Advertisement

ಅಪಾಯದ ಅಂಚಿನಲ್ಲಿ ಪ್ರವಾಸಿ ತಾಣಗಳು

12:53 PM Jun 15, 2022 | Team Udayavani |

ಬಾಗಲಕೋಟೆ: ದೇಶ-ವಿದೇಶಿಗರನ್ನು ಕೈ ಬೀಸಿ ತನ್ನತ್ತ ಸೆಳೆಯುವ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣಗಳು, ಈಗ ಅಪಾಯದ ಅಂಚಿನಲ್ಲಿವೆ. ಈ ಮಾತನ್ನು ಯಾವುದೇ ಸಾಮಾನ್ಯ ವ್ಯಕ್ತಿಗಳು-ರಾಜಕೀಯ ಪಕ್ಷಗಳು, ವಿರೋಧ ಪಕ್ಷಗಳು ಅಥವಾ ಪ್ರವಾಸಿ ತಾಣಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ ಸಂಘಟನೆಗಳು ಹೇಳಿದ ಮಾತಲ್ಲ. ಸ್ವತಃ ಈ ರಾಜ್ಯದ ಪ್ರವಾಸೋದ್ಯಮ ಸಚಿವರಾಗಿರುವ ಆನಂದ ಸಿಂಗ್‌ ಹೇಳಿದ ಮಾತಿದು.

Advertisement

ಹೌದು. ಹಲವಾರು ವರ್ಷಗಳಿಂದ ಈ ಎಚ್ಚರಿಕೆ ಕೊಟ್ಟರೂ ಎಲ್ಲ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರಗಳು ನಿರ್ಲಕ್ಷé ಮಾಡುತ್ತಲೇ ಬಂದಿವೆ. ಇದೀಗ ಈ ಸತ್ಯವನ್ನು ಒಪ್ಪಿಕೊಂಡಿದೆ. ಆದರೆ ಇದಕ್ಕೇನು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆ ನಿಟ್ಟಿನಲ್ಲಿ ಯೋಜನೆ-ಯೋಚನೆ ಅಥವಾ ಕ್ರಮಗಳು ನಡೆಯುತ್ತಿಲ್ಲ ಎಂದು ಅಸಂಖ್ಯಾತ ಪ್ರವಾಸಿಗರು, ಜಿಲ್ಲೆಯ ಸಂಶೋಧಕರು, ಪ್ರವಾಸಿ ತಾಣಗಳ ಆರಾಧಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಒಪ್ಪಿಕೊಂಡ ಸರ್ಕಾರ:

