Advertisement

ಮಡಿಕೇರಿ : ಹಸುಗಳ ಬಲಿ ಪಡೆಯುತ್ತಿದ್ದ ಹುಲಿ ಸೆರೆ, 10 ದಿನಗಳ ಕಾರ್ಯಾಚರಣೆ ಯಶಸ್ವಿ

09:44 AM Sep 21, 2022 | Team Udayavani |

ಮಡಿಕೇರಿ: ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಬಾಡಗ-ಬಾಣಂಗಾಲ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿದ್ದ 13 ವರ್ಷದ ಗಂಡು ಹುಲಿ ಕೊನೆಗೂ ಸೆರೆಯಾಗಿದೆ.

Advertisement

ಅರಣ್ಯ ಇಲಾಖೆಯ 10 ದಿನಗಳ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮಾಲ್ದಾರೆ ಸಮೀಪ ತೋಟವೊಂದರ ಬಳಿ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಮಂಗಳವಾರ ಸಂಜೆ 5ರ ಸುಮಾರಿಗೆ ಕಾರ್ಯಾಚರಣೆ ತಂಡದ ಕಣ್ಣಿಗೆ ಬಿದ್ದ ಹುಲಿಗೆ ಉಪ ವಲಯ ಅರಣ್ಯಾಧಿಕಾರಿ ಶಾರ್ಪ್‌ ಶೂಟರ್‌ ರಂಜನ್‌ ಅರಿವಳಿಕೆ ಮದ್ದು ನೀಡಿದರು. ಹುಲಿ ನಿತ್ರಾಣಗೊಂಡಿತ್ತಾದರೂ ನೆಲಕ್ಕೆ ಬೀಳಲಿಲ್ಲ. ಈ ಕಾರಣ ದಿಂದ ಮತ್ತೂಮ್ಮೆ ಅರಿವಳಿಕೆ ಶೂಟ್‌ ಮಾಡಲಾಯಿತು. ಅನಂತರ ಬಿದ್ದ ಹುಲಿಯನ್ನು ಬಲೆಯ ಸಹಾಯದಿಂದ ಬೋನಿಗೆ ಹಾಕಲಾಯಿತು. ಸೆರೆಯಾದ ಹುಲಿಯನ್ನು ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುವುದು. ಚೇತರಿಸಿಕೊಂಡ ಅನಂತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಸೆರೆಯಾದ ಹುಲಿಯ ಒಂದು ಕಾಲಿಗೆ ಗಾಯವಾಗಿದ್ದು, ಪ್ರಾಣಿಗಳನ್ನು ಬೇಟೆ ಯಾಡುವ ಸಂದರ್ಭ ಗಾಯ ಆಗಿರಬಹುದೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣ ಚಳಿಗಾಲದ ವೇಳಾಪಟ್ಟಿ : ಬೆಂಗಳೂರು, ದುಬಾೖಗೆ ಬೆಳಗ್ಗೆ ನಿತ್ಯ ಸಂಚಾರ

6 ಹಸುಗಳು ಬಲಿ
ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರ ಕಣ್ಣಿಗೆ ಬೀಳುತ್ತಿದ್ದ ಹುಲಿ ಹಾಡಹಗಲೇ ಹಸುಗಳನ್ನು ಕೊಂದು ಭೀತಿ ಹುಟ್ಟಿಸಿತ್ತು. 15 ದಿನಗಳಲ್ಲಿ 6 ಹಸುಗಳು ಬಲಿಯಾಗಿದ್ದವು. ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಹುಲಿ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

Advertisement

ಈ ಹಿನ್ನೆಲೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ, ಈಶ್ವರ, ಇಂದ್ರ, ಮತ್ತು ಅಂಜನಾ ಹೆಸರಿನ 4 ಸಾಕಾನೆಗಳೊಂದಿಗೆ ಅರಣ್ಯ ಅಧಿಕಾರಿಗಳು, ಸಿಬಂದಿ ಹಾಗೂ ಆರ್‌ಆರ್‌ಟಿ ಸಿಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಅಧಿಕಾರಿಗಳು ಹಾಗೂ ಸಿಬಂದಿಯ
ಶ್ರಮಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next