Advertisement

3ನೇ ಅಲೆ ತಡೆಗೆ 3 ತಿಂಗಳಲ್ಲಿ ಶೇ. 75 ಲಸಿಕೀಕರಣ ಗುರಿ

03:36 PM Jun 22, 2021 | Team Udayavani |

ಉಡುಪಿ: ಕೊರೊನಾ ಮೂರನೆಯ ಅಲೆ ಹರಡುವುದು ಅಥವಾ ಎಷ್ಟು ಸಮಯದಲ್ಲಿ ಹರಡಬಹುದು ಎನ್ನುವುದು ನಮ್ಮ ಕೈಯಲ್ಲಿದೆ. ನಾವು ಕೋವಿಡ್‌ ಸೂಕ್ತ ನಡವಳಿಕೆಯನ್ನು (ಸಿಎಬಿ) ಅಂದರೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲಿಸುವುದು, ಕೈ ಸ್ವತ್ಛಗೊಳಿಸಿಕೊಳ್ಳುವುದನ್ನು ಪಾಲಿಸಿದರೆ ಮೂರನೆಯ ಅಲೆಯನ್ನು ದೂರ ಗೊಳಿಸಬಹುದು. ನಿಯಂತ್ರಣದ ಇನ್ನೊಂದು ಭಾಗವಾಗಿ ಈಗಾಗಲೇ ಜಿಲ್ಲೆಯಲ್ಲಿ ಶೇ. 25ರಷ್ಟು ಜನರಿಗೆ ಲಸಿಕೆಯನ್ನು ಹಾಕಲಾಗಿದೆ. ಇನ್ನೂ ಶೇ. 50 ಜನರಿಗೆ ಲಸಿಕೆ ವಿತರಿಸಬೇಕಾಗಿದೆ. ಗುರಿ ಶೇ. 100 ಜನರಿಗೆ ಲಸಿಕೆ ವಿತರಣೆ ಗುರಿಯಾದರೂ ಶೇ.70-75ರಷ್ಟು ಲಸಿಕೆ ವಿತರಣೆಯಾದರೆ ಸೋಂಕು ನಿಯಂತ್ರಣಕ್ಕೆ ಬರಬಹುದು ಎಂದು ಜಿಲ್ಲೆಯ ನೂತನ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಲಸಿಕಾಧಿಕಾರಿ ಡಾ| ಎಂ.ಜಿ. ರಾಮ ಅಭಿಪ್ರಾಯಪಟ್ಟಿದ್ದಾರೆ.

Advertisement

ಸೋಮವಾರ ಉದಯವಾಣಿ ವತಿಯಿಂದ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸೋಮವಾರ 21,000 ಡೋಸ್‌ ವಿತರಣೆ ಗುರಿ ಇರಿಸಿಕೊಂಡು ಕಾರ್ಯಾಚರಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಜು. 15ರಿಂದ ಲಸಿಕೆ ವಿತರಣೆ ಹೆಚ್ಚಿಗೆಯಾಗಲಿದೆ. ಎಂದರು.

ಶಾಲೆಗೆ ಮಕ್ಕಳನ್ನು ಕರೆಸಿ ತಪಾಸಣೆ
ಜುಲೈಯಲ್ಲಿ ಎಲ್ಲ ಶಾಲೆಗಳ ಮಕ್ಕಳ ಆರೋಗ್ಯ ತಪಾಸಣೆ ನಡೆಸ ಲಾಗುವುದು. ಒಂದು ದಿನ ಮಕ್ಕಳನ್ನು ಶಾಲೆಗೆ ಕರೆಸಿ ಪರೀಕ್ಷಿಸಲಾಗುವುದು. ಶೀಘ್ರದಲ್ಲಿ ಇದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ಕೊರೊನಾ, ಡೆಂಗ್ಯೂ ಜತೆಯಾದರೆ ಅಪಾಯ
ಕೊರೊನಾ ಜತೆ ಡೆಂಗ್ಯೂ, ಮಲೇ ರಿಯಾ ಜ್ವರ ಕಾಣಿಸಿದರೆ ಅಪಾಯ. ಮೊದಲು ಕೊರೊನಾ ಪರೀಕ್ಷೆ ನಡೆಸ ಬೇಕು. ನೆಗೆಟಿವ್‌ ಬಂದರೆ ಇತರ ಕಾಯಿಲೆಗಳ ಪರೀಕ್ಷೆ ನಡೆಸಬೇಕು.