ಜಿಲ್ಲೆಯ ಪ್ರವಾಸಿ ತಾಣಗಳು ಅಪಾಯದ ಅಂಚಿನಲ್ಲಿವೆ ಎಂದು ಸ್ವತಃ ಈ ರಾಜ್ಯದ ಪ್ರವಾಸೋದ್ಯಮ ಸಚಿವರಾಗಿರುವ ಆನಂದ ಸಿಂಗ್‌ ಹೇಳಿದ್ದಾರೆ. ಇದು ಅಕ್ಷರಶಃ ಸತ್ಯ. ಇದನ್ನು ಜಿಲ್ಲೆಯ ಸಂಘಟನೆಗಳು, ಪ್ರವಾಸಿ ಮಾರ್ಗದರ್ಶಿಗಳು, ಹಲವಾರು ಬಾರಿ ಸರ್ಕಾರಕ್ಕೆ ಮನವಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಹೃದಯ ಯೋಜನೆ ಜಿಲ್ಲೆಗೆ ಮಂಜೂರಾದಾಗ ಜಿಲ್ಲೆಯ ಬಹಳಷ್ಟು ಜನ ಖುಷಿ ಪಟ್ಟಿದ್ದರು. ಆದರೆ ಹೃದಯ ಯೋಜನೆ ಅನುಷ್ಠಾನದಲ್ಲೂ ಹಲವಾರು ನ್ಯೂನತೆಯಾಗಿದ್ದು, ಪ್ರವಾಸಿಗರ ಹೃದಯ ಕಲಕುವಂತಾಗಿದೆ ಎಂಬ ಮಾತಾಗಿದೆ. ಪ್ರವಾಸಿ ತಾಣಗಳು ಹೀಗೆಯೇ ಇರಬೇಕೆಂಬ ನಿಯಮಗಳನ್ನು ಯುನೆಸ್ಕೋ ತಂಡ ಹಾಕಿದೆ. ಆ ನಿಯಮ ಇಲ್ಲಿ ಸ್ಪಷ್ಟವಾಗಿ ಉಲ್ಲಂಘನೆಯಾಗಿವೆ ಎಂದು ಸ್ವತಃ ಸಚಿವರೇ ಹೇಳಿದ್ದಾರೆ. ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ತಾಣಗಳ ಸುತ್ತ ಮನೆಗಳು, ಕಟ್ಟಡಗಳು, ವಾಣಿಜ್ಯ ಸಂಕೀರ್ಣ ಹೀಗೆ ಯುನೆಸ್ಕೋ ಮಾನದಂಡ ಉಲ್ಲಂಘನೆ ಕಾರ್ಯ ನಡೆಯುತ್ತಿದೆ. ಇದನ್ನು ಹಂಪಿ, ಕಿಷ್ಕಿಂದಾ ಪ್ರದೇಶದಲ್ಲಿ ನಡೆಯದಂತೆ ಕಠಿಣವಾಗಿ ತಡೆಯಲಾಗಿದೆ ಎಂದು ಹೇಳಿದ್ದಾರೆ. ಅಂತಹ ಕಠಿಣ ಕ್ರಮ ಇಲ್ಲೇಕೆ ಕೈಗೊಳ್ಳುತ್ತಿಲ್ಲ ಎಂಬ ಬೇಸರದ ಪ್ರಶ್ನೆ ಜಿಲ್ಲೆಯ ಜನರದ್ದು.

Advertisement

ಸುತ್ತಲೂ ಗೂಡಂಗಡಿ-ಮನೆ:

ವಿಶ್ವದ ಅತ್ಯದ್ಭುತ ಪ್ರವಾಸಿ ತಾಣಗಳ ಪಟ್ಟಿಯಲ್ಲಿರುವ ಪಟ್ಟದಕಲ್ಲ, ದೇಶದ ಸಂಸತ್‌ ಭವನ ನಿರ್ಮಾಣಕ್ಕೆ ಪ್ರೇರಣೆ ನೀಡಿದ ದುರ್ಗಾ ಟೆಂಪಲ್‌ ಇರುವ ಐಹೊಳೆ, ಬಾದಾಮಿ ಚಾಲುಕ್ಯ ಅರಸರ ರಾಜಧಾನಿಯಾಗಿದ್ದ ಬಾದಾಮಿ, ಅಗಸ್ತ್ಯತೀರ್ಥ, ಮೇಣಬಸದಿ ಹೀಗೆ ಹಲವು ತಾಣಗಳು ಜಿಲ್ಲೆಗೆ ಮೆರಗು ನೀಡುವ ತಾಣಗಳಾಗಿವೆ.

ಬಾಗಲಕೋಟೆ ಅಂದಾಕ್ಷಣ ಥಟ್ಟನೆ ನೆನಪಾಗುವುದೇ ಬಾದಾಮಿ, ಪಟ್ಟದಕಲ್ಲ, ಐಹೊಳೆ. ಬಾಗಲಕೋಟೆ ಹೆಸರು ಹೇಳಿದಾಕ್ಷಣ ಉತ್ತರ ಭಾರತದ ಜನರಿಗೆ ಗೊತ್ತಾಗದಿದ್ದರೂ ಈ ಪ್ರವಾಸಿ ತಾಣಗಳ ಹೆಸರು ಹೇಳಿದಾಕ್ಷಣ ಅವು ಯಾವ ರಾಜ್ಯದಲ್ಲಿವೆ, ಯಾವ ಜಿಲ್ಲೆಯಲ್ಲಿವೆ ಎಂದು ಸರ್ಚ್‌ ಮಾಡಲು ಶುರು ಮಾಡುತ್ತಾರೆ. ಅಂತಹ ಖ್ಯಾತಿ ಇಲ್ಲಿನ ಪ್ರವಾಸಿ ತಾಣಗಳಿಗಿದೆ.

