Advertisement

ಇಂದು ಕಲ್ಯಾಣ ಕರ್ನಾಟಕ ದಿನ; ಹೆಸರಷ್ಟೇ ಅಲ್ಲ , ಜನರ ಬದುಕಿನ ಕಲ್ಯಾಣ ನನ್ನ ಗುರಿ

11:17 PM Sep 16, 2022 | Team Udayavani |

ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕೇವಲ ಕನಸು ಕಾಣುವುದರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಬದ್ಧತೆ ಯಿಂದ ಕೆಲಸ ಮಾಡಿದಾಗ ಮಾತ್ರ ಇದು ನನಸಾಗಲು ಸಾಧ್ಯ. ಅಲ್ಲದೆ ಪ್ರಾದೇಶಿಕ ಅಸಮಾನತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ.

Advertisement

ಹೈದರಾಬಾದ್‌ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಯಾಗಿದ್ದ ಕಲ್ಯಾಣ ಕರ್ನಾಟಕ ಎಂಬ ಹೆಸರನ್ನು ಬದಲಾಯಿಸುವ ಮೂಲಕ ನಮ್ಮ ಸರಕಾರ ಆ ಭಾಗದ ಜನರು ದಾಸ್ಯದ ಮನಃಸ್ಥಿತಿಯಿಂದ ಹೊರಬರು ವಂತೆ ಮಾಡುವಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಒಂದು ಪ್ರದೇಶದ ಅಭಿವೃದ್ಧಿ ಎನ್ನುವುದು ಕೇವಲ ಭೌತಿಕವಾಗಿ ಮಾಡಿ ದರೆ ಸಾಲದು. ಆ ಭಾಗದ ಜನರ ಮನಃಸ್ಥಿತಿಯೂ ಬದಲಾಗಬೇಕು. ಅವರ ಮನಸಲ್ಲಿಯೂ ಸಕಾರಾತ್ಮಕ ಭಾವನೆ ಮೂಡಬೇಕು. ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿ ಸುವ ಮೊದಲ ಹೆಜ್ಜೆಯೇ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವುದರ ಹಿಂದಿರುವ ಪ್ರೇರಣೆ.

ಜನರ ಕಲ್ಯಾಣವೇ ಗುರಿ
ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಾಕೃತಿಕ ಸಂಪತ್ತು, ನದಿ ನೀರು, ಖನಿಜ ಸಂಪತ್ತು, ಬೌದ್ಧಿಕ ಸಂಪತ್ತನ್ನು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಂಡು ಸಮಗ್ರ ಕರ್ನಾಟಕದ ಭೂಪಟದಲ್ಲಿ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿಯಿಂದ ಈ ಭಾಗವನ್ನು ಮುಕ್ತ ಮಾಡಬೇಕು ಎಂದು ಸಂಕಲ್ಪ ತೊಟ್ಟು ಆ ನಿಟ್ಟಿನಲ್ಲಿ ನಾನು ಕಾರ್ಯ ನಿರತನಾಗಿದ್ದೇನೆ.

ಅಮೃತ ಮಹೋತ್ಸವ
ಭಾರತದ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ದಿಟ್ಟ ನಿರ್ಧಾರದಿಂದ ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರುವ ಮೂಲಕ ಶರಣರ ನಾಡು ಮೊದಲ ಸ್ವಾತಂತ್ರ್ಯದ ಅನುಭವ ಪಡೆಯಿತು. ಆದರೆ ಅನಂತರ ಈ ಭಾಗ ನಿರಂತರವಾಗಿ ಎಲ್ಲ ರಂಗ ಗಳಲ್ಲಿಯೂ ನಿರ್ಲಕ್ಷಿಸಲ್ಪಡುತ್ತಲೇ ಬಂದಿತು. ನಮ್ಮ ಸರಕಾರ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿದೆ.

2022-23ನೇ ಸಾಲಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ. 3,000 ಕೋಟಿ ನಿಗದಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2013-14ರಿಂದ 2021-22ನೇ ಸಾಲಿನ ವರೆಗೆ ರೂ. 8878.33 ಕೋಟಿ ಒದಗಿಸಿದ್ದು, ಈ ಪೈಕಿ ರೂ. 7,328.80 ಕೋಟಿ ಬಿಡುಗಡೆ ಮಾಡಲಾಗಿದ್ದು, 6,565.46 ಕೋಟಿ ರೂ. ವೆಚ್ಚ ಮಾಡಲಾಗಿದೆ.

Advertisement

ಕಲ್ಯಾಣ ಕರ್ನಾಟಕ ಭಾಗಕ್ಕಾಗಿಯೇ ವಿಶೇಷವಾದ ಅಮೃತ ಬಜೆಟ್‌ ಘೋಷಣೆ ಮಾಡಲಾಗಿದ್ದು, ಈ ಭಾಗದ ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ 1,500 ಕೋಟಿ ಹಾಗೂ ಮೈಕ್ರೋ ಯೋಜನೆಗಳಿಗೆ 1,500 ಕೋಟಿ ರೂ. ಮೀಸಲಿಡಲಾಗಿದ್ದು, ಇದು ಈ ಭಾಗದಲ್ಲಿ ಹೊಸ ಹೊಸ ಬೃಹತ್‌ ಯೋಜನೆ ಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌ ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಯಚೂರು ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಕೊಪ್ಪಳ, ಬಳ್ಳಾರಿ ಯಲ್ಲಿ ವಿಮಾನ ನಿಲ್ದಾಣ ಆರಂಭಿಸಲು ಯೋಜನೆ ರೂಪಿಸಲಾಗಿದೆ.

