Advertisement

Tour Circle: ಕಣ್ಮನ ಸೆಳೆಯುವ ಬ್ರಹ್ಮಗಿರಿ ಬೆಟ್ಟ

12:30 PM Feb 26, 2024 | Team Udayavani |

ಬೆಟ್ಟದ ಸುತ್ತ ಎತ್ತ ನೋಡಿದರತ್ತ ಬೃಹತ್‌ ಹಾಸುಬಂಡೆಗಲ್ಲುಗಳ ರಾಶಿ ಕಣ್ಣಿಗೆ ರಾಚುತ್ತದೆ. ಆಗಸದಲ್ಲಿ ಬೆಳ್ಳಿ ಮೋಡಗಳ ಆಟ ನೋಡುವುದು ಕಣ್ಣಿಗೆ ಹಬ್ಬದಂತೆ.

Advertisement

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರದಲ್ಲಿರುವ ಬ್ರಹ್ಮಗಿರಿ ಬೆಟ್ಟ ಮೊಳಕಾಲ್ಮೂರು ತಾಲೂಕು ರೇಷ್ಮೆ ಸೀರೆಗಳಿಗೆ ಖ್ಯಾತಿ ಪಡೆದಿರುವಂತೆಯೇ, ಈ ಬೆಟ್ಟವು ಸಹ ಐತಿಹಾಸಿಕವಾಗಿಯೂ ಖ್ಯಾತಿ ಹೊಂದಿ ಚರಿತ್ರೆಯ ಪುಟಗಳಲ್ಲಿ ವಿಶೇಷ ಮಹತ್ವವಿದೆ.  ಅಶೋಕ ಚಕ್ರವರ್ತಿ ಆಳ್ವಿಕೆಯ ಕಾಲದಲ್ಲಿ ಪ್ರಮುಖ ಪಟ್ಟಣವಾಗಿದ್ದ ಇಸಿಲಾ ನಗರವು ಇಂದಿನ ಅಶೋಕ ಸಿದ್ದಾಪುರವಾಗಿದೆ. ಈ ಗ್ರಾಮವು ಬೆಂಗಳೂರು ಬಳ್ಳಾರಿ ಹೆದ್ದಾರಿಯಿಂದ ಬಳ್ಳಾರಿ ಮಾರ್ಗದಲ್ಲಿದೆ.

ಬೆಟ್ಟ ಏರುವ ಮುನ್ನ ಜೈನ ಧರ್ಮಕ್ಕೆ ಸೇರಿದ ಅಕ್ಕತಂಗಿಯರ ದೇವಸ್ಥಾನವಿದೆ. ಕ್ರಿ.ಪೂ. 250ನೇ ಶತಮಾನದಲ್ಲಿ ಕಟ್ಟಲಾದ ಈ ಕಟ್ಟಡವು ಎರಡು ಅಂತಸ್ತಿನ ಕಟ್ಟಡವಾಗಿದೆ. ಈ ಬೆಟ್ಟವು 1891 ರಲ್ಲಿ ಸಂಶೋಧಕ ಬಿ.ಎಲ್‌. ರೈಸ್‌ ಪತ್ತೆ ಹಚ್ಚಿದನು, ದಕ್ಷಿಣ ಭಾರತದಲ್ಲಿ ಮೌರ್ಯ ಸಾಮ್ರಾಜ್ಯದ ದೊರೆ ಅಶೋಕ ಚಕ್ರವರ್ತಿಯು ಆಳ್ವಿಕೆ ನಡೆಸಿರಬಹುದೆಂದು ಇಲ್ಲಿನ ಬಂಡೆ ಶಾಸನಗಳಲ್ಲಿ ಉಲ್ಲೇಖವಾಗಿದೆ.  ಮಠದ ದ್ವಾರ ಬಾಗಿಲು ಮುಚ್ಚಿದಾಗ ಸಿಂಹ ಘರ್ಜನೆ ತೆರೆಯುವಾಗ ಶಂಖನಾದ ಹೊಮ್ಮುವ ಮೂಲಕ ಜನರನ್ನು ಅಚ್ಚರಿಗೊಳಿಸಿದೆ.

