Advertisement

ಎಲ್ಲೆಲ್ಲೂ”ಸ್ವಾತಂತ್ರ್ಯ’ದ ರಂಗು…ದೇಶಾದ್ಯಂತ ತಿರಂಗ ಬೈಕ್‌, ಕಾರು, ಬೋಟ್‌ ರ್‍ಯಾಲಿ

09:42 PM Aug 14, 2022 | Team Udayavani |

ನವದೆಹಲಿ: ಇಂದು ಭಾರತೀಯರಿಗೆ 76ನೇ ಸ್ವಾತಂತ್ರ್ಯ ದಿನದ ಸಂಭ್ರಮ. ಇಡೀ ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಿಂದಲೇ ಸಂಭ್ರಮಾಚರಣೆ ಆರಂಭವಾಗಿದ್ದು, ಭಾನುವಾರವೂ ಖುಷಿ ಕಳೆಗಟ್ಟಿತ್ತು. ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದರೆ, ಕಟ್ಟಡಗಳು- ಸ್ಮಾರಕಗಳಲ್ಲಿ ತ್ರಿವರ್ಣಗಳ ಚಿತ್ತಾರ ಮೂಡಿವೆ. ಭಾನುವಾರ ದೇಶದ ಬಹುತೇಕ ನಗರಗಳಲ್ಲಿ ತಿರಂಗಾ ಯಾತ್ರೆಗಳು, ಬೈಕ್‌, ಕಾರು ರ್ಯಾಲಿಗಳು ನಡೆದಿವೆ.

Advertisement

ಉತ್ತರಪ್ರದೇಶ:
ಉತ್ತರಪ್ರದೇಶ ಗೃಹ ರಕ್ಷಕ ಪಡೆ ಆಯೋಜಿಸಿದ್ದ “ತಿರಂಗಾ ಮಾರ್ಚ್‌ ಮೋಟಾರ್‌ಸೈಕಲ್‌ ರ್‍ಯಾಲಿ’ಗೆ ಸಿಎಂ ಯೋಗಿ ಆದಿತ್ಯನಾಥ್‌ ಚಾಲನೆ ನೀಡಿದ್ದಾರೆ. ಈ ರ್‍ಯಾಲಿಯಲ್ಲಿ 2 ಸಾವಿರ ಹೋಂ ಗಾರ್ಡ್‌ಗಳು ಭಾಗಿಯಾಗಿದ್ದರು.

ಕೇರಳ:
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ 75 ಕಿ.ಮೀ. ಉದ್ದದ “ತಿರಂಗ ಯಾತ್ರೆ’ಯನ್ನು ಭಾನುವಾರ ಕೇರಳ ರಾಜ್ಯಪಾಲರು ಬರಮಾಡಿಕೊಂಡರು. ಪಂಗೋಡೆಯ ಕೊಲಾಚೆಲ್‌ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ 1,750 ಯೋಧರು, ಶಾಲಾ ಮಕ್ಕಳು, ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

ರಾಜಸ್ಥಾನ:
ಬಿಜೆಪಿ ನಾಯಕ, ಸಂಸದ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು ಜೈಪುರದ ಅಂಬೇರ್‌ನಿಂದ ಅಮರ್‌ ಜವಾನ್‌ ಜ್ಯೋತಿವರೆಗೆ ತಿರಂಗ ಬೈಕ್‌ರ್‍ಯಾಲಿಯ ನೇತೃತ್ವ ವಹಿಸಿದ್ದರು. ಬಿಎಸ್‌ಎಫ್, ಸಿಆರ್‌ಪಿಎಫ್ ಯೋಧರು ಹಾಗೂ ಯುವಜನತೆ ಇದರಲ್ಲಿ ಪಾಲ್ಗೊಂಡಿದ್ದರು.

ಮಹಾರಾಷ್ಟ್ರ:
ಇಲ್ಲಿನ ಥಾಣೆ ಜಿಲ್ಲೆಯಲ್ಲಿ ಮೀನುಗಾರರು ಭಾನುವಾರ 40ಕ್ಕೂ ಅಧಿಕ ದೋಣಿಗಳಲ್ಲಿ ತ್ರಿವರ್ಣ ಧ್ವಜಗಳನ್ನು ಅಳವಡಿಸಿ, ಬೋಟ್‌ ರ್‍ಯಾಲಿ ನಡೆಸಿದ್ದಾರೆ. 250ಕ್ಕೂ ಹೆಚ್ಚು ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ದಿರಿಸು ತೊಟ್ಟು “ಉತ್ಸವ್‌ 75′ ಬೋಟ್‌ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಬೈಕ್‌ ಮತ್ತು ಕಾರು ರ್‍ಯಾಲಿಗೆ ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ ಮತ್ತು ನಟ ಅಕ್ಷಯ್‌ ಕುಮಾರ್‌ ಚಾಲನೆ ನೀಡಿದ್ದಾರೆ.

