ಭೀಡ್ :ಮಹಾರಾಷ್ಟ್ರದ ವೈದ್ಯನಾಥ ದೇವಸ್ಥಾನ ಸ್ಫೋಟಿಸುವುದಾಗಿ ಬೆದರಿಕೆ ಪತ್ರವೊಂದು ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರ್ಡಿಎಕ್ಸ್ನಿಂದ ಕಟ್ಟಡವನ್ನು ಸ್ಫೋಟಿಸಬಾರದು ಅಂದರೆ ಪ್ರತಿಯಾಗಿ 50 ಲಕ್ಷ ರೂಪಾಯಿ ನೀಡಬೇಕು ಎಂಬ ಬೇಡಿಕೆಯಿರುವ ಪತ್ರವನ್ನು ಟ್ರಸ್ಟ್ ಕಾರ್ಯದರ್ಶಿ ರಾಜೇಶ್ ದೇಶಮುಖ್ ಶುಕ್ರವಾರ ಸ್ವೀಕರಿಸಿದ್ದಾರೆ.
ಸ್ಥಳೀಯ ಅಂಚೆ ಕಚೇರಿಯಿಂದ ಈ ಪತ್ರ ಬಂದಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಾಂದೇಡ್ ಮೂಲದ ವ್ಯಕ್ತಿಯ ಹೆಸರು, ಆತನ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಪತ್ರದ ಕೊನೆಯಲ್ಲಿ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವರಗಳನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಪತ್ರದ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಧನಂಜಯ್ ಮುಂಡೆ ಟ್ವೀಟ್ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹಾಗೂ ರಾಜ್ಯ ಡಿಜಿಪಿ ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಹೇಳಿದ್ದಾರೆ.