ಮಕ್ಕಳ 35 ಬೆಡ್‌ ಐಸಿಯು
ಉಡುಪಿ ಜಿಲ್ಲೆಯಲ್ಲಿ ಮಕ್ಕಳಿಗೆ 35 ಹಾಸಿಗೆಗಳ ಐಸಿಯು ಸಿದ್ಧತೆ ನಡೆಸುತ್ತಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ 15, ಕುಂದಾ ಪುರ- ಕಾರ್ಕಳ ತಾ| ಆಸ್ಪತ್ರೆಗಳಲ್ಲಿ 10 ಬೆಡ್‌ಗಳ ಐಸಿಯು ನಿರ್ಮಾಣವಾಗಲಿದೆ.

Advertisement

3ನೇ ಅಲೆ ಹೃದಯ ಕೇಂದ್ರಿತ?
ಕೊರೊನಾ 3ನೇ ಅಲೆ ಕುರಿತು ಪರಿಣತರು ಚರ್ಚಿಸುತ್ತಿದ್ದಾರೆ. ಹಿಂದಿನ ಅನುಭವ ದಂತೆ ಹದಿಹರೆಯದವರಿಗೆ ಪರಿಣಾಮ ಬೀರಬಹುದು ಎಂಬ ಚರ್ಚೆ ನಡೆಯುತ್ತಿದೆ. ಈವರೆಗೆ ಉಸಿರಾಟದ ಸಮಸ್ಯೆ ಕಂಡು ಬಂದರೆ ಮುಂದೆ ಹೃದಯ ಸಂಬಂಧಿ ತೊಂದರೆ ಬರಬಹುದು ಎಂದು ಹೇಳುತ್ತಿದ್ದಾರೆ.

ಚಿಕ್ಕಮಕ್ಕಳನ್ನು ಮುಟ್ಟಬೇಡಿ
ಚಿಕ್ಕಮಕ್ಕಳಿಗೆ ಮಾಸ್ಕ್ ಹಾಕಲು ಆಗುವುದಿಲ್ಲ. ಆದ್ದರಿಂದ ಅಂತಹ ಮಕ್ಕಳನ್ನು ಯಾರೂ ಮುಟ್ಟದೆ ದೂರದಿಂದಲೇ ಮಾತನಾಡಿಸಬೇಕು. ಮಕ್ಕಳಿಗೆ ತಾಯಿ ಸಂಪರ್ಕ ಮಾತ್ರ ಇರಬೇಕು. ಹೀಗೆ ಮಾಡಿದರೆ ಕೊರೊನಾ ಸೋಂಕು ಹರಡಲು ಸಾಧ್ಯವೇ ಇಲ್ಲ.

ರೋಹಿಣಿ ಬಾಲಚಂದ್ರ ಕರಂಬಳ್ಳಿ
– ಮಕ್ಕಳಿಗೆ ಲಸಿಕೆ ಯಾವಾಗ ಬರಬಹುದು?
12-17 ವಯಸ್ಸಿನ ಮಕ್ಕಳಿಗೆ ಕೊಡುವ ಲಸಿಕೆ ಕುರಿತು ಅಧ್ಯಯನ ನಡೆಯುತ್ತಿದೆ. ಇನ್ನೂ ಅನುಮತಿ ಕೊಟ್ಟಿಲ್ಲ.

