Advertisement

ಸ್ವಸ್ಥ ಮನಸ್ಸಿಗಾಗಿ ಜೀವನಶೈಲಿಯ ಸೂತ್ರಗಳು

12:30 AM Oct 10, 2021 | Team Udayavani |

ರಾಷ್ಟ್ರದ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಮಾನಸಿಕ ನೆಮ್ಮದಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಅತ್ಯಂತ ನೆಮ್ಮದಿ ಯುತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 149 ದೇಶ ಗಳಲ್ಲಿ 139ನೇ ಸ್ಥಾನದಲ್ಲಿದೆ.

Advertisement

ಕೋವಿಡ್‌ 19ರ ಅನಂತರದ ಸನ್ನಿವೇಶದಲ್ಲಿ ದೇಶಾದ್ಯಂತ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡದ್ದಲ್ಲದೆ, ಪ್ರತ್ಯೇಕತೆ, ವ್ಯಾವಹಾರಿಕ ನಷ್ಟ, ಆರ್ಥಿಕ ಒತ್ತಡ ಮತ್ತು ಅನೇಕರಿಗೆ ಉದ್ಯೋಗ ನಷ್ಟದಿಂದಾಗಿ ಆತಂಕ ಮತ್ತು ತರಹೇವಾರಿ ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಭಾರತೀಯ ಯುವಜನತೆಯಲ್ಲಿ (18 ರಿಂದ 24 ವರ್ಷ) ಶೇ.56ರಷ್ಟು ಮಂದಿ ಖನ್ನತೆ, ಆತಂಕದಿಂದ ಬಳಲುತ್ತಿದ್ದಾರೆ.
ಈ ಕೆಳಗಿನ ಜೀವನಶೈಲಿ ಕ್ರಮಗಳು ಆತಂಕ ಮತ್ತು ಖನ್ನತೆಯನ್ನು ನೈಸರ್ಗಿಕ ರೀತಿಯಲ್ಲಿ ನಿಭಾಯಿಸುವುದಕ್ಕೆ ಸಹಕಾರಿಯಾಗಲಿದೆ.

-ಪ್ರಥಮವಾಗಿ ನಿಮ್ಮನ್ನು ನೀವು ಗೌರವ ಮತ್ತು ಪ್ರೀತಿಯಿಂದ ಕಾಣಿರಿ. ಅತಿಯಾದ ಆತ್ಮವಿಮರ್ಶೆ ಮತ್ತು ಸ್ವಯಂ ಟೀಕೆ ಸಮಸ್ಯೆಗಳಿಗೆ ಪರಿಹಾರವಲ್ಲ. ಅತಿಯಾದ ಮಾನಸಿಕ ಮತ್ತು ದೈಹಿಕ ಒತ್ತಡದ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ ಮತ್ತು ನಿಮ್ಮ ಆಲೋಚನೆ ಪರಿಧಿಯನ್ನು ವಿಸ್ತರಿಸಿ. ಜಾಗೃತ ಅರಿವನ್ನು ಬೆಳೆಸಿಕೊಳ್ಳಲು ಯೋಗ, ಉಸಿರಾಟದ ಕ್ರಿಯೆಗಳು, ಗಿಡಗಳನ್ನು ನೆಟ್ಟು ಬೆಳೆಸುವುದು, ನೃತ್ಯ ಅಥವಾ ಚುರುಕಾದ ನಡಿಗೆ, ಸಂಗೀತ ವಾದ್ಯವನ್ನು ನುಡಿಸಲು ಅಥವಾ ಹೊಸ ಭಾಷೆಯನ್ನು ಕಲಿಯಿರಿ.

-ಉತ್ತಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳು ವುದರಿಂದಲೂ ನಿಮ್ಮ ಮಾನಸಿಕ ಆರೋಗ್ಯ ಮತ್ತು ಭಾವನೆಗಳನ್ನು ಸುಧಾರಿಸಬಹುದು.

-ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು, ನೀವು ಹಣ್ಣುಗಳು ಮತ್ತು ತರಕಾರಿಗಳಂಥ ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ವಿಶೇಷ ವಾಗಿ ಬಾದಾಮ್‌, ಆಕ್ರೋಟ್‌ ದ್ವಿದಳ ಧಾನ್ಯಗಳಾದ ಕಡಲೆ ಮತ್ತು ಮಸೂರ ಮೆದುಳಿಗೆ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ.

Advertisement

-ಸಾಕಷ್ಟು ನೀರು ಕುಡಿಯದವರಲ್ಲಿ ಆತಂಕ ಹೆಚ್ಚಿರು ವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.

