Advertisement

ಪ್ರವಾಸೋದ್ಯಮ ಸಮ್ಮೇಳನ: ಕಾಶ್ಮೀರಕ್ಕೆ ಶಕ್ತಿಯ ನಿರೀಕ್ಷೆ- ಏನಿದು ಕಾರ್ಯಕ್ರಮ?

11:36 PM May 19, 2023 | Team Udayavani |

ದೇಶದ ಮುಕುಟ ಮಣಿಯಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ20 ರಾಷ್ಟ್ರಗಳ ಪ್ರವಾಸೋದ್ಯಮ ಸಮ್ಮೇಳನ ನಡೆಯಲಿದೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಕಾರ್ಯಕ್ರಮ ಎಂಬ ಭಾವನೆ ಮೂಡಿದರೂ ಮೇ 22,23, 24ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ದೂರಗಾಮಿ ಸಂದೇಶವನ್ನು ಜಗತ್ತಿಗೆ ಸಾರುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ.

Advertisement

ಏನಿದು ಕಾರ್ಯಕ್ರಮ?
ಜಿ20 ರಾಷ್ಟ್ರಗಳ ಒಕ್ಕೂಟಕ್ಕೆ ಪ್ರಸಕ್ತ ವರ್ಷ ಭಾರತವೇ ಅಧ್ಯಕ್ಷ. ಆ ನಿಟ್ಟಿನಲ್ಲಿ ದೇಶಾದ್ಯಂತ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮ್ಮೇಳನ, ಸಭೆಗಳನ್ನು ಆಯೋಜಿ ಸಲಾಗುತ್ತಿದೆ. ಅದರಲ್ಲಿ ಪ್ರವಾಸೋದ್ಯಮ ವಿಭಾಗದ ಮೂರನೇ ಕಾರ್ಯಕ್ರಮವನ್ನು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಆಯೋಜಿಸಲಾಗುತ್ತಿದೆ. ಮೇ 22, 23, 24ರಂದು ಅದು ನಡೆಯಲಿದೆ.

ಮಹತ್ವವೇನು?
ರಾಜ್ಯದ ಸ್ಥಾನಮಾನ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ವನ್ನು ಕೇಂದ್ರಾಡಳಿತ ಪ್ರದೇಶ ಎಂದು ಬದಲಾವಣೆ ಮಾಡಿ ಮತ್ತು ಅಲ್ಲಿಗೆ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ನಡೆಯುತ್ತಿರುವ ಮೊದಲ ಅಂತಾ ರಾಷ್ಟ್ರೀಯ ಮಟ್ಟದ ಸಮ್ಮೇಳನ ಇದು. ಸದ್ಯ ಅಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲೇಹ್‌ ಎಂಬ 2 ಕೇಂದ್ರಾಡಳಿತ ಪ್ರದೇಶಗಳು ಇವೆ. ಇಷ್ಟು ಮಾತ್ರವಲ್ಲ ಸದಾ ಬಾಂಬ್‌ ಸ್ಫೋಟ, ಉಗ್ರರ ವಿರುದ್ಧ ಕಾರ್ಯಾಚರಣೆಯಿಂದಲೇ ದೇಶ, ಜಗತ್ತಿನ ಮಾಧ್ಯಮಗಳಲ್ಲಿ ಕಾಶ್ಮೀರ ಸುದ್ದಿಯಾದದ್ದು. ಇಂಥ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಅದರಲ್ಲೂ ವಿಶೇಷವಾಗಿ 2014ರಲ್ಲಿ ಎನ್‌ಡಿಎ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಿಧಾನವಾಗಿಯಾದರೂ, ಉಗ್ರ ಸಂಘಟನೆಯ ಹಾವಳಿ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ತಗ್ಗಿದೆ. ಪ್ರತ್ಯೇಕತಾವಾದಿ ನಾಯ ಕರು, ಸಂಘಟನೆಗಳನ್ನು ಮಟ್ಟ ಹಾಕಲಾಗಿದೆ. ನಿಧಾನಕ್ಕಾ ದರೂ ಜನರು ನೆಮ್ಮದಿಯನ್ನು ಕಂಡುಕೊಳ್ಳಲು ಪ್ರಯತ್ನಿ ಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯಲು ಇದೊಂದು ಪ್ರಯತ್ನ.

