Advertisement

ರಾಜ್ಯದಲ್ಲಿ ಟ್ರಾನ್ಸ್‌ಜೆಂಡರ್‌ ನೀತಿ ಜಾರಿ

10:34 AM Jan 22, 2018 | |

ಬೆಂಗಳೂರು: ಜೋಗಪ್ಪ, ಜೋಗ್ತಾ, ಕೋಥಿ, ಶಿವಶಕ್ತಿ, ಅರವಾಣಿ, ಅಂತರ್ಲಿಂಗಿ ವ್ಯಕ್ತಿಗಳು, ಹೆಣ್ಣಾಗಿ ಹುಟ್ಟಿ ಗಂಡಸಾಗುವುದು, ಗಂಡಾಗಿ ಹುಟ್ಟಿ ಹೆಣ್ಣಾಗುವುದು… ಇಂಥವರು ಇನ್ನು ಮುಂದೆ ಲಿಂಗತ್ವ ಅಲ್ಪಸಂಖ್ಯಾತರು ಅಥವಾ ತೃತೀಯ ಲಿಂಗಿಗಳಲ್ಲ, ಬದಲಾಗಿ
ಟ್ರಾನ್ಸ್‌ ಜೆಂಡರ್‌ಗಳು ಅಷ್ಟೇ ಅಲ್ಲ, ಟ್ರಾನ್ಸ್‌ಜೆಂಡರ್‌ ವರ್ಗದವರಿಗೆ ಶಿಕ್ಷಣ, ಉದ್ಯೋಗ, ವಸತಿ ಮತ್ತು ಸಾರ್ವಜನಿಕ ಸೌಕರ್ಯದಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಭಿಕ್ಷಾಟನೆ ವೃತ್ತಿಯಿಂದ ಅವರನ್ನು ಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಲಾಗುತ್ತದೆ.

Advertisement

ಸುಪ್ರೀಂಕೋರ್ಟ್‌ ಆದೇಶದಂತೆ ಲಿಂಗತ್ವ ಅಲ್ಪಸಂಖ್ಯಾತರು ಅಥವಾ ತೃತೀಯ ಲಿಂಗಿಗಳನ್ನು ಟ್ರಾನ್ಸ್‌ಜೆಂಡರ್‌ಗಳು ಎಂದು 
ಪರಿಗಣಿಸಿ ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರನ್ನೂ ಜನ ಸಾಮಾನ್ಯರಂತೆ ನೋಡುವ ದೃಷ್ಟಿಯಿಂದ ರಾಜ್ಯ ಸರ್ಕಾರ
ಕರ್ನಾಟಕ ರಾಜ್ಯ ಟ್ರಾನ್ಸ್‌ಜೆಂಡರ್ ನೀತಿ – 2017 ಜಾರಿಗೆ ತಂದಿದ್ದು, ಇದರಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರಾಜ್ಯದಲ್ಲಿ ಸುಮಾರು 30 ಸಾವಿರ ಟ್ರಾನ್ಸ್‌ಜೆಂಡರ್ಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರಿಗೆ ಸಂವಿಧಾನದಲ್ಲಿ ಖಾತರಿಪಡಿಸಿರುವ
ಘನತೆಯಿಂದ, ತಾರತಮ್ಯವಿಲ್ಲದ, ಸಮನಾಗಿ ಪಡೆಯುವ ಮತ್ತು ಪರಿಹರಿಸುವ ವ್ಯವಸ್ಥೆಗಳನ್ನು ಜಾರಿಗೆ ತರುವುದು, ಅವುಗಳ ಅನುಷ್ಠಾನಕ್ಕೆ ಮುಂದಾಗುವುದು ಈ ನೀತಿಯ ಭಾಗವಾಗಿದೆ.