-ವಾರದಲ್ಲಿ 5 ದಿನಗಳ ಕಾಲ ಪ್ರತಿನಿತ್ಯ 30ರಿಂದ 60 ನಿಮಿಷ ವ್ಯಾಯಾಮ ಮಾಡುವುದರಿಂದ ನಿಮ್ಮ ಮೆದುಳಿನಲ್ಲಿ ಎಂಡಾರ್ಫಿನ್‌ಗಳು, ಶಕ್ತಿಯುತ ರಾಸಾ ಯನಿಕಗಳು ಬಿಡುಗಡೆಯಾಗುತ್ತವೆ ಮತ್ತು ನಿಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಖನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು, ಮನಃಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ಲಖೀಂಪುರ ಹಿಂಸೆ: ಆಶಿಷ್‌ ಮಿಶ್ರಾ ಬಂಧನ; ಸತತ 8 ಗಂಟೆ ಎಸ್‌ಐಟಿ ವಿಚಾರಣೆ

-ಶರೀರಾಂತರ್ಗತ ಪ್ರಚೋದನೆಯನ್ನು ಹೆಚ್ಚಿಸುವ ಮೂಲಕ ಆತಂಕಕ್ಕೆ ಕಾರಣವಾಗುವ ತಂಬಾಕು ಮತ್ತು ಕೆಫೀನ್‌ನಿಂದ ದೂರವಿರಿ.

-ಖಿನ್ನತೆ, ಒತ್ತಡ-ಸಂಬಂಧಿತ ಸಮಸ್ಯೆ ಗಳು, ಆತ್ಮಹತ್ಯೆಯ ಆಲೋಚನೆಗಳು ಮತ್ತು ಮಾನಸಿಕ ಯಾತನೆ ಗಳಿಗೆ ಪ್ರಚೋ ದಕವಾಗಿರುವ ತಂಪು ಪಾನೀಯಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.

-ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಚೇತರಿಸಿ ಕೊಳ್ಳಲು ನಿದ್ರೆ ಸಹಾಯ ಮಾಡುತ್ತದೆ. ನಿದ್ರಾಹೀನತೆ ಸಮಸ್ಯೆಯು ಅಧಿಕ ಮಾನಸಿಕ ಒತ್ತಡದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.

-ಸಂಕಷ್ಟಗಳಲ್ಲಿ ಸ್ಪಂದಿಸುವವರೊಂದಿಗಿನ ಸಂಪರ್ಕ ವೃದ್ಧಿ ಮತ್ತು ಹೆಚ್ಚಿನ ಹೊಣೆಗಾರಿಕೆ, ಸುಧಾರಿತ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮ, ಸಮಸ್ಯೆ- ಪರಿಹರಿಸುವ ಉತ್ತಮ ಕೌಶಲಗಳು ಮೆದುಳಿನ ಕ್ಷಮತೆಯನ್ನು ಸುಧಾರಿಸಲು ಪೂರಕವಾಗಬಲ್ಲದು. ನಮ್ಮನ್ನು ಸಕಾರಾತ್ಮಕ ವ್ಯಕ್ತಿ ಮತ್ತು ವಿಷಯಗಳಿಂದ ಸುತ್ತುವರಿಯುವುದು ಮುಖ್ಯ.

-ದೈನಂದಿನ ಜೀವನದಲ್ಲಿ ಅಧಿಕ ಒತ್ತಡವನ್ನು ಕಡಿಮೆ ಮಾಡುವುದು ಅಥವಾ ನಿರ್ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಒತ್ತಡ ನಿಯಂತ್ರಣ ಮೀರಿದಾಗ ಅಲ್ಪ ವಿರಾಮ ತೆಗೆದುಕೊಳ್ಳಿ. ಒತ್ತಡ ನಿಭಾಯಿಸುವ ಕೌಶಲಗಳನ್ನು ಅಭ್ಯಾಸ ಮಾಡಿ. ಉದಾಹರಣೆಗೆ, ತೈ ಚಿ, ಯೋಗ ಮತ್ತು ಆಳವಾದ ಉಸಿರಾಟ, ಪ್ರಕೃತಿಯೊಂದಿಗೆ ಒಡನಾಟ, ನಿಮ್ಮ ಸಾಕುಪ್ರಾಣಿಗಳೊಂದಿಗೆ ಕಾಲ ಕಳೆ ಯುವುದು ಇತ್ಯಾದಿ. ದೈನಂದಿನ ಮನಸ್ಸಿನ ತುಮುಲ ಗಳನ್ನು ಏಕಾಂತದಲ್ಲಿ ಬರಹ ರೂಪದಲ್ಲಿಯೂ ಹೊರ ಹಾಕುವುದು ಒತ್ತಡ ನಿವಾರಣೆಯ ಒಂದು ನೈಸರ್ಗಿಕ ವಿಧಾನ. ಹಾಗೆಯೇ ಹಾಸ್ಯ, ನಗು ಮತ್ತು ಕೌಟುಂಬಿಕ ಸಮಯ ನಿಮ್ಮ ಪ್ರತಿನಿತ್ಯ ಜೀವನದ ಭಾಗವಾಗಿರಲಿ.

