Advertisement

ಕಟಕ್‌ನಲ್ಲಿ ಒಲಿದೀತೇ ಗೆಲುವು? ಇಂದು ದ.ಆಫ್ರಿಕಾ ವಿರುದ್ಧ ದ್ವಿತೀಯ ಟಿ20 ಪಂದ್ಯ

08:37 AM Jun 12, 2022 | Team Udayavani |

ಕಟಕ್‌: ಭಾರತಕ್ಕೆ ಸತತ ಗೆಲುವಿನ ವಿಶ್ವದಾಖಲೆ ನಿರ್ಮಿಸಲು ಬಿಡುವುದಿಲ್ಲ ಎಂದು ಹೇಳುತ್ತಲೇ ನವದೆಹಲಿಯಲ್ಲಿ ವಿಮಾನ ಇಳಿದ ಟೆಂಬ ಬವುಮ ಈ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕೋಟ್ಲಾ ಮುಖಾಮುಖಿಯಲ್ಲಿ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಜಯಭೇರಿ ಮೊಳಗಿಸಿ ಭಾರತದ ಸತತ 13ನೇ ಟಿ20 ಗೆಲುವನ್ನು ತಪ್ಪಿಸಿತ್ತು. ಈ ಸರಣಿ ನಿರೀಕ್ಷಿಸಿದಷ್ಟು ಸುಲಭವಲ್ಲ ಎಂಬುದು ಈಗಾಗಲೇ ಯುವ ಭಾರತ ತಂಡಕ್ಕೆ ಸ್ಪಷ್ಟವಾಗಿ ಅರಿವಾಗಿದೆ.

ಇದೀಗ ಕಟಕ್‌ ಸರದಿ. ಇಲ್ಲಿನ ಬಾರಾಬತಿ ಮೈದಾನದಲ್ಲಿ ಭಾನುವಾರ ದ್ವಿತೀಯ ಟಿ20 ಪಂದ್ಯ ಏರ್ಪಡಲಿದೆ. ಇಲ್ಲಿ ಭಾರತಕ್ಕೆ ಗೆಲುವು ಒಲಿಯಬೇಕಿದೆ. ಇಲ್ಲವಾದರೆ ಆತಿಥೇಯ ಪಡೆ ತೀವ್ರ ಒತ್ತಡಕ್ಕೆ ಸಿಲುಕುವುದು ಖಂಡಿತ.

ಪಂತ್‌ಗೆ ಅನಿರೀಕ್ಷಿತ ಜವಾಬ್ದಾರಿ: ಐಪಿಎಲ್‌ ಮುಗಿದ ಕೆಲವೇ ದಿನಗಳಲ್ಲಿ ಈ ಸರಣಿ ಆರಂಭಗೊಂಡಿದೆ. ರೋಹಿತ್‌, ಕೊಹ್ಲಿ, ಬುಮ್ರಾ, ಶಮಿ ಮೊದಲಾದ ಸ್ಟಾರ್‌ ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಇದರಿಂದ ತಂಡಕ್ಕೆ ಭಾರೀ ನಷ್ಟವೇನಿಲ್ಲ. ಇವರಲ್ಲನೇಕರು ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆದರೆ ನಾಯಕ ಕೆ.ಎಲ್‌.ರಾಹುಲ್‌ ಮತ್ತು ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಕೊನೆಯ ಗಳಿಗೆಯಲ್ಲಿ ಸರಣಿಯಿಂದ ಬೇರ್ಪಟ್ಟಿರುವುದು ಭಾರತಕ್ಕೆ ಎದುರಾದ ದೊಡ್ಡ ಆಘಾತವೇ ಸೈ.

ರಾಹುಲ್‌ ಗೈರಲ್ಲಿ ರಿಷಭ್‌ ಪಂತ್‌ ಆಕಸ್ಮಿಕವಾಗಿ ತಂಡದ ಚುಕ್ಕಾಣಿ ಹಿಡಿಯಬೇಕಾಯಿತು. ಉಪನಾಯಕರಾದರೂ ಅವರಿನ್ನೂ ಟೀಮ್‌ ಇಂಡಿಯಾ ಸಾರಥ್ಯಕ್ಕೆ ಮಾನಸಿಕವಾಗಿ ಸಜ್ಜಾಗಿರಲಿಲ್ಲ ಎಂಬುದು ಸ್ಪಷ್ಟ. ತವರಿನ ಕೋಟ್ಲಾ ಅಂಗಳದಲ್ಲಿ ಎದುರಾದ ಸೋಲು ಅವರನ್ನು ಬಹಳಷ್ಟು ಕುಗ್ಗಿಸಿದೆ. ಇದಕ್ಕೆ ಪರಿಹಾರವೆಂದರೆ, ಕಟಕ್‌ನಲ್ಲಿ ಗೆದ್ದು ಹಳಿ ಏರುವುದು.

