Advertisement

ಇಂದು ಭಾರತೀಯ ಸೇನಾದಿನ; ಯೋಧರ ಸೇವಾ ಪರಮೋಧರ್ಮ

11:45 PM Jan 14, 2023 | Team Udayavani |

ಭಾರತೀಯ ಸೇನೆ ಬ್ರಿಟಿಷರ ಆಡಳಿತ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಸ್ಥಾಪನೆ ಗೊಂಡಿದ್ದು 1895ರ ಎ.1 ಆದ ರೂ ಸಂಪೂರ್ಣವಾಗಿ ಭಾರತೀಯರ ಅಧಿಕಾರ ವ್ಯಾಪ್ತಿಗೆ ಬಂದದ್ದು 1949ರ ಜ. 15ರಂದು. ದೇಶಕ್ಕೆ ಸ್ವಾತಂತ್ರ್ಯ ದೊರೆತ ಒಂದೂವರೆ ವರ್ಷಗಳ ಅನಂತರ ಭಾರತೀಯ ಭೂಸೇನೆಗೆ ಒಬ್ಬ ಭಾರತೀಯ ಮುಖ್ಯಸ್ಥನಿಗೆ ಅಧಿಕಾರ ಹಸ್ತಾಂತರಗೊಳಿಸಲಾಗಿತ್ತು. 1949ರ ಜ.15ರಂದು ಬ್ರಿಟಿಷ್‌ ಜನರಲ್‌ ಫ್ರಾನ್ಸಿಸ್‌ ಬುಚರ್‌ ಭೂಸೇನೆಯ ಅಧಿಕಾರವನ್ನು ಅಂದಿನ ಲೆಫ್ಟಿನೆಂಟ್‌ ಜನರಲ್‌ ಕೆ. ಎಂ. ಕಾರಿಯಪ್ಪನವರಿಗೆ ಹಸ್ತಾಂತರಿಸಿ ಭಾರತದಿಂದ ನಿರ್ಗಮಿಸಿದರು. ಈ ದಿನದ ಜ್ಞಾಪಕಾರ್ಥವಾಗಿ ಭಾರತೀಯ ಭೂಸೇನೆ ಪ್ರತೀ ವರ್ಷ ಜ.15ರಂದು ಸೇನಾ ದಿವಸ ಎಂದು ಆಚರಿಸುತ್ತದೆ.

Advertisement

ಪ್ರಪಂಚದಲ್ಲೇ ಎರಡನೇ ಅತೀದೊಡ್ಡ ಸೈನ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಸೇನೆ “ಸೇವಾ ಪರಮೋಧರ್ಮ’ ಎನ್ನುವ ಧ್ಯೇಯ­ವಾಕ್ಯದ ತತ್ತವನ್ನು ಅನುಸರಿಸುತ್ತಾ ಸುಮಾರು ಹದಿನಾಲ್ಕು ಲಕ್ಷ ಸೈನಿಕರು ಹಗಲು ಇರುಳು ಎನ್ನದೆ, ಹಿಮಚ್ಛಾದಿತ ಪರ್ವತ ಶಿಖರ, ಕಾಡುಮೇಡು, ಮರಳುಗಾಡುಗಳನ್ನು ಲೆಕ್ಕಿಸದೆ ನಿರಂತರ­ವಾಗಿ ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ.

