Advertisement

ಅಂಡರ್‌ವರ್ಲ್ಡ್ನಿಂದ ಪ್ರಾಣ ಬೆದರಿಕೆ ಇತ್ತಾ?

09:47 PM Aug 16, 2019 | Team Udayavani |

ಮೈಸೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕುಟುಂಬ ಕಳೆದ ನಾಲ್ಕೈದು ದಿನಗಳ ಹಿಂದೆಯೇ ಮೈಸೂರಿನ ದಟ್ಟಗಳ್ಳಿಯಲ್ಲಿರುವ ತಮ್ಮ ಮನೆ ಬಿಟ್ಟಿದ್ದರು ಎನ್ನಲಾಗಿದೆ. ಓಂಪ್ರಕಾಶ್‌ ಮೈಸೂರಿನ ಕುವೆಂಪುನಗರದಲ್ಲಿ ಜಿ.ವಿ.ಇನ್ಫೋಟೆಕ್‌ ಕಂಪನಿ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಕಂಪನಿ ನಷ್ಟ ಅನುಭವಿಸಿದ ಹಿನ್ನೆಲೆ ಕಚೇರಿಯಲ್ಲಿದ್ದ ಎಲ್ಲಾ ದುಬಾರಿ ವಸ್ತುಗಳು, ಪೀಠೊಪಕರಣಗಳನ್ನು ಮುಂಬೈ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದು, ಅಲ್ಲಿದ್ದ ಉದ್ಯೋಗಿಗಳಿಗೆ ಸಂಬಳ ನೀಡಿದ್ದರು ಎಂದು ತಿಳಿದು ಬಂದಿದೆ.

Advertisement

ಹಾಲು, ಪೇಪರ್‌ ಸ್ಥಗಿತ: ನಗರದ ದಟ್ಟಗಳ್ಳಿ ಬಡಾವಣೆಯ ಜೋಡಿಬೇವಿನ ಮರದ ಬಳಿ ಇರುವ ಐಷಾರಾಮಿ ಬಂಗಲೆಯಲ್ಲಿ ವಾಸವಿದ್ದ ಓಂಪ್ರಕಾಶ್‌ ಕುಟುಂಬ ಸ್ಥಳೀಯರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿರಲಿಲ್ಲ. ಅಕ್ಕಪಕ್ಕದಲ್ಲಿ ಯಾವುದೇ ಮನೆಗಳಿರದೇ, ವಿಲ್ಲಾ ಇರುವುದರಿಂದ ಕುಟುಂಬದ ಬಗ್ಗೆ ಮಾಹಿತಿ ಅಸ್ಪಷ್ಟವಾಗಿದೆ. ಮನೆಗೆ ದಿನಪತ್ರಿಕೆ, ಹಾಲು ಹಾಗೂ ತರಕಾರಿ ಹಾಕಲು ಬರುತ್ತಿದ್ದವರಿಗೆ ವಾರದ ಹಿಂದೆಯೇ ಮನೆಗೆ ಪೇಪರ್‌, ಹಾಲು ಹಾಕದಂತೆ ಹೇಳಿ, ಅವರಿಗೆ ನೀಡಬೇಕಿದ್ದ ಹಣವನ್ನು ನೀಡಿ ಹೋಗಿದ್ದರು ಎಂದು ಹಾಲು ಹಾಕುವ ವ್ಯಕ್ತಿ ತಿಳಿಸಿದ್ದಾರೆ.