ಜಯವಂತ ಪೈ ಕುಂದಾಪುರ, ಗುರುರಾಜ ಭಟ್‌ ಅಂಬಾಗಿಲು, ಸುಂದರ ಶೆಟ್ಟಿ ಕಪ್ಪೆಟ್ಟು, ಭಾರತಿ ಶಾನು ಭಾಗ್‌ ಉಡುಪಿ, ವಿಜಯಲಕ್ಷ್ಮೀ ಮಂಗಳೂರು

– ಲಸಿಕೆ ಪಡೆಯುವ ಕ್ರಮಗಳೇನು?
ಆರೋಗ್ಯ ಸಮಸ್ಯೆ ಇದ್ದರೆ ಚಿಕಿತ್ಸೆ ಪಡೆಯು ವಾಗ ವೈದ್ಯರ ಸಲಹೆ ಪಡೆಯುವುದು ಉತ್ತಮ. ಪ್ರತಿ ನಿತ್ಯ ಲಸಿಕೆ ಲಭ್ಯತೆ ಪ್ರಕಟನೆ ಹೊರಡಿಸುತ್ತೇವೆ. ಇದರನುಸಾರ ಲಸಿಕೆ ಪಡೆಯ ಬಹುದು. ಸೋಂಕು ಬಂದಿದ್ದರೆ ಮೂರು ತಿಂಗಳ ಬಳಿಕ ಲಸಿಕೆ ಪಡೆಯಬಹುದು.

ರಮೇಶ ಕೋಟೇಶ್ವರ, ಸಂತೋಷ ಸುವರ್ಣ ಉದ್ಯಾ ವರ, ಉದ್ಯಾವರ ಶೇಖರ ಕೋಟ್ಯಾನ್‌, ಸುಗಂಧಿ ಶೇಖರ್‌ ಉದ್ಯಾವರ, ರಾಜೇಶ ಆಚಾರ್ಯ ಕಟಪಾಡಿ
– ಮೂರನೆಯ ಅಲೆ ಬರಬಹುದೆ?
ಒಂದನೆ ಅಲೆ ಬಳಿಕ ಎರಡನೆಯ ಅಲೆ ಬಂದಿರುವುದು ಏಕೆ? ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ. ಈಗ ಅನ್‌ಲಾಕ್‌ ಆಗಿದೆ. ಮತ್ತೆ ಕೊರೊನಾ ನಿಯಮಗಳನ್ನು ನಿರ್ಲಕ್ಷಿಸಿದರೆ ಮೂರನೆಯ ಅಲೆ ಬೇಗ ಬರಬಹುದು. ನಿರ್ಲಕ್ಷ್ಯ ತೋರದೆ ಇದ್ದರೆ ಮೂರನೆಯ ಅಲೆ ಯನ್ನು ದೂರಗೊಳಿಸಬಹುದು. ನಮ್ಮನ್ನು ನಾವು ಮನೆಯಲ್ಲಿದ್ದು ನಿಗ್ರಹಿಸಿಕೊಂಡರೆ ಕೊರೊನಾಕ್ಕೆ ಅಂತ್ಯ ಹಾಡಬಹುದು. ಎಲ್ಲರಿಗೂ ವ್ಯಾಕ್ಸಿನ್‌ ನೀಡಿದರೆ ಸೋಂಕು ನಿಯಂತ್ರಣಕ್ಕೆ ಬರುತ್ತದೆ.

ಕಲ್ಪನಾ ಪುತ್ತೂರು, ರಾಕೇಶ ಬೆಳ್ತಂಗಡಿ, ಶ್ಯಾಮರಾಜ ಆಚಾರ್ಯ ಬಂಟ್ವಾಳ, ಸುಬ್ರಹ್ಮಣ್ಯ ಹೆಬ್ರಿ, ಪ್ರಕಾಶ ಆನೆಕೆರೆ ಕಾರ್ಕಳ
– ಮಳೆಗಾಲದಲ್ಲಿ ಕೊರೊನಾ ಜತೆ ಇತರ ಕಾಯಿಲೆಗಳನ್ನು ಎದುರಿಸುವುದು ಹೇಗೆ?
ಕೊರೊನಾ ಜತೆ ಡೆಂಗ್ಯೂ, ಮಲೇರಿಯಾ ಬಾಧಿಸುವ ಸಾಧ್ಯತೆಗಳಿವೆ. ಯಾವುದೇ ರೋಗ ಲಕ್ಷಣ ಕಂಡುಬಂದರೆ ಮೊದಲು ಪರೀಕ್ಷೆ ನಡೆಸಿ. ಕೊರೊನಾ ಲಸಿಕೆ ಹಾಕಿಕೊಂಡರೆ ಮಾತ್ರ ಸೋಂಕನ್ನು ತಡೆಯಬಹುದು. ಇದು ಇತರ ಕಾಯಿಲೆಗಳನ್ನು ನಿಯಂತ್ರಿಸಲಾರದು.