Advertisement

ಯೋಧರಿಂದ ಅಮೃತಾರೋಹಣ:
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಐಟಿಬಿಪಿ ಯೋಧರು ಸೋಮವಾರ ಚೀನಾದ ಗಡಿಗೆ ಸಮೀಪದ ಎಲ್‌ಎಸಿಯಲ್ಲಿ 75 ಶಿಖರಗಳನ್ನು ಏರುವ ಮೂಲಕ 75 ದಿನಗಳ “ರಿಲೇ ಲಾಂಗ್‌ ರೇಂಜ್‌ ಪ್ಯಾಟ್ರೋಲ್‌’ ಅನ್ನು ಪೂರ್ಣಗೊಳಿಸಲಿದ್ದಾರೆ. ಐಟಿಬಿಪಿಯ ಈ ಕಾರ್ಯಕ್ರಮಕ್ಕೆ ಅಮೃತಾರೋಹಣ ಎಂದು ಹೆಸರಿಡಲಾಗಿದೆ. ಈ ನಡುವೆ, ಭಾನುವಾರ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪಾಕಿಸ್ತಾನದ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಅಲ್ಲಿನ ಯೋಧರಿಗೆ ಶುಭಾಶಯ ಹೇಳಿದ್ದಾರೆ. ಎರಡೂ ಪಡೆಗಳ ನಡುವೆ ಸಿಹಿ ವಿನಿಮಯವೂ ನಡೆದಿದೆ.

108 ಅಡಿ ಎತ್ತರದ ಧ್ವಜ
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನೆಯು ಭಾನುವಾರ 108 ಅಡಿ ಎತ್ತರದ ರಾಷ್ಟ್ರ ಧ್ವಜವನ್ನು ಹಾರಿಸಿದೆ. ಈ ತ್ರಿವರ್ಣ ಧ್ವಜವನ್ನು ಕಾಶ್ಮೀರದ ಜನತೆಗೆ ಅರ್ಪಿಸುತ್ತಿದ್ದೇವೆ ಎಂದು ಉಗ್ರ ನಿಗ್ರಹ ಪಡೆಯ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಮೇಜರ್‌ ಜನರಲ್‌ ಎಸ್‌.ಎಸ್‌. ಸ್ಲೇರಿಯಾ ಹೇಳಿದ್ದಾರೆ. ಇಷ್ಟೊಂದು ಎತ್ತರದ ಧ್ವಜದ ಅಳವಡಿಕೆ ಕಾರ್ಯವು ದಾಖಲೆಯ 30 ದಿನಗಳಲ್ಲಿ ಪೂರ್ಣಗೊಂಡಿದೆ.

1082 ಪೊಲೀಸರಿಗೆ ಶೌರ್ಯ, ವಿಶಿಷ್ಟ ಸೇವಾ ಪದಕ
ಸಿಎಪಿಎಫ್ ಮತ್ತು ಪೊಲೀಸ್‌ ಪಡೆಗಳ ಒಟ್ಟು 1,082 ಪೊಲೀಸ್‌ ಸಿಬ್ಬಂದಿ ಶೌರ್ಯ ಹಾಗೂ ವಿಶಿಷ್ಟ ಸೇವಾ ಪದಕಗಳಿಗೆ ಭಾಜನರಾಗಿದ್ದಾರೆ. ಗರಿಷ್ಠ ಶೌರ್ಯ ಪದಕಗಳನ್ನು ಸಿಆರ್‌ಪಿಎಫ್ ಪಡೆದರೆ, ನಂತರದ ಸ್ಥಾನವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಮ್ಮದಾಗಿಸಿಕೊಂಡಿದ್ದಾರೆ. ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವವರು ಸೇರಿದಂತೆ ಸಿಬಿಐನ 30 ಅಧಿಕಾರಿಗಳಿಗೆ ಪೊಲೀಸ್‌ ಪದಕಗಳನ್ನು ಘೋಷಿಸಲಾಗಿದೆ. 6 ಮಂದಿ ರಾಷ್ಟ್ರಪತಿಯವರ ಪೊಲೀಸ್‌ ಪದಕ ಮತ್ತು 24 ಮಂದಿ ವಿಶಿಷ್ಟ ಸೇವೆಗಳ ಪೊಲೀಸ್‌ ಪದಕಗಳಿಗೆ ಭಾಜನರಾಗಿದ್ದಾರೆ. ಇದೇ ವೇಳೆ, 20 ಐಟಿಬಿಪಿ ಸಿಬ್ಬಂದಿಗೆ ಪೊಲೀಸ್‌ ಪದಕಗಳನ್ನು ಘೋಷಿಸಲಾಗಿದೆ.

