Advertisement

ಉಪಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷಗಳ ಪಾರಮ್ಯ

09:57 AM Oct 26, 2019 | Team Udayavani |

ವಿಧಾನಸಭೆ ಚುನಾವಣೆಗಳ ಜೊತೆಗೆ 18 ರಾಜ್ಯಗಳ 51 ಅಸೆಂಬ್ಲಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷ ಪಾರಮ್ಯ ಮೆರೆದಿದ್ದು, 51ರ ಪೈಕಿ 26 ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಉಳಿದ ಕ್ಷೇತ್ರಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿವೆ. ಎರಡು ಲೋಕಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆದಿದ್ದು, ಮಹಾರಾಷ್ಟ್ರದ ಸತಾರಾದಲ್ಲಿ ಎನ್‌ಸಿಪಿ ಅಭ್ಯರ್ಥಿ ಶ್ರೀನಿವಾಸ್‌ ಪಾಟೀಲ್‌ ಜಯ ಗಳಿಸಿದ್ದರೆ, ಬಿಹಾರದ ಸಮಸ್ಟಿಪುರದಲ್ಲಿ ಲೋಕಜನಶಕ್ತಿ ಪಕ್ಷದ ಪ್ರಿನ್ಸ್‌ ರಾಜ್‌ ಗೆದ್ದಿದ್ದಾರೆ. ತಮಿಳುನಾಡಿನ ವಿಕ್ರವಂಡಿ ಮತ್ತು ನಂಗುನೇರಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಈ ಹಿಂದೆ ಈ ಎರಡೂ ಕ್ಷೇತ್ರಗಳು ಡಿಎಂಕೆ -ಕಾಂಗ್ರೆಸ್‌ ಮೈತ್ರಿಯ ವಶದಲ್ಲಿದ್ದವು. ತೆಲಂಗಾಣದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಕೈಯ್ಯಲ್ಲಿದ್ದ ಹುಜೂರ್‌ನಗರ ಕ್ಷೇತ್ರವನ್ನು ಟಿಆರ್‌ಎಸ್‌ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಪುದುಚೇರಿಯಲ್ಲಿ ಕಾಮರಾಜನಗರ ಕ್ಷೇತ್ರವು ಕಾಂಗ್ರೆಸ್‌ ಪಾಲಾಗಿದೆ.

Advertisement

ಖಾತೆ ತೆರೆದ ಒವೈಸಿ ಪಕ್ಷ
ಅಸಾದುದ್ದೀನ್‌ ಒವೈಸಿಯ ಎಐಎಂಐಎಂ ಪಕ್ಷ ಬಿಹಾರದ ವಿಧಾನಸಭೆ ಉಪ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ತನ್ನ ಖಾತೆ ತೆರೆದಿದೆ. ಈ ಮೂಲಕ ಹಿಂದಿ ಹಾರ್ಟ್‌ಲ್ಯಾಂಡ್‌ನ‌ಲ್ಲೂ ಪಕ್ಷ ನೆಲೆಯೂರುವ ಲಕ್ಷಣಗಳು ಗೋಚರಿಸಿದೆ. ಕೃಷ್ಣಗಂಜ್‌ ಕ್ಷೇತ್ರದ ಎಐಎಂಐಎಂ ಅಭ್ಯರ್ಥಿ ಖಮ್ರುಲ್‌ ಹೋಡಾ 19,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸ್ವೀಟಿ ಸಿಂಗ್‌ ವಿರುದ್ಧ ಗೆದ್ದಿದ್ದಾರೆ. ಬಿಹಾರದಲ್ಲಿ ಆಡಳಿತಾರೂಢ ಜೆಡಿಯುಗೆ ಹಿನ್ನಡೆಯಾಗಿದ್ದು, ನಾಲ್ಕರ ಪೈಕಿ ಒಂದರಲ್ಲಷ್ಟೇ ಜಯ ಗಳಿಸಿದೆ. ಆರ್‌ಜೆಡಿ ಎರಡರಲ್ಲಿ ಗೆದ್ದಿದೆ.