ಹೊಸ ನೀತಿಯಲ್ಲಿ ಏನೇನಿದೆ?: ಟ್ರಾನ್ಸ್‌ಜೆಂಡರ್‌ ವಯಸ್ಸಾದವರಿಗೆ ವೃದ್ಧಾಶ್ರಮ ಸ್ಥಾಪಿಸುವುದರೊಂದಿಗೆ ಕಡ್ಡಾಯ ಪಿಂಚಣಿ
ವ್ಯವಸ್ಥೆ ಮಾಡುವುದು, ಶಿಕ್ಷಣದಲ್ಲಿ ಪ್ರವೇಶಕ್ಕೆ ಆದ್ಯತೆ ಕಲ್ಪಿಸುವುದು. ಲಿಂಗತ್ವದ ಆಧಾರದ ಮೇಲೆ ಸಾರ್ವಜನಿಕ ಸ್ಥಳ ಮತ್ತು ಸಂಪನ್ಮೂಲ ಬಳಸುವ ಸಂದರ್ಭದಲ್ಲಿ ತಾರತಮ್ಯ ನಡೆಯದಂತೆ ನೋಡಿಕೊಳ್ಳುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಟ್ರಾನ್ಸ್‌ ಜೆಂಡರ್‌ ಗಳಿಗಾಗಿ ಪ್ರತ್ಯೇಕ ಕೋಶ ಸ್ಥಾಪಿಸಿ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿ ಅವರಿಗೆ ರಾಜ್ಯ ಮಟ್ಟದಲ್ಲಿ ನೀತಿಯ ಅನುಷ್ಠಾನ ಮತ್ತು ವಾರ್ಷಿಕ ಕ್ರಿಯಾಯೋಜನೆ ರೂಪಿಸುವ
ಜವಾಬ್ದಾರಿ ಮತ್ತು ಜಿಲ್ಲಾ ಮಟ್ಟದಲ್ಲಿ ಇಲಾಖೆ ಉಪನಿರ್ದೇಶಕರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿ ಸ್ಥಳೀಯ ಮಟ್ಟದ ಜವಾಬ್ದಾರಿ ವಹಿಸುವುದು. ರಾಜ್ಯ ಮಟ್ಟದಲ್ಲಿ ಟ್ರಾನ್ಸ್‌ ಜೆಂಡರ್‌ ಬೆಂಬಲ ಘಟಕ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಅನುಷ್ಠಾನವಾದ ಮೊದಲ ವರ್ಷದಲ್ಲೇ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಲಾಗಿದ್ದು, ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಕಾಲಮಿತಿಗಳನ್ನು ನಿಗದಿಪಡಿಸಲಾಗಿದೆ.

ಸಮಾನ ಅವಕಾಶ ನೀಡುವ ನೀತಿ
ಟ್ರಾನ್ಸ್‌ಜೆಂಡರ್‌ಗಳನ್ನು ತೃತೀಯ ಲಿಂಗಿಗಳೆದು ಮಾನ್ಯತೆ ನೀಡಿ 2014ರ ಏ.15ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಅವರಿಗೆ ಸ್ತ್ರೀ, ಪುರುಷರಂತೆ ಸಮಾನಾವಕಾಶಗಳನ್ನು ನೀಡಬೇಕು ಎಂದು ಹೇಳಿತ್ತು. ಶಿಕ್ಷಣ, ನೇಮಕಾತಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆರಂಭಿಸಲು ಸೂಚಿಸಿತ್ತು. ಅದರಂತೆ ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ವಿಲೀನಗೊಳಿಸುವ ಉದ್ದೇಶದಿಂದ ಪ್ರತ್ಯೇಕ ನೀತಿ ಜಾರಿಗೊಳಿಸಲು 2017ರ ಅಕ್ಟೋಬರ್‌ನಲ್ಲಿ
ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಅದರಂತೆ ಸರ್ಕಾರ ಕರ್ನಾಟಕ ರಾಜ್ಯ ಟ್ರಾನ್ಸ್‌  ಜೆಂಡರ್ ನೀತಿ- 2017 ಜಾರಿಗೆ ತಂದಿದೆ.