ಹಮೀದ್‌ ವಿಟ್ಲ
– ಕ್ಷಯರೋಗಿಗೆ ಕೊರೊನಾ ಸೋಂಕು ಬಂದರೆ ಏನು ಮಾಡಬೇಕು?
ಇಂತಹ ಸಂದರ್ಭ ಎರಡು ರೀತಿಯ ಎಚ್ಚರ ವಹಿಸಬೇಕು. ಕ್ಷಯರೋಗದ ಔಷಧ ವನ್ನು ನಿಲ್ಲಿಸದೆ ಕೊರೊನಾ ಚಿಕಿತ್ಸೆಯನ್ನೂ ಪಡೆಯಬೇಕು.

ಪ್ರಕಾಶ ಪಡಿಯಾರ್‌ ಮರವಂತೆ
– ಮಕ್ಕಳಿಗೆ ಶಾಲೆ ಇಲ್ಲ, ದೊಡ್ಡವರಿಗೆ ಚಟುವಟಿಕೆ ಇಲ್ಲ. ಆತ್ಮವಿಶ್ವಾಸ ಮೂಡಿಸುವುದು ಹೇಗೆ?
ಕೊರೊನಾ ನಿಯಂತ್ರಣ ಸಾಮಾಜಿಕ ಜವಾಬ್ದಾರಿ. ಸರಕಾರದ ಆದೇಶ ಪಾಲನೆ, ಜೀವನ ಶೈಲಿ ಬದಲಾವಣೆ, ಸ್ವತ್ಛತೆಗೆ ಆದ್ಯತೆ ಅಗತ್ಯ. ಬೇರೆಯವರಿಗೆ ಮಾದರಿಯಾಗಿ ಸಾರ್ವಜನಿಕ ರಲ್ಲಿ ತಾವೂ ಕೊರೊನಾದ ಪಾಲುದಾರರು ಎಂಬ ಭಾವನೆ ಬರಬೇಕು.

ರಾಮಚಂದ್ರ ಪೆರಂಪಳ್ಳಿ
– ಸೋಂಕಿತರಿದ್ದ ಪ್ರದೇಶ ಪ್ರಕಟಿಸಿದರೆ ಸೋಂಕು ನಿಯಂತ್ರಣಕ್ಕೆ ಸುಲಭವಾಗುತ್ತದೆ.
ಈಗಾಗಲೇ 50ಕ್ಕಿಂತ ಹೆಚ್ಚು ಪ್ರಕರಣವಿದ್ದಲ್ಲಿ ಗ್ರಾ.ಪಂ.ಗಳನ್ನು ಸೀಲ್‌ಡೌನ್‌ ಮಾಡಿದಂತೆ ಪ್ರಕರಣ ಜಾಸ್ತಿ ಇದ್ದರೆ ಸೀಲ್‌ಡೌನ್‌ ಮಾಡಿ ಪ್ರಕಟಿಸುತ್ತೇವೆ.

ಶ್ರೀನಿಧಿ, ನಾಗರಾಜ ಉಪಾಧ್ಯಾಯ ಮಂಗಳೂರು
– ಕೊರೊನಾ ಸೋಂಕು ಬಂದು ಗುಣವಾದ ಮೇಲೆ ಶೀತ ಜ್ವರ ಬಂದರೆ ಏನು ಮಾಡಬೇಕು?
ಕೊರೊನಾ ಬಾಧಿತರು ಬೇರೆ, ಕೊರೊನಾ ಪೀಡಿತರು ಬೇರೆ. ಕೊರೊನಾ ಬಾಧಿತರೆಂದರೆ ಅವರಿಗೆ ಬಾಯಿ ರುಚಿ ಇಲ್ಲದಿರುವುದು, ಸಣ್ಣ ಮೈಕೈ ನೋವು ಇರುವುದು ಇತ್ಯಾದಿ. ಇವರು ಗುಣಮುಖರಾಗುತ್ತಾರೆ. ಕೊರೊನಾ ಪೀಡಿತರೆಂದರೆ ನ್ಯುಮೋನಿಯ ಬಂದವರು, ಐಸಿಯು, ಆಕ್ಸಿಜನ್‌ ಅಗತ್ಯವಾದವರು. ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ ಇವರು ಹೆಚ್ಚಿನ ಕಾಳಜಿ ವಹಿಸಬೇಕು.