ಕರ್ನಾಟಕದ ವೀರ ಸೇನಾನಿ
ಫೀಲ್ಡ್ ಮಾರ್ಷಲ್‌ ಕೊದಂಡೆರ ಮಾದಪ್ಪ ಕಾರ್ಯಪ್ಪ ನಮ್ಮ ಕರ್ನಾಟಕದ ಹೆಮ್ಮೆಯ ವೀರ ಸೇನಾನಿ. ಇವರು ಜನಿಸಿದ್ದು ಕೊಡಗಿನ ಶನಿವಾರಸಂತೆಯಲ್ಲಿ. ಮೊದಲನೇ ವಿಶ್ವ ಯುದ್ಧದ ಅನಂತರ ಭಾರತೀಯ ಸೈನಿಕರ ಶೌರ್ಯ ಸಾಹಸಗಳಿಂದ ಪ್ರಭಾವಿತ­ರಾದ ಬ್ರಿಟಿಷರು ಭಾರತೀಯರನ್ನು ಸೈನ್ಯಾಧಿಕಾರಿ ದರ್ಜೆಯಲ್ಲೂ ಸೈನ್ಯಕ್ಕೆ ಸೇರಿಸಿಕೊಳ್ಳೋಣ ಎಂದು ನಿರ್ಧರಿಸಿದರು. ಹಾಗೆ ಪ್ರಾರಂಭ­ಗೊಂಡ ಮೊದಲ ಬ್ಯಾಚಿನಲ್ಲೇ ಆಯ್ಕೆಗೊಂಡರು ಕಾರ್ಯಪ್ಪ­ನವರು. ಸುಮಾರು ಮೂರು ದಶಕಗಳ ಅವರ ಸೇವಾವಧಿಯಲ್ಲಿ ಅವರು ಎಲ್ಲದರಲ್ಲೂ ಪ್ರಥಮವಾಗೇ ಮಿಂಚಿದರು. ಒಂದು ಬೆಟಾಲಿಯನ್‌ನ ಮೊದಲ ಭಾರತೀಯ ಕಮಾಂಡರ್‌ ಆಗಿ, ಬ್ರಿಗೇಡ್‌ನ‌, ಡಿವಿಶನ್‌ನ‌ ಕೊನೆಗೆ ಇಡೀ ಭಾರತೀಯ ಸೇನೆಗೇ ಮೊಟ್ಟ­ಮೊದಲ ಭಾರತೀಯ ಕಮಾಂಡರ್‌ ಇನ್‌ ಚೀಫ್‌ ಅಧಿಕಾರ­ ವಹಿಸಿಕೊಂಡ ಹೆಗ್ಗಳಿಕೆ ಇವರದು. ಸ್ಯಾಮ್‌ ಮಾಣಿಕ್‌ ಷಾರವರ ಅನಂತರ ಫೀಲ್ಡ್  ಮಾರ್ಷಲ್‌ ಪದವಿ ಪಡೆದುಕೊಂಡ ಎರಡನೇ ಜನರಲ್‌ ಇವರು. ಇವರ ಶೌರ್ಯ, ಸಾಹಸಗಾಥೆಗಳ ಮತ್ತು ನೈತಿಕ ಮೌಲ್ಯಗಳ ಭದ್ರ ಬುನಾದಿಯ ಮೇಲೆ ಭಾರತ ಸೇನೆ ಪ್ರಪಂಚದಲ್ಲೇ ಆದರ್ಶಪ್ರಾಯ­ವಾಗಿ ಮುಂದುವರಿದಿದೆ.

2023ರ ಜ.15ರಂದು ನಡೆಯುವ ಸೇನಾ ದಿವಸದ ಆಚರಣೆ ತುಂಬಾ ವಿಶಿಷ್ಟವಾದ ಸಮಾರಂಭವಾಗಲಿದೆ. ಈ ವರ್ಷ ಭಾರತೀಯ ಸೇನೆ ತನ್ನ 75ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ. ಮೊದಲಿಂದಲೂ ಸೇನಾ ದಿವಸದ ಪರೇಡ್‌ ಹೊಸದಿಲ್ಲಿಯಲ್ಲಿ ನಡೆಯುತ್ತಿತ್ತು. ಪ್ರಧಾನಿ ಮೋದಿಯವರ ಆಶಯವೇನೆಂದರೆ ಹೊಸದಿಲ್ಲಿ ಕೇಂದ್ರಿತವಾಗಿ ನಡೆಯುವ ಸಭೆ, ಸಮಾರೋಪಗಳೆಲ್ಲ ಇನ್ನು ಮುಂದೆ ದೇಶದ ಇತರ ಹಲವಾರು ಭಾಗಗಳಲ್ಲಿ ಸ್ಥಳೀಯ ಜನರ ನಡುವೆ ನಡೆಯಬೇಕು ಎಂದು, ಹಾಗಾಗಿ ಈ ಬಾರಿಯ ಸೇನಾ ದಿವಸದ ವಿದ್ಯುಕ್ತ ಪರೇಡ್‌ ಬೆಂಗಳೂರಿನ Mಉಎ – ಇಛಿnಠಿrಛಿನಲ್ಲಿ ನಡೆಯಲಿದೆ. ತನ್ನ ರಾಜ್ಯದ ವೀರಸೇನಾನಿ ಫೀಲ್ಡ್ ಮಾರ್ಷಲ್‌ ಕೆ. ಎಂ. ಕಾರ್ಯಪ್ಪನವರಿಗೆ ಗೌರವ ಸಲ್ಲಿಸುವ ಸದವಕಾಶ ಕರ್ನಾಟಕ ರಾಜ್ಯಕ್ಕೆ ಬಂದೊದಗಿದೆ ಎನ್ನಬಹುದು.

