Advertisement

ಕೊರಟಗೆರೆಯ ಈ ಕುಗ್ರಾಮ  ಮೂಲಭೂತ ಸೌಕರ್ಯ ವಂಚಿತವಾಗಿದೆ

10:01 PM Oct 05, 2022 | Team Udayavani |

ಕೊರಟಗೆರೆ:  ತಾಲೂಕಿನ  ಹೊಳವನಹಳ್ಳಿಹೋಬಳಿಯ  ಗಡಿಭಾಗವಾದ ದೊಡ್ಡಸಾಗ್ಗೆರೆ  ಗ್ರಾಮ ಪಂಚಾಯಿತಿಗೆ ಸೇರಿದ  ಚೀಲೆನಹಳ್ಳಿ ಒಂದು ಕುಗ್ರಾಮವಾಗಿದೆ. ಈ ಗ್ರಾಮದಲ್ಲಿ  ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದರೂ ಬದುಕಲು ಯೋಗ್ಯವಾದಂತಹ ಯಾವುದೇ  ಮೂಲಭೂತ ಸೌಕರ್ಯ ಗ್ರಾಮದಲ್ಲಿ ಕಲ್ಪಿಸದಿರುವುದು ಮಾತ್ರ  ವಿಪರ್ಯಾಸವೇ ಸರಿ.

Advertisement

ಕಳೆದ ಎರಡು ದಶಕಗಳಿಂದ ಆ ಬಡಾವಣೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ನರಕ ಯಾತನೆಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರು, ಚರಂಡಿ, ಉತ್ತಮ ರಸ್ತೆ, ಬೀದಿ ದೀಪ ಯಾವುದೇ ಸೌಲಭ್ಯಗಳನ್ನು ನೀಡದಿರುವುದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ನಾಗರಿಕನ ಸೌಲಭ್ಯಗಳನ್ನು ಪಡೆಯುವುದು ಸಾಮಾನ್ಯ ಹಕ್ಕಾಗಿದೆ. ಈ ಹಕ್ಕನ್ನು ಪ್ರತಿಯೊಬ್ಬ ಪ್ರಜೆ ಹೊಂದಬೇಕು ಎಂಬುವುದಕ್ಕಾಗಿ ಸರ್ಕಾರ ಅನುದಾನವನ್ನು ಸಾಕಷ್ಟು ವ್ಯಯಿಸುತ್ತಿದೆ. ಆದರೆ ಈ ಊರಿನ ಜನರು ಮಾತ್ರ ಇವುಗಳಿಂದ ಕಳೆದ 20 ವರ್ಷಗಳಿಂದ ವಂಚಿತರಾಗಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅಲ್ಲಿಯ ನಿವಾಸಿಗಳು ಲಿಖಿತವಾಗಿ, ಮೌಖಿಕವಾಗಿ ಗ್ರಾಪಂಗೆ ಹಾಗೂ ತಾಪಂ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಇದವರೆಗೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಜನರ ಅಂತರಾಳದ ಧ್ವನಿಯಾಗಿದೆ.

ತೆರಿಗೆ ಮಾತ್ರ ಬೇಕು

ಪ್ರತಿ ವರ್ಷ ಗ್ರಾ ಪಂ ನಿಗದಿಪಡಿಸಿರುವ ಎಲ್ಲಾ ರೀತಿಯ ತೆರಿಗೆಗಳನ್ನು ಇಲ್ಲಿನ ನಿವಾಸಿಗಳು ತಪ್ಪದೆ ಕಟ್ಟುತ್ತಾ ಬರುತ್ತಿದ್ದಾರೆ. ಜನರಿಂದ ತೆರಿಗೆ ಭರಿಸಿಕೊಳ್ಳುವ ಗ್ರಾಪಂ ಪ್ರತಿವರ್ಷ ಸಿದ್ಧಪಡಿಸುವ ಕ್ರಿಯಾಯೋಜನೆಯಲ್ಲಿ ಮಾತ್ರ ಈ ಎಲ್ಲ ಬಡಾವಣೆಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುತ್ತಿಲ್ಲ ಎಂಬುವುದು ಜನರ ಅಳಲಾಗಿದೆ.