ಪ್ರಕಾಶ ಉಡುಪಿ
– ಲಸಿಕೆಯ ಶಕ್ತಿವರ್ಧನೆ ಅವಧಿ ಎಷ್ಟು ದಿನ?
ಎರಡು ಡೋಸ್‌ ತೆಗೆದುಕೊಂಡರೆ ಒಂದು ವರ್ಷ ಕಾಲ ರೋಗನಿರೋಧಕ ಶಕ್ತಿ ಇರುತ್ತದೆ.

ಕೌಶಿಕ್‌ ಕಾಪು
– ಮೂರನೆಯ ಅಲೆ ತಡೆಗೆ ಸಿದ್ಧತೆಗಳೇನು?
ಮಕ್ಕಳ ಐಸಿಯು ವಿಭಾಗ ತೆರೆಯುವುದಲ್ಲದೆ ವಿಶೇಷವಾಗಿ ಮಕ್ಕಳ ಚಿಕಿತ್ಸೆ ಬೇಕಾದ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲಾಗುವುದು. ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಹಾಗೆಯೇ ಇರಿಸಲಾಗುವುದು. ಸಾರ್ವಜನಿಕರ ಎಚ್ಚರಿಕೆಯಿಂದ ಮೂರನೆಯ ಅಲೆ ಕಾಣಿಸದೆಯೂ ಹೋಗಬಹುದು. ಆದರೂ ಆರೋಗ್ಯ ಇಲಾಖೆ ಸದಾ ಸನ್ನದ್ಧವಾಗಿರುತ್ತದೆ.

ಸುಬ್ರಹ್ಮಣ್ಯ ಶೆಟ್ಟಿ ಕುಂದಾಪುರ
– ಲಸಿಕೆ ಶಿಬಿರಗಳಲ್ಲಿ ಅಂತರ ಕಾಪಾಡುತ್ತಿಲ್ಲ. ಇದಕ್ಕೆ ನಾವು ಕಸಾಪದಿಂದ ಕಾರ್ಯಕರ್ತರನ್ನು ಒದಗಿಸುತ್ತೇವೆ.
ನಿಮ್ಮಂತಹ ಸಾರ್ವಜನಿಕರಿಂದಲೇ ನಮ್ಮ ಕೆಲಸ ಸುಲಭ ವಾಗುತ್ತದೆ. ಎಲ್ಲ ಶಿಬಿರಗಳಲ್ಲಿ ಅಂತರ ಕಾಪಾಡಲು ಸೂಚನೆ ಕೊಟ್ಟು, ನಿಮ್ಮಂತಹ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತೇವೆ.

ಸತೀಶ ಪೂಜಾರಿ ಉದ್ಯಾವರ
– ಲಸಿಕೆ ಶಿಬಿರಗಳಲ್ಲಿ ಜನರು ಹೆಚ್ಚಿಗೆ ಇದ್ದಾರೆ. ಲಸಿಕೆ ಕಡಿಮೆ ಪೂರೈಕೆಯಾಗುತ್ತಿದೆ.
ಜನಸಂಖ್ಯೆಗೆ ಅನುಗುಣವಾಗಿ ಬಂದ ಲಸಿಕೆಗಳನ್ನು ನಗರ, ಗ್ರಾಮಾಂತರ ಭೇದವಿಲ್ಲದೆ ಹಂಚಿಕೆ ಮಾಡ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲಸಿಕೆ ಹೆಚ್ಚಿಗೆ ಬಂದಾಗ ಅಂತರ ಕಾಪಾಡಲು ಶಾಲೆಗಳಲ್ಲಿ ಶಿಬಿರಗಳನ್ನು ನಡೆಸುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next