ಈ ಭಾಗದ 71 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳ ಲಾಗಿದೆ. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿರುವ ಪ್ರದೇಶ. ಕಲಬುರಗಿ ಹಾಗೂ ಬೀದರ್‌ ಕೋಟೆಗಳ ಅಭಿವೃದ್ಧಿಯ ಜತೆಗೆ ಈ ಭಾಗದಲ್ಲಿರುವ ಪ್ರಮುಖ ಕೋಟೆಗಳ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ ಕಲ್ಯಾಣ ಕರ್ನಾಟಕದ ಕೋಟೆಗಳ ಪ್ರವಾಸೋದ್ಯಮದ ಕಾರಿಡಾರ್‌ ನಿರ್ಮಾಣ ಮಾಡುವ ಚಿಂತನೆ ನಡೆಸಲಾಗುತ್ತಿದೆ.

ಗಂಗಾವತಿ ತಾಲೂಕಿನ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 40 ಕೋಟಿ ರೂ. ಹಣ ನೀಡಲಾಗಿದೆ. ವಿಶ್ವ ಪ್ರಸಿದ್ದ ಹಂಪಿ, ಆನೆಗುಂದಿ, ಬೀದರ್‌ನ ಗುರುನಾನಕ ಝೀರಾ ಸೇರಿ ದಂತೆ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ಅನ್ನದಾತರ ಬದುಕು ಹಸನು ಮಾಡುವ ಸಂಕಲ್ಪ
ತೊಗರಿಯ ಕಣಜ ಎಂದೇ ಕರೆಯಲ್ಪಡುವ ಕಲಬುರಗಿ, ಭತ್ತದ ಕಣಜ ಗಂಗಾವತಿ, ಸಿರಿಧಾನ್ಯದ ನಾಡು ಎಂಬ ಬಿರುದು ಪಡೆದಿರುವ ಈ ಭಾಗದಲ್ಲಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈತ ಶಕ್ತಿ ಯೋಜನೆ ಕಲ್ಯಾಣ ಕರ್ನಾಟಕ ಭಾಗದ ಸುಮಾರು 20 ಲಕ್ಷ ರೈತರಿಗೆ ನೇರವಾಗಿ ತಲುಪುತ್ತಿರುವುದು ಒಂದು ದಾಖಲೆ. ಅಲ್ಲದೇ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ ಈ ಭಾಗದ 1.85 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.

ಅನುಭವ ಮಂಟಪ ಸೃಷ್ಟಿ
ಬಸವೇಶ್ವರರ ಕರ್ಮ ಭೂಮಿ ಬಸವ ಕಲ್ಯಾಣದಲ್ಲಿ ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪ ನಿರ್ಮಾಣ ಮಾಡುವುದು ನಮ್ಮ ಪ್ರಥಮ ಆದ್ಯತೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಈಗಾಗಲೇ 612 ಕೋಟಿ ರೂ. ವೆಚ್ಚದ ಪರಿಷ್ಕ¢ತ ಅಂದಾಜಿಗೆ ಅನುಮೋದನೆ ನೀಡಲಾಗಿದ್ದು, ಸುಮಾರು 75 ಎಕ್ರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದೆ.

ಮಾನವ ಸಂಪನ್ಮೂಲ ಸದ್ಬಳಕೆ
ಮಾನವ ಸಂಪನ್ಮೂಲ ಸದ್ಬಳಕೆಗಾಗಿ ನಮ್ಮ ಸರಕಾರ ಮಾಜಿ ಸಂಸದ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಮುತ್ಸದ್ದಿ ಬಸವರಾಜ ಪಾಟೀಲ್‌ ಸೇಡಂ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಸ್ಥಾಪನೆ ಮಾಡಿದ್ದು, ಈ ಸಂಘದ ಮೂಲಕ ಕೃಷಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೌನ ಕ್ರಾಂತಿಯಾಗುತ್ತಿದ್ದು, ಇದರ ಪರಿಣಾಮ ಈ ಭಾಗದ ಯುವಕರು ಹಾಗೂ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗು ವುದನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡಲಾಗಿದೆ.

ವಿಜಯನಗರ ಜಿಲ್ಲೆ ಸ್ಥಾಪನೆ
ಕಲ್ಯಾಣ ಕರ್ನಾಟಕ ಭಾಗದ ವಿಶ್ವ ಪ್ರಸಿದ್ದ ಪ್ರದೇಶವಾಗಿರುವ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿಯನ್ನೊಳಗೊಂಡ ವಿಜಯನಗರ ಜಿಲ್ಲೆಯ ಸ್ಥಾಪನೆ ಮಾಡಲಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದ ಪ್ರದೇಶಗಳ ತಾಲೂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ದೊರೆಯುವಂತೆ ಮಾಡಲಾಗುತ್ತಿದೆ.

ನನ್ನ ಕನಸು
ನಮ್ಮ ನೆಚ್ಚಿನ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸಮಗ್ರ ಕರ್ನಾಟಕವನ್ನು ಎಲ್ಲ ರಂಗದಲ್ಲಿಯೂ ಮುಂಚೂಣಿ ರಾಜ್ಯವನ್ನಾಗಿಸುವುದು ನನ್ನ ಕನಸು. ಆ ಕನಸು ನನಸಾಗಬೇಕಾದರೆ, ಸಮಗ್ರ ಕರ್ನಾಟಕ ಏಕರೂಪದಲ್ಲಿ ಅಭಿವೃದ್ಧಿಯಾದರೆ ಮಾತ್ರ ಸಾಧ್ಯ. ನಿಟ್ಟಿನಲ್ಲಿ ನಾನು ದೃಢವಾದ ಹೆಜ್ಜೆಯನ್ನಿಟ್ಟಿದ್ದು, ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ರಾಜ್ಯದ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತೇನೆ. ಇದು ನನ್ನ ಕನಸು, ಬದ್ಧತೆ.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next