Advertisement

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

12:39 AM Dec 03, 2021 | Team Udayavani |

ಮನುಷ್ಯ ಭಾವನೆಗಳ ಆಗರವಿದ್ದಂತೆ. ಭಾವನೆಗಳು ಮನಸ್ಸಿನಿಂದ ಹುಟ್ಟಿಕೊಳ್ಳುತ್ತವೆ. ಮನದ ಭಾವಗಳು ಪ್ರತೀ ಕೆಲಸಕ್ಕೂ ಪ್ರೇರಣೆ ನೀಡುತ್ತವೆ. ಜಗತ್ತಿನ ಆಗು ಹೋಗುಗಳಿಗೆ ಬೌದ್ಧಿಕವಾಗಿ ಸ್ಪಂದಿಸುವ ಮನೋಭಿಲಾಷೆ ಆಂತರ್ಯದಲ್ಲಿ ಮೂಡಿದಾಗ, ಭೌತಿಕ ಅಂಗಾಂಗಗಳಲ್ಲಿ ಏನೇ ಕೊರತೆ ಇದ್ದರೂ ಅದು ನಗಣ್ಯವಾಗುತ್ತದೆ. ಹಾಗಾಗಿ ಅಂಗವೈಕಲ್ಯ ಎಂಬುದು ಒಂದು ಕೊರತೆ ಎಂದು ಭಾವಿಸದೆ, ಅಂಥವರಿಗೆ ಸಮಾನ ಅವಕಾಶ ನೀಡಿ ಎಲ್ಲರೊಂದಿಗೆ ಮುನ್ನಡೆಸಿದಾಗ ಅವರಿಂದಲೂ ಮಹತ್ತರ ಸಾಧನೆ ಹೊರಹೊಮ್ಮಬಲ್ಲದು.

Advertisement

ಅಂಗವಿಕಲರಲ್ಲೂ ಅದಮ್ಯವಾದ ಚೈತನ್ಯ ಶಕ್ತಿ ಇರುತ್ತದೆ. ಅವರ ಮಹತ್ವ ಮತ್ತು ವಿಶೇಷತೆಯ ಬಗೆಗೆ ಸಮಾಜದ ಪ್ರತಿ ಯೊಬ್ಬರಲ್ಲೂ ಅರಿವು ಮೂಡಿಸುವ ಹಾಗೂ ಅಂಗವಿಕಲರಿಗೆ ಅನುಕಂಪ ತೋರುವುದಕ್ಕಿಂತ ಹೆಚ್ಚಾಗಿ ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕೆಂಬ ಸದಾಶಯದೊಂದಿಗೆ ಪ್ರತೀ ವರ್ಷ ಡಿಸೆಂಬರ್‌ 3ರಂದು ಅಂತಾರಾಷ್ಟ್ರೀಯ ಅಂಗವಿಕಲರ ದಿನವನ್ನು ಆಚರಿಸ ಲಾಗುತ್ತದೆ.

ವಿಶ್ವಸಂಸ್ಥೆಯು 1992ರಲ್ಲಿ ಅಂಗವಿಕಲರ ದಿನವನ್ನು ಆಚರಿಸಲಾರಂಭಿಸಿತು. ಈ ದಿನದಂದು ಅಂಗವಿಕಲರಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜತೆಯಲ್ಲಿ ಅವರನ್ನು ಸ್ವಾವಲಂಬಿಗಳಾಗಿಸುವ ಮತ್ತು ಅವರಲ್ಲಿ ಜೀವನೋತ್ಸಾಹ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅಂಗವಿಕಲರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಂಗವಿಕಲರಿಗೆ ಸಮಾಜದಲ್ಲಿ ಇತರ ಜನರಿಗೂ ಸಿಗುವ ಸೌಲಭ್ಯ ಮತ್ತು ಅವಕಾಶಗಳು ಸಿಗುವಂತಾಗಬೇಕು ಎಂಬುದು ಈ ದಿನಾಚರಣೆಯ ಸದುದ್ದೇಶವಾಗಿದೆ.

“ನಾನೇನಾದರೂ ಸಾಧಿಸಬೇಕು. ಈ ಭುವಿಯಲ್ಲಿ ಓರ್ವ ಮನುಜನಾಗಿ ಹುಟ್ಟಿದ್ದಕ್ಕೆ, ಸಾರ್ಥಕ ಹೆಜ್ಜೆ ಗುರುತುಗಳನ್ನು ಪಡಿಮೂಡಿಸಬೇಕು’ ಎಂಬ ತುಡಿತ ಇರುವವರು ಯಾವುದೇ ಅಡ್ಡಿ, ಆತಂಕಗಳು ಎದುರಾದರೂ ಸಮರ್ಥವಾಗಿ ಮುನ್ನಡೆಯಬಲ್ಲರು. ದೇವರು ಕೊಟ್ಟ ವರವೆಂಬಂತಿರುವ ಈ ಶರೀರದಲ್ಲಿ ಹುಟ್ಟಿನಿಂದಲೇ ಕೆಲವೊಂದು ವೈಕಲ್ಯಗಳು ಇದ್ದರೂ ಅಥವಾ ಆಕಸ್ಮಿಕ ಅವಘಡಗಳಲ್ಲಿ ದೇಹದ ಯಾವುದಾದರೂ ಅಂಗಾಂಗವನ್ನು ಕಳೆದುಕೊಂಡರೂ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧನೆಯ ಶಿಖರವನ್ನೇರಿದ ಅನೇಕ ಉದಾಹರಣೆಗಳು ನಮ್ಮಲ್ಲಿವೆ.