ಹರ್‌ ದಿನ್‌ ತಿರಂಗ!
ದೇಶವೇ ಈಗ “ಹರ್‌ ಘರ್‌ ತಿರಂಗ’ ಅಭಿಯಾನ ನಡೆಸುತ್ತಿದ್ದರೆ, ಒಡಿಶಾದ ಬರ್ಹಮ್‌ಪುರದ ಯುವಕರು ಮಾತ್ರ ಕಳೆದ ನಾಲ್ಕು ವರ್ಷಗಳಿಂದಲೂ “ಹರ್‌ ದಿನ್‌ ತಿರಂಗ’ ಅಭಿಯಾನ ನಡೆಸುತ್ತಿದ್ದಾರೆ. 2018ರ ಆ.15ರಿಂದ ಇಂದಿನವರೆಗೂ ಪ್ರತಿದಿನ ನಗರದ ಜಗನ್ನಾಥ ದೇಗುಲದ ಬಳಿ ಬೆಳಗ್ಗೆ 8 ಗಂಟೆಗೆ ಒಟ್ಟಾಗುವ ಯುವಕರು, ತ್ರಿವರ್ಣ ಧ್ವಜಾರೋಹಣ ಮಾಡುತ್ತಲೇ ಬಂದಿದ್ದಾರೆ. ಈ ನಗರದಲ್ಲಿ ಮಳೆ, ಗಾಳಿ, ಕೊರೊನಾ, ಲಾಕ್‌ಡೌನ್‌ದಂತಹ ಯಾವುದೇ ಕಠಿಣ ಸಮಯವಿದ್ದರೂ ಒಂದೇ ಒಂದು ದಿನ ತಪ್ಪದಂತೆ ಧ್ವಜಾರೋಹಣ ಮಾಡಲಾಗಿದೆ.

ಕ್ಯಾಲಿಫೋರ್ನಿಯಾಲ್ಲಿ ಐಎನ್‌ಎಸ್‌ ಸತ್ಪುರ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಭಾರತದ ಯುದ್ಧನೌಕೆಯಾದ ಐಎನ್‌ಎಸ್‌ ಸತ್ಪುರ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ ಡಿಯಾಗೋ ಬಂದರಿಗೆ ಸ್ಮರಣಾರ್ಥ ಭೇಟಿ ಕೊಟ್ಟಿದೆ. ಅಲ್ಲಿ ಸೋಮವಾರ ಗಣ್ಯರ ಸಮ್ಮುಖದಲ್ಲಿ ನೌಕೆಯ ಮೇಲೆ ಧ್ವಜಾರೋಹಣ ನಡೆಸಲಾಗುವುದು. ಒಟ್ಟು 6 ಖಂಡಗಳಿಗೆ ಯುದ್ಧನೌಕೆಗಳು ಸ್ಮರಣಾರ್ಥ ಭೇಟಿಗೆ ತೆರಳಿದ್ದು, ಸ್ವಾತಂತ್ರೊéàತ್ಸವ ನಡೆಸಲಿವೆ.

ಸಿನಿ ತಾರೆಯರ ಮನೆಯಲ್ಲಿ ತಿರಂಗ
ಸಿನಿಮಾ ತಾರೆಗಳೂ ತಮ್ಮ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸಿ “ಹರ್‌ ಘರ್‌ ತಿರಂಗ’ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಕಾರ್ತಿಕ್‌ ಆರ್ಯನ್‌, ನೈಲ್‌ ನಿತಿನ್‌ ಮುಕೇಶ್‌, ಮಾಧವನ್‌, ಕರಣ್‌ ಕುಂದ್ರಾ, ನಟಿ ಆಲಿಯಾ ಭಟ್‌, ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಮನೆಗಳಲ್ಲಿ ತ್ರಿವರ್ಣ ಪ್ರದರ್ಶಿಸಲಾಗಿದೆ. ಅನಿಲ್‌ ಕಪೂರ್‌ ಮನೆಯಲ್ಲಿ ವಿಶೇಷವಾಗಿ ತ್ರಿವರ್ಣದ ಲೈಟಿಂಗ್‌ ಮಾಡಲಾಗಿದೆ. ದಕ್ಷಿಣ ಭಾರತದ ಪ್ರಸಿದ್ಧ ರಜನಿಕಾಂತ್‌ ಸ್ವಾತಂತ್ರೊéàತ್ಸವದ ಪ್ರಯುಕ್ತ ವಿಶೇಷ ವಿಡಿಯೋವನ್ನು ಪೋಸ್ಟ್‌ ಮಾಡಿದ್ದು, ಎಲ್ಲೆಡೆ ಧ್ವಜ ಪ್ರದರ್ಶಿಸಲು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next