Advertisement

ಫೀಡರ್‌ ಬಸ್‌ ಸೇವೆ ಆರಂಭಕ್ಕೆ ಚಿಂತನೆ; ಹಳೇ ಬಸ್‌ ವಿನ್ಯಾಸಗೊಳಿಸಿ ಬಳಕೆ

06:00 PM Jan 30, 2023 | Team Udayavani |

ಹುಬ್ಬಳ್ಳಿ: ನಾಲ್ಕು ವರ್ಷಗಳ ನಂತರ ತ್ವರಿತ ಬಸ್‌ ಸಾರಿಗೆಯ (ಬಿಆರ್‌ಟಿಎಸ್‌) ಫೀಡರ್‌ ಸೇವೆಗೆ ನೈಜ ಅರ್ಥ ಬಂದಿದೆ. ಇಷ್ಟು ವರ್ಷಗಳ ನಂತರ ಪ್ರಾಯೋಗಿಕವಾಗಿ ಆರಂಭವಾಗಿರುವ ಫೀಡರ್‌ ಸೇವೆಯ ಬಸ್‌ಗೆ ಬಹುಬೇಡಿಕೆ ಉಂಟಾಗಿದೆ. ಇದೇ ಮಾದರಿಯಲ್ಲಿ ಅಗತ್ಯ ಮಾರ್ಗಗಳಲ್ಲಿ ಫೀಡರ್‌ ಸೇವೆ ಒದಗಿಸುವ ಬಸ್‌ಗಳ ಕಾರ್ಯಾಚರಣೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಆರ್‌ಟಿಎಸ್‌ ಚಿಂತನೆ ನಡೆಸಿವೆ.

Advertisement

ಯಶಸ್ವಿ ಹಾಗೂ ಪರಿಣಾಮಕಾರಿ ಜನ ಬಳಕೆಗಾಗಿ ಚಿಗರಿ ಸೇವೆಗೆ ಸಂಪರ್ಕ ಕಲ್ಪಿಸಲು ವಾಯವ್ಯ ಸಾರಿಗೆ ಬಸ್‌ಗಳ ಮೂಲಕ ಕಾರ್ಯಗತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಬಹುತೇಕ ಕಡೆಗಳಲ್ಲಿ ಸಾಮಾನ್ಯ ಬಸ್‌ಗಳಿಂದ ಇಳಿದ ಜನರು ಚಿಗರಿ ಬಸ್‌ ಹತ್ತಲು ರಸ್ತೆ ದಾಟಿ ನಡೆದುಕೊಂಡು ಬರಬೇಕಿತ್ತು. ರ್‍ಯಾಂಪ್‌ ಬಳಸಿ ಮೂರ್ನಾಲ್ಕು ಸುತ್ತು ಹಾಕಬೇಕಿತ್ತು. ಹೀಗಾಗಿ ಮಹಿಳೆಯರು, ವೃದ್ಧರು ಚಿಗರಿ ಬದಲು ವಾಯವ್ಯ ಸಾರಿಗೆ ಅಥವಾ ಬೇಂದ್ರೆ ಬಸ್‌ ಗಳನ್ನು ಹಿಡಿಯುತ್ತಿದ್ದರು. ಅವ್ಯವಸ್ಥೆಯಿಂದ ಯೋಜನೆಯ ಮೂಲ ಉದ್ದೇಶ ಈಡೇರಿರಲಿಲ್ಲ. ಇದೀಗ ಆರಂಭಿಸಿರುವ ವಿಶೇಷ ಫೀಡರ್‌ ಸೇವೆಗೆ ಸಾಕಷ್ಟು ಮೆಚ್ಚುಗೆ ಹಾಗೂ ಬೇಡಿಕೆ ಉಂಟಾಗಿದೆ.