ಎಪ್ಪತ್ತು ವರ್ಷಗಳಲ್ಲಿಯೇ ಮೊದಲು
ಜಮ್ಮು ಮತ್ತು ಕಾಶ್ಮೀರ ನೀತಿ ನಿರೂಪಣ ಸಂಸ್ಥೆಯ ವರದಿಯ ಪ್ರಕಾರ ಎಪ್ಪತ್ತು ವರ್ಷಗಳಲ್ಲಿಯೇ ಮೊದಲ ಬಾರಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಇಂಥ ಒಂದು ಮಹತ್ವದ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದರಿಂದಾಗಿ ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮ, ಆರ್ಥಿಕ ಕ್ಷೇತ್ರ, ಮಾರುಕಟ್ಟೆಯನ್ನು ಜಗತ್ತಿಗೆ ಹೊಸ ವ್ಯವಸ್ಥೆಯಲ್ಲಿ ತೆರೆದುಕೊಳ್ಳಲು ಅನುಕೂಲವಾಗಲಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಕಾರ್ಯಕ್ರಮಕ್ಕೆ ಸಿದ್ಧತೆ ಹೇಗಿದೆ?
ಸದಾ ಗುಂಡು, ಬಾಂಬ್‌ಗಳ ಸದ್ದು ಕೇಳುತ್ತಿದ್ದ ಪ್ರದೇಶ ವೊಂ ದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಯು ವು ದೆಂದರೆ ಪ್ರತ್ಯೇಕ ವಿವರಿಸಬೇಕೇ? ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣ, ಮೂಲ ಸೌಕರ್ಯಗಳಾದ ರಸ್ತೆ, ಸಾರ್ವಜನಿಕ ಸ್ಥಳಗಳನ್ನು ಮೇಲ್ದರ್ಜೆಗೆ ಏರಿಸುವಿಕೆ, ಭದ್ರತಾ ಕ್ರಮಗಳು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರ ಮತ್ತು ಅರೆಸೇನಾ ಪಡೆಗಳ ನಿಯೋಜನೆ, ಹತ್ತು ಹಲವು ರೀತಿಯ ಉಗ್ರ ದಾಳಿಗಳನ್ನು ನಿರೀಕ್ಷಿಸಿ ಅವುಗಳನ್ನು ಎದುರಿಸಬೇಕಾದ ಸಂಭಾವ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗಣ್ಯರು ಭೇಟಿ ನೀಡುವ ಸ್ಥಳಗಳಿಗೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

Advertisement

ಸಾಫ್ಟ್ ಸ್ಕಿಲ್‌ ತರಬೇತಿ
ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಆಗಮಿಸುವ ಸಂದರ್ಭದಲ್ಲಿ 600 ಮಂದಿ ಪೊಲೀಸರಿಗೆ ಯಾವ ಹಂತದಲ್ಲಿ ಹೇಗೆ ವರ್ತಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಪ್ರವಾಸೋದ್ಯಮ ಸಮ್ಮೇಳನ ನಡೆಯುವ ಕಾರ್ಯಕ್ರಮದ ಸ್ಥಳ ಸುತ್ತಲೂ ಪೊಲೀಸ್‌ ಇಲಾ ಖೆಯ ಹಿರಿಯ ಅಧಿಕಾರಿಗಳು ಸಮವಸ್ತ್ರ ಧರಿಸದೆ ಗಣ್ಯರಂತೆಯೇ ಇದ್ದುಕೊಂಡು ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಎಲ್ಲೆಲ್ಲಿ ಕಾರ್ಯಕ್ರಮಗಳು?
ಶ್ರೀನಗರದ ಪ್ರಸಿದ್ಧ ದಾಲ್‌ ಸರೋವರದ ದಂಡೆಯ ಬಳಿ ಇರುವ ಕೇಂದ್ರ ವೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಲ್ಲದೆ ಗಾಲ್ಫ್ ಕೋರ್ಟ್‌ನಲ್ಲೂ ವಿಶೇಷ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಬಾರಾ ಮುಲ್ಲಾ ಜಿಲ್ಲೆಯಲ್ಲಿ ಇರುವ ಅಂತಾರಾಷ್ಟ್ರೀಯ ಸ್ಕೀಯಿಂಗ್‌ ಕೇಂದ್ರಕ್ಕೂ ಗಣ್ಯರು ಭೇಟಿ ನೀಡಲಿದ್ದಾರೆ.

ಆಗಮಿಸುವ ಪ್ರಮುಖರು ಯಾರು?
ಜಿ20 ರಾಷ್ಟ್ರಗಳ ಒಕ್ಕೂಟದ ಪ್ರವಾಸೋದ್ಯಮ ಸಚಿವರು, ಸಂಸ್ಥೆಗಳ ಮುಖ್ಯಸ್ಥರು ಪ್ರಧಾನವಾಗಿ ಭಾಗವಹಿಸಲಿದ್ದಾರೆ. ಒಟ್ಟು 74 ದೇಶಗ ಳಿಂದ ಆಗಮಿಸಲಿರುವ ಸರಕಾರಿ ಮುಖ್ಯಸ್ಥರು, ಜಮ್ಮು ಮತ್ತು ಕಾಶ್ಮೀರ ದಲ್ಲಿ ಸದ್ಯದ ಪರಿಸ್ಥಿತಿ ಅಧ್ಯಯನ ನಡೆಸಲು ಉದ್ದೇಶ ಹೊಂದಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಪ್ರತಿನಿಧಿಗಳು ಬರಲಿದ್ದಾರೆ.