ಬೆದರಿಕೆ ಕರೆ: ಮೃತ ಓಂಪ್ರಕಾಶ್‌ ಬಳಿ ಮೂವರು ಬೌನ್ಸರ್‌ ಕೆಲಸ ಮಾಡುತ್ತದ್ದರು ಎಂದು ತಿಳಿದು ಬಂದಿದ್ದು, ಇಡೀ ಕುಟುಂಬ ಸಾರ್ವಜನಿಕ ಸಂಪರ್ಕದಿಂದ ದೂರ ಉಳಿದಿತ್ತು ಎನ್ನಲಾಗಿದೆ. ಜೊತೆಗೆ ಬಳ್ಳಾರಿ ಗಣಿ ಅದಿರು ವ್ಯವಹಾರಕ್ಕೆ ಸಂಬಂಧಿಸಿದಂತೆ ಭೂಗತ ಲೋಕದ ವ್ಯಕ್ತಿಗಳಿಂದ ಆಗಾಗ್ಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೈಸೂರಿನ ಹಿಂದಿನ ಪೊಲೀಸ್‌ ಆಯುಕ್ತರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ತನ್ನ ಮಗ ಆರ್ಯನ್‌ಗೆ 5 ವರ್ಷವಾದರೂ ಆತನನ್ನು ಶಾಲೆಗೆ ದಾಖಲಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಭೂಗತ ಲೋಕದ ವ್ಯಕ್ತಿಗಳಿಂದ ಕುಟುಂಬಕ್ಕೆ ಪ್ರಾಣ ಬೆದರಿಕೆ ಇತ್ತು ಎಂಬ ವದಂತಿ ಹರಡಿದೆ.

ಸ್ವಂತ ಮನೆ: ಮೈಸೂರಿಗೆ ಎಂಜಿನಿಯರಿಂಗ್‌ ವಿದ್ಯಾಭ್ಯಾಸಕ್ಕೆ ಬಂದ ಓಂಪ್ರಕಾಶ್‌, ಪಡುವಾರಹಳ್ಳಿ ನಿವಾಸಿ ನಿಖೀತಾ ಅವರನ್ನು ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿದ್ದರು. ನಂತರ ವಿಜಯನರದಲ್ಲಿ ಬಾಡಿಗೆ ಮನೆಯಲ್ಲಿ ತಮ್ಮ ತಂದೆ, ತಾಯಿ, ಹೆಂಡತಿಯೊಂದಿಗೆ ಜೀವನ ನಡೆಸುತ್ತಿದ್ದರು. ನಂತರ ನಾಲ್ಕೂವರೆ ವರ್ಷಗಳ ಹಿಂದೆ ದಟ್ಟಗಳ್ಳಿ ಬಡಾವಣೆಯ ಜೋಡಿಬೇವಿನ ಮರದ ಬಳಿ ಸ್ವಂತ ಮನೆ ಮಾಡಿಕೊಂಡಿದ್ದರು.

ಹೊಸ ವ್ಯವಹಾರದಲ್ಲೂ ನಷ್ಟ: ಡಾಟಾ ಬೇಸ್‌ ಕಂಪನಿ ನಷ್ಟ ಅನುಭವಿಸಿದ್ದ ಓಂಪ್ರಕಾಶ್‌ ರಿಯಲ್‌ ಎಸ್ಟೇಟ್‌ ಮತ್ತು ಅನಿಮೇಷನ್‌ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದರು. ಅನಿಮೇಷನ್‌ ಚಿತ್ರಕ್ಕಾಗಿ 60 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು, ಕೆಲಸಗಾರರು ಕೈಕೊಟ್ಟ ಕಾರಣ ಅದರಲ್ಲೂ ನಷ್ಟ ಅನುಭವಿಸಿದ್ದರು. ಆದರೆ, ಇದೆಲ್ಲದಕ್ಕಿಂತ ಮುಂಚೆ ಬಳ್ಳಾರಿಯಲ್ಲಿ ಮೈನಿಂಗ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ಮೈನಿಂಗ್‌ ನಡೆಸಲು ಪರವಾನಗಿ ಪಡೆದಿದ್ದರು. ಅದಿರನ್ನು ವಿದೇಶಗಳಿಗೂ ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.

Advertisement

ಮೈನಿಂಗ್‌ ಕಂಪನಿ ಮುಚ್ಚಿದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಓಂ ಪ್ರಕಾಶ್‌, ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ತನಿಖೆ ಸಹ ಎದುರಿಸುತ್ತಿದ್ದರು ಎನ್ನಲಾಗಿದೆ. ಮೈನಿಂಗ್‌ ವ್ಯವಹಾರದಲ್ಲಿ ಈತನಿಗೆ ಭೂಗತ ಲೋಕದಿಂದ ಬೆದರಿಕೆ ಇದ್ದ ಕಾರಣ ತಮ್ಮ ರಕ್ಷಣೆಗಾಗಿ 3 ಜನ ಅಂಗರಕ್ಷಕರನ್ನು ಹೊಂದಿದ್ದರು ಎಂದು ಬಲ್ಲ ಮೂಲಗಳ ಮಾಹಿತಿ.