ಬಾದಾಮಿಯ ಸುಂದರ ಅಗಸ್ತ್ಯತೀರ್ಥ ಹೊಂಡ, ಮೇಣಬಸದಿ ಸುತ್ತಲೂ ಚಿಕ್ಕ ಚಿಕ್ಕ ಮನೆಗಳಿವೆ. ತಟಕೋಟೆ ಎಂಬ ಗ್ರಾಮದ ಹೆಸರಿನಲ್ಲಿರುವ ಇಲ್ಲಿನ ಜನರಿಗೆ ಪುನರ್‌ ವಸತಿ ಕಲ್ಪಿಸುವುದಾಗಿ ಸರ್ಕಾರ ಹೇಳುತ್ತಲೇ ಇದೆ. ಇದಕ್ಕಾಗಿ 10 ವರ್ಷಗಳ ಹಿಂದೆಯೇ (ಭೂಸ್ವಾಧೀನ- ಮನೆಗಳ ಪರಿಹಾರಕ್ಕಾಗಿ) ಒಂದಿಷ್ಟು ಅನುದಾನವೂ ಬಂದಿದೆ. ಅದನ್ನು ಬಳಸಿಕೊಂಡು, ಸರಿಯಾದ, ಪೂರ್ವನಿಯೋಜಿತವಾಗಿ ಶಿಸ್ತಿನ ಕಾರ್ಯ ಮಾಡಲು ಯಾವುದೇ ಸರ್ಕಾರ ಈವರೆಗೂ ಮುಂದಾಗಿಲ್ಲ. ಪ್ರತಿ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಯಾರೇ ಸ್ಪರ್ಧೆ ಮಾಡಿದರೂ, ಜಿಲ್ಲೆಗೆ ಸಚಿವರು, ಮುಖ್ಯಮಂತ್ರಿಗಳು ಬಂದರೂ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ಮಾತ್ರ ಸದಾ ಹೊರ ಬರುತ್ತಲೇ ಇರುತ್ತದೆ. ಅದಕ್ಕೊಂದು ಸ್ಪಷ್ಟ ಮಾಸ್ಟರ್‌ಪ್ಲಾನ್‌ ಈವರೆಗೂ ಜಾರಿಯಾಗಿಲ್ಲ.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಪಟ್ಟದಕಲ್ಲ, ವಿದೇಶಿಗರ ಮನ ಸೆಳೆಯುತ್ತದೆ. ಆದರೆ, ಇಲ್ಲಿಗೆ ಎಂಟ್ರಿ ಕೊಡುವಾಗಲೇ ರಸ್ತೆಯ ಪಕ್ಕದಲ್ಲಿ ತಿಪ್ಪೆ ಗುಂಡಿ, ಗಲೀಜು ಪ್ರದೇಶ ಸ್ವಾಗತಿಸುತ್ತದೆ. ಮುಖ್ಯವಾಗಿ ತಾಣಗಳ ಪ್ರಮುಖ ದ್ವಾರದಲ್ಲೇ ಗೂಡಂಗಡಿಗಳ ಸಾಲು ಇವೆ. ಇಲ್ಲಿಗೆ ಬರುವ ಪ್ರವೇಶಿಗರ ಹೊಟ್ಟೆ ತುಂಬಿಸಲು ಸದ್ಯ ಅದೇ ಗೂಡಂಗಡಿಗಳೇ ಆಸರೆ. ಅವುಗಳನ್ನು ಹಾಗೆಯೇ ತೆರವುಗೊಳಿಸಿದರೆ ಅದನ್ನೇ ನಂಬಿ ಜೀವನ ಮಾಡುವ ವ್ಯಾಪಾರಸ್ಥರಿಗೂ ತೊಂದರೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಸುಂದರ ವ್ಯವಸ್ಥೆ ಕಲ್ಪಿಸದೇ ಇದ್ದದ್ದು ಮುಜುಗರ. ಹೀಗಾಗಿ ಅದೇ ಗೂಡಂಗಡಿಗಳಿಗೆ ಅಂದದ ರೂಪ ಕೊಟ್ಟು, ಪ್ರವಾಸಿ ತಾಣಗಳಿಂದ ಕನಿಷ್ಠ ಮೀಟರ್‌ನಷ್ಟು ದೂರದಲ್ಲಿ ಪುನರ್‌ ವಸತಿ ಕಲ್ಪಿಸಿ, ಅಂದ-ಚೆಂದ ಹೆಚ್ಚಿಸಿದರೆ, ಪ್ರವಾಸಿಗರನ್ನು ಇನ್ನಷ್ಟು ಸೆಳೆಯಲು ಕಾರಣವಾಗಬಹುದು. ಇದು ಪಟ್ಟದಕಲ್ಲ, ಬಾದಾಮಿ, ಐಹೊಳೆ ಸಹಿತ ಬಹುತೇಕ ಪ್ರವಾಸಿ ತಾಣಗಳ ಸುತ್ತಲೂ ಭಿನ್ನವಾಗಿಲ್ಲ.