ಪ್ರವಾಸೋದ್ಯಮಕ್ಕೆ ಇಂಬು ಕೊಟ್ಟಿತೇ?
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರವಾಸೋದ್ಯಮ ಚೇತರಿಕೆಯಾಗಿದೆ ನಿಜ. ಆದರೆ ಉಗ್ರಗಾಮಿಗಳ ಭಯ ಕಾಡುತ್ತಲೇ ಇರುತ್ತದೆ. ಇದರ ಹೊರತಾಗಿಯೂ 2000ದಿಂದ 2020ರ ವರೆಗೆ ನಾಲ್ಕು ಲಕ್ಷ ವಿದೇಶಿ ಪ್ರವಾಸಿಗರು ಮಾತ್ರ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಸರಕಾರದ ಅಂಕಿ ಅಂಶಗಳಲ್ಲಿಯೇ ಉಲ್ಲೇಖವಾಗಿದೆ.

ಜಿ20 ರಾಷ್ಟ್ರಗಳ ಸಮ್ಮೇಳನದತ್ತ ಆಶೆ
ಮೇ 22,23, 24ರಂದು ಶ್ರೀನಗರದಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಪ್ರವಾ ಸೋದ್ಯಮ ಸಮ್ಮೇಳನದ ಬಳಿಕ ಅಂತಾರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆಯನ್ನು ಇಲ್ಲಿನ ಹೊಟೇಲ್‌ ಮಾಲಕರು, ಟ್ರಾವೆಲ್‌ ಏಜೆಂಟರು ಸಹಿತ ಈ ಕ್ಷೇತ್ರವನ್ನೇ ಅವಲಂಬಿಸಿರುವವರು ಹೊಂದಿ ದ್ದಾರೆ. ಸಮ್ಮೇಳನ ಕೇವಲ ಪ್ರವಾಸೋದ್ಯಮ ಮಾತ್ರವಲ್ಲ, ಕೇಂದ್ರಾಡಳಿತ ಪ್ರದೇಶದಲ್ಲಿನ ಆರ್ಥಿಕ ಮತ್ತು ಜನರ ಜೀವನ ಕ್ರಮದಲ್ಲಿ ಕೊಂಚವಾದರೂ ಧನಾತ್ಮಕ ಬದಲಾವಣೆ ತರುವ ನಿರೀಕ್ಷೆಯನ್ನು ಹೊಂದಿದ್ದಾರೆ.

ಪಾಕ್‌, ಚೀನಕ್ಕೆ ಸಂದೇಶ
ಈ ಕಾರ್ಯಕ್ರಮದಿಂದ ಪಾಕಿಸ್ಥಾನ ಮತ್ತು ಆ ದೇಶದ ಕಿಡಿಗೇ ಡಿತನಕ್ಕೆ ಯಾವತ್ತೂ ಬೆಂಬಲ ನೀಡುವ ಚೀನಕ್ಕೆ ಪ್ರಬಲ ಸಂದೇಶ ನೀಡಲು ಭಾರತ ಸರಕಾರ ಉದ್ದೇಶಿಸಿದೆ. ಹಿಮಾಚ್ಛಾ ದಿತ ಪರ್ವತ ಪ್ರದೇಶ ವ್ಯಾಪ್ತಿಯ ಲಡಾಖ್‌, ಜಮ್ಮು ಮತ್ತು ಕಾಶ್ಮೀರ ಯಾವತ್ತಿದ್ದರೂ ಭಾರತಕ್ಕೆ ಸೇರಿದ್ದು. ಅದನ್ನು ಕಸಿ ಯಲು ಪಾಕಿಸ್ಥಾನ ನಡೆಸುವ ಪ್ರಯತ್ನ ಮತ್ತು ಅದಕ್ಕೆ ಬೆಂಬಲ ನೀಡುವ ವ್ಯವಸ್ಥೆಗಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗುತ್ತದೆ ಎಂಬ ಸಂದೇಶವನ್ನು ನೀಡುವ ಉದ್ದೇಶವನ್ನು ಸರಕಾರ ಹೊಂದಿದೆ.

