Advertisement

ಸಾರ್ವಜನಿಕರಿಗೆ ಸಕಾಲಿಕ ಸೇವೆ: ನೂತನ ಡಿಸಿ

01:00 AM Feb 12, 2019 | Team Udayavani |

ಉಡುಪಿ: ಸಾರ್ವಜನಿಕರಿಗೆ ಸಕಾಲದಲ್ಲಿ ಸರಕಾರಿ ಸೇವೆಗಳು ದೊರೆಯುವಂತೆ ಮಾಡುವೆ – ಇದು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಜನತೆಗೆ ನೀಡಿರುವ ಭರವಸೆ. 

Advertisement

ಫೆ. 7ರಂದು ಅಧಿಕಾರ ಸ್ವೀಕರಿಸಿದ ಹೆಪ್ಸಿಬಾ ರಾಣಿ ಅವರು “ಉದಯ ವಾಣಿ’ಯೊಂದಿಗೆ ಮಾತನಾಡಿದರು. ಉಡುಪಿ ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ.70 ನಗರವಾಸಿಗಳಾಗಿದ್ದಾರೆ. ಅವರು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ಕೊಡುತ್ತೇನೆ. ಮಹಿಳೆಯರು, ಬಡವರು, ಶೋಷಿತ ವರ್ಗದವರ ಬೆಂಬಲಕ್ಕೆ ಜಿಲ್ಲಾಡಳಿತ ಸದಾ ಇರಲಿದೆ ಎಂದರು.

ಸಂದರ್ಶನದ ಆಯ್ದ ಭಾಗ ಇಂತಿದೆ:
– ನಿಮ್ಮ ಆದ್ಯತೆಗಳೇನು?

ಉಡುಪಿ ಜಿಲ್ಲೆಯಲ್ಲಿ ಒಳ್ಳೆಯ ವ್ಯವಸ್ಥೆ ಇದೆ. ಜನರಿಗೆ ಸಕಾಲದಲ್ಲಿ ಕೆಲಸ ಆಗುವಂತೆ, ಜನರಿಗೆ ಅನುಕೂಲವಾಗುವಂತೆ ಆಡಳಿತ ನೀಡುವುದೇ ನನ್ನ ಆದ್ಯತೆ. 2011ರ ಜನಸಂಖ್ಯೆ ಅಂಕಿಅಂಶ ಪ್ರಕಾರ ಶೇ.70ರಷ್ಟು ಜನರು ನಗರ ವ್ಯಾಪ್ತಿಯಲ್ಲಿದ್ದಾರೆ. ಇವರ ಕೆಲಸಗಳಿಗೆ ಆದ್ಯತೆ ಕೊಡಬೇಕಾಗಿದೆ. ಮಹಿಳೆಯರು, ಬಡವರ ಕೆಲಸಗಳು ಶೀಘ್ರ ಆಗುವಂತೆ ನೋಡಿಕೊಳ್ಳುತ್ತೇವೆ.

 ಗ್ರಾಮಾಂತರದವರಿಗೆ… ?
    ನಗರದವರಿಗೆ ಮಾತ್ರ ಆದ್ಯತೆ ಎಂದರೆ ಗ್ರಾಮೀಣರ ನಿರ್ಲಕ್ಷ್ಯ ಎಂದು ಅರ್ಥವಲ್ಲ. ಜಿಲ್ಲೆಯ ಜನಸಂಖ್ಯೆಯಲ್ಲಿ ನಗರಗಳ ವಾಸಿಗಳು ಹೆಚ್ಚಿಗೆ ಇದ್ದಾರೆ. ನಮ್ಮ ಆಡಳಿತದ ಗಮನ ಸಮಗ್ರ ಜಿಲ್ಲೆಗೆ ಇರುತ್ತದೆ.

– ನಗರಸಭೆಯ ಆಡಳಿತಾಧಿಕಾರಿಗಳು ನೀವು. ಈಗ ಚುನಾಯಿತ ಆಡಳಿತ ಮಂಡಳಿಯೂ ಇಲ್ಲ. ಬಹುತೇಕ ಎಲ್ಲ ನಗರ ಸಂಸ್ಥೆಗಳಲ್ಲಿ ಕೆಲಸಗಳು ನಡೆಯುತ್ತಿಲ್ಲ ಎಂಬ ಸಾರ್ವಜನಿಕ ದೂರುಗಳಿವೆ. ಅದಕ್ಕೇನನ್ನುತ್ತೀರಿ?
    ಯಾವ ಕಾರಣಕ್ಕೆ ಹೀಗಾಗುತ್ತಿದೆ ಎಂದು ನೋಡಿಕೊಂಡು ಪರಿಹಾರ ಕಂಡುಕೊಳ್ಳುವೆ. ನಗರ ಕೇಂದ್ರಿತ ಸಮಸ್ಯೆಗಳಿಗೆ ಆದ್ಯತೆ ಕೊಡುವುದರಿಂದ ಇದೂ ಅದರಲ್ಲಿ ಸೇರಿವೆ.