ಗುಜರಾತ್‌ನಲ್ಲಿ ತಲಾ 3
ಗುಜರಾತ್‌ನ 6 ಅಸೆಂಬ್ಲಿ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 3 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ವಿಶೇಷವೆಂದರೆ, ಹಿಂದುಳಿದ ವರ್ಗಗಳ ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಅಲ್ಪೇಶ್‌ ಠಾಕೂರ್‌ ಗುಜರಾತ್‌ ಉಪಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ರಾಧಾನ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಲ್ಪೇಶ್‌, ಕಾಂಗ್ರೆಸ್‌ ಅಭ್ಯರ್ಥಿ ರಘುಬಾಯ್‌ ದೇಸಾಯ್‌ ವಿರುದ್ಧ 3,500 ಮತಗಳ ಅಂತರದಿಂದ ಸೋತಿದ್ದಾರೆ. ಕಾಂಗ್ರೆಸ್‌ ಶಾಸಕರಾಗಿದ್ದ ಅಲ್ಪೇಶ್‌ ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

ಉತ್ತರಪ್ರದೇಶದಲ್ಲಿ ಎಸ್‌ಪಿಗೆ ಲಾಭ
ಉ.ಪ್ರದೇಶದ 11 ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಲಾಭ ವಾಗಿದೆ. 11ರ ಪೈಕಿ ಎನ್‌ಡಿಎಗೆ 8ರಲ್ಲಿ ಜಯ ಸಿಕ್ಕರೆ, ಎಸ್‌ಪಿ 3 ಸ್ಥಾನಗಳನ್ನು ತನ್ನದಾಗಿ ಸಿಕೊಂಡಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದೆ.

ಕೇರಳದಲ್ಲಿ ಯುಡಿಎಫ್ಗೆ
3, ಎಲ್‌ಡಿಎಫ್ಗೆ 2
ಕೇರಳದಲ್ಲಿನ ಆಡಳಿತಾರೂಢ ಎಲ್‌ಡಿಎಫ್ಗೆ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಗೆದ್ದರೆ, ಸಿಪಿಎಂ ನೇತೃತ್ವದ ಎಲ್‌ಡಿಎಫ್ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಶೂನ್ಯ ಸಂಪಾದಿಸಿದೆ. ಬಹುನಿರೀಕ್ಷಿತ ಮಂಜೇಶ್ವರದಲ್ಲಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಅಭ್ಯರ್ಥಿ ಎಂ.ಸಿ.ಕರೀಮುದ್ದೀನ್‌ 7,923 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರಿಗೆ 65,407 ಮತಗಳು ಬಂದಿದ್ದರೆ, ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರಿಗೆ 57,484 ಮತಗಳು, ಸಿಪಿಎಂ ಅಭ್ಯರ್ಥಿ ಶಂಕರ ರೈ ಅವರಿಗೆ 38,233 ಮತಗಳು ಸಿಕ್ಕಿವೆ. ವಟ್ಟಿಯೂರುಕಾವು ಕ್ಷೇತ್ರದಲ್ಲಿ ಎಲ್‌ಡಿಎಫ್ನ ವಿ.ಕೆ.ಪ್ರಶಾಂತ್‌ ಕಾಂಗ್ರೆಸ್‌ ಅಭ್ಯರ್ಥಿ ಕೆ.ಮೋಹನ್‌ ಕುಮಾರ್‌ ವಿರುದ್ಧ 14,465 ಮತಗಳ ಅಂತರದಿಂದ ಗೆದ್ದಿದ್ದಾರೆ. ಕೊನ್ನಿ ಕ್ಷೇತ್ರದಿಂದ ಎಲ್‌ಡಿಎಫ್ನ ಕೆ.ಯು.ಜೆನೀಶ್‌ ಕುಮಾರ್‌ 9,953 ಮತಗಳಿಂದ ಗೆದ್ದಿದ್ದಾರೆ. ಅರೂರ್‌ನಲ್ಲಿ ಶನಿಮೋಳ್‌ ಉಸ್ಮಾನ್‌ 69,356 ಮತ ಪಡೆದು ಜಯಸಾಧಿಸಿದ್ದಾರೆ. ಕಾಂಗ್ರೆಸ್‌ನ ಟಿ.ಜೆ.ವಿನೋದ್‌ ಎರ್ನಾಕುಳಂನಲ್ಲಿ 37,891 ಮತಗಳನ್ನು ಪಡೆದು ಗೆದ್ದಿದ್ದಾರೆ. ಈ ಜಯದಿಂದ ಕೇರಳ ವಿಧಾನಸಭೆಯಲ್ಲಿ ಎಲ್‌ಡಿಎಫ್ ಸ್ಥಾನಗಳ ಸಂಖ್ಯೆ 93, ಯುಡಿಎಫ್ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಒಟ್ಟು ಸದಸ್ಯ ಬಲ 140.

Advertisement
Advertisement

Udayavani is now on Telegram. Click here to join our channel and stay updated with the latest news.

Next