದಲು ಅವುಗಳ ವಿಲೇವಾರಿಗಾಗಿ ಇಲಾಖೆಯು ಫಸ್ಟ್‌ ಇನ್‌ ಫಸ್ಟ್‌ ಔಟ್‌ (ಫಿ-ಫೋ) ನೀತಿಯನ್ನು ಕೈಗೆತ್ತಿಕೊಂಡಿದೆ. ಇದರ ಪ್ರಕಾರ ಹಳೆಯ ಎಲ್ಲ ಕಡತಗಳನ್ನೂ ಆಯಾ ಕಚೇರಿ ವ್ಯಾಪ್ತಿಯಲ್ಲೇ ವಿಲೇವಾರಿ ಮಾಡಬೇಕಾಗಿದೆ. ಇಲಾಖೆ ವ್ಯವಸ್ಥೆಯೇ ಅಪ್‌ಡೇಟ್‌ ಆಗುತ್ತಿದೆ, ನಮಗೀಗ ಹಳೇ ಕಡತ ವಿಲೇವಾರಿಯ ಗುರಿ ನೀಡಲಾಗಿದೆ, ಹೊಸದಾಗಿ ಯಾವುದೇ ಡೇಟಾ ಎಂಟ್ರಿ ತೆಗೆದುಕೊಳ್ಳಲಾಗುತ್ತಿಲ್ಲ, ಇದು ಎಷ್ಟು ದಿನ ತೆಗೆದುಕೊಳ್ಳಬಹುದು ಎನ್ನುವುದು ಗೊತ್ತಾಗುತ್ತಿಲ್ಲ. ಹೊಸ ವ್ಯವಸ್ಥೆ ಪ್ರಕಾರ ಹಳೆಯ ಯಾವುದೇ ಕಡತಗಳೂ ಉಳಿದಿರಬಾರದು ಎಂಬುದು ಹಿರಿಯ ಅಧಿಕಾರಿಗಳ ಸೂಚನೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವೀಡಿಯೋ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದು ಹಳೆಯ ಚಲನ್‌ಗಳು ಇನ್ನೂ ಉಳಿದಿದ್ದರೆ ಹಾಗೂ ಅದರ ಅವಧಿ ಮುಗಿದಿದ್ದರೆ ಅಂಥವುಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದ್ದಾರೆ. ಹಗಲು ರಾತ್ರಿ ಸಿಬಂದಿ ಇದರ ಕೆಲಸದಲ್ಲಿ ತೊಡಗಿದ್ದಾರೆ. ಹಾಗಾಗಿ ಈಗ ವಿಲೇವಾರಿ ವೇಗ ಪಡೆಯುತ್ತಿದೆ ಎಂದೂ ತಿಳಿಸಿದರು.

ಹಲವು ಕಾರಣಗಳಿಂದ ಉಳಿಕೆ
ಕಡತಗಳು ಉಳಿದುಕೊಳ್ಳಲು ಕಾರಣ ಹಲವು. ಇದು ಆನ್‌ಲೈನ್‌ ವ್ಯವಸ್ಥೆ ಜಾರಿಯಾದ ಬಳಿಕ ಹೆಚ್ಚು. ಅನೇಕರು ಆನ್‌ಲೈನ್‌ ಮೂಲಕ ಯಾವುದೋ ಸೇವೆಗೆ ಅರ್ಜಿ ಸಲ್ಲಿಸುತ್ತಾರೆ, ಬಳಿಕ ಆರ್‌ಟಿಒ ಕಚೇರಿಗೆ ಬಂದು ದಾಖಲೆಪತ್ರಗಳನ್ನು ನೀಡಬೇಕಿರುತ್ತದೆ. ಯಾವುದೋ ಕಾರಣಕ್ಕೆ ಅವರು ಬರುವುದಿಲ್ಲ, ಅಲ್ಲಿಗೆ ಆ ಅರ್ಜಿ ಪೆಂಡಿಂಗ್‌ ಎಂದು ತೋರಿಸುತ್ತದೆ. ಕೆಲವರು ಕಚೇರಿಗೆ ಬಂದು ಶುಲ್ಕ ಪಾವತಿಸುತ್ತಾರೆ, ಆದರೆ ಡ್ರೈವಿಂಗ್‌ ಟೆಸ್ಟ್‌ಗೆ ಬಂದಿರುವುದಿಲ್ಲ, ಅಂತಹ ಕಡತಗಳು ಉಳಿದಿವೆ. ಬಿಎಸ್‌3, ಬಿಎಸ್‌4 ವಾಹನ ನೋಂದಣಿ ಸ್ಥಗಿತವಾದ ಸಂದರ್ಭದ ಕೆಲವು ಕಡತಗಳೂ ಉಳಿದುಕೊಂಡಿವೆ. ಇನ್ನು ಅನೇಕರು ಬ್ಯಾಂಕ್‌ ಸಾಲ ಮುಗಿದರೂ ಹೈಪೋತಿಕೇಶನ್‌ ತೆರವು ಮಾಡದಿದ್ದು, ಅಂಥವುಗಳೂ ಉಳಿದುಕೊಳ್ಳುತ್ತವೆ.

Advertisement

6 ಸಾವಿರ ಕಡತ ಬಾಕಿ
ಉಡುಪಿಯಲ್ಲಿ 6,000ದಷ್ಟು ಕಡತಗಳು ಉಳಿದುಕೊಂಡಿದ್ದವು, ಸದ್ಯ ಅವುಗಳ ಇತ್ಯರ್ಥಮಾಡಲಾಗುತ್ತಿದ್ದು ಬಾಕಿ ಕಡತ 2,000ಕ್ಕೆ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2010ರಿಂದ 2018ರ ವರೆಗೆ ಬಾಕಿ ಇದ್ದ 5,600 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 4 ಸಾವಿರ ಬಾಕಿ ಇವೆ.

ಫಿಫೋ ವ್ಯವಸ್ಥೆ ಜಾರಿಗೆ ಬಂದು ಕೆಲವು ತಿಂಗಳಾಗಿದೆ. ಆದರೂ ಹಲವು ಕಡತಗಳು ಬಾಕಿ ಇದ್ದವು. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಅವುಗಳ ವಿಲೇವಾರಿ ಆಗುತ್ತಿರಲಿಲ್ಲ, ಅದನ್ನು ಬಗೆಹರಿಸಿದ್ದೇವೆ. ಆನ್‌ಲೈನ್‌ ಮೂಲಕ ಸೇವೆ ನೀಡಲಾಗುತ್ತಿತ್ತು, ಆದರೆ ಕಚೇರಿ ವ್ಯವಸ್ಥೆಯಲ್ಲಿ ಆಗುತ್ತಿರಲಿಲ್ಲ, ಎನ್‌ಐಸಿ ಮೂಲಕ ಅದನ್ನು ಸರಿಪಡಿಸಿದ್ದೇವೆ. ಇನ್ನು ಯಾವುದೇ ಸಮಸ್ಯೆ ಆಗಲಾರದು. ಹೊಸ ಫಿಫೋ ವ್ಯವಸ್ಥೆಯನುಸಾರ ಮೊದಲು ಬಂದವರಿಗೆ ಮೊದಲ ಸೇವೆ ಲಭ್ಯವಾಗಲಿದೆ.

– ಗಾಯತ್ರಿ ದೇವಿ, ಜಂಟಿ ಸಾರಿಗೆ ಆಯುಕ್ತರು, ಶಿವಮೊಗ್ಗ ವಿಭಾಗ

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next