  • ಬಾದಾಮಿಯ ಅಗಸ್ತ್ಯತೀರ್ಥ ಹೊಂಡ, ಮೇಣಬಸದಿ ಸುತ್ತಲೂ ಚಿಕ್ಕ ಚಿಕ್ಕ ಮನೆಗಳಿವೆ
  • ಇಲ್ಲಿ ವಾಸಿಸುವ ಜನರಿಗೆ ಪುನರ್‌ ವಸತಿ ಕಲ್ಪಿಸುವುದಾಗಿ ಹೇಳುತ್ತಲೇ ಇದೆ ಸರ್ಕಾರ
  • ಸರಿಯಾದ, ಪೂರ್ವನಿಯೋಜಿತ ಶಿಸ್ತಿನ ಕಾರ್ಯ ಮಾಡಲು ಮುಂದಾಗದ ಆಡಳಿತ ವರ್ಗ

ನಿರೀಕ್ಷೆ ಮೂಡಿಸಿದ ಡಿಸಿ ಮಾತು:

ಜಿಲ್ಲೆಗೆ ಪಿ. ಸುನೀಲಕುಮಾರ ಎಂಬ ಯುವ ಐಎಎಸ್‌ ಅಧಿಕಾರಿ, ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ನಾನು ಈ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ, ಜಿಲ್ಲೆಯ ಪ್ರವಾಸಿ ತಾಣಗಳ ಸುತ್ತಲೂ ಕೈಗೊಳ್ಳಲೇಬೇಕಾದ ಕಾರ್ಯವನ್ನು ಸಮರ್ಥವಾಗಿ ಮಾಡಬೇಕೆಂಬ ಗುರಿ ಇದೆ. ಇದಕ್ಕಾಗಿ ನನ್ನದೇ ಆದ ರೀತಿ ಕೆಲಸ ಮಾಡುವೆ. ಅದನ್ನು ನೋಡುತ್ತೀರಿ ಎಂಬ ಮಾತು ಹೇಳಿದ್ದಾರೆ. ಹೀಗಾಗಿ ಇವರ ದಿಟ್ಟ ಕ್ರಮ-ನಿರ್ಧಾರದಿಂದ ಪ್ರವಾಸಿ ತಾಣಗಳ ಅಪಾಯ ದೂರಾಗಲಿ ಎಂಬ ಆಶಯ ಜಿಲ್ಲೆಯ ಜನರಲ್ಲಿದೆ.

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next