ನಾಲ್ಕು ವರ್ಷ ಬೇಕಾಯ್ತು: ಚಿಗರಿ ಸೇವೆ ಆರಂಭವಾಗಿ ನಾಲ್ಕು ವರ್ಷ ಕಳೆದಿದ್ದರೂ ಸಮರ್ಪಕ ಫೀಡರ್‌ ಸೇವೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಹೇಗಾದರೂ ಬರುತ್ತಾರೆ ಎನ್ನುವಂತಾಗಿತ್ತು. ಆದರೆ ಹೊಸದಾಗಿ ಆಗಮಿಸಿದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಭರತ ಅವರು ಫೀಡರ್‌ ಸೇವೆಗೆ ಒತ್ತುಕೊಡುವಂತೆ ಸೂಚಿಸಿದ್ದರು. ಈ ಕುರಿತು 2019ರಿಂದ ಸಲ್ಲಿಸುತ್ತಿದ್ದ ಪ್ರಸ್ತಾವನೆ ಪರಿಶೀಲಿಸಿ ಪ್ರಾಯೋಗಿಕ ಒಂದು ಬಸ್‌ ಸಿದ್ಧಪಡಿಸಿ ಸುತಗಟ್ಟಿ-ಆರ್‌ಟಿಒ ಬಿಆರ್‌ ಟಿಎಸ್‌ ನಿಲ್ದಾಣ-ನವನಗರದ ಕರ್ನಾಟಕ ವೃತ್ತದ ಮಾರ್ಗದಲ್ಲಿ ಕಾರ್ಯಗತಗೊಳಿಸಿದರು. ಹೀಗಾಗಿ ಗಂಟೆ ಗಂಟೆ ಕಾಯುತ್ತಿದ್ದ ಜನರಿಗೆ 15 ನಿಮಿಷಕ್ಕೊಮ್ಮೆ ಈ ಬಸ್‌ ದೊರೆಯುವಂತಾಗಿದೆ.

ಹೀಗಿದೆ ಫೀಡರ್‌ ಬಸ್‌
ಫೀಡರ್‌ ಬಸ್ಸನ್ನು ಚಿಗರಿ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ ಹೋಲುವಂತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಆರ್‌ಟಿಒ ಬಿಆರ್‌ಟಿಎಸ್‌ ನಿಲ್ದಾಣದಲ್ಲಿ ಚಿಗರಿ ಬಸ್‌ ಮಾದರಿಯಲ್ಲಿಯೇ ಬಲ ಬದಿಯ ಹೈಡ್ರಾಲಿಕ್‌ ಬಾಗಿಲು ಬಳಸುತ್ತಾರೆ. ಉಳಿದೆಡೆ ಬಸ್‌ನ ಮುಂಭಾಗದ ಎಡ ಬಾಗಿಲು ಬಳಕೆಯಾಗುತ್ತದೆ. ಇದೇ ಬಸ್‌ನಲ್ಲಿ ಚಿಗರಿ ಬಸ್‌ಗೆ ಅಗತ್ಯವಿರುವ ಕ್ಯೂಆರ್‌ ಕೋಡ್‌ ಆಧಾರಿತ ಟಿಕೆಟ್‌ ಪಡೆದು ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸಬಹುದಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಸುಮಾರು 4-5 ರೂ. ದರ ಕಡಿಮೆಯಾಗುತ್ತಿದೆ. ಈ ಬಸ್‌ಗೆ ಸಾಕಷ್ಟು ಬೇಡಿಕೆ ಬಂದಿದ್ದು, ನಿತ್ಯ 4-4.5 ಸಾವಿರ ರೂ. ಸಾರಿಗೆ ಆದಾಯವಿದೆ. ಬೇಡಿಕೆ ಹಿನ್ನೆಲೆಯಲ್ಲಿ ಈ ಬಸ್ಸನ್ನು ಗಾಮನಗಟ್ಟಿಯವರೆಗೂ ವಿಸ್ತರಿಸುವ ಚಿಂತನೆಯಿದ್ದು, ಮತ್ತೂಂದು ಬಸ್‌ ಸಿದ್ಧಗೊಂಡ ನಂತರ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.

ಇನ್ನಷ್ಟು ಮಾರ್ಗ ಅಗತ್ಯ
ಎಸ್‌ಡಿಎಂ ಎಂಜಿನಿಯರ್‌ ಕಾಲೇಜು-ಟೋಲ್‌ ನಾಕಾ, ಗಾಂಧಿನಗರ-ಗಾಂಧಿನಗರ ಬಿಆರ್‌ಟಿಎಸ್‌ ನಿಲ್ದಾಣ, ಸತ್ತೂರು ಕೆಎಚ್‌ಇಬಿ-ಸತ್ತೂರು ಬಿಆರ್‌ಟಿಎಸ್‌ ನಿಲ್ದಾಣ, ಕೆಸಿಡಿ ರಸ್ತೆ-ಜ್ಯುಬಿಲಿ ವೃತ್ತ, ಯಾಲಕ್ಕಿ ಶೆಟ್ಟರ ಕಾಲೋನಿ-ಯಾಲಕ್ಕಿ ಶೆಟ್ಟರ ಕಾಲೋನಿ ಬಿಆರ್‌ ಟಿಎಸ್‌ ನಿಲ್ದಾಣ, ನವಲೂರು-ನವಲೂರು ಬಿಆರ್‌ಟಿಎಸ್‌ ನಿಲ್ದಾಣ, ಅಮರಗೋಳ-ಎಪಿಎಂಸಿ, ಸಾಯಿನಗರ-ಉಣಕಲ್ಲ, ಗೋಕುಲ ರಸ್ತೆ-ಹೊಸೂರು ಶಿರೂರ ಪಾರ್ಕ್‌-ವಿದ್ಯಾನಗರ ಇಂತಹ ಹಲವು ಮಾರ್ಗಗಳನ್ನು ಗುರುತಿಸಿದ್ದು, ಜನರು ತಮ್ಮ ಆರಂಭಿಕ ಸ್ಥಳದಿಂದ ನೇರವಾಗಿ ಬಸ್‌ ಮೂಲಕವೇ ಬಿಆರ್‌ಟಿಎಸ್‌ ನಿಲ್ದಾಣಗಳಿಗೆ ಸಂಚಾರ ಮಾಡಬಹುದಾಗಿದೆ.