ಆಕಸ್ಮಿಕವಾಗಿ ಸಂಭವಿಸುವ ಅನಾಹುತಗಳು ಕೆಲವ ರನ್ನು ಅಂಗವಿಕಲರನ್ನಾಗಿ ಮಾಡುತ್ತವೆ. ಅಂತಹವರಿಗೆ ಜೀವನದ ಎಲ್ಲ ಸಾಧ್ಯತೆಗಳೂ ಕಮರಿಹೋದವೆಂದು ಸಾಮಾನ್ಯರು ಯೋಚಿಸುತ್ತಾರೆ. ಆದರೆ ಅಂತಃಶಕ್ತಿ ಮತ್ತು ಆತ್ಮವಿಶ್ವಾಸಗಳೆಂಬ ಎರಡು ಅದಮ್ಯ ಶಕ್ತಿಗಳಿದ್ದರೆ ಎಂತಹ ವೈಕಲ್ಯಗಳನ್ನೂ ಕೂಡ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಅರುಣಿಮಾ ಸಿನ್ಹಾ ಉತ್ತಮ ಉದಾಹರಣೆ.

Advertisement

ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

2011ರಲ್ಲಿ ದರೋಡೆಕೋರರು ಅರುಣಿಮಾರನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಪರಿಣಾಮವಾಗಿ ಅವರ ಎಡಗಾಲನ್ನು ಮೊಣಕಾಲಿನ ಕೆಳಗೆ ಕತ್ತರಿಸಬೇಕಾಯಿತು. ತದನಂತರ ಅವರು ತಮ್ಮ ಸತತ ಪರಿಶ್ರಮ ಮತ್ತು ಸಾಧನೆಯ ಛಲದಿಂದ ಸಾಗಿದ ಫ‌ಲವಾಗಿ, ಪ್ರತೀ ಖಂಡದ ಅತ್ಯುನ್ನತ ಶಿಖರಗಳನ್ನು ಏರಿ, ಭಾರತದ ರಾಷ್ಟ್ರೀಯ ಧ್ವಜವನ್ನು ಆ ಶಿಖರಗಳ ತುತ್ತತುದಿಯಲ್ಲಿ ಹಾರಿಸುವ ಮೂಲಕ ಅವರ ಕನಸನ್ನು ನನಸಾಗಿಸಿಕೊಂಡರು. ಅರುಣಿಮಾರಂತಹ ದಿಟ್ಟ ಎದೆಗಾರಿಕೆಯನ್ನು ಎಲ್ಲರೂ ಬೆಳೆಸಿಕೊಂಡಾಗ ಸಾಧನೆಯ ಎವರೆಸ್ಟ್‌ ಅನ್ನು ಏರಲು ಸಾಧ್ಯ.

