Advertisement

ಸಂಸ್ಕೃತಿಯ ವಿರಾಟ್‌ ದರ್ಶನ ಮಾಡಿಸಿದ್ದ ಕುವೆಂಪು

02:27 PM Dec 30, 2019 | Naveen |

ತೀರ್ಥಹಳ್ಳಿ: ಭಾಷೆಯ ಜೊತೆಗೆ ಸಂಸ್ಕೃತಿಯೂ ಇರಬೇಕೆಂಬುದನ್ನು ತಮ್ಮ ಕೃತಿಯ ಮೂಲಕ ಹೇಳಿದ ಕುವೆಂಪು ಅವರು ಸಾರಸ್ವತ ಲೋಕದಲ್ಲಿ ವಿರಾಟ್‌ ದರ್ಶನ ಮಾಡಿದ ಮಹಾನ್‌ ವ್ಯಕ್ತಿತ್ವ. ತಮ್ಮ ಕೃತಿಯಲ್ಲಿ ರಾಷ್ಟ್ರ ಪ್ರೇಮವನ್ನು ಬಿಂಬಿಸಿದ ಅವರು ಪ್ರಾದೇಶಿಕ ಅಸ್ಮಿತೆಯನ್ನು ರಾಷ್ಟ್ರೀಯವಾದದ ಹಿನ್ನೆಲೆಯಲ್ಲಿ ಬಿಂಬಿಸಿದ್ದಾರೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

Advertisement

ತಾಲೂಕಿನ ಕುಪ್ಪಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹಯೋಗದೊಂದಿಗೆ ನಡೆದ ಕುವೆಂಪು ಅವರ 115ನೇ ಜನ್ಮ ದಿನೋತ್ಸವದ ವಿಶ್ವಮಾನವ ದಿನಾಚರಣೆ ಹಾಗೂ ಕುವೆಂಪು ರಾಷ್ಟ್ರೀಯ ಪುರಸ್ಕಾರ 2019ರ ಪ್ರಧಾನ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾರಸತ್ವ ಲೋಕದ ಸಾಧಕರಾದ ಕುವೆಂಪು ಅವರ ಶ್ರೇಷ್ಠ ವ್ಯಕ್ತಿತ್ವ ಸದಾ ಕಾಲ ಅಮರವಾಗಿರುತ್ತದೆ. ಯಾವುದೇ ಶ್ರೇಷ್ಠ ವ್ಯಕ್ತಿ ತನ್ನ ಹುಟ್ಟು ಹಾಗೂ ಜಾತಿಯಿಂದ ಶ್ರೇಷ್ಠನಾಗುವುದಿಲ್ಲ. ಆ ವ್ಯಕ್ತಿ ಬದುಕಿದ ರೀತಿ, ಅವನ ಸಾಹಿತ್ಯ ಕೊಡುಗೆ ವ್ಯಕ್ತಿಯನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ. ಅದೇ ಕಾರಣಕ್ಕಾಗಿಯೇ ಕುವೆಂಪು ಅವರ ಜೀವನ ದರ್ಶನವನ್ನು ನಾವು ಅಳವಡಿಸಿಕೊಳ್ಳಬೇಕು. ಎಲ್ಲಾ ಕಾಲಕ್ಕೂ ಕುವೆಂಪು ಅವರ ಚಿಂತನೆ ಸರ್ವಕಾಲಿಕ ಎಂದರು.

ಕುವೆಂಪು ಅವರ ಸಾಹಿತ್ಯದ ಓದು ಮತ್ತೆ ಮತ್ತೆ ಕೇಳಿ ಓದಬೇಕೆನ್ನಿಸುತ್ತದೆ. ಅದಕ್ಕೆ ಕಾರಣ ಕುವೆಂಪು ಸಾಹಿತ್ಯಕ್ಕಿರುವ ಅಪಾರ ಪ್ರಭಾವ ಹಾಗೂ ಶಕ್ತಿಯಾಗಿದೆ. ಇಂದಿನ ಕುವೆಂಪು ರಾಷ್ಟ್ರೀಯ ಪುರಸ್ಕಾರದ ಪುರಸ್ಕೃತರಾದ ಗುರುಬಚ್ಚನ್‌ ಸಿಂಗ್‌ ಗುಲ್ಲರ್‌ ವಿಚಾರವಾದಿ ಕಲ್ಬುರ್ಗಿ ಹತ್ಯೆಯಾದಾಗ ತಮ್ಮ ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್‌ ಮಾಡಿದ್ದರು. ಆದರೆ ಕಲ್ಬುರ್ಗಿಯವರ ದೇಹ ಹತ್ಯೆಯಾಗಿರಬಹುದು. ಅವರ ಚಿಂತನೆಗಳು ಜೀವಂತವಾಗಿದೆ. ಧರ್ಮದೊಳಗಿನ ಅನಿಷ್ಠತೆ ತೊಲಗಿದ ಬಗ್ಗೆ ಟೀಕೆ ಮಾಡಿದ್ದ, ಕಟು ನಿರ್ಣಯದ ಕಲ್ಬುರ್ಗಿಯವರ ಹತ್ಯೆಯ ಕ್ರಮ ಸರಿಯಲ್ಲ ಎಂದರು.

