Advertisement

ಜನರ ಆಸಕ್ತಿ ಅನುಸಾರ ತರಬೇತಿ ನೀಡಿ

04:44 PM May 27, 2022 | Team Udayavani |

ಕೊಪ್ಪಳ: ಜಿಲ್ಲೆ ಅವಶ್ಯಕತೆ ಹಾಗೂ ಸಾರ್ವಜನಿಕರ ಆಸಕ್ತಿಗೆ ಅನುಗುಣವಾಗಿ ತರಬೇತಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಿ ಎಂದು ಜಿಪಂ ಸಿಇಒ ಬಿ ಫೌಜಿಯಾ ತರನ್ನುಮ್‌ ಆರ್‌ಸೆಟಿ ನಿರ್ದೇಶಕರಿಗೆ ಸೂಚಿಸಿದರು.

Advertisement

ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಗುರುವಾರ ಕೊಪ್ಪಳ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವರ್ಷದ 365 ದಿನವೂ ಸಾರ್ವಜನಿಕರಿಗೆ ತರಬೇತಿ ನೀಡಬೇಕು ಎಂಬ ನಿಯಮವಿದೆ. ಅದರಂತೆ ಹೈನುಗಾರಿಕೆ, ಕುರಿ ಸಾಗಾಣಿಕೆ, ಜೇನು ಕೃಷಿ, ಅಣಬೆ ಕೃಷಿ, ಟೈಲರಿಂಗ್‌, ಉಪ್ಪಿನಕಾಯಿ ತಯಾರಿಕೆ, ಮೊಬೈಲ್‌ ರಿಪೇರಿ ಸೇರಿದಂತೆ ಒಟ್ಟು 65 ವಿಷಯಗಳಲ್ಲಿ ಈಗಾಗಲೇ ತರಬೇತಿ ನೀಡಲಾಗುತ್ತಿದೆ. ಇದರ ಹೊರತಾಗಿ ಜಿಲ್ಲೆಯ ಜನರ ಬೇಡಿಕೆ, ಆಸಕ್ತಿ ಏನು ಎಂಬುದನ್ನು ಅರಿತು ಅದಕ್ಕೆ ಅನುಗುಣವಾಗಿ ತರಬೇತಿ ವಿಷಯ ಆಯ್ಕೆ ಮಾಡಿಕೊಳ್ಳಿ ಎಂದರು.

ಕೌಶಲ್ಯಾಭಿವೃದ್ಧಿ ಇಲಾಖೆಗೆ ಅನೇಕ ಅಭ್ಯರ್ಥಿಗಳು ತರಬೇತಿ ಮಾಹಿತಿಗೆ ಸಂಪರ್ಕಿಸುತ್ತಾರೆ. ಆರ್‌ಸೆಟಿ ನೀಡುವ ಉಚಿತ ತರಬೇತಿ ನೀಡಿ ಹಾಗೂ ನಿಮ್ಮನ್ನು ಸಂಪರ್ಕಿಸುವ ಅಭ್ಯರ್ಥಿಗಳ ಆಸಕ್ತಿ ಅರಿತು ಅದರ ಅನುಸಾರ ಆರ್‌ಸೆಟಿ ಸಂಸ್ಥೆಯಲ್ಲಿ ತರಬೇತಿ ನೀಡಲು ವ್ಯವಸ್ಥೆ ಕಲ್ಪಿಸಿ. ಅದರಂತೆ ಸಂಸ್ಥೆಯಲ್ಲಿ ತರಬೇತಿ ಪಡೆದ ಬಹಳಷ್ಟು ಅಭ್ಯರ್ಥಿಗಳು ಸ್ವಯಂ ಉದ್ಯೋಗ ಮಾಡುತ್ತಿರುವ ಕುರಿತು ಸಂಸ್ಥೆಗೆ ಮಾಹಿತಿ ನೀಡುತ್ತಾರೆ. ಅಂತಹವರನ್ನು ಸಂಪರ್ಕಿಸಿ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದ್ದರೆ ಮಾಡಿಕೊಡಿ. ಮತ್ತು ತರಬೇತಿಯನ್ನು ಎಷ್ಟು ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಂಡಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಿ ಎಂದರು.

