ಬೆಂಗಳೂರು:ರಾಜ್ಯಸಭೆ ಚುನಾವಣೆಯಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಟ್ಟರೂ ಸ್ವಾಗತ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಜಿಗಣಿಯಲ್ಲಿ ಭೋವಿ ಸಮಾವೇಶ ಆಯೋಜನೆ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುದ್ದಹನುಮೇಗೌಡರು ಹಿರಿಯರು, ನಮ್ಮದೇ ಕ್ಷೇತ್ರದವರು, ಅವರಿಗೆ ಕೊಟ್ಟರೂ ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ತೀರ್ಮಾನಿಸಲಿದೆ. ರಾಜ್ಯದ ಹಿರಿಯರು- ಮುಖಂಡರು ಬಳಿ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪ್ರಿಯಾಂಕ ಗಾಂಧಿ ರಾಜ್ಯದಿಂದ ಆಯ್ಕೆಯಾಗುವ ವಿಚಾರ ಮಾಧ್ಯಮಗಳಿಂದ ಗೊತ್ತಾಗಿದೆ. ಪಕ್ಷದ ಹಿತದೃಷ್ಟಿಯಿಂದ, ಸಂಘಟನೆ ದೃಷ್ಟಿಯಿಂದ ಏನೇ ನಿರ್ಧಾರ ಕೈಗೊಂಡರೂ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಹಿರಿಯರು ನಮ್ಮ ಪಕ್ಷದ ನಾಯಕರು ಅವರನ್ನು ಕ್ಷೇತ್ರದ ಹಲವು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಬಂದಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.