Advertisement

ದಟ್ಟ ಅರಣ್ಯದ ನಡುವೆ ನಿಸರ್ಗದಿಂದಲೇ ನಿರ್ಮಾಣಗೊಂಡಿದೆ ಕವಳಾ ಗುಹೆ…

03:47 PM Sep 10, 2022 | Team Udayavani |

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ… ಇಲ್ಲಿ ಜಲಪಾತ, ಗಿರಿ ಶಿಖರ, ನದಿಗಳು, ದಟ್ಟ ಅರಣ್ಯ ಪ್ರದೇಶಗಳು, ಐತಿಹಾಸಿಕ ತಾಣಗಳು ಸೇರಿದಂತೆ ಪ್ರವಾಸಿಗರನ್ನು ದಾಂಡೇಲಿಗೆ ಕೈಬೀಸಿ ಕರೆಯುತ್ತದೆ. ದಾಂಡೇಲಿಯಲ್ಲಿ ಪ್ರವಾಸಿ ತಾಣಗಳ ಪಟ್ಟಿ ಮಾಡಿದರೆ ಮುಗಿಯದಷ್ಟು ಸ್ಥಳಗಳು ಇಲ್ಲಿ ಕಾಣಸಿಗುತ್ತವೆ ಆದರೆ ನಾನಿಂದು ದಾಂಡೇಲಿಯಲ್ಲಿ ಬಹಳ ವಿಶೇಷವಾಗಿರುವ ಸ್ಥಳದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇನೆ ಅಲ್ಲದೆ ದಾಂಡೇಲಿ ಪ್ರವಾಸ ಕೈಗೊಂಡವರು ಈ ಸ್ಥಳಕ್ಕೂ ಭೇಟಿ ನೀಡಿ. ನಿಜಕ್ಕೂ ಈ ಸ್ಥಳ ನಿಮಗೆ ಒಂದು ಹೊಸ ಅನುಭವ ನೀಡಬಹುದು, ಅಂದ ಹಾಗೆ ನಾನು ಹೇಳ ಹೊರಟಿರುವುದು ದಾಂಡೇಲಿಯ ದಟ್ಟ ಅರಣ್ಯದಲ್ಲಿ ನೈಸರ್ಗಿಕವಾಗಿ ನೆಲೆ ನಿಂತಿರುವ ಕವಳಾ ಗುಹೆ…

Advertisement

ದಾಂಡೇಲಿಯಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಕವಳಾ ಗುಹೆ ದಟ್ಟ ಅರಣ್ಯದ ಮಧ್ಯೆ ಇರುವ ಬೆಟ್ಟದ ಮೇಲಿದ್ದು ಇಲ್ಲಿಗೆ ತಲುಪಬೇಕಾದರೆ ಸುಮಾರು ಮೂನ್ನೂರ ಐವತ್ತಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಲೇ ಬೇಕು ಆ ಬಳಿಕ ಗುಹೆಯ ಪ್ರವೇಶ ದ್ವಾರ ಸಿಗುತ್ತದೆ ಅಲ್ಲಿಂದ ಮುಂದುವರೆದಂತೆ ಕಡಿದಾದ ದಾರಿಸಿಗುತ್ತದೆ ಅಲ್ಲಿಂದ ಮುಂದೆ ಪ್ರವೇಶಿಸಿದರೆ ಪ್ರಕೃತಿಯಿಂದಲೇ ನಿರ್ಮಾಣಗೊಂಡ ಐದು ಅಡಿ ಎತ್ತರದ ದುಂಡಾಕಾರದ ಶಿವಲಿಂಗ ಕಾಣಸಿಗುತ್ತದೆ ಈ ಶಿವಲಿಂಗದ ಮೇಲೆ ಬಂಡೆಕಲ್ಲುಗಳು ಆವರಿಸಿಕೊಂಡಿದ್ದು ಇದರಿಂದ ಚಿಮ್ಮುವ ನೀರಿನಿಂದಲೇ ಶಿವಲಿಂಗಕ್ಕೆ ನಿತ್ಯ ಅಭಿಷೇಕ.

ಶಿವರಾತ್ರಿ ಇಲ್ಲಿ ವಿಶೇಷ :

ಪ್ರಕೃತಿಯಿಂದಲೇ ನಿರ್ಮಾಣಗೊಂಡ ಶಿವಲಿಂಗಕ್ಕೆ ಶಿವರಾತ್ರಿಯ ಸಂದರ್ಭ ಇಲ್ಲಿ ವಿಶೇಷ ಪೂಜೆ ನಡೆಯುತ್ತಂತೆ ಅಲ್ಲದೆ ರಾಜ್ಯದ ನಾನಾ ಕಡೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ ಶಿವರಾತ್ರಿಯ ದಿನ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣ ಭಕ್ತರಿಗೆ ದೇವರ ದರ್ಶನ ಆಗಬೇಕಾದರೆ ಸಂಜೆ ವರೆಗೂ ಕಾಯಬೇಕಾಗುತ್ತದೆ ಎಂದು ಇಲ್ಲಿಗೆ ಭೇಟಿ ನೀಡಿದ ಭಕ್ತರ ಮಾತು.ಅಲ್ಲದೆ ಈ ಬೆಟ್ಟದ ಮೇಲೆ ನಿಂತು ನೋಡಿದರೆ ಬೆಟ್ಟದ ಬುಡದಲ್ಲಿ ಹರಿಯುವ ಕಾಳಿ ನದಿ ಹಾಗೂ ಸುತ್ತಮುತ್ತಲ ಪ್ರಕೃತಿ ಸೌಂದರ್ಯವನ್ನು ಕಾಣಬಹುದು.