ಇತ್ತೀಚೆಗಷ್ಟೇ ಟೋಕಿಯೊದಲ್ಲಿ ಮುಕ್ತಾಯಗೊಂಡ ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು 19 ಪದಕಗಳಿಗೆ ಕೊರಳೊಡ್ಡಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ. ದೈಹಿಕ ನ್ಯೂನತೆಯನ್ನು ಕೊರತೆ ಎಂದು ಭಾವಿಸಿ ತಮ್ಮನ್ನು ತಾವು ಕೀಳಂದಾಜಿಸದೆ ಸಕಾರಾತ್ಮಕವಾಗಿ ಮುನ್ನುಗ್ಗಿ, ಪ್ಯಾರಾಲಿಂಪಿಕ್ಸ್‌ನಂತಹ ಅಗ್ರ ಕ್ರೀಡಾಕೂಟದಲ್ಲಿ ಪದಕದ ಬೇಟೆಯಾಡುವುದೆಂದರೆ ಅದೊಂದು ಸುಲಭದ ಮಾತೇ!? ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲವೆಂಬುದನ್ನು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಈ ಮೂಲಕ ಇತರರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ ಪ್ರತೀ ವರ್ಷ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುವ ವಿವಿಧ ಪರೀಕ್ಷೆಗಳ ಫ‌ಲಿತಾಂಶ ಬಂದಾಗ ಸಾಮಾನ್ಯ ವಿದ್ಯಾರ್ಥಿಗಳ ಸಾಧನೆಗೆ ಸರಿಸಾಟಿಯಾಗಿ ಮಿಂಚುತ್ತಲೇ ಬಂದಿದ್ದಾರೆ. ಕೈಗಳಿಲ್ಲ ದಿದ್ದರೂ ಕಾಲಿನಿಂದ ಪರೀಕ್ಷೆ ಬರೆದು ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿದ ಅಸಾಧಾರಣ ಅಂಗವಿಕಲರು ನಮ್ಮ ನಡುವೆಯೇ ಇದ್ದು ಇವರು ವಿದ್ಯಾರ್ಥಿಗಳೆಲ್ಲರಿಗೂ ಪ್ರೇರಣಾದೀವಿಗೆಯೇ ಸರಿ. ಜಗದ ಸೌಂದರ್ಯವನ್ನು ತಮ್ಮ ಕಣ್ತುಂಬಿಕೊಳ್ಳಲಾಗದಿದ್ದರೂ ಸಂಗೀತ ಶಾರದೆಯನ್ನು ಹೃದಯದ ಕಣ್ಣುಗಳಲ್ಲಿಯೇ ಆರಾಧಿಸಿ, ಗಾಯನ ಲೋಕದಲ್ಲಿ ನಕ್ಷತ್ರದಂತೆ ವಿರಾಜಮಾನರಾಗಿ ಮಿನುಗಿದ ಪುಟ್ಟರಾಜ ಗವಾಯಿಗಳಂತಹ ಗಾನಗಾರುಡಿಗರು ನಮ್ಮ ಆಂತರ್ಯದ ಕಣ್ಣನ್ನು ತಮ್ಮ ಗಾಯನದ ಮೂಲಕ ತೆರೆಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಮಾಜದ ದೃಷ್ಟಿಕೋನ ಬದಲಾಗಲಿ
ಇನ್ನು ಅಂಗವಿಕಲರ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗಬೇಕಿರುವುದು ಬಲುಮುಖ್ಯ. ತಾತ್ಸಾರ ಮನೋ ಭಾವ, ಅನುಕಂಪ, ಸಹಾನುಭೂತಿಯ ನೆಪದಲ್ಲಿ ಅಂಗವಿ ಕಲರ ಶೋಷಣೆ, ಅವರ ಮೇಲೆ ದೌರ್ಜನ್ಯ ನಡೆಸುವುದು ಸಲ್ಲದು. “ಅಂಗವಿಕಲ ಮಕ್ಕಳು ಮನೆಯೊಳಗಡೆ ಇದ್ದರೆ ಒಳಿತು. ಅವರನ್ನು ಸಮಾಜದ ಮುಂದೆ ತೆರೆದಿಟ್ಟರೆ ಮುಂದೆ ಸಮಾಜವು ನಮ್ಮನ್ನು ಕೀಳಾಗಿ ನೋಡಬಹುದೇನೋ’ ಎಂಬ ಅಂಜಿಕೆಯುಳ್ಳ ಕೆಲವು ಹೆತ್ತವರು ಕೂಡ ನಮ್ಮ ನಡುವೆ ಇರುವುದನ್ನು ನಾವು ಕಾಣುತ್ತೇವೆ. ಆದರೆ ಸೊರಗುತ್ತಿರುವ ಗಿಡವೊಂದಕ್ಕೆ ಪೌಷ್ಟಿಕಾಂಶವನ್ನು ಕೊಟ್ಟರೆ ಅದು ಸತ#ಲವನ್ನು ನೀಡುವಂತೆ, ಮನೆಯವರ ಸಹಕಾರ, ಸೂಕ್ತ ಮಾರ್ಗದರ್ಶನ, ಆತ್ಮವಿಶ್ವಾಸ ಮತ್ತು ದೃಢತೆಗಳೆಂಬ ವಿರಾಟ್‌ ಶಕ್ತಿಗಳಿದ್ದರೆ ಅಂಗವಿಕಲರೂ ಕೂಡ ಸೋಲಿಗೇ ಸಡ್ಡು ಹೊಡೆಯುವ ಚೈತನ್ಯದ ಚಿಲುಮೆಗಳಾಗಿ ಪುಟಿದೇಳಬಹುದು.

ಮಾನವ ಶಕ್ತಿಯ ಅತ್ಯುನ್ನತ ಸಾಮರ್ಥ್ಯವನ್ನು ಹೊರಹಾಕುವ ನಿಟ್ಟಿನಲ್ಲಿ ಸಮಾಜದ ಎಲ್ಲರೂ ಧನಾತ್ಮಕ ಹೆಜ್ಜೆಯನ್ನಿಡುವಂತಾಗಬೇಕಿದೆ. ಅಂತಾ ರಾಷ್ಟ್ರೀಯ ಅಂಗವಿಕಲರ ದಿನಾಚರಣೆಯ ಸಂದರ್ಭದಲ್ಲಿ ಅಂಗವಿಕಲರಿಗೆ ಬೆನ್ನೆಲುಬಾಗಿ ನಿಂತು, ಅವರನ್ನು ಸಾಧನೆಯ ಪಥದಲ್ಲಿ ಮುನ್ನಡೆಸುವ ದೃಢ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ.

-ಅನೀಶ್‌ ಬಿ., ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next