Advertisement

ನಷ್ಟ-ವೆಚ್ಚದಾಯಕ
ಪ್ರಯಾಣಿಕರಿಗೆ ಸೇವಾ ದೃಷ್ಟಿಯಿಂದ ಈ ಮಾರ್ಗಗಳಲ್ಲಿ ಇಂತಹ ಬಸ್‌ಗಳ ಅಗತ್ಯವಿದೆಯಾದರೂ ಸದ್ಯದ ಮಟ್ಟಿಗೆ ವಾಯವ್ಯ ಸಾರಿಗೆಗೆ ವೆಚ್ಚದಾಯಕ. ಒಂದು ಬಸ್‌ ವಿನ್ಯಾಸಕ್ಕೆ ಸುಮಾರು 4 ಲಕ್ಷ ರೂ. ಖರ್ಚಾಗಲಿದೆ. ಸದ್ಯಕ್ಕೆ ಬಸ್‌ಗಳ ಕೊರತೆ ಸಾಕಷ್ಟಿದೆ. ನೇರ ಬಸ್‌ ಸೌಲಭ್ಯದಿಂದ ಪ್ರಯಾಣಿಕರಿಗೆ ಕನಿಷ್ಟ 4-5 ರೂ. ಉಳಿತಾಯವಾದರೆ ಇದರಿಂದ ಸಂಸ್ಥೆಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಎನ್ನುವ ಅಭಿಪ್ರಾಯಗಳಿವೆ. ಈಗಿರುವ ಬಸ್‌ಗಳನ್ನೇ ಪರಿವರ್ತಿಸಿದರೆ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಮರ್ಪಕ ಸಾರಿಗೆ ನೀಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಅಥವಾ ಬಿಆರ್‌ಟಿಎಸ್‌ ಕಂಪನಿಯಿಂದ ಅನುದಾನ ದೊರೆತರೆ ಬಸ್‌ ವಿನ್ಯಾಸ ಹಾಗೂ ಕಾರ್ಯಾಚರಣೆ ಮಾಡಬಹುದಾಗಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು.

ಸಂಸ್ಥೆಯ ಹಳೇ ಬಸ್ಸನ್ನೇ ಫೀಡರ್‌ ಸೇವೆಗಾಗಿ ಉತ್ತಮವಾಗಿ ವಿನ್ಯಾಸ ಮಾಡಿದ್ದಾರೆ. ಈ ಬಸ್‌ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೂಂದು ಬಸ್‌ಗೆ ವಿಭಾಗದಿಂದ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಾರ್ಗಗಳಲ್ಲಿ ಇದೇ ರೀತಿಯ ಬಸ್‌ಗಳನ್ನು ಓಡಿಸುವ ಚಿಂತನೆಯಿದೆ.
*ಎಸ್‌.ಭರತ, ವ್ಯವಸ್ಥಾಪಕ ನಿರ್ದೇಶಕ,
ವಾಕರಸಾ ಸಂಸ್ಥೆ

ಹಿಂದಿನಿಂದಲೂ ಪರಿಣಾಮಕಾರಿ ಫೀಡರ್‌ ಸೇವೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇಂದಿನ ವ್ಯವಸ್ಥಾಪಕ ನಿರ್ದೇಶಕರು ಇದಕ್ಕೆ ಒಪ್ಪಿಗೆ ನೀಡಿದ್ದರಿಂದ ಸಾಕಾರಗೊಂಡಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು
ಅನುಕೂಲವಾಗಿದೆ.
*ವಿವೇಕಾನಂದ ವಿಶ್ವಜ್ಞ, ವಿಭಾಗೀಯ ನಿಯಂತ್ರಣಾಧಿಕಾರಿ, ಹು-ಧಾ ನಗರ ಸಾರಿಗೆ ವಿಭಾಗ

*ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next