ಸ್ವಯಂ ಉದ್ಯೋಗ ಕೈಗೊಳ್ಳಲು ಅಭ್ಯರ್ಥಿಗಳಿಗೆ ಬಂಡವಾಳದ ಸಮಸ್ಯೆ ಎದುರಾಗಬಹುದು. ಅಂತಹವರಿಗೆ ಬ್ಯಾಂಕಿನಿಂದ ಸುಲಭ ಸಾಲ ಸೌಲಭ್ಯ ದೊರೆಯಬೇಕು. ಈ ಬಗ್ಗೆ ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಎಲ್ಲ ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಆರ್‌ಸೆಟಿ ಸಂಸ್ಥೆಯಿಂದ ಕಳೆದ ಮೂರು ವರ್ಷಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗಾಗಿಯೇ ಒಂದು ದಿನದ ಬ್ಯಾಂಕ್‌ ಸಾಲ ಮೇಳ ಆಯೋಜಿಸಿ. ಈ ಮೇಳದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಕ್ರಮವಹಿಸಿ. ಇದರಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದವರ ಮಾಹಿತಿ ಆಧರಿಸಿ, ಅಗತ್ಯವಿದ್ದರೆ ಬ್ಯಾಂಕ್‌ಗಳಿಗೆ ಸಾಲ ಸೌಲಭ್ಯ ಒದಗಿಸಲು ಜಿಲ್ಲಾಡಳಿತದಿಂದ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

Advertisement

ಆರ್‌ಸೆಟಿ ಸಂಸ್ಥೆಗೆ ವ್ಯವಸ್ಥಿತ ಕಟ್ಟಡದ ಅಗತ್ಯವಿದೆ. ಆದ್ದರಿಂದ ತರಬೇತಿ ಸಂಸ್ಥೆಯ ಕಟ್ಟಡವನ್ನು ನಿರ್ಮಿಸಲು ಕಂದಾಯ ಇಲಾಖೆ ಸಂಪರ್ಕಿಸಿ ಒಂದು ವಾರದೊಳಗೆ ಕನಿಷ್ಟ ಒಂದು ಎಕರೆ ಪ್ರದೇಶ ಗುರುತಿಸಿ. ಈ ಜಾಗದಲ್ಲಿ ತರಬೇತಿಗೆ ಪೂರಕವಾಗುವ ಎಲ್ಲ ಸೌಲಭ್ಯಗಳಿರುವಂತೆ ವ್ಯವಸ್ಥಿತ ನಕ್ಷೆ ತಯಾರಿಸಿ, ಗುಣಮಟ್ಟದ ಕಟ್ಟಡ ನಿರ್ಮಿಸಲು ಕ್ರಮಕೈಗೊಳ್ಳಿ. ಸಂಸ್ಥೆಯಿಂದ ತರಬೇತಿ ಪಡೆದು ಜೀವನದಲ್ಲಿ ಯಶಸ್ವಿಯಾದ ಸಾಧಕರನ್ನು ಗುರುತಿಸಿ ಅವರ ಸಾಧನೆಯ ಬಗ್ಗೆ ಎನ್‌ಐಸಿ ಅವರ ಸಹಕಾರದೊಂದಿಗೆ ಜಿಲ್ಲಾಡಳಿತದ ವೆಬ್‌ಸೈಟ್‌ ನಲ್ಲಿ ಪ್ರಕಟಿಸಿ. ಇದರಿಂದ ಬೇರೆಯವರಿಗೆ ಸ್ಫೂರ್ತಿ ದೊರಕುತ್ತದೆ ಹಾಗೂ ತರಬೇತಿ ಸಂಸ್ಥೆಯ ಬಗ್ಗೆ ವಿಶ್ವಾಸವೂ ಹೆಚ್ಚಾಗುತ್ತದೆ ಎಂದರು.

ಆರ್‌ಸೆಟಿ ನಿರ್ದೇಶಕ ಅಯ್ಯಪ್ಪ ಮಾಲಗತ್ತಿ, ಜಂಟಿ ಕೈಗಾರಿಕಾ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಾಣೇಶ, ಲೀಡ್‌ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಸಿ.ಟಿ. ಹಂಸನಂದ, ಕೈಮಗ್ಗ ಮತ್ತು ಜವಳಿ ಇಲಾಖೆಯ ಭಾರತಿ ಬಿದ್ರಿಮಠ, ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಚಾರ್ಯ ಜಿ.ಕೆ. ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next