ಅತ್ಯಾಚಾರ ವ್ಯಾಪ್ತಿಗೆ ಟ್ರಾನ್ಸ್‌ಜೆಂಡರ್‌
ಪ್ರಸ್ತುತ ಅತ್ಯಾಚಾರ, ಲೈಂಗಿಕ ಹಲ್ಲೆಗೆ ಸಂಬಂಧಿಸಿದಂತೆ ಇರುವ ಭಾರತೀಯ ದಂಡ ಸಹಿತೆಯ (ಐಪಿಸಿ) ಪರಿಚ್ಛೇದ 375ನಲ್ಲಿ ಟ್ರಾನ್ಸ್‌ ಜೆಂಡರ್‌ಗಳನ್ನು ಸೇರಿಸಿಕೊಂಡಿಲ್ಲ. ಹೀಗಾಗಿ ಇವರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ಹೇಗೆ ಪರಿಗಣಿಸಬೇಕು ಎಂಬುದು ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಐಪಿಸಿ 375ನಲ್ಲಿ ತಾರತಮ್ಯವಿಲ್ಲದಂತೆ ನೋಡಿಕೊಳ್ಳಲು
ಟ್ರಾನ್ಸ್‌ಜೆಂಡರ್‌ಗಳನ್ನು ಒಳಗೊಂಡಂತೆ ತಿದ್ದುಪಡಿ ಮಾಡಬೇಕು ಎಂದು ನೀತಿಯಲ್ಲಿ ಹೇಳಲಾಗಿದೆ. ಜತೆಗೆ ಸಾರ್ವಜನಿಕ
ಅಭಿಪ್ರಾಯ ಪಡೆದು ಸಲಿಂಗ ಕಾಮ (377) ನಿಷೇಧ ಮಾಡಬೇಕು ಎಂದೂ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಮಕ್ಕಳ-ವ್ಯಕ್ತಿಗಳ ಲಿಂಗತ್ವ ಪರಿವರ್ತನೆಗೊಳಿಸಲು ವಿದ್ಯುತ್‌ ಆಘಾತ ಚಿಕಿತ್ಸೆ ಕೈಗೊಳ್ಳುವ ಅಥವಾ ಇನ್ನಾವುದೇ ರೀತಿಯ ಅನೈತಿಕ ಚಿಕಿತ್ಸೆ ನೀಡುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಹೇಳಲಾಗಿದೆ. ಪ್ರತಿ ಪೊಲೀಸ್‌ ಠಾಣೆಯಲ್ಲಿ ಟ್ರಾನ್ಸ್‌ಜೆಂಡರ್‌ ವಿರುದ್ಧ ನಡೆಯುವ ಅಪರಾಘಗಳನ್ನು ದಾಖಲಿಸಿ ಅಂಕಿ ಸಂಖ್ಯೆ ಒಗ್ಗೂಡಿಸಬೇಕು. ತಾರತಮ್ಯ ಅಥವಾ ದೌರ್ಜನ್ಯದ ವಿರುದ್ಧ ಕಾನೂನು ಪರಿಹಾರ ಪಡೆಯುವವರಿಗೆ ಉಚಿತ ಕಾನೂನು ನೆರವು ಒದಗಿಸಬೇಕು ಎಂದೂ ನಿರ್ಧರಿಸಲಾಗಿದೆ.

Advertisement

ಶಿಕ್ಷಣ ಮತ್ತು ಉದ್ಯೋಗ
ಪ್ರಾಥಮಿಕ ಮತ್ತು ಪ್ರೌಡಶಾಲೆಗಳಲ್ಲಿ ಉಚಿತ ಮತ್ತುಕಡ್ಡಾಯ ಶಿಕ್ಷಣದ ಹಕ್ಕು ಅನುಷ್ಠಾನಗೊಳಿಸುವುದು.

ಶಾಲೆ, ಕಾಲೇಜುಗಳಲ್ಲಿ ಪರಿಷ್ಕೃತ ಪಠ್ಯಕ್ರಮ. ಐಟಿಐ, ವಿನ್ಯಾಸ, ಯೋಜನೆ ಮತ್ತು ನಿರ್ವಹಣಾ ಕಾಲೇಜುಗಳು, ನರ್ಸಿಂಗ್‌ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿ.

ಲಿಂಗತ್ವ ಖಾತರಿಪಡಿಸದ ವಿದ್ಯಾರ್ಥಿಗಳಿಗೆ ದೌರ್ಜನ್ಯ, ಕಿರುಕುಳ ನಡೆಯದಂತೆ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ತಾರತಮ್ಯ ವಿರೋಧಿ ಕೋಶಗಳನ್ನು ಆರಂಭಿಸುವುದು.

ಆಧಾರ್‌, ಚುನಾವಣಾ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಪಡಿತರ ಚೀಟಿ, ಪ್ಯಾನ್‌ಕಾರ್ಡ್‌, ವಿಮೆ ಪತ್ರಗಳು, ಶಾಲಾ-ಕಾಲೇಜು
ಪ್ರಮಾಣಪತ್ರಗಳನ್ನು ಒದಗಿಸುವುದು. 

ಐಎಎಸ್‌, ಯುಜಿಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಆಪ್ತ ಸಮಾಲೋಚನೆ ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರ ಸ್ಥಾಪನೆ.

ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಅವಕಾಶ. ನಿರ್ವಹಣೆಗೆ ಸಾಲ ನೀತಿ ರೂಪಿಸುವುದು.

ಪ್ರದೀಪ್‌ಕುಮಾರ್‌ ಎಂ

Advertisement

Udayavani is now on Telegram. Click here to join our channel and stay updated with the latest news.

Next