ಜ್ವಾಲಾಮುಖಿಯಿಂದ ಗುಹೆ ನಿರ್ಮಾಣ :
ಹಲವು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸಂಭವಿಸಿದ ಜ್ವಾಲಾಮುಖಿಯಿಂದ ಈ ಗುಹೆ ನಿರ್ಮಾಣವಾಗಿದೆ ಎಂದು ಇತಿಹಾಸ ಹೇಳುತ್ತದೆ ಅದಕ್ಕೆ ಪೂರಕವೆಂಬಂತೆ ಇಲ್ಲಿನ ಕಲ್ಲು ಬಂಡೆಗಳು ಜ್ವಾಲಾಮುಖಿ ಸ್ಪೋಟಗೊಂಡು ನಿರ್ಮಾಣವಾದಂತೆ ಭಾಸವಾಗುತ್ತದೆ.

Advertisement

ಅರಣ್ಯ ಇಲಾಖೆಯ ಅನುಮತಿ ಅಗತ್ಯ :
ಕವಳಾ ಗುಹೆಗೆ ಶಿವರಾತ್ರಿ ದಿನ ಬಿಟ್ಟು ಉಳಿದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಅಲ್ಲದೆ ಪ್ರವಾಸಿಗರಿಗೆ ಗುಹೆ ಪ್ರವೇಶಿಸಲು ಪ್ರವೇಶ ಶುಲ್ಕ ಪಾವತಿಸಬೇಕು. ಮುಖ್ಯ ವಿಚಾರ ಏನೆಂದರೆ ಈ ಗುಹೆಗೆ ಭೇಟಿ ನೀಡಲು ಬೆಳಿಗ್ಗೆ 8 ರಿಂದ ಸಂಜೆ 5ರ ವರೆಗೆ ಮಾತ್ರ ಅರಣ್ಯ ಇಲಾಖೆಯ ಅನುಮತಿ ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಸ್ವಚ್ಛತೆ ಕಾಪಾಡಿ :
ಯಾವುದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು ನಾನು ಅಲ್ಲಿನ ಪರಿಸರವನ್ನು ಸ್ವಚ್ಛವಾಗಿರಿಸುವುದು ನಮ್ಮ ಕರ್ತವ್ಯ ಹಾಗಾಗಿ ನಾವು ಕೊಂಡುಹೋದ ತಿಂಡಿ ತಿನಿಸುಗಳ ಪ್ಯಾಕೆಟ್ ಗಳನ್ನು ಎಲ್ಲೆಂದರಲ್ಲಿ ಎಸೆಯದಿರಿ ಜೊತೆಗೆ ಇತರರಿಗೂ ಈ ವಿಚಾರ ತಿಳಿಸಿ.

ಎಚ್ಚರವೂ ಅಗತ್ಯ :
ಕವಳಾ ಗುಹೆ ಪ್ರದೇಶ ದಟ್ಟ ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಕಾಡು ಪ್ರಾಣಿಗಳು, ಹಾವುಗಳಂತ ವಿಷಕಾರಿ ಜೀವಿಗಳು ಇರುವ ಸಾಧ್ಯತೆ ಹೆಚ್ಚು ಅದೂ ಮಳೆಗಾಲದಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುವ ಕಾರಣ ಎಚ್ಚರ ಅಗತ್ಯ.

ಮಾರ್ಗ ಹೇಗೆ :
ಕವಳಾ ಗುಹೆ ಪ್ರವೇಶಿಸಲು ಎರಡು ಮಾರ್ಗಗಳಿವೆ ಮೊದಲನೆಯದು ಜೋಯಿಡಾ ತಾಲೂಕಿನ ಪಣಸೋಲಿಯಿಂದ ದಟ್ಟ ಅರಣ್ಯದ ಮಧ್ಯೆ ಸಾಗುವ ದಾರಿಯಾದರೆ, ಎರಡನೆಯದು ಅಂಬಿಕಾನಗರದ ನಾಗಝರಿಯಿಂದ ನೂರಾರು ಮೆಟ್ಟಿಲುಗಳನ್ನು ಹತ್ತಿ ಹೋಗುವ ಮಾರ್ಗವಾಗಿದೆ.

ನೀವು ಮೂರು ನಾಲ್ಕು ದಿನಗಳ ಲೆಕ್ಕಾಚಾರದಲ್ಲಿ ದಾಂಡೇಲಿ ಪ್ರವಾಸ ಕೈಗೊಂಡರೆ ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿರುವ ಸ್ಕೈ ಪಾಯಿಂಟ್ ಮೂಲಕ ಕಾಳಿ ಕಣಿವೆಯ ರುದ್ರ ರಮಣೀಯ ನೋಟವನ್ನು ನೋಡಬಹುದಾಗಿದೆ. ಅಲ್ಲದೆ ರಿವರ್ ರಾಫ್ಟಿಂಗ್ ಗೂ ಕಾಳಿ ನದಿ ಹೆಸರುವಾಸಿ. ದಾಂಡೇಲಿ ಅಭಯಾರಣ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಅರಣ್ಯ ಇಲಾಖೆಯ ಅನುಮತಿ ಪಡೆದು ಎಲ್ಲ ಪ್ರದೇಶವನ್ನು ವೀಕ್ಷಿಸಬಹುದಾಗಿದೆ, ಇಲ್ಲಿ ಪ್ರವಾಸಿಗರಿಗೆ ಉಳಿಯಲು ಹೋಟೆಲ್, ರೆಸಾರ್ಟ್ ಗಳ ವ್ಯವಸ್ಥೆಯೂ ಇದೆ.

– ಸುಧೀರ್ ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next