ಮಂಡ್ಯ: ಏಳೆಂಟು ತಿಂಗಳ ಹಸುಗೂಸುವಿನೊಂದಿಗೆ ಜಿಲ್ಲಾಸ್ಪತ್ರೆಗೆ ಬೈಕ್ನಲ್ಲಿ ತೆರಳುತ್ತಿದ್ದ ದಂಪತಿಯನ್ನು ತಡೆದು ದಂಡ ಪಾವತಿಸುವವರೆಗೂ ತಾಯಿ ಮತ್ತು ಮಗುವನ್ನು ವಾಹನ ದಟ್ಟಣೆಯ ರಸ್ತೆ ಬದಿ ಪಾದಚಾರಿ ಮಾರ್ಗದಲ್ಲಿರಿಸಿದ ಪೊಲೀಸ್ ಅಧಿಕಾರಿಯ ಮಾನವೀಯತೆ ಇಲ್ಲದ ನಡೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಯಗುಚಗುಪ್ಪೆ ಗ್ರಾಮದ ಅಭಿಷೇಕ್ ಎಂಬಾತ ತನ್ನ ಬೈಕ್ನಲ್ಲಿ ಏಳೆಂಟು ತಿಂಗಳ ಹಸುಗೂಸು ಹಾಗೂ ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾನೆ. ಬೈಕ್ ಸವಾರನಾಗಿದ್ದ ಅಭಿಷೇಕ್ ಹೆಲ್ಮಟ್ ಧರಿಸದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಎಎಸ್ಐ ರಘುಪ್ರಕಾಶ್ ಎಂಬುವವರು ಬೈಕ್ ಅಡ್ಡಗಟ್ಟಿ ಕೀ ಕಸಿದು 500 ರೂ. ದಂಡ ಪಾವತಿಸಿ, ಬೈಕ್ ತೆಗೆದುಕೊಂಡು ತೆರಳುವಂತೆ ತಾಕೀತು ಮಾಡಿದರು. ಸಂಚಾರ ಪೊಲೀಸ್ ಅಧಿಕಾರಿಯ ಆದೇಶದಿಂದ ಭೀತಿಗೊಂಡ ಅಭಿಷೇಕ್ ಪತ್ನಿ ಹಾಗೂ ಮಗುವನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾದಚಾರಿ ಮಾರ್ಗದಲ್ಲಿ ಕುಳ್ಳಿರಿಸಿ, ವಿವಿ ರಸ್ತೆಯ ಎಟಿಎಂಗೆ ತೆರಳಿ ಹಣ ಡ್ರಾ ಮಾಡಿಕೊಂಡು ಬಂದು ದಂಡ ಪಾವತಿಸಿ, ಪೊಲೀಸರಿಂದ ಬೈಕ್ ಪಡೆದು ಪತ್ನಿ ಹಾಗೂ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬೈಕ್ ನಿಲ್ಲಿಸಿದ ವೇಳೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ರಘುಪ್ರಕಾಶ್ ಎಂಬುವವರು ಸಾರ್ವಜನಿಕರು ಹಾಗೂ ದಂಪತಿ ಮಾಡಿಕೊಂಡ ಮನವಿಗೆ ಕ್ಯಾರೆ ಎನ್ನದೇ ದಂಡ ಪಾವತಿಸಿ, ಬೈಕ್ ಪಡೆಯಬೇಕೆಂದು ಅದೇಶಿಸಿದ ಪೊಲೀಸ್ ಅಧಿಕಾರಿ ಮಾನವೀಯತೆಯಿಂದ ವರ್ತಿಸಿ, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ತಿಳಿ ಹೇಳಿ ಬೈಕ್ ಸವಾರನನ್ನು ಕಳುಹಿಸಿದ್ದರೆ, ಇಲಾಖೆಯ ಗೌರವ ಹೆಚ್ಚಾಗುತ್ತಿರಲಿಲ್ಲವೇ, ಸಣ್ಣ-ಪುಟ್ಟ ತಪ್ಪುಗಳಿಗೂ ನಿರ್ಧಯವಾಗಿ ನಡೆದುಕೊಳ್ಳುವ ಪೊಲೀಸ್ ಇಲಾಖೆಯ ಕೆಲ ಅಧಿಕಾರಿ, ಸಿಬ್ಬಂದಿ ನಡತೆ ಇಲಾಖೆ ಮೇಲಿನ ಸಾರ್ವಜನಿಕರ ನಂಬಿಕೆ ಕಡಿಮೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.