ಗ್ರಾಮದಲ್ಲಿ ಸುಮಾರು 20 ರಿಂದ 25 ಶಾಲಾ ಕಾಲೇಜು ಮತ್ತು ಅಂಗನವಾಡಿಗೆ ಹೋಗುವಂತಹ ಮಕ್ಕಳಿದ್ದಾರೆ   ಆದರೆ  ಗ್ರಾಮದಲ್ಲಿ  ಅಂಗನವಾಡಿ ಇಲ್ಲ. ಶಾಲೆಯೂ ಇಲ್ಲ. ಗ್ರಾಮಕ್ಕೆ ಭೇಟಿ ನೀಡಿದಾಗ ಪ್ರತಿಯೊಬ್ಬ ಜನಪ್ರತಿನಿಧಿಯು  ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಮೂಗಿಗೆ ತುಪ್ಪ ಸವರಿ ಹೋಗುತ್ತಿದ್ದು ಇಲ್ಲಿನ ಜನರ ಸಮಸ್ಯೆಯನ್ನು ಹೇಳೋರು ಕೇಳೋರು ಇಲ್ಲದಂತಾಗಿದೆ.

Advertisement

ಹಾಲಿ ಕ್ಷೇತ್ರದ ಶಾಸಕ  ಡಾ.ಜಿ ಪರಮೇಶ್ವರ್ ಅವರು ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ  ಎಂಬುದು ಇಲ್ಲಿನ ಜನರ ಆಕ್ರೋಶವಾಗಿದೆ.
ಈ ಗ್ರಾಮಕ್ಕೆ ಒಂದು ಅಂಗನವಾಡಿಯನ್ನು ಮಂಜೂರು ಮಾಡಿಸಿ ಕೊಡಿ ಎಂದು  ಹಲವು ಬಾರಿ ಅವಲತ್ತುಕೊಂಡಿದರೂ ಸಹ ಶಾಸಕರು ನಮಗೆ ಸ್ಪಂದಿಸುತ್ತಿಲ್ಲ, ನಮ್ಮ ಗ್ರಾಮದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ. ಗ್ರಾಮದಲ್ಲಿ ಕೊರತೆ  ಇರುವಂತಹ ಎಲ್ಲಾ   ಮೂಲಭೂತ ಸೌಕರ್ಯಗಳ ಬಗ್ಗೆ  ಪಂಚಾಯಿತಿಗೆ ಲಿಖಿತ ದೂರು ಮತ್ತು ಅನೇಕ‌ ಬಾರಿ ಮನವಿ ಪತ್ರಗಳನ್ನು ನೀಡಿದ್ದೇವೆ. ಆದರೆ ನಮ್ಮ ಊರಿಗೆ   ರಸ್ತೆ, ಅಂಗನವಾಡಿ, ಚರಂಡಿ ವ್ಯವಸ್ಥೆ ಇನ್ನಿತರ ಬೇಡಿಕೆಗಳ ಪಟ್ಟಿಯನ್ನು ಗ್ರಾಪಂ ನೀಡಿದ್ದೇವೆ.

ವಾರ್ಡ್ ಸಭೆಯಲ್ಲಿ ಲಿಖಿತ ಮನವಿ ಪತ್ರಗಳನ್ನು ನೀಡಿದ್ದೇವೆ.ಆದರೆ ಯಾರು ಸಹ ನಮ್ಮ ಗ್ರಾಮವನ್ನು ಸ್ವಚ್ಛತೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮದ ಮುಖಂಡ ನರಸಿಂಹ ಮೂರ್ತಿ  ಆರೋಪಿಸಿದ್ದಾರೆ.

ಕೂಡಲೇ ಗ್ರಾಮಕ್ಕೆ  ಸಂಬಂಧಪಟ್ಟ  ಅವಶ್ಯಕ ವಿರುವ ಮೂಲಭೂತ ಸೌಕರ್ಯಗಳನ್ನು ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡುವುದರ ಮೂಲಕ ಗ್ರಾಮಕ್ಕೆ ಕಾಯಕಲ್ಪ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

 ಎನ್ ಆರ್ ಇ ಜಿ ಅನುದಾನದಲ್ಲಿ ಗ್ರಾಮಕ್ಕೆ ಚರಂಡಿಯನ್ನು ನಿರ್ಮಿಸಲು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಈಗಾಗಲೇ ತಾಪಂ ಮತ್ತು ಜಿಪಂಗೆ ಕಳಿಸಿದ್ದೇನೆ. ಅನುಮೋದನೆಯಾಗಿ ಬಂದ ತಕ್ಷಣ ಊರಿಗೆ ಅಗತ್ಯವಾಗಿ ಬೇಕಾಗಿರುವ ಕಾಮಗಾರಿಯನ್ನು ಆರಂಭಿಸುತ್ತೇವೆ.-ಉಮೇಶ್ ಗ್ರಾಪಂ ಪಿಡಿಒ ದೊಡ್ಡಸಾಗ್ಗೆರೆ

ಸಿದ್ದರಾಜು. ಕೆ ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next