-ಧ್ಯಾನ ಮತ್ತು ಪ್ರಾರ್ಥನೆಯ ನಿಯಮಿತ ಅಭ್ಯಾಸವು ನಿಮ್ಮ ಮನಸ್ಸಿನ ಶಾಂತ ಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘ‌ಕಾಲದವರೆಗೆ ನಿಮ್ಮನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ನೀವು ನೋಡುವ ಪರಿಯು ಬದಲಾಗಬಹುದು. ಧ್ಯಾನವು ಮನಸ್ಸಿನ ಗಮನ ಮತ್ತು ಏಕಾಗ್ರತೆ, ಸುಧಾರಿತ ಸ್ವಯಂ-ಅರಿವು ಮತ್ತು ಸ್ವಾಭಿಮಾನ, ಕಡಿಮೆ ಮಟ್ಟದ ಒತ್ತಡ ಮತ್ತು ಆತಂಕ, ಸೌಹಾರ್ದ ಮತ್ತು ಶಾಂತಿಯನ್ನು ಪೋಷಿಸಲು ಸಹಾಯ ಮಾಡುತ್ತದೆ.

-ಜೀವನದಲ್ಲಿ ಸ್ಪಷ್ಟ, ಸರಳವಾದ ಮತ್ತು ನೈಜವಾದ ಗುರಿಯಿರಲಿ. ಇದರಿಂದ ನಿಮ್ಮ ಗಮನವನ್ನು ಸಂಪೂರ್ಣವಾಗಿ ಗುರಿಯತ್ತ ಕೇಂದ್ರೀಕರಿಸಲು ಮತ್ತು ಅದನ್ನು ಸಾಧಿಸುವ ಸಾಧ್ಯತೆಗಳಿವೆ.

-ಜನರು ಆಲ್ಕೋಹಾಲ್‌ ಮತ್ತು ಇತರ ಮಾದಕ ವಸ್ತುಗಳನ್ನು “ಸ್ವಯಂ-ಔಷಧ’ ಎಂದರೆ ಒತ್ತಡ ನಿಯಂ ತ್ರಕವಾಗಿ ಬಳಸುತ್ತಾರೆ. ನಾವು ಮದ್ಯ ಸೇವಿಸಿದ ಅನಂತರ ನಿರಾಳರಾದಂತೆ ಭಾಸವಾದರೂ ಮದ್ಯಪಾನ ಮತ್ತು ಇತರ ಮಾದಕ ವಸ್ತುಗಳು ದೀರ್ಘಾವಧಿಯಲ್ಲಿ ಖನ್ನತೆ, ಆತಂಕ
ಮತ್ತು ಮಾನಸಿಕ ಕ್ಷೋಭೆಗೆ ಕಾರಣವಾಗುತ್ತದೆ.

-ಸಹಾಯ ಪಡೆಯುವುದು ದೌರ್ಬಲ್ಯದ ಸಂಕೇತ ವಲ್ಲ. ಚಿಕಿತ್ಸೆ ಅಥವಾ ಸಮಾಲೋಚನೆಯಲ್ಲಿ ನಂಬಿಕೆ ಇಡುವುದು ಬಹಳ ಮುಖ್ಯ. ತಜ್ಞರಿಂದ ಸರಿಯಾದ ಚಿಕಿತ್ಸೆಯನ್ನು ಪಡೆಯುವ ಜನರು ಮಾನಸಿಕ ಅಸ್ವಸ್ಥತೆ ಮತ್ತು ವ್ಯಸನದಿಂದ ಚೇತರಿಸಿಕೊಳ್ಳಬಹುದು ಹಾಗೂ ಪೂರ್ಣ, ಫಲಪ್ರದ ಜೀವನವನ್ನು ನಡೆಸಬಹುದು.

-ಇತರರಿಗೆ ಸಹಾಯ ಮಾಡಲು ನಿಮ್ಮ ಸಮಯ ಮತ್ತು ಶಕ್ತಿಯನ್ನು ಸ್ವಯಂಪ್ರೇರಣೆಯಿಂದ ವಿನಿಯೋ ಗಿಸಿ. ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡು ವುದರಿಂದ ಒಂದು ರೀತಿಯ ಮಾನಸಿಕ ಸಂತೃಪ್ತಭಾವ ನಿಮ್ಮದಾಗುವುದು ಮತ್ತು ಹೊಸ ಜನರೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಮಾರ್ಗವಾಗಿದೆ.

-ಡಾ| ಶ್ಯಾಮರಾಜ್‌ ನಿಡುಗಳ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next