ಚಾಮರಾಜನಗರದಲ್ಲಿ ಒಂದೇ ಕುಟುಂಬ 5 ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಓಂಪ್ರಕಾಶ್‌ ಕುಟುಂಬದ ಬಗ್ಗೆ ಈಗಷ್ಟೆ ಮಾಹಿತಿ ಕಲೆ ಹಾಕುತ್ತಿದ್ದು, ಅವರ ಕುಟುಂಬ, ವ್ಯಾಪಾರ ವಹಿವಾಟಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈವರೆಗೆ ಮೈಸೂರಿನಲ್ಲಿ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಹಿಂದಿನ ಪೊಲೀಸ್‌ ಆಯುಕ್ತರನ್ನ ಭೇಟಿ ಮಾಡಿದ್ದರ ಬಗ್ಗೆ ಈಗಷ್ಟೆ ಮಾಹಿತಿ ಕಲೆ ಹಾಕಬೇಕಿದೆ. ಹವಾಲ ಹಣ ವರ್ಗಾವಣೆ ಬಗ್ಗೆಯೂ ತನಿಖೆಯಲ್ಲಿ ಪರಿಶೀಲನೆ ಮಾಡಲಾಗುತ್ತದೆ. ನೂರಾರು ಕೋಟಿ ರೂ. ವರ್ಗಾವಣೆ ಆಗಿದ್ದರೆ ಪೊಲೀಸರಿಗೆ ಗೊತ್ತಾಗುತ್ತಿತ್ತು. ಅವರ ಬ್ಯಾಂಕ್‌ ಖಾತೆಗಳನ್ನ ಪರಿಶೀಲನೆ ಮಾಡುವ ಪ್ರಯತ್ನ ಮಾಡುತ್ತೇವೆ. ಅವರ ಕುಟುಂಬಸ್ಥರು ಸಂಪರ್ಕಕ್ಕೆ ಸಿಕ್ಕ ನಂತರವೇ ಮುಂದಿನ ತನಿಖೆ ಸಾಧ್ಯ. ಜೊತೆಗೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ.
-ಕೆ.ಟಿ.ಬಾಲಕೃಷ್ಣ, ಪೊಲೀಸ್‌ ಆಯುಕ್ತ

ಓಂ ಪ್ರಕಾಶ್‌ ಸ್ವಾಭಾವತಃ ಒಳ್ಳೆಯ ವ್ಯಕ್ತಿಯಾಗಿದ್ದರು. ನನಗೆ ತಿಳಿದಂತೆ ಅವರಿಗೆ ಯಾವುದೇ ಹಣಕಾಸಿನ ಸಮಸ್ಯೆ ಇರಲಿಲ್ಲ. ಅವರು ಸಾಮಾನ್ಯವಾಗಿ ಯಾವುದೇ ಕಾನೂನು ವಿಚಾರಗಳಿಗೆ ನನ್ನ ಬಳಿ ಬರುತ್ತಿದ್ದರು. ಕಳೆದ ಐದು ತಿಂಗಳ ಹಿಂದೆ ನಮ್ಮಿಬ್ಬರ ಭೇಟಿಯಾಗಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಅವರ ತಾಯಿ ಹೇಮರಾಜು ಅವರನ್ನು ಭೇಟಿಯಾಗಿದ್ದೆ. ಅಲ್ಲದೇ ನಾನು ಕಳೆದ ತಿಂಗಳು ಮನೆಗೆ ಬಂದಾಗ ಮನೆಯಲ್ಲಿ ಯಾರು ಸಹ ಇರಲಿಲ್ಲ.
-ಕೆ.ಎಸ್‌. ಅಮರೇಶ್‌, ವಕೀಲ

Advertisement

Udayavani is now on Telegram. Click here to join our channel and stay updated with the latest news.

Next