ಶರಣರಲ್ಲಿ ಕಾಯಕದ ಮಹತ್ವವನ್ನು ಜನತೆಗೆ ಸಾರುತ್ತಾ, ತಾವೂ ಕಾಯಕ ಮಾಡುತ್ತಾ ನೆರೆಯ ಕೂಡ್ಲಿಗಿ ತಾಲೂಕಿನ ಕೆ. ರಾಯಾಪುರದ ಶರಣ ಶಿವಣ್ಣ ತಾತನವರು ಮತ್ತು ಕೊಪ್ಪಳ ಜಿಲ್ಲೆಯ ಬನ್ನಿಕೊಪ್ಪದ ಪರಮ ವೈರಾಗ್ಯ ಜಂಗಮ ಪ್ರೇಮಿ ಗುರುಭಕ್ತ ಕಾಯಕಯೋಗಿ ಮಹಾದೇವಪ್ಪ ತಾತನವರು ಪ್ರಮುಖರಾಗುತ್ತಾರೆ.

ಈ ಪುಣ್ಯ ಕ್ಷೇತ್ರದಲ್ಲಿ ಸುಮಾರು 150-200 ವರ್ಷಗಳ ಹಿಂದೆ, ಅಧ್ಯಾತ್ಮದ ಮೂಲಕ ಜನ ಮಾನಸದಲ್ಲಿ ಸ್ಥಿರವಾಗಿ ಉಳಿದ ಲಿಂಗೈಕ್ಯ ಶ್ರೀ  ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾಡಿದ ಮಹಾನ್‌ ಸಾಧನೆಯನ್ನು ಶರಣ ಮಹಾದೇವಪ್ಪ ತಾತನವರು ಮುಂದುವರಿಸಿಕೊಂಡು ಬಂಧು- ಬಳಗವನ್ನು  ತೊರೆದು ಇಲ್ಲಿ ನೆಲಸಿ ಇಲ್ಲಿಗೆ ಬರುವ ಭಕ್ತರೆಲ್ಲ ನನ್ನ ಬಂಧುಗಳೆಂದು ತಿಳಿದು, ನಿತ್ಯವು ಅನ್ನ ದಾಸೋಹ ಶಿವಚರಿತ್ರೆ ಶಿವಭಜನೆ ಮಾಡುತ್ತಾ ಧರ್ಮದ ಹಾದಿಯನ್ನು ತೋರುತ್ತಾ ಅನಾಥರಿಗೆ ಆಶ್ರಯ ನೀಡಿ ಕರ್ಮಭೂಮಿಯನ್ನು  ಧರ್ಮಭೂಮಿಯನ್ನಾಗಿಸಿದ ಖ್ಯಾತಿ ತಾತನವರಿಗೆ ಸಲ್ಲುತ್ತದೆ. ಇದನ್ನು ಕಾಯಕಯೋಗಿ ಶ್ರೀ ಸೋಮಣ್ಣ ಸ್ವಾಮಿಜಿಯವರು ನಡೆಸಿಕೊಂಡು ಬರುತ್ತಿದ್ದು ಶರಣ ಮಹಾದೇವಪ್ಪ ತಾತನವರ ಹಾದಿಯಲ್ಲೇ ಸಾಗುತ್ತಿದ್ದಾರೆ.

