Advertisement

ನಿಯಮಗಳ ಸಾರಾಸಗಟು ಉಲ್ಲಂಘನೆ: ಬೆಂಗಳೂರು ದುರಂತ

07:56 AM Jan 09, 2018 | Team Udayavani |

ಕಳೆದ ಡಿ. 29ರಂದು ಮುಂಬಯಿಯ ಕಮಲಾ ಮಿಲ್‌ ಕಂಪೌಂಡ್‌ನ‌ ಬಹುಮಹಡಿ ಕಟ್ಟಡದ ತುತ್ತ ತುದಿಯಲ್ಲಿದ್ದ ಮೋಜೊ ಬಿಸ್ಟೊ ಎಂಬ ಹೊಟೇಲಿನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 14 ಮಂದಿ ಸತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹುಟ್ಟುಹಬ್ಬದ ಪಾರ್ಟಿಯಲ್ಲಿ ಕ್ಯಾಂಡಲ್‌ ಹಚ್ಚುವಾಗ ಹತ್ತಿಕೊಂಡ ಬೆಂಕಿ ಬಿದಿರಿನಿಂದ ನಿರ್ಮಿಸಿದ ಹೊಟೇಲನ್ನು ಕ್ಷಣಾರ್ಧದಲ್ಲಿ ಭಸ್ಮ ಮಾಡಿದೆ. ವರ್ಷಾಂತ್ಯದಲ್ಲಿ ಹೃದಯ ಕಲಕಿದ ಈ ಘಟನೆ ಮರೆಯುವ ಮೊದಲೇ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಇದೇ ಮಾದರಿಯ ಘಟನೆ ಸಂಭವಿಸಿದೆ. 

Advertisement

70 ವರ್ಷ ಹಳೆಯ ಕಟ್ಟಡದಲ್ಲಿದ್ದ ಬಾರ್‌ಗೆ ಬೆಂಕಿ ಹತ್ತಿಕೊಂಡ ಪರಿಣಾಮ ವಾಗಿ ಬಾರ್‌ನೊಳಗೆ ನಿದ್ರಿಸುತ್ತಿದ್ದ ಐವರು ಸಿಬಂದಿಗಳು ನಿದ್ದೆಯಲ್ಲೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದ್ದರೂ ನಿಖರ ಕಾರಣ ತನಿಖೆಯಿಂದ ಪತ್ತೆಯಾಗಬೇಕಷ್ಟೆ. ಮೊನ್ನೆ ಮುಂಬಯಿ, ಇಂದು ಬೆಂಗಳೂರು, ನಾಳೆ ಇನ್ಯಾವುದೋ ಒಂದು ನಗರ. ದೇಶದ ಯಾವುದೇ ನಗರದಲ್ಲಿ ಯಾವುದೇ ಕ್ಷಣದಲ್ಲಿ ಈ ಮಾದರಿಯ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ಕಾನೂನು ಮತ್ತು ನಿಯಮಗಳ ಪಾಲನೆಯಲ್ಲಿ ನಮಗಿರುವ ದಿವ್ಯ ನಿರ್ಲಕ್ಷ್ಯ. 