2019ರ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ಪಂಜಾಬ್‌ ಸಾಹಿತಿ ಗುರುಬಚ್ಚನ್‌ ಸಿಂಗ್‌ ಬುಲ್ಲರ್‌ ಮಾತನಾಡಿ, ದೇಶ-
ರಾಜ್ಯ ಬೇರೆಯಾಗಿರಬಹುದು. ಕವಿ- ಸಾಹಿತಿಗಳಲ್ಲಿ ಒಳ್ಳೆಯತನ ಇರುತ್ತದೆ. ಕವಿ ಮತ್ತು ಸಾಹಿತಿಗಳು ದುಡಿಯುವ ವರ್ಗದ ಪರ ಇರುತ್ತಾರೆ. ಪಂಜಾಬಿನ ಶ್ರೇಷ್ಠ ಸಂತ ಗುರುನಾನಕ್‌ರಿಗೂ ಕನ್ನಡದ ಕನಕದಾಸರ ನಡುವಿನ ಆಶಯಗಳು ಸಮಕಾಲೀನವಾಗಿದೆ ಎಂದರು.

Advertisement

ದೇಶವನ್ನು ಧರ್ಮ, ಭಾಷೆ ಆಧಾರದ ಮೇಲೆ ಒಡೆಯುವ ಈ ಸಂದರ್ಭದಲ್ಲಿ ದೇಶವನ್ನು ಕಟ್ಟುವ ಕೆಲಸ ಕುವೆಂಪು ಅವರಂತಹ ಶ್ರೇಷ್ಠ ಸಾಹಿತ್ಯದ ಮೂಲಕ ಆಗಬೇಕಾಗಿದೆ. ಅವರು ತಮ್ಮ ಕೃತಿಯ ಮೂಲಕ ದೇಶ ಕಟ್ಟುವ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಎಲ್ಲಾ ಕೃತಿಗಳನ್ನು ಎಲ್ಲಾ ಭಾಷೆಗಳಲ್ಲಿ ಅನುವಾದವಾಗುವಂತೆ ನ್ಯಾಷನಲ್‌ ಬುಕ್‌ ಟ್ರಸ್ಟ್‌ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಕೆಲಸ ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮೇರು ಸದೃಶ ವ್ಯಕ್ತಿತ್ವದ ಕುವೆಂಪು ಅವರ ಕೃತಿಯ ಆಶಯ ಜನಸಾಮಾನ್ಯರಿಗೆ ತಲುಪುವಂತಾಗಬೇಕು. ಪ್ರಸ್ತುತ ಮಲೆನಾಡನ್ನು ನಾವು ನೋಡಬೇಕೆಂದರೆ ಕುವೆಂಪು ಕೃತಿಯಲ್ಲಿ ಕಾಣಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕುವೆಂಪು ಮತ್ತಿತರ ಕವಿಗಳ ಆಯ್ದ ಬರಹಗಳು, ಗಾಂಧಿ  150 ಕೃತಿ, ಮಂತ್ರಮಾಂಗಲ್ಯ ಇಂಗ್ಲಿಷ್‌ ಆವೃತ್ತಿ ಹಾಗೂ 2020ರ ಕುವೆಂಪು ಪ್ರತಿಷ್ಠಾನದ ಕ್ಯಾಲೆಂಡರ್‌ ನ್ನು ಗಣ್ಯರು ಬಿಡುಗಡೆಗೊಳಿಸಿದರು. ಈ ಸಮಾರಂಭದಲ್ಲಿ ಕುವೆಂಪು
ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಹಂಪ ನಾಗರಾಜಯ್ಯ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ, ಮಾಜಿ ಲೋಕಸಭಾ ಸದಸ್ಯ, ಬೆಂಗಳೂರು ಚಾರಿಟೆಬಲ್‌ ಟ್ರಸ್ಟ್‌ನ ಸಿ. ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್‌. ರಂಗಪ್ಪ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್‌ ಜವಳಿ, ತೀರ್ಥಹಳ್ಳಿ ತಹಶೀಲ್ದಾರ್‌ ಭಾಗ್ಯ, ತಾಪಂ ಅಧ್ಯಕ್ಷೆ ನವಮಣಿ, ಜಿಪಂ ಸದಸ್ಯೆ ಕಲ್ಪನಾ ಪದ್ಮನಾಭ, ದೇವಂಗಿ ಗ್ರಾಪಂ ಅಧ್ಯಕ್ಷ ಅಶೋಕ್‌ ಕೆ., ಸದಸ್ಯರಾದ ಶಿಲ್ಪಾ ಸುಭೋದ್‌, ಸವಿತಾ ಸತ್ಯನಾರಾಯಣ ಇದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ಸ್ವಾಗತಿಸಿ, ಚಿಂತಕ ರಾಜೇಂದ್ರ ಬುರಡಿಕಟ್ಟಿ ನಿರೂಪಿಸಿದರು.

2019ರ ಕುವೆಂಪು ರಾಷ್ಟ್ರೀಯ ಪುರಸ್ಕಾರದ ಮತ್ತೋರ್ವ ಪುರಸ್ಕೃತರಾದ ಪಂಜಾಬಿ ಸಾಹಿತಿ ಅಜಿತ್‌ ಕೌರ್‌ ಅನಾರೋಗ್ಯದ ಕಾರಣ ಪ್ರಶಸ್ತಿ ಸ್ವೀಕರಿಸಲು ಆಗಮಿಸಿರಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next