Advertisement

ಮಠಕ್ಕೆ ಬರುವ ಭಕ್ತರಿಗೆ ನಿತ್ಯವೂದಾಸೋಹದ‌ ವ್ಯವಸ್ಥೆಯಿದ್ದು ಮತ್ತು ಮಹಾಶಿವರಾತ್ರಿ ಮತ್ತು ದಸರಾ ಶೀ ಮಠದ ವಿಶೇಷ ಕಾರ್ಯಕ್ರಮಗಳಾಗಿದ್ದು . ಪ್ರತಿ ವರ್ಷ ಮಹಾಶಿವರಾತ್ರಿ ದಿನದಂದು ರುದ್ರಾಭಿಷೇಕ, ವಿಶೇಷ ಪೂಜೆ, ಭಜನೆ, ಮುಂತಾದ ಕಾರ್ಯಕ್ರಮಗಳಿರುತ್ತವೆ ಹಾಗೂ ನವರಾತ್ರಿ ದಿನಗಳಂದು ಬೆಳಗ್ಗೆ ರುದ್ರಾಭಿಷೇಕ, ಸಂಜೆ ದೇವಿಪುರಾಣ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ.

ಬೆಟ್ಟದ ಕೆಳಗಿನ ರೊಪ್ಪ ಗ್ರಾಮದಲ್ಲಿ ಗೋಶಾಲೆಯಿದ್ದು. ಶ್ರೀ ಮಠವನ್ನು ಪ್ರವಾಸಿ ತಾಣ ಮಾಡಬೇಕೆನ್ನುವ ಹಂಬಲವಿದೆ, ಅದರೆ ಸರಕಾರದ ಸಹಕಾರ ಬೇಕು. ಪ್ರವಾಸಿಗರು ಬರುವುದಕ್ಕೆ ಬೇಕಾಗುವ ಸೌಲಭ್ಯ ಸಿಕ್ಕರೆ ಈ ಸುಕ್ಷೇತ್ರವು ಅಭಿವೃದ್ಧಿಯಾಗುವ ವಿಶ್ವಾಸವಿದೆ ಎಂದು ಹೇಳುತ್ತಾರೆ ಶ್ರೀ ಮಠದ ಮುಖ್ಯಸ್ಥರಾದ ಸೋಮಣ್ಣ ಸ್ವಾಮೀಜಿ.

ಅಶೋಕ ಶಿಲಾಶಾಸನ: ಬೆಂಗಳೂರು – ಬಳ್ಳಾರಿ ರಾಜ್ಯ ಹೆದ್ದಾರಿಯಲಿದ್ದು ಸಿದ್ದಾಪುರ ಕ್ರಾಸ್‌ನಿಂದ 8 ಕಿ.ಮೀ ದೂರ ಸಾಗಿದರೆ ರಸ್ತೆ ಬಲಭಾಗದಲ್ಲಿ ಅಶೋಕ ಶಾಸನ ಇರುವ ಕಲ್ಲಿನ ಕಟ್ಟಡವಿದೆ. ಕ್ರಿಪೂ 3ನೇ ಶತಮಾನದಲ್ಲಿ ಅಶೋಕ ಮಹಾರಾಜ ಆಡಳಿತ ಅವಧಿಯಲ್ಲಿ ಈ ಸ್ಥಳವನ್ನು “ಇಸಿಲಾ’ ಪಟ್ಟಣವೆಂದು ಶಾಸನದಲ್ಲಿ ಉಲ್ಲೇಖೀಸಲಾಗಿದೆ. ಅಶೋಕನ ಅವಧಿಯಲ್ಲಿ ಧರ್ಮ ಪ್ರಚಾರ ವೇಳೆ ಬೃಹತ್‌ ಕಲ್ಲುಬಂಡೆ ಮೇಲೆ ಶಾಸನ ಕೆತ್ತಲಾಗಿದೆ. ಇವು ಅಶೋಕನ ಶಾಂತಿಪ್ರಿಯತೆ, ಸತ್ಯ, ಅಹಿಂಸೆ ಹಾಗೂ ಸನ್ಮಾರ್ಗದ ಗುಣಗಳ ಕುರಿತು ಬೆಳಕು ಚೆಲ್ಲುತ್ತವೆ.

-ಎಂ.ವಿ. ಶಿವಯೋಗಿ

ಚಿತ್ರದುರ್ಗ

Advertisement

Udayavani is now on Telegram. Click here to join our channel and stay updated with the latest news.

Next