ಮುಂಬಯಿಯ ದುರಂತದ ಬಳಿಕ ಬೆಚ್ಚಿ ಬೀಳಿಸುವ ಮಾಹಿತಿಗಳು ಬಯಲಾಗಿದ್ದವು. ಅಗ್ನಿಶಮನ ನಿಯಮ ಉಲ್ಲಂ ಸಿದ್ದಕ್ಕಾಗಿ ನಗರಪಾಲಿಕೆ ಈ ಹೊಟೇಲಿಗೆ ಎರಡೆರಡು ಸಲ ನೊಟೀಸ್‌ ಜಾರಿಗೊಳಿಸಿತ್ತು. ಆದರೆ ಹೊಟೇಲ್‌ ಮಾಲಕರು ಈ ನೊಟೀಸಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಹೊಟೇಲಿನ ತುರ್ತು ನಿರ್ಗಮನ ವ್ಯವಸ್ಥೆ ಎಷ್ಟು ಕಳಪೆ ಯಾಗಿತ್ತು ಎಂದರೆ ಆ ದಾರಿಯ ಮೂಲಕ ಹೋದರೆ ಇನ್ನಷ್ಟು ಅಪಾಯ ಎದುರಾಗಬಹುದಿತ್ತು. ನೊಟೀಸ್‌ ನೀಡಿದ ನಗರಪಾಲಿಕೆ ಅನಂತರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರ ಹಿಂದಿನ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಬ್ರಹ್ಮವಿದ್ಯೆಯ ಅಗತ್ಯವಿಲ್ಲ. ದುರಂತ ಸಂಭವಿಸಿದಾಗ ಪೊಲೀಸರು, ಅಧಿಕಾರಿಗಳು ಮತ್ತು ಆಳುವವರ ದಂಡೇ ಧಾವಿಸಿ ಬರುತ್ತದೆ. ಒಬ್ಬೊರನ್ನೊಬ್ಬರು ದೂಷಿಸುವ, ಜವಾಬ್ದಾರಿಯಿಂದ ನುಣುಚಿಕೊಳ್ಳುವ, ಪರಸ್ಪರರ ಕಾಲೆಳೆಯುವ ಪ್ರಹನ ನಡೆಯುತ್ತಿದೆ. ಸರಕಾರ ಸತ್ತವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಒಂದಷ್ಟು ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತದೆ. ನಾಲ್ಕು ದಿನ ಬಿರುಸಿನ ತನಿಖೆ ನಡೆದು ಮತ್ತೆ ಎಲ್ಲವೂ ತಣ್ಣಗಾಗುತ್ತದೆ. ಮತ್ತೂಮ್ಮೆ ವ್ಯವಸ್ಥೆಗೆ ಎಚ್ಚುತ್ತುಕೊಳ್ಳಬೇಕಾದರೆ ಈ ಮಾದರಿಯ ಇನ್ನೊಂದು ದುರಂತ ಸಂಭವಿಸಬೇಕು. ಇದು ದೇಶದಲ್ಲಿ ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ರೀತಿ. ಬೆಂಗಳೂರಾಗಲಿ, ಮುಂಬಯಿಯಾಗಲಿ ಇದರಿಂದ ಹೊರತಾಗಿಲ್ಲ. ಇನ್ನು ಇಂತಹ ಪ್ರಕರಣಗಳ ವಿಚಾರಣೆ ನಡೆದು ತೀರ್ಪು ಪ್ರಕಟವಾಗಲು ದಶಕಗಳೇ ಹಿಡಿಯುತ್ತದೆ. ಅಷ್ಟರಲ್ಲಿ ಮೃತರ ಮನೆಯ ವರಿಗೇ ಅವರ ನೆನಪು ಮಾಸಿರುತ್ತದೆ. ದಿಲ್ಲಿಯ ಉಪಹಾರ್‌ ದುರಂತ ಇದಕ್ಕೊಂದು ಉದಾಹರಣೆ. 