Advertisement

ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠ:
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಭಾರತಕ್ಕಿಂತ ಎಷ್ಟೋ ಬಲಿಷ್ಠವಾಗಿ ಗೋಚರಿಸುತ್ತಿದೆ. ಡಿ ಕಾಕ್‌, ಮಿಲ್ಲರ್‌, ಡುಸೆನ್‌, ರಬಾಡ, ನೋರ್ಜೆ, ಪ್ರಿಟೋರಿಯಸ್‌,  ಮಹಾರಾಜ್‌, ಮಾರ್ಕ್‌ರಮ್‌, ಎನ್‌ಗಿಡಿ, ಪಾರ್ನೆಲ್‌ ಅವರನ್ನೊಳಗೊಂಡ ಪೂರ್ಣ ಸಾಮರ್ಥ್ಯದ ತಂಡ ಇದಾಗಿದೆ. ಇದಕ್ಕೂ ಮಿಗಿಲಾಗಿ ಇಲ್ಲಿನ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಮಿಂಚಿದವರೇ ಆಗಿದ್ದಾರೆ. ಅದೇ ಫಾರ್ಮನ್ನು ಇಲ್ಲಿ ಮುಂದುವರಿಸುತ್ತಿದ್ದಾರೆ. ಉದಾಹರಣೆಗೆ ಮಿಲ್ಲರ್‌-ಡುಸೆನ್‌ ಜೋಡಿಯ ಅಜೇಯ 131 ರನ್‌ ಜತೆಯಾಟ.

ಭಾರತದ ಬ್ಯಾಟಿಂಗ್‌ ಓಕೆ:
ಹಾಗೆ ವಿಶ್ಲೇಷಣೆಗೆ ಹೊರಟರೆ ನವದೆಹಲಿಯಲ್ಲಿ ಭಾರತದ ಬ್ಯಾಟಿಂಗ್‌ ವಿಭಾಗದಲ್ಲಿ ಯಾವುದೇ ಸಮಸ್ಯೆ ತಲೆದೋರಿರಲಿಲ್ಲ. ಇಶಾನ್‌ ಕಿಶನ್‌, ಗಾಯಕ್ವಾಡ್‌, ಐಯ್ಯರ್‌, ಪಂತ್‌, ಪಾಂಡ್ಯ ಎಲ್ಲರೂ ಸಿಡಿದು ನಿಂತಿದ್ದರು. ನಾಲ್ಕೇ ವಿಕೆಟ್‌ ನಷ್ಟದಲ್ಲಿ ತಂಡದ ಮೊತ್ತ 211ಕ್ಕೆ ಏರಿತ್ತು. ಆದರೆ ಮೊದಲ ಸಲ 200 ಪ್ಲಸ್‌ ಮೊತ್ತವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬುದು ಯೋಚಿಸಬೇಕಾದ ಸಂಗತಿ. ಕಾರಣ ಸ್ಪಷ್ಟ. ನವದೆಹಲಿಯದ್ದು ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌ ಆಗಿತ್ತು. ಭಾರತದ ಬೌಲಿಂಗ್‌ ಅಷ್ಟೇ ದುರ್ಬಲವಾಗಿತ್ತು. ಮಿಲ್ಲರ್‌-ಡುಸೆನ್‌ ಜೋಡಿ ಉತ್ತಮ ಫಾರ್ಮ್ ನಲ್ಲಿತ್ತು. ಇವರ ಆಕ್ರಮಣಕ್ಕೆ ಆತಿಥೇಯರ ದಾಳಿ ಇನ್ನಷ್ಟು ನಲುಗಿತು.

