ಬೆಂಗಳೂರು: ಕಳೆದ ಎರಡು ವರ್ಷದಿಂದ ಸುರಕ್ಷಿತ ಕ್ಷೇತ್ರದ ತಲಾಶ್ ಮಾಡುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಕೋಲಾರ ಕ್ಷೇತ್ರದಿಂದ ಕಣಕ್ಕೆ ಇಳಿಯುವುದು ಬಹುತೇಕ ಅಂತಿಮಗೊಂಡಿದೆ.
ಕೋಲಾರ ಕ್ಷೇತ್ರವನ್ನು ಹಾಲಿ ಪ್ರತಿನಿಧಿಸುತ್ತಿರುವ ಶ್ರೀನಿವಾಸ್ ಗೌಡ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಗೆ ಕೈ ಕೊಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲೇ ಅವರು ಕಾಂಗ್ರೆಸ್ ಕಡೆ ವಾಲಿದ್ದರು. ಬೇರೆ ಬೇರೆ ಲೆಕ್ಕಾಚಾರ ಆಧರಿಸಿ ಅವರು ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಈಗ ಸಿದ್ದರಾಗಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಒಕ್ಕಲಿಗ, ಕುರುಬ ಹಾಗೂ ಮುಸ್ಲಿಂ ಮತಗಳು ಗಣನೀಯ ಸಂಖ್ಯೆಯಲ್ಲಿ ಇವೆ. ಮಾಜಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್, ಕೃಷ್ಣ ಭೈರೇಗೌಡ, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಸಿದ್ದರಾಮಯ್ಯ ಅವರ ಚುನಾವಣೆಯ ಗೆಲುವಿನ ಜವಾಬ್ದಾರಿ ಹೊತ್ತಿದ್ದು, ಗೆಲುವಿನ ಚಿಂತೆ ಬಿಟ್ಟು ರಾಜ್ಯ ಪ್ರವಾಸ ಮಾಡುವಂತೆ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಈಗಾಗಲೇ ಎರಡು ಬಾರಿ ಕೋಲಾರ ಕ್ಷೇತ್ರಕ್ಕೆ ಭೇಟಿ ನೀಡಿ ಆಪ್ತರ ಜತೆ ಸಂವಾದವನ್ನು ನಡೆಸಿದ್ದಾರೆ.
Related Articles
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ಹೈಕೋರ್ಟ್ ಜಡ್ಜ್ ರೀತಿ ವರ್ತಿಸುತ್ತಿದ್ದಾರೆ: ಓವೈಸಿ ಟೀಕೆ
ಸಿದ್ದರಾಮಯ್ಯ ಈ ಕ್ಷೇತ್ರವನ್ನೇ ಆಯ್ದುಕೊಳ್ಖುವುದಕ್ಕೆ ಮುಖ್ಯ ಕಾರಣ, ಕಾಂಗ್ರೆಸಿಗರು ನೀಡುವ ಒಳ ಏಟನ್ನು ತಪ್ಪಿಸಿಕೊಳ್ಳುವುದು. ಕಾಂಗ್ರೆಸಿನ ಒಂದು ವರ್ಗ ತಮ್ಮನ್ನು ಸೋಲಿಸಬಹುದೆಂಬ ಭಯ ಅವರನ್ನು ಇತ್ತೀಚೆಗೆ ಕಾಡುತ್ತಿದೆ. ಆದರೆ ರಮೇಶ್ ಕುಮಾರ್ ಬಣ ಗಟ್ಟಿಯಾಗಿ ನಿಲ್ಲುವುದರಿಂದ ಆ ಅಪಾಯದ ಸಾಧ್ಯತೆ ಕಡಿಮೆ. ಇನ್ನು ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿ ಇಲ್ಲ. ಇದು ಇನ್ನೊಂದು ಪ್ಲಸ್ ಪಾಯಿಂಟ್ ಎಂದು ಹೇಳಲಾಗುತ್ತಿದೆ.