ಮುಖ್ಯವಾಗಿ ನಮ್ಮ ನಗರ ನಿರ್ಮಾಣ ವ್ಯವಸ್ಥೆಯೇ ಲೋಪದೋಷ ಗಳಿಂದ ಕೂಡಿದೆ. ಕಿಕ್ಕಿರಿದು ತುಂಬಿದ ನಗರದಲ್ಲಿ ಜಾಗ ಸಿಕ್ಕಿದಲ್ಲೆಲ್ಲ ಹೊಟೇಲುಗಳು, ಪಬ್‌ಗಳು, ಕ್ಯಾಂಟೀನ್‌ಗಳು ತಲೆ ಎತ್ತುತ್ತಿವೆ. ಯಾರೂ ಸುರಕ್ಷತೆಯ ಬಗ್ಗೆ ಗಮನಹರಿಸುವುದಿಲ್ಲ. ಒಂದು ಮಾಮೂಲು ಹೊಟೇಲು ಪ್ರಾರಂಭಿಸುವುದಕ್ಕೆ 20ಕ್ಕೂ ಹೆಚ್ಚು ಲೈಸೆನ್ಸ್‌ಗಳನ್ನು ಪಡೆದು ಕೊಳ್ಳಬೇಕಾಗುತ್ತದೆ. ಇಷ್ಟು ನಿಯಮಗಳು ಜಾರಿಯಲ್ಲಿವೆ. ಆದರೆ ಯಾವ ನಿಯಮವೂ ಸಮರ್ಪಕವಾಗಿ ಪಾಲನೆಯಾಗದಿರುವುದರಿಂದ ಅಥವ ಪಾಲಿಸುವ ಇಚ್ಛೆ ಇಲ್ಲದಿರುವುದರಿಂದ ದುರಂತಗಳು ಸಂಭವಿಸುತ್ತವೆ. ಪಾಲನೆಯಾಗದ ನಿಯಮಗಳು ಎಷ್ಟಿದ್ದರೇನು ಫ‌ಲ? ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಲು ಸ್ಥಳೀಯಾಡಳಿತಗಳು ಇನ್ನಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಜನರು ಕೂಡ ಕಾನೂನು ಒಂದು ರಗಳೆ ಎಂದು ಭಾವಿಸದೆ ತಮ್ಮ ಸುರಕ್ಷೆಗಾಗಿ ಇರುವುದು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ದುರಂತಗಳು ಸಂಭವಿಸಿದಾಗ ಪರಸ್ಪರರನ್ನು ದೂಷಿಸದೆ ಸಾಂ ಕವಾಗಿ ದಾಯಿತ್ವನ್ನು ಹೊತ್ತುಕೊಂಡು ಎಲ್ಲಿ ಲೋಪವಾಗಿದೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಸಂಸ್ಕೃತಿಯನ್ನು ಅಧಿಕಾರಿಗಳಲ್ಲಿ ಬೆಳೆಸಬೇಕು. ನಮ್ಮ ವ್ಯವಸ್ಥೆಯ ಮುಖ್ಯ ಲೋಪವೆಂದರೆ ವಿವಿಧ ಇಲಾಖೆಗಳ ನಡುವೆ ಪರಸ್ಪರ ಸಮನ್ವಯತೆ ಇಲ್ಲದಿರುವುದು. 

ಇದರಿಂದಾಗಿ ಯಾರಿಗೂ ಒಟ್ಟು ವ್ಯವಸ್ಥೆಯ ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ನಮ್ಮಲ್ಲಿ ಕಾನೂನು ಮುರಿಯುವುದೇ ಹೆಚ್ಚುಗಾರಿಕೆ ಎಂದು ಭಾವಿಸುವವರಿದ್ದಾರೆ. ಅವರಿಗೆ ಕನಿಷ್ಠ ತಾವು ಬಡಪಾಯಿ ಜನರ ಪ್ರಾಣಗಳ ಜತೆಗೆ ಚೆಲ್ಲಾಟವಾಡುತ್ತಿದ್ದೇವೆ ಎಂಬ ಅರಿವು ಇರುವುದಿಲ್ಲ. 
ಇದ್ದಿದ್ದರೆ ಬಾರ್‌ನೊಳಗೆ ಮಲಗಿದ್ದ ಐವರು ಅಮಾಯಕರ ಜೀವ ಉಳಿಯುತ್ತಿತ್ತು. ಕೇಂದ್ರ ಸರಕಾರ ಸ್ಮಾರ್ಟ್‌ಸಿಟಿ ನಿರ್ಮಿಸುವ ಧಾವಂತದಲ್ಲಿದೆ. ಮೂಲ ಸೌಕರ್ಯಗಳನ್ನು ಒದಗಿಸಿ ಹೊಸ ಹೊಸ ನಗರಗಳನ್ನು ನಿರ್ಮಿಸಿದರೆ ಸಾಲದು. ಆ ನಗರಗಳು ಸುರಕ್ಷಿತವೂ ಆಗಿರುವಂತೆ ನೋಡಿಕೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next