MEG & Centreನ ಬಗ್ಗೆ ಒಂದಿಷ್ಟು ಮಾಹಿತಿ
ಆಂಗ್ಲ-ಮೈಸೂರು ಸರಣಿ ಯುದ್ಧಗಳ ಕೊನೆಯಲ್ಲಿ ನಡೆದ 4ನೇ ಯುದ್ಧದಲ್ಲಿ ಬ್ರಿಟಿಷರು ಜಯಗಳಿಸಿ, ಟಿಪ್ಪುವನ್ನು ಕೊಂದು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಯುದ್ಧಾನಂತರ ಮಲೇರಿಯಾದ ಹಾವಳಿ ಯಿಂದಾಗಿ ಬ್ರಿಟಿಷ್‌ ಸರಕಾರ ತನ್ನ ಸೈನ್ಯವನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತ ರಿಸುವ ನಿರ್ಧಾರ ತೆಗೆದುಕೊಂಡಿತು. 1806ರಲ್ಲಿ ಜಾನ್‌ ಬ್ಲಾಕಿಸ್ಟೋನ್‌ ಎನ್ನುವ ಬ್ರಿಟಿಷ್‌ ಸೈನ್ಯದ ಎಂಜಿನಿಯರ್‌ ಒಬ್ಬರು ಆಗಿನ ಬೆಂಗಳೂರಿನ ಹೊರವಲಯದಲ್ಲಿ ಸೈನ್ಯಕ್ಕೆಂದೇ ಒಂದು ವಸಾಹತಿನ ವಿನ್ಯಾಸವನ್ನು ರಚಿಸಿದರು. ಒಂದು ಕಡೆ ಬೆಂಗಳೂರು ಪೇಟೆ ಇದ್ದರೆ ಮತ್ತೊಂದು ಕಡೆ ಹೊಸದಾಗಿ ಬೆಂಗ ಳೂರು ಕಂಟೋನ್ಮೆಂಟ್‌ ನಿರ್ಮಾ ಣವಾಯಿತು. ಹಲಸೂರನ್ನು ಕೇಂದ್ರವಾಗಿ­ಟ್ಟು­ಕೊಂಡು Army Group Royal Artillery Maidan (AGRAM) ಸೃಷ್ಟಿ­ಯಾಯಿತು. ಮುಂದೆ 1834ರಲ್ಲಿ ಕಂಟೋ ನ್ಮೆಂಟ್‌ ರೈಲುನಿಲ್ದಾಣ ಸ್ಥಾಪನೆಗೊಂಡು, ಬೆಂಗಳೂರಿ­ನಿಂದ ಮದ್ರಾಸಿಗೆ ರೈಲು ಸಂಚಾರ ಪ್ರಾರಂಭವಾಯಿತು. ಅಲ್ಲಿದ್ದ ಮದ್ರಾಸ್‌ ಪ್ರಸಿಡೆನ್ಸಿಯ ಸೈನ್ಯ ಇಲ್ಲಿನ ನೂತನ ಕಂಟೋ ನ್ಮೆಂಟ್‌ ಅನ್ನು ನಿರ್ಮಾಣ ಮಾಡಲು ಬೆಂಗಳೂರಿಗೆ ಬಂದಿಳಿಯಿತು. ಇವರು ಕಂಟೋನ್ಮೆಂಟ್‌ನ ಉದ್ದಗಲಕ್ಕೂ ವ್ಯವಸ್ಥಿತ ರಸ್ತೆಗಳನ್ನು ನಿರ್ಮಿಸಿದರು. ಈ ರಸ್ತೆಗಳಿಗೆ ಬ್ರಿಗೇಡ್‌ ರೋಡ್‌, ಕ್ಯಾವಲ್ರಿ ರೋಡ್‌, ಆರ್ಟಿಲರಿ ರೋಡ್‌… ಹೀಗೆ ಸೈನ್ಯಕ್ಕೆ ಸಂಬಂಧಿಸಿದಂತೆ ಹೆಸರುಗಳನ್ನಿ­ಡಲಾಯಿತು. ಹಲಸೂರು ಕೆರೆಯ ಬಳಿ ವಿಶಾಲವಾದ ಬಯಲಿನಲ್ಲಿ ತಮ್ಮ ಕೇಂದ್ರವನ್ನು ನಿರ್ಮಿಸಿದರು. ಅದೇ ಈಗಿನ MEG & Centre.

Advertisement

ಸ್ಥಳೀಯರೊಂದಿಗೆ ಸೈನ್ಯದ
ಚಟುವಟಿಕೆಗಳು
ಈಗಾಗಲೇ ಭಾರತೀಯ ಸೇನೆ ನಾಗರಿ ಕರನ್ನೊಳಗೊಂಡ ಹಲಾವಾರು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಶಾಲಾ ಮಕ್ಕಳು, NCC ಕೆಡೆಟ್‌ಗಳು, ಸ್ವಯಂ ಸೇವಕ ಸಂಸ್ಥೆಗಳು, ರೈತರು ಇವರೊಂದಿಗೆ ಸೇರಿಕೊಂಡು ರಕ್ತದಾನ, ಗಿಡ ನೆಡುವಿಕೆ, ರಸ್ತೆ ನಿರ್ಮಾಣ, ಕೆರೆಗಳ ಪುನರುತ್ಥಾನ, ಕ್ರೀಡಾಂ ಗಣಗಳ ನಿರ್ಮಾಣ ಹೀಗೆ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದೆ.