ಐಪಿಎಲ್‌ನಲ್ಲಿ 27 ವಿಕೆಟ್‌ ಉಡಾಯಿಸಿ ನೇರಳೆ ಕ್ಯಾಪ್‌ ಏರಿಸಿಕೊಂಡ ಚಹಲ್‌ಗೆ ಇಲ್ಲಿ ಲಭಿಸಿದ್ದು 2 ಪೂರ್ತಿ ಓವರ್‌ ಮಾತ್ರ ಎಂಬುದು ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಪಾಂಡ್ಯ, ಭುವನೇಶ್ವರ್‌, ಪಟೇಲ್‌ದ್ವಯರೆಲ್ಲರೂ ಓವರಿಗೆ ಹತ್ತಕ್ಕೂ ಹೆಚ್ಚು ರನ್‌ ನೀಡಿ ದುಬಾರಿಯಾಗಿದ್ದರು. ಹೀಗಾಗಿ ದ್ವಿತೀಯ ಪಂದ್ಯಕ್ಕಾಗಿ ಬೌಲಿಂಗ್‌ ವಿಭಾಗದಲ್ಲಿ ಒಂದೆರಡು ಬದಲಾವಣೆ ಸಂಭವಿಸಬಹುದು. ಐಪಿಎಲ್‌ನಲ್ಲಿ ಮಿಂಚಿದ ಉಮ್ರಾನ್‌ ಮಲಿಕ್‌ ಅಥವಾ ಅರ್ಷದೀಪ್‌ ಸಿಂಗ್‌ ಅವಕಾಶ ಪಡೆಯುವ ಸಾಧ್ಯತೆ ಇದೆ.

ಹೇಗಿದ್ದೀತು ಕಟಕ್‌ ಅಂಕಣ?
ಆದರೆ ಕಟಕ್‌ ಟ್ರ್ಯಾಕ್‌ ಹೇಗೆ ವರ್ತಿಸೀತು ಎಂಬುದು ನಿಗೂಢವಾಗಿಯೇ ಇದೆ. ಇಲ್ಲಿ ಟಿ20 ಪಂದ್ಯ ನಡೆಯುತ್ತಿರುವುದು ನಾಲ್ಕೂವರೆ ವರ್ಷಗಳ ಬಳಿಕ ಎಂಬುದನ್ನು ಗಮನಿಸಬೇಕು. ಇದುವರೆಗೆ ಇಲ್ಲಿ ನಡೆದದ್ದು 2 ಪಂದ್ಯ ಮಾತ್ರ. 2015ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವೇ ಭಾರತವನ್ನು ಮಣಿಸಿತ್ತು. ಬಳಿಕ 2017ರಲ್ಲಿ ಭಾರತ ಲಂಕೆಗೆ ಸೋಲುಣಿಸಿತು.

ಹರಿಣಗಳೆದುರು ಭಾರತ, ಭಾರತದ ವಿರುದ್ಧ ಲಂಕಾ ನೂರರೊಳಗೆ ಕುಸಿದಿತ್ತು. ಅಂಥದೇ ಬೌಲಿಂಗ್‌ ಟ್ರ್ಯಾಕನ್ನು ಕಟಕ್‌ ಈಗಲೂ ಹೊಂದಿದೆಯೇ? ಸಾಧ್ಯತೆ ಕಡಿಮೆ.

ಭಾರತ ತಂಡ: ರಿಷಭ್‌ ಪಂತ್‌ (ನಾಯಕ, ವಿಕೆಟ್‌ ಕೀಪರ್‌), ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ದೀಪಕ್‌ ಹೂಡಾ, ಶ್ರೇಯಸ್‌ ಐಯ್ಯರ್‌, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ (ಉಪನಾಯಕ), ವೆಂಕಟೇಶ್‌ ಐಯ್ಯರ್‌, ಯುಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯಿ, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌, ಅರ್ಷದೀಪ್‌ ಸಿಂಗ್‌, ಉಮ್ರಾನ್‌ ಮಲಿಕ್‌.

ಮುಖಾಮುಖಿ
ಒಟ್ಟು ಪಂದ್ಯ 16
ಭಾರತ ಜಯ 09
ದ.ಆಫ್ರಿಕಾ ಜಯ 07
ನೇರಪ್ರಸಾರ : ಸ್ಟಾರ್‌ ಸ್ಪೋರ್ಟ್ಸ್
ಪಂದ್ಯಾರಂಭ: ರಾ.7

Advertisement

Udayavani is now on Telegram. Click here to join our channel and stay updated with the latest news.

Next