ಕಿತಾಪತಿ ಬಿಡದ ಪಾಕಿಸ್ಥಾನ
ಹೇಳಿ ಕೇಳಿ ಜಮ್ಮು ಮತ್ತು ಕಾಶ್ಮೀರವೇ ತನಗೆ ಸೇರಿದ್ದು ಎಂದು ಪದೇ ಪದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭೋಂಗು ಬಿಡುತ್ತಿರುವ ಪಾಕಿಸ್ಥಾನ ಸಮ್ಮೇಳನ ನಡೆಯಲೇಬಾರದು ಎಂದು ತಕರಾರು ತೆಗೆದಿದೆ. ಕಳೆದ ವರ್ಷವೇ ಒಕ್ಕೂಟದ ರಾಷ್ಟ್ರಗಳಿಗೆ ಪತ್ರ ಬರೆದು “ಭಾರತ ಕಾಶ್ಮೀರವನ್ನು ಅತಿಕ್ರಮಿಸಿದೆ. ಇಂಥ ಕಾರ್ಯಕ್ರಮದ ಮೂಲಕ ಅತಿಕ್ರಮಣವನ್ನು ಸಕ್ರಮ ವನ್ನಾಗಿಸುವ ಬಗ್ಗೆ ಪ್ರಯತ್ನ ನಡೆಸಿದೆ’ ಎಂದು ಅಪಪ್ರಚಾರ ನಡೆಸಲು ಯತ್ನಿಸಿತ್ತು. ಅದೇ ಅಂಶವನ್ನು ಹೊಸ ಶಬ್ದಗಳೊಂದಿಗೆ ಪದೇ ಪದೆ ಪ್ರಸ್ತಾವ ಮಾಡುತ್ತಾ ಬಂದಿದೆ. ಮುಖ್ಯವಾದ ವಿಚಾರವೆಂದರೆ ಪಾಕಿಸ್ಥಾನ ಜಿ20 ರಾಷ್ಟ್ರಗಳ ಸದಸ್ಯನೇ ಇಲ್ಲ.

ನಾಲ್ಕು ದಾಳಿ; 17 ಮಂದಿ ಹತ್ಯೆ
ಜಮ್ಮು ಒಂದರಲ್ಲಿಯೇ ಪ್ರಸಕ್ತ ವರ್ಷ ನಾಲ್ಕು ಪ್ರಮುಖ ದಾಳಿಗಳನ್ನು ಪಾಕಿಸ್ಥಾನದ ಉಗ್ರಗಾಮಿ ಸಂಘಟನೆಗಳು ನಡೆಸಿವೆ. ಹತ್ತು ಮಂದಿ ಯೋಧರು ಮತ್ತು ಏಳು ಮಂದಿ ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಇಂಥ ಕ್ರಮದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲವೆಂದು ಜಗತ್ತಿಗೆ ತೋರಿಸುವ ವಿಫ‌ಲ ಯತ್ನವನ್ನು ಮಾಡಿದೆ.

75 ಸಾವಿರ ಕೋಟಿ ರೂ. ಹೂಡಿಕೆ
ಕೇಂದ್ರಾಡಳಿತ ಪ್ರದೇಶಕ್ಕೆ 2023ನೇ ಸಾಲಿನಲ್ಲಿಯೇ 75 ಸಾವಿರ ಕೋಟಿ ರೂ. ಮೌಲ್ಯದ ಬಂಡವಾಳ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಔಷಧೋದ್ಯಮ, ಶೀತಲೀಕರಣ, ಆಹಾರ ಸಂಸ್ಕರಣೆ, ಶೈಕ್ಷಣಿಕ ಸಂಸ್ಥೆಗಳು, ಪ್ಯಾಕೇಜಿಂಗ್‌, ಸರಕು ಸಾಗಣೆ ಸಹಿತ ಹಲವು ಕ್ಷೇತ್ರಗಳಲ್ಲಿ ಈ ಹೂಡಿಕೆಯಾಗಲಿದೆ.

ಅಂತಾರಾಷ್ಟ್ರೀಯ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಆದರೆ ಕೆಲವು ದೇಶಗಳ ಸರಕಾರಗಳು ಇಲ್ಲಿಯ ಬಗ್ಗೆ ಋಣಾತ್ಮಕ ಅಂಶಗಳನ್ನು ಹೆಚ್ಚು ಪ್ರಚಲಿತದಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ.
ಬಶೀರ್‌ ಅಹ್ಮದ್‌, ಟೂರಿಸ್ಟ್‌ ಟ್ರೇಡ್‌ ಇಂಟರೆಸ್ಟ್‌ ಗಿಲ್ಡ್‌ ಅಧ್ಯಕ್ಷ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next