Advertisement

– ಜನರ ಸಮಸ್ಯೆಗಳನ್ನು ಆಲಿಸಲು ಎಸ್‌ಪಿಯವರು ಫೋನ್‌ ಇನ್‌ ಕಾರ್ಯಕ್ರಮ ಮಾಡಿದಂತೆ ಏನಾದರೂ ಯೋಜನೆಗಳಿವೆಯೆ?
    ನಿರ್ದಿಷ್ಟವಾಗಿ ಈಗಲೇ ಹೇಳಲಾಗದು. ಜನರ ಸಮಸ್ಯೆಗಳನ್ನು ಅರಿಯಲು ಯಾವ ಮಾಧ್ಯಮ ಸೂಕ್ತವೆಂದು ಕಂಡುಕೊಂಡು ಕಾರ್ಯಾಚರಿಸುತ್ತೇನೆ.

– ಜನನ ಪ್ರಮಾಣಪತ್ರಕ್ಕೆ ಹಾಲೋಗ್ರಾಂ ಕೊರತೆ ಇದೆ. ಇದರ ಬಗ್ಗೆ?
    ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಗಮನ ಹರಿಸುತ್ತೇನೆ. 

– ಪ್ರವಾಸೋದ್ಯಮ ಇಲಾಖೆಯಲ್ಲಿ ಅನುದಾನ ಬಳಕೆಯಾಗದೆ ವಾಪಸಾಗು ತ್ತಿವೆ ಎಂಬ ಸುದ್ದಿ ಇದೆ. ಇದರ ಕುರಿತು ಅಭಿಪ್ರಾಯ?
    ಸರಿಯಾಗಿ ಯೋಜನೆಗಳನ್ನು ರೂಪಿಸಿದರೆ ಹೀಗೆ ಆಗುವುದಿಲ್ಲ. ಈ ಇಲಾಖೆ ಮಾತ್ರವಲ್ಲದೆ ಎಲ್ಲ ಇಲಾಖೆಗಳ ಅನುದಾನವೂ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳುತ್ತೇವೆ.

– ಹಿಂದಿನ ಜಿಲ್ಲಾಧಿಕಾರಿ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ಕೊಟ್ಟಿದ್ದರು. ತಾವೀಗ?
    ನಗರಗಳ ಸಮಸ್ಯೆಗಳಲ್ಲಿ ತ್ಯಾಜ್ಯ ನಿರ್ವಹಣೆಯೂ ಒಂದು. ಸ್ವತ್ಛ ವಾತಾವರಣ ವಿದ್ದಾಗ ಸಾರ್ವಜನಿಕರ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದೇ ಇದರರ್ಥ. ಹಿಂದಿನ ಜಿಲ್ಲಾಧಿ ಕಾರಿಗೆ ಈ ಕೆಲಸಕ್ಕಾಗಿ ಪ್ರಶಸ್ತಿಯೂ ಬಂದಿತ್ತು. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.

– ಜನರ ಸಮಸ್ಯೆಗಳನ್ನು ಖುದ್ದಾಗಿ ಹೇಗೆ ತಿಳಿಯುತ್ತೀರಿ? 
    ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗೆಗೆ ನನ್ನ ಗಮನಕ್ಕೆ ನೇರವಾಗಿ ತರಬಹುದು. ಈಗಾಗಲೇ ಸಾರ್ವಜನಿಕರು ನಿರಂತರವಾಗಿ ಬಂದು ಭೇಟಿಯಾಗುತ್ತಿದ್ದಾರೆ. ಆಡಳಿತವನ್ನು ಇನ್ನಷ್ಟು ನಿರ್ದಿಷ್ಟಪಡಿಸಿ ಯಾವ ಸಮಯದಲ್ಲಿ ಸಾರ್ವಜನಿಕರು ಭೇಟಿಯಾಗಬಹುದು ಎಂದು ಮಾಧ್ಯಮಗಳ ಮೂಲಕ ತಿಳಿಸುತ್ತೇನೆ.

– ಮರಳು ಸಮಸ್ಯೆಗೆ ನಿಮ್ಮ ಕ್ರಮವೇನು? ಕಾಲ ಮಿತಿ ಅನ್ವಯವಿಲ್ಲವೆ?
    ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ. ಬೆಂಗಳೂರು ಕೇಂದ್ರದಿಂದ ಬರುವ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ. ಜ. 12ರಂದು ಈ ಕುರಿತು ಸಭೆ ಕರೆದಿದ್ದು ಪರಿಸ್ಥಿತಿ ಅವಲೋಕಿಸಿ ನಮ್ಮ ಹಂತದಲ್ಲಿ ಮಾಡುವ ಪರಿಹಾರವನ್ನು ಕಲ್ಪಿಸುತ್ತೇವೆ.  ಇಲ್ಲಿನ ಪರಿಸ್ಥಿತಿಯನ್ನು ಬೆಂಗಳೂರು ಕೇಂದ್ರಕ್ಕೆ ತಿಳಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. 

– ಭೂಪರಿವರ್ತನೆ ಕೆಲಸ ಸ್ಥಗಿತವಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ?
    ಇಂತಹ ಸಮಸ್ಯೆಗಳಿಗೆ ಕನಿಷ್ಠ ಒಂದಾದರೂ ಸಭೆ ನಡೆಸದೆ ಏನೂ ಹೇಳುವಂತಿಲ್ಲ. ಅಧಿಕಾರಿಗಳ ಸಭೆ ನಡೆಸಿ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತೇವೆ. 

Advertisement

Udayavani is now on Telegram. Click here to join our channel and stay updated with the latest news.

Next