ವಿದ್ಯುಕ್ತ ಪರೇಡ್‌
ಈ ಸಮಾರಂಭಕ್ಕೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ರವರು ಮುಖ್ಯ ಅತಿಥಿ ಗಳಾಗಿ ಆಗಮಿಸಲಿದ್ದಾರೆ. ಜ.15ರ ಬೆಳಗ್ಗೆ ಸೇನಾ ಪ್ರಮುಖ ಜನರಲ್‌ ಮನೋಜ್‌ ಪಾಂಡೆಯವರು ಯುದ್ಧ ಸ್ಮಾರಕ­ದಲ್ಲಿ ಪುಷ್ಪ ಮಾಲಾರ್ಪಣೆ ಮಾಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದರೊಂದಿಗೆ ಕಾರ್ಯ ಕ್ರಮದ ಆರಂಭ ಮಾಡಲಿದ್ದಾರೆ. ಮೇಜರ್‌ ಜನರಲ್‌ ರವಿ ಮುರುಗನ್‌ ಪರೇಡ್‌ನ‌ ಕಮಾಂಡರ್‌. ಒಂದು ಅಶ್ವದಳವೂ ಸೇರಿದಂತೆ ಒಟ್ಟು ಎಂಟು ಸೈನ್ಯ ಪಡೆಗಳು ಭಾಗ ವಹಿಸಲಿವೆ. ಐದು ಸೇನಾ ವಾದ್ಯವೃಂದದ ಪಡೆಗಳೂ ಇವೆ.

ಎಚ್‌ಎಎಲ್‌ ನಿರ್ಮಿತ ಧ್ರುವ ಮತ್ತು ರುದ್ರ ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನ ನಡೆಯಲಿದೆ. ಸೈನ್ಯದ ಯುದ್ಧ ಸಾಮಗ್ರಿಗಳ, ಆಯುಧಗಳ, ತಾಂತ್ರಿಕ ನೈಪುಣ್ಯದ ಪ್ರದರ್ಶನ ನಡೆಯಲಿದೆ. ಮೈನವಿರೇಳಿಸುವ ಮೋಟರ್‌ ಸೈಕಲ್‌ಗ‌ಳ ಸಾಹಸ, ಪ್ಯಾರಾ ಜಿಗಿತಗಳ ಸಾಹಸವೂ ನಡೆಯಲಿದೆ. ಸಮಾರಂಭದಲ್ಲಿ ಕೆಲವು ಆಯ್ದ ಯೋಧರಿಗೆ ಶೌರ್ಯ ಮತ್ತು ಪ್ರತಿಭೆಗಳ ಪುರಸ್ಕಾರಗಳನ್ನು ಪ್ರದಾ ನಿಸಲಾಗುತ್ತದೆ.

ಬನ್ನಿ ನಮ್ಮ ಹೆಮ್ಮೆಯ ಸೇನೆಗೆ ಮತ್ತು ವೀರ ಯೋಧರಿಗೆ ಸೇನಾ ದಿವಸದ ಶುಭಾಕಾಂಕ್ಷೆಗಳನ್ನು ಕೋರೋಣ.
ಜೈ ಭಾರತೀಯ ಸೇನೆ. ಜೈ ಹಿಂದ್‌.

ಇಂದು ಭಾರತೀಯ ಸೇನಾದಿನ
ಪ್ರಪಂಚದಲ್ಲೇ ಎರಡನೇ ಅತೀದೊಡ್ಡ ಸೈನ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಸೇನೆ “ಸೇವಾ ಪರಮೋ ಧರ್ಮ’ ಎನ್ನುವ ಧ್ಯೇಯ­ವಾಕ್ಯದ ತತ್ವ ವನ್ನು ಅನುಸರಿಸುತ್ತಾ ಸುಮಾರು ಹದಿ ನಾಲ್ಕು ಲಕ್ಷ ಸೈನಿಕರು ನಿರಂತರ­ವಾಗಿ ದೇಶ ರಕ್ಷಣೆಯಲ್ಲಿ ತೊಡಗಿದ್ದಾರೆ.

-ವಿಂಗ್‌ ಕಮಾಂಡರ್‌ ಸುದರ್ಶನ

Advertisement

Udayavani is now on Telegram. Click here